ಎಂ ಎಸ್ ಶ್ರೀರಾಮ್
ಸಾಹಿತ್ಯ ವಿಮರ್ಶೆ ಮತ್ತು ರಾಜಕೀಯ ವಿಶ್ಲೇಷಣೆಗಳನ್ನು ಹೊರತು ಪಡಿಸಿದ ಸಂವೇದನಶೀಲ ಬರಹಗಳನ್ನು ಕನ್ನಡದ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಕಷ್ಟಪಟ್ಟು ಹುಡುಕಿ ಕಂಡುಕೊಳ್ಳ ಬೇಕಷ್ಟೇ. ಜನರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಆಡಳಿತ ನೀತಿಗಳ ಕುರಿತು ಕನ್ನಡದಲ್ಲಿ ಬರೆಯುವ ಅನೇಕರು, ಜನರು ಅರಿಯಲೇ ಬೇಕಾದ ಸಂಗತಿಗಳೆಲ್ಲವನ್ನೂ ಪಾರಿಭಾಷಿಕಗಳ ಗೋರಿಯಲ್ಲಿ ಹೂತು ಬಿಟ್ಟಿರುತ್ತಾರೆ. ಎಂ ಎಸ್ ಶ್ರೀರಾಮ್ ಅವರ ಈ ಬರಹಗಳು ಎಂಥಾ ಸಂಕೀರ್ಣ ಸಂದರ್ಭದಲ್ಲೂ ಪಾರಿಭಾಷಿಕಗಳ ಜೇಡರ ಬಲೆಗೆ ಸಿಕ್ಕಿ ಬೀಳುವುದಿಲ್ಲ. ಹಾಗೆಯೇ ಇವು ಕನ್ನಡದ ಬರವಣಿಗೆಯ ಮಿತಿಯಾಗಿರುವ ಸಾಹಿತ್ಯದ ಪರಿಭಾಷೆಯೊಳಗೂ ಉಳಿದುಕೊಳ್ಳುವುದಿಲ್ಲ. ಹೀಗೆ ಎರಡು ಬಗೆಯಲ್ಲಿ ಸೀಮೋಲ್ಲಂಘನ ಮಾಡುವ ಈ ಲೇಖನಗಳು ಕನ್ನಡದಲ್ಲಿ ಇನ್ನೂ ರೂಪುಗೊಳ್ಳದೇ ಇರುವ ಸಮಾಜ ವಿಜ್ಞಾನದ ಭಾಷೆಯ ಸೃಷ್ಟಿಯತ್ತ ಹೆಜ್ಜೆ ಇಡುತ್ತಲೇ ಜನಸ್ನೇಹಿ ಸಾಮಾಜಿಕ ವಿಶ್ಲೇಷಣೆಯ ಬರಹಗಳ ಮಾದರಿಯೊಂದನ್ನು ಮುಂದಿಡುತ್ತಿವೆ. ಇಷ್ಟನ್ನೂ ಒಂದು ವೈರುದ್ದ್ಯಾತ್ಮಕವಾದ ಹೇಳಿಕೆಯ ಮೂಲಕ ವಿವರಿಸಬಹುದೇನೋ ಕನ್ನಡದ ಸಾಮಾಜಿಕ ವಿಶ್ಲೇಷಣೆಯ ಬರಹಗಳನ್ನು ಸಮಾಜ ವಿಜ್ಞಾನದ ಪಾರಿಭಾಷಿಕಗಳು ಮತ್ತು ಸಾಹಿತ್ಯದ ಪರಿಭಾಷೆಯ ಯಾಜಮಾನ್ಯದಿಂದ ಬಿಡುಗಡೆ ಮಾಡುವುದು ಸಾಧ್ಯ ಎಂದು ತೋರಿಸಿಕೊಡುತ್ತಿರುವ ಎಂ ಎಸ್ ಶ್ರೀರಾಮ್ ಕನ್ನಡದ ಕಥೆಗಾರರೂ ಹೌದು.

ಎನ್ ಎಮ್ ಇಸ್ಮಾಯಿಲ್ (ಬೆನ್ನುಡಿಯಿಂದ)
ಪ್ರಕಾಶಕರು : ಅಂಕಿತ ಪುಸ್ತಕ
ಬೆಲೆ : ರೂ. ೧೨೦/-



0 Comments