ಡಾ. ಡಿ. ಸಿ. ರಾಜಪ್ಪ ನನ್ನ ಆತ್ಮೀಯರು. ಅವರು ಪೊಲೀಸ್ ಪೋಷಾಕಿನಲ್ಲಿ, ನಾನು ಪತ್ರಕರ್ತನ ಪೋಷಾಕಿನಲ್ಲಿ ಇದ್ದರೂ ನಮ್ಮಿಬ್ಬರನ್ನು ಬೆಸೆದದ್ದು ಕವಿತೆ. ಮಂಗಳೂರು, ಗುಲ್ಬರ್ಗಾದಲ್ಲಿ ನಾವಿಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದೇವೆ. ಆ ನಂತರವೂ ನನ್ನ ಕಾವ್ಯವನ್ನು ಅವರು, ಅವರ ಕಾವ್ಯವನ್ನು ನಾನು ಹಿಂಬಾಲಿಸುತ್ತಲೇ ಬಂದಿದ್ದೇವೆ ನನ್ನ ಮನೆಯ ಅಂಗಳದಲ್ಲಿ ರಾಜಪ್ಪ ಕವಿತೆಗಳನ್ನು ಹರಡಿಕೊಂಡು ವಾಚನ ಮಾಡಿದಾಗಲೇ ಎಲ್ಲರಿಗೂ ಒಬ್ಬ ಶಕ್ತ ಕವಿಯ ಆಗಮನದ ಸಂದೇಶ ಮುಟ್ಟಿಯಾಗಿತ್ತು. ಅಂದಿನಿಂದ ಇಂದಿನವರೆಗೆ ರಾಜಪ್ಪ ಪೊಲೀಸ್ ಕೆಲಸದ ನಡುವೆಯೂ ಕಾವ್ಯಯಾನ ನಡೆಸುತ್ತಲೇ ಬಂದಿದ್ದಾರೆ.
ಡಾ. ರಾಜಪ್ಪ ಅವರ ಕಾವ್ಯಕ್ಕೆ ಯಾವ ರಿಯಾಯಿತಿಯೂ ಬೇಕಿಲ್ಲ. ರಾಜಪ್ಪ ಅವರ ಜೊತೆ ಒಡನಾಡಿದ, ಅವರ ಕವಿತೆಗೆ ಮನಸ್ಸು ಕೊಟ್ಟ ಎಲ್ಲರಿಗೂ ಇದು ಗೊತ್ತು. ತಾವು ಕಂಡುಂಡ ಅನುಭವಗಳನ್ನು ಹಲವರು ಬರೆದಿದ್ದಾರೆ. ಆದರೆ ಅವು ಕವಿತೆಯಾಗದೆ ಮೇಲ್ದನಿಯ ಸಾಲುಗಳಾಗಿ ಉಳಿದದ್ದೇ ಹೆಚ್ಚು. ಆದರೆ ರಾಜಪ್ಪ ಅವರ ಭಾವುಕ ಮನಸ್ಸು ಪ್ರತಿಯೊಂದನ್ನೂ ಎದೆಯಾಳಕ್ಕೆ ಎಳೆದುಕೊಳ್ಳುತ್ತದೆ. ಹಾಗಾಗಿಯೇ ಅವರ ಕವಿತೆಗಳು ಓದಿದ ಯಾರನ್ನೂ ತಟ್ಟದೆ ಬಿಡದು. ‘ಮಾರಿ’, ‘ಬರದು ಭೂಮಿಯ ಸತ್ಯಗಳು’ ಕವನ ಸಂಕಲನಗಳ ಮೂಲಕ ಈಗಾಗಲೇ ಸಾಕಷ್ಟು ಹೆಸರಾದ ರಾಜಪ್ಪ ಅವರ ಈ ‘ಹುಲ್ಲು ಮೇಯುವ ಕುದುರೆ’ಯೂ ಕಾವ್ಯ ಲೋಕದಲ್ಲಿ ಗತ್ತಿನಿಂದ ಹೆಜ್ಜೆ ಹಾಕುವುದರಲ್ಲಿ ಸಂಶಯವಿಲ್ಲ.
ಜಿ. ಎನ್. ಮೋಹನ್
0 ಪ್ರತಿಕ್ರಿಯೆಗಳು