ಭಾರತೀಯ ಇತಿಹಾಸದ ವೈಲಕ್ಷಣ್ಯಗಳು
(ಅನುವಾದ)
ಡಾ ಕೆಎಲ್ ಗೋಪಾಲಕೃಷ್ಣಯ್ಯ
ಬಹುಮುಖ ಪ್ರತಿಭೆ, ಕ್ರಿಯಾಶಾಲಿ ವ್ಯಕ್ತಿತ್ವ, ಪ್ರಾಚೀನ ಭಾರತದ ಇತಿಹಾಸದಲ್ಲಿನ ಅಗಾಧ ಪಾಂಡಿತ್ಯ ಎಲ್ಲ ಸೇರಿ ಎಸ್. ಜಿ. ಸರ್ದೇಸಾಯಿಯವರನ್ನು ಬಹು ಎತ್ತರದ ಸ್ಥಾನದಲ್ಲಿ ಇರಿಸಿದೆ. ಅವರ ಈ ಕೃತಿಯಲ್ಲಿ ಪ್ರಾಚೀನ ಭಾರತೀಯ ಸಂಸ್ಕೃತಿಯ ಆಚರಣಾ ವಿಧಾನಗಳನ್ನು ವೇದಪೂರ್ವ ವೇದೋತ್ತರ ಮತ್ತು ಉಪನಿಷತ್ತಿನ ಕಾಲದ ವ್ಯಾಪ್ತಿಯಲ್ಲಿ ವಿಮರ್ಶೆಗೊಳಪಡಿಸಿದ ಒಂದು ಅಪೂರ್ವ ಇತಿಹಾಸದರ್ಶನ. ಕಾಲದಿಂದ ಕಾಲಕ್ಕೆ ಪಲ್ಲಟಗೊಂಡು ಪರಸ್ಪರ ವೈರುಧ್ಯ-ವಿಲಕ್ಷಣ ಸ್ವಭಾವಗಳನ್ನು ತೋರ್ಪಡಿಸಿ ಜನಜೀವನದ ಭಾಗವಾಗಿಯೇ ಉನ್ನತಿ – ಅವನತಿಗಳನ್ನು ಕಂಡ ಎಷ್ಟೋ ವಿಧದ ಆಚರಣೆಗಳು ಪೂರ್ವಕಾಲದಲ್ಲಿದ್ದವು. ನವನವೀನ ಸಿದ್ಧಾಂತಗಳು ವಿಕಾಸಗೊಳ್ಳುತ್ತ ಹೊಸ ಹೊಸ ಕಲ್ಪನೆಗಳು ಗರಿಗೆದರುತ್ತ ಸಾಗಿದ ವೇದಕಾಲೀನ ಸಂಸ್ಕೃತಿ ಇಲ್ಲಿ ಪರಿಚಯಿಸಲ್ಪಟ್ಟಿದೆ. ಬೇಟೆಯ ಹಂತದಿಂದ ಕೃಷಿಯ ಹಂತಕ್ಕೆ ತಲುಪಿದ ಮಾನವನಿಗೆ ಫ಼ಲವತ್ತಾದ ಭೂಮಿಯಲ್ಲಿ ಬೆಳೆಯುವುದೆಲ್ಲ ಯಾರದೋ ಕೃಪೆಯಿಂದ ಎಂಬ ನಂಬಿಕೆ ಬೆಳೆಯಿತು. ಕೃತಜ್ಞತೆಗಾಗಿ ಪೂಜೆ – ಪ್ರಾರ್ಥನೆ – ಯಜ್ಞ – ಯಾಗ – ಬಲಿ ಮುಂತಾದ ಆಚರಣೆಗಳನ್ನು ರೂಢಿಗೆ ತಂದ. ಪರಸ್ಪರ ಭಿನ್ನಾಭಿಪ್ರಾಯದಿಂದ ಹೊಸ ಆಚರಣೆ – ಸಿದ್ಧಾಂತಗಳು ರೂಪುಗೊಂಡವು. ಹೊಸತು ಹಳೆಯದನ್ನು ಹಿಂದಿಕ್ಕಿ ಮುಂದೊಂದು ದಿನ ತಾನೂ ಹಳೆಯದಾಗುವುದು ನಿರಂತರವಾದದ್ದು. ಕಾಲದ ಪ್ರವಾಹಕ್ಕೆ ಬೆಳೆಯುಳ್ಳವು ನಗಣ್ಯವಾದವು ಎಂಬ ಭೇಧ ಇಲ್ಲ. ಕೊಚ್ಚಿಹೋದುವಕ್ಕೆ ನಾವು ದಡದಲ್ಲಿ ನಿಂತು ಬೆಲೆ ಕಟ್ತುತ್ತಿರುತ್ತೇವೆ. ಸಾಕಷ್ಟು ಬದಲಾವಣೆ ಹೊಂದಿದ ಸಂಸ್ಕೃತಿಗಳು ಇಂದು ನಮ್ಮ ಮುಂದಿವೆ. ಪರಸ್ಪರ ಸಂಘರ್ಷಕ್ಕೆ ಇಳಿದಿವೆ. ಓದಿನೋಡಿ – ಎಸ್. ಜಿ. ಸರ್ದೇಸಾಯಿಯವರ ಆಳವಾದ ಇತಿಹಾಸದ ಪಾಂಡಿತ್ಯವನ್ನು – ಅಂತೆಯೇ ಪ್ರಜ್ನಾಪ್ರವಾಹದ ಭೋರ್ಗರೆತವನ್ನು!
***
ಈ ಕೃತಿಯನ್ನು ರಚಿಸಿರುವ ಡಾ ಕೆಎಲ್ ಗೋಪಾಲಕೃಷ್ಣಯ್ಯ ಕನ್ನಡ ಸಾಹಿತ್ಯದಲ್ಲಿ ಪಿಎಚ್ ಡಿ ಪದವೀಧರರು. ಕೆ. ಜಿ. ಎಫ಼್. ಕಾಲೇಜಿನಲ್ಲಿ ಕೆಲವರ್ಷಗಳು ಹಾಗೂ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಸುದೀರ್ಘಕಾಲ ಪ್ರೊಫೆಸರ್ ಆಗಿದ್ದವರು. ‘ಹೊಸತು ಪತ್ರಿಕೆಯ ಸಹಸಂಪಾದಕರಾಗಿದ್ದು ಹಲವಾರು ಲೇಖನಗಳನ್ನು ಬರೆದಿದ್ದಾರೆ. ಇತಿಹಾಸ ಮತ್ತು ಭಾಷಾಶಾಸ್ತ್ರಕ್ಕೆ ಸಂಬಂಧಿಸಿದಂತೆ ಹಲವು ಉಪಯುಕ್ತ ಕೃತಿಗಳನ್ನು ರಚಿಸಿದ್ದಾರೆ.
0 ಪ್ರತಿಕ್ರಿಯೆಗಳು