ಪುಸ್ತಕ ಪರಿಚಯ
ಮಡಿಕೇರಿ
ಲೇಖಕಿ: ಅನಿತಾ ನರೇಶ್ ಮಂಚಿ
ಲಲಿತ ಪ್ರಬಂಧಗಳು, ಜೀವನದ ಆಗುಹೋಗುಗಳ ಚಿತ್ರಣದ ಜೊತೆ ಲಘುಧಾಟಿಯಲ್ಲಿ ಬರೆದ ಬರಹದ ಹೂರಣ. ಓದುಗನಿಗೆ ಅಲ್ಲಲ್ಲಿ ಸ್ವಲ್ಪ ನಗೆ ಉಕ್ಕಿಸಿದರೆ ಸ್ವಲ್ಪ ಭಾವುಕತೆಯನ್ನು ಈ ಪ್ರಬಂಧಗಳು ಒದಗಿಸುತ್ತವೆ. ಅಂದ ಹಾಗೆ ನಾನು ಹೇಳ ಹೊರಟಿರುವುದು ಅನಿತಾ ನರೇಶ್ ಮಂಚಿ ಅವರು ಬರೆದ ‘ಬಣ್ಣದ ಕಡ್ಡಿ’ ಲಲಿತ ಪ್ರಬಂಧ ಪುಸ್ತಕದ ಕುರಿತಾಗಿ. ಈ ಪುಸ್ತಕದಲ್ಲಿ ಸುಮಾರು ಮೂವತ್ತು ಲಲಿತ ಪ್ರಬಂಧಗಳಿವೆ. ಪ್ರತೀ ಪ್ರಬಂಧಗಳು ಓದಿಸಿಕೊಂಡು ಹೋಗುತ್ತದೆ. ಲೇಖಕಿಯು ತನ್ನ ಬಾಲ್ಯದಲ್ಲಿ ನಡೆದ ಘಟನೆಗಳಾಗಲಿ, ಸಂಸಾರದಲ್ಲಿ ನಡೆದ ಸಂಗತಿಗಳಾಗಲಿ ಮನಮುಟ್ಟುವಂತೆ ಬರೆದಿರುತ್ತಾರೆ. ಪುಸ್ತಕದ ಪ್ರತಿಯೊಂದು ಪ್ರಬಂಧವೂ ಕೂಡ ಅನಿತಾ ನರೇಶ್ ತನ್ನ ಸ್ವಅನುಭವದಿಂದಲೇ ಬರೆದಿರುವರು ಹೊರತು ಕಲ್ಪನೆಯಿಂದಲ್ಲ ಎಂಬುವುದು ಓದಿದಾಗ ನನಗೆ ಸ್ಪಷ್ಟವಾಯಿತು.
ಲೇಖಕಿಯು ತನ್ನ ಗ್ರಾಮ್ಯ ಭಾಷೆಯನ್ನು ಹಿಡಿದು ಪದಗಳಲ್ಲಿ ಯಾವುದೇ ಕ್ಲಿಷ್ಟತೆಯಾಗಲಿ ಸಂಕೀರ್ಣತೆಯಾಗಲಿ ಇಲ್ಲದೆ ತುಂಬಾ ಸರಳವಾಗಿ ತುಂಬಾ ಸುಲಲಿತವಾಗಿ ಬರೆದ ಈ ಲಲಿತ ಪ್ರಬಂಧ ಪುಸ್ತಕವು ಓದುಗನಿಗೆ ಹಾಸ್ಯದ ರಸದೂಟವನ್ನೇ ಉಣಬಡಿಸುತ್ತದೆ. ಒಂದೊಂದು ಪ್ರಬಂಧವೂ ಓದುತ್ತಿದ್ದ ಹಾಗೆಯೆ -ಈ ಘಟನೆ ನಮ್ಮ ಜೀವನದಲ್ಲೂ ನಡೆದಿತ್ತು ಅನ್ನಿಸಿಬಿಡುವುದು ಜೊತೆಗೆ ಬರಹಗಳು ಅಷ್ಟೂ ಹತ್ತಿರವಾಗಿ ಬಿಡುವುದು. ಲಲಿತ ಪ್ರಬಂಧಕಳಾಗಿ ಅನಿತಾ ನರೇಶ್ ಓದುಗನನ್ನು ನಗಿಸಬೇಕೆಂದೇ ಒತ್ತಾಯ ಮಾಡದೇ ಪುಸ್ತಕ ಓದ ಹೋಗುತ್ತಿದ್ದಂತೆ ಬರಹಗಳು ಹಾಗೆಯೇ ನೈಜವಾಗಿ ನಗೆಯುಕ್ಕಿಸಬಲ್ಲುದು. ಈ ಬಣ್ಣದ ಕಡ್ಡಿ ಪುಸ್ತಕದಲ್ಲಿ ಬರುವ ಕೆಲವು ಪ್ರಬಂಧಗಳಾದ ಕನ್ನಡಕ ಪುರಾಣ -ಅಜ್ಜನ ಕನ್ನಡಕ ಬಳಕೆಯ ಬಗ್ಗೆ, ಸರ್ಪಸುತ್ತಿನ ಗಮ್ಮತ್ತು -ನೋವಿನ ಸುಖ, ಅಪ್ಪನ ಸ್ಕೂಟರ್ -ಸ್ಕೂಟರಿನ ಮೇಲಿನ ಅಪ್ಪನ ಮಮತೆ, ಆಟಿ ಪಾಯಸ -ಅಡುಗೆ ತಯಾರಿಯ ವಿಚಾರ, ನಾಮಗಳೇ ನೀವೇಕೆ ಹೀಗೆ -ಹೆಸರುಗಳ ಕುರಿತಾಗಿ ಹೇಳುತ್ತದೆ. ಹೀಗೆ ವಸ್ತುಗಳನ್ನು, ವಿಚಾರಗಳನ್ನು ಅನಿತಾ ನರೇಶ್ ತನ್ನದೇ ಹಾಸ್ಯ ದೃಷ್ಟಿಯಿಂದ ನೋಡಿ ಲಲಿತ ಪ್ರಬಂಧದಲ್ಲಿ ತುಂಬಾ ಚೆಂದವಾಗಿ ನಿರೂಪಿಸಿದ್ದಾರೆ.
0 ಪ್ರತಿಕ್ರಿಯೆಗಳು