ಪತ್ರಿಕಾ ಮಂಡಳಿ ಏನು ?ಎತ್ತ?
ನಮ್ಮ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳಲ್ಲಿ ಅಧ್ಯಯನ, ಅಧ್ಯಾಪನ ಮತ್ತು ಬರವಣಿಗೆಯ ಕಾರ್ಯಕ್ಷಮತೆಯಿಲ್ಲ; ತಾವು ಓದದೆ ಬರೆಯದೆ ವಿದ್ಯಾರ್ಥಿಗಳಿಗೆ ಏನನ್ನು ಕಲಿಸಬಲ್ಲರು? ಎಂದು ನಾಡೋಜ ದೇಜಗೌ ಆಗಾಗ ಹೇಳುತ್ತಿರುತ್ತಾರೆ. ಈ ಮಾತು ನಿಜವೆನ್ನಿಸುತ್ತದೆ.
ದೀಪ ತಾನು ಉರಿಯದೆ ಇನ್ನೊಂದನ್ನು ಬೆಳಗಲಾರದು. ಆದ್ದರಿಂದ ಅಧ್ಯಾಪಕರು ಸದಾ ಓದುವ-ಬರೆಯುವ ಅಧ್ಯಯನಾರ್ಥಿಗಳು ಆಗಿರಬೇಕು. ಈ ನಿಟ್ಟಿನಲ್ಲಿ ತನ್ನ ಮಾಧ್ಯಮ ಲೋಕಕ್ಕೆ ಏನನ್ನು ಬರೆಯಬೇಕು-ಬೋಧಿಸಬೇಕು ಎಂದು ಚಿಂತನಶೀಲರಾಗಿ ಆಲೋಚಿಸುವ ಮೈಸೂರು ವಿ.ವಿ.ಯ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾದ ಡಾ. ನಿರಂಜನ ವಾನಳ್ಳಿಯವರುವಿಶೇಷವಾಗಿ ಕಾಣುತ್ತಾರೆ.
ಪತ್ರಿಕಾ ಮಂಡಳಿ ಏನು? ಎತ್ತ? ವಾನಳ್ಳಿಯವರ ಹೊಸ ಹುಡುಕಾಟದ ಬರವಣಿಗೆ. ಭಾರತದ ಪತ್ರಿಕಾ ಮಂಡಳಿಯನ್ನು ಪರಿಚಯಿಸುವ ಕೃತಿಯಿದು. ಭಾರತೀಯ ಪ್ರಜೆಗಳ ಪತ್ರಿಕಾ ಸ್ವಾತಂತ್ರ್ಯವನ್ನು ಸಂರಕ್ಷಿಸುವ ಹೊಣೆಗಾರಿಕೆ ಈ ಮಂಡಳಿಗಿದೆ.
ಯಾವುದೇ ಪತ್ರಿಕೆ ಅಥವಾ ಪತ್ರಕರ್ತರ ಮೇಲೆ ದೂರುಗಳಿದ್ದರೆ ಅಥವಾ ಸರ್ಕಾರ, ಸಂಘ, ಸಂಸ್ಥೆಗಳು ಪತ್ರಿಕೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡಿದರೆ ಈ ಪತ್ರಿಕಾ ಮಂಡಳಿಗೆ ದೂರು ನೀಡಬಹುದಾಗಿದೆ. ಮಂಡಳಿಯು ತನಗೆ ಬಂದ ದೂರುಗಳನ್ನು ಪರಿಶೀಲಿಸಿ ನಿರ್ಣಯಿಸುತ್ತದೆ.
ಇಂತಹ ಪತ್ರಿಕಾ ಮಂಡಳಿಯ ಕಾರ್ಯವ್ಯಾಪ್ತಿಯ ಬಗ್ಗೆ ನಾವು ತಿಳಿಯಬೇಕೆನ್ನುವುದಾದರೆ ಈ ಪುಸ್ತಕವನ್ನು ಓದಬೇಕು. ಮಾಧ್ಯಮ ಲೋಕದ ಆಸಕ್ತರೆಲ್ಲ ಓದಲೇಬೇಕಾದ ಪುಸ್ತಕವಿದು.
ಡಾ. ಹಾಲತಿ ಸೋಮಶೇಖರ್
ಪ್ರಧಾನ ಸಂಪಾದಕರು




0 Comments