ಸುಬ್ಬು ಹೊಲೆಯಾರ್ ಮತ್ತವರ ಕವಿತೆ – ಎರಡರಲ್ಲಿ ಯಾವುದು ಹೆಚ್ಚು ಆಪ್ತ ಎಂದು ಕೇಳಿದರೆ ಉತ್ತರಿಸುವುದು ನನಗೆ ಕಷ್ಟ. ಕೃತಿ ಮತ್ತು ಕರ್ತೃ ಬೇರೆಬೇರೆಯೇ ಆಗಿ ಕಾಣಿಸುತ್ತಿರುವ ವಿರೋಧಾಭಾಸದ ಈ ದಿನಗಳಲ್ಲಿ ಸುಬ್ಬು ಮತ್ತವರ ಕಾವ್ಯ ಅಭಿನ್ನ ಎನ್ನುವ ಭಾವ ನನಗೆ ಖುಷಿ ಕೊಡುತ್ತಿದೆ. ತಮ್ಮ ಎದೆಮಡುವಿನ ವೇದನೆಯನ್ನು ಎಲ್ಲರ ಬೆರಳಿಗೆ ದುಃಖವಾಗಿ ದಾಟಿಸಲು, ಆ ಮೂಲಕ ಮನಸುಗಳ ತಿಳಿಗೊಳಿಸುವ ಕನಸು ಕಾಣಲು, ‘ಕತ್ತಲೆಯ ತಾಯಿಯಾಗು ಬೆಳಕೆನ್ನುವ ದೇವರೇ’ ಎಂದು ಪ್ರಾರ್ಥಿಸಲು ಅವರಿಗೆ ಸಾಧ್ಯವಾಗಿದೆ. ದಲಿತ ಹಿನ್ನೆಲೆಯ ಗೆಳೆಯರನೇಕರು ಒಂದು ರೀತಿಯ ಆಸಹನೆಯಲ್ಲಿ ತಮ್ಮನ್ನು ತಾವು ಬೆಳಗಿಸಿಕೊಳ್ಳುತ್ತಿರುವಾಗ, ಆ ಅಸಹನೆಯನ್ನು ತಮ್ಮ ಬರವಣಿಗೆಯ ಉರಿಯಾಗಿಸಿಕೊಂಡಿರುವ ಸುಬ್ಬು ಅವರಿಗೆ, ಅದಕ್ಕೊಂದು ಜೀವಪರ ಆರ್ದ್ರತೆಯನ್ನು ಕಸಿ ಮಾಡುವುದು ಕೂಡ ಸಾಧ್ಯವಾಗಿದೆ.
ಆ ಕಾರಣದಿಂದಲೇ ನೈತಿಕ ಪ್ರಭೆಯೊಂದನ್ನು ದಕ್ಕಿಸಿಕೊಂಡಿರುವ ಅವರ ಕವಿತೆಗಳು ನಳನಳಿಸುತ್ತಿವೆ. ‘ಬರೆಯುತ್ತಿದ್ದಾರೆ ಸಾಮಾನ್ಯರು ಕವಿತೆಗಳನ್ನು ಹಣ್ಣು ಕಿತ್ತುಕೊಳ್ಳುವ ಹಾಗೆ’ ಎನ್ನುವ ಭಾವದಿಂದಲೇ ಸುಬ್ಬು ಅವರ ಕವಿತೆ ಜನಸಾಮಾನ್ಯರ ಕವಿತೆಯೂ ಆಗಿದೆ. ಈ ಕವಿತೆಗಳಲ್ಲಿ ವೇದನೆ ವಿಷಾದದೊಂದಿಗೆ ಆಶಾಭಾವವೂ ಇದೆ. ಇದೆಲ್ಲಕ್ಕೂ ಮುಖ್ಯವಾಗಿ ಕವಿಯ ಪ್ರಾಮಾಣಿಕ ಅಭಿವ್ಯಕ್ತಿ ಕಾವ್ಯದಲ್ಲಿ ನಿಚ್ಚಳವಾಗಿ ಹೊಳೆಯುತ್ತಿದೆ. ಆಶಾಭಾವ ಹಾಗೂ ಪ್ರಾಮಾಣಿಕತೆಗಳಿಲ್ಲದೆ ಹೋದಲ್ಲಿ ಕವಿತೆ ಎನ್ನುವುದು ಹೇಳಿಕೆಗಳ ಕಟ್ಟಾಗಿಯಷ್ಟೇ ಉಳಿಯುವುದು. ಈ ಎಚ್ಚರದ ಕಾರಣದಿಂದಲೇ ಸುಬ್ಬು ಹೊಲೆಯಾರರು ತಮ್ಮ ಓರಗೆಯ ಕವಿಗಳ ನಡುವೆ ಭಿನ್ನವಾಗಿ ಕಾಣಿಸುತ್ತಾರೆ.
ಚ. ಹ. ರಘುನಾಥ
all the best..!!!
ಸುಬ್ಬು ಸಾರ್, ಶುಭಾಶಯಗಳು, ಪುಸ್ತಕ ಓದಿದ ನಂತರ ಮತ್ತೆ ಬರೆಯುತ್ತೇನೆ.