ನನ್ನ ಪ್ರಥಮ ಕಥಾ ಸಂಕಲನ ‘ಬದುಕಿನ ಬೆನ್ನೇರಿ’ 21 ಕಥೆಗಳಿರುವ ಪುಸ್ತಕವು ಕಲಬುರಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಶ್ರೀ ಬಸವರಾಜ ಕೊನೆಕ್ ಅವರು ಪ್ರಕಟಿಸಿದ್ದು. ಇದು ನನ್ನ ಸೃಜನಶೀಲ ಬರವಣಿಗೆಯ ಆರನೆಯ ಕೃತಿಯಾಗಿದೆ. ಬಹು ನಿರೀಕ್ಷಿತ ಕಥಾ ಸಂಕಲನವೊಂದು ಪ್ರಕಟವಾಗಿರುವುದಕ್ಕೆ ತುಂಬಾ ಸಂತಸವಾಗಿದೆ. ಬದುಕಿಗೆ ಭರವಸೆಯನ್ನು ಕೊಟ್ಟಿರುವ ಘಟನೆ, ಸನ್ನಿವೇಶ, ತಲ್ಲಣಗಳನ್ನು ಕಥೆಯಾಗಿಸುವುದಕ್ಕೆ ಪರಿಪೂರ್ಣವಾಗಿ ಪ್ರಯತ್ನಿಸಿದ್ದೇನೆ ಎಂಬ ನಂಬಿಕೆ ಉಳಿದುಕೊಂಡಿದೆ. ಕೃತಿ ಬಿಡುಗಡೆಯಾದ ಬಳಿಕ ಓದುಗರ ಪ್ರತಿಕ್ರಿಯೆ ಹೇಗೆಂಬುದಕ್ಕೆ ಕುತೂಹಲವಿದೆ.
– ವೀರಣ್ಣ ಮಂಠಾಳಕರ್
ಬದುಕಿನ ಬೆನ್ನೇರಿ ಕಥಾ ಸಂಕಲನದ ಸಂಕ್ಷಿಪ್ತ ಪರಿಚಯಃ
ಬದುಕಿನ ಬೆನ್ನೇರಿ: 21 ಕಥೆಗಳನ್ನೊಳಗೊಂಡ ಕಥಾ ಸಂಕಲನ. ಇದು ಕಥಾ ಪ್ರಕಾರದಲ್ಲಿ ವೀರಣ್ಣ ಮಂಠಾಳಕರ್ ಅವರ ಮೊದಲ ಕೃತಿಯಾಗಿದೆ. ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಕಥೆಗಳನ್ನು ಒಂದೆಡೆ ಸೇರಿಸಿ ‘ಬದುಕಿನ ಬೆನ್ನೇರಿ’ ಎಂಬ ಕಥೆಯೊಂದರ ಶೀರ್ಷಿಕೆ ಸಂಕಲನಕ್ಕಿಟ್ಟು ತಮ್ಮ ಜೀವನಾನುಭವದಲ್ಲಿ ಕಂಡುಂಡ ನೋವು, ಅಪಮಾನ, ಹತಾಶೆ, ಸಂಭ್ರಮ, ತಮ್ಮ ಕಲ್ಪನೆಗೆ ಸಿಕ್ಕ ಅನುಭವಗಳನ್ನು ಕಥೆಯನ್ನಾಗಿಸಿದ್ದಾರೆ. ಕೆಂಡದುಂಡೆ ನುಂಗಿತು ಮಗು, ಬದುಕೆಂಬ ಬುಗುರಿಯಾಟ, ಚಂದಿರನ ಹೆಂಡತಿ, ಜಾರಿಬಿದ್ದ ಕನಸು ಹೀಗೆ ವಿವಿಧ ಕಥೆಗಳು ವಿಶಿಷ್ಟವಾದ ರೀತಿಯಲ್ಲಿ ಕಥೆ ಪೋಣಿಸಲು ಪ್ರಯತ್ನಿಸಿದ್ದಾರೆ. ಒಬ್ಬ ಉತ್ತಮ ಕಥೆಗಾರನಾಗುವ ಲಕ್ಷಣಗಳು ಈ ಕಥಾ ಸಂಕಲನದಿಂದ ಗಮನ ಸೆಳೆಯುವುದು ವಿಶೇಷ. ಬಹುಮುಖ ಪ್ರತಿಭೆಯುಳ್ಳ ವೀರಣ್ಣ ಮಂಠಾಳಕರ್ ಅವರು ಪತ್ರಕರ್ತರಾಗಿ, ಕಥೆಗಾರರಾಗಿ, ಕವಿಯಾಗಿ ಉತ್ತಮ ಅಂಕಣ ಬರಹಗಾರರಾಗಿ ಅಕ್ಷರ ಲೋಕದಲ್ಲಿ ಹಲವು ಪ್ರಯೋಗಗಳನ್ನು ಮಾಡಿ ಯಶಸ್ಸನ್ನು ಕಂಡಿದ್ದಾರೆ. ಬದುಕನ್ನು ಕಟ್ಟಿಕೊಳ್ಳುವುದರಲ್ಲೇ ಒಬ್ಬ ಬರಹಗಾರನ ಜೀವನ ಹೇಗೆ ಸಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಬದುಕಿನ ಬೆನ್ನೇರಿ ಕಥಾ ಸಂಕಲನದಲ್ಲಿ ಒಬ್ಬ ಬರಹಗಾರ, ಕವಿ, ಕಥೆಗಾರ, ಪತ್ರಕರ್ತನ ಜೀವನವನ್ನು ಅದೆಂಥ ದುರಂತಮಯ ಹಾಗೂ ಅಚ್ಚರಿಯ, ವಿಸ್ಮಯವನ್ನು ಹುಟ್ಟು ಹಾಕುತ್ತದೆ ಎಂಬುದಕ್ಕೆ ಸಾಕ್ಷಿಯಾಗುತ್ತದೆ. ವೀರಣ್ಣ ಮಂಠಾಳಕರ್ ಅವರಲ್ಲಿ ಒಬ್ಬ ಚಿಂತಕನಾಗಿ ಕೂಡ ಅನೇಕ ಲೇಖನಗಳನ್ನು ಬರೆದಿದ್ದಾರೆ. ಪ್ರಚಲಿತ ವಿಷಯಗಳನ್ನಾಧರಿಸಿ ಅನೇಕ ಬರಹಗಳು ಇನ್ನೂ ಅಪ್ರಕಟಿತವಾಗಿ ಉಳಿದಿವೆ. ಇವುಗಳಲ್ಲಿನ ಹಲವು ಕಥೆಗಳು ’ಅವಧಿ’ ಅಂತರ್ಜಾಲ ಪತ್ರಿಕೆ ಸೇರಿದಂತೆ ಸಂಯುಕ್ತ ಕರ್ನಾಟಕ(ಸಾಪ್ತಾಹಿಕ ಸೌರಭ) ವಿಶ್ವ ಕನ್ನಡಿಗ ನ್ಯೂಜ಼್ ಮುಂತಾದ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ.
nimma hejjege shubhavagali