ಆತ್ಮೀಯರೇ
ಅಂತರ್ಜಾಲ ಓದಿನ ಹಸಿವನ್ನೇ ಕಿತ್ತುಕೊಂಡಿದೆ, ಹೊಸ ಪೀಳಿಗೆ ಓದಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದೆ ಎನ್ನುವ ಮಾತುಗಳ ಕಾಲದಲ್ಲಿ ಅವಧಿಯಲ್ಲೇ ಜರುಗಿದ ಚರ್ಚೆ ತಕ್ಕಮಟ್ಟಿಗೆ ಆಶಾಭಾವನೆ ಹುಟ್ಟು ಹಾಕಿದೆ
ನವೀನ್ ಮಧುಗಿರಿ ಅವರು ಬರೆದ 'ದೈತ್ಯ ಜೀವಿಯ ಅತಿ ಸಣ್ಣಕತೆ' ಲೇಖನ ಅವಧಿಯಲ್ಲಿ 'ನನಗೆ ಎಚ್ಚರವಾದಾಗ, ಡೈನೊಸಾರ್ ಇನ್ನೂ ಅಲ್ಲಿಯೇ ಇತ್ತು..' ಹೆಸರಿನಲ್ಲಿ ಪ್ರಕಟವಾಯಿತು. ಅತಿ ಸಣ್ಣ ಕಥೆಗಳ ಬಗ್ಗೆ ನೋಟ ನೀಡಲು ಬಯಸಿದ ಲೇಖನ ಅದು. ಆ ಲೇಖನದಲ್ಲಿ ಪ್ರಸ್ತಾಪವಾದ For sale: baby shoes, never worn ಎನ್ನುವ ಅತಿ ಸಣ್ಣ ಕಥೆಯನ್ನು ಎಸ್ ದಿವಾಕರ್ ಕನ್ನಡಕ್ಕೆ ತಂದಿದ್ದಾರೆ ಎನ್ನುವ ಪ್ರಸ್ತಾಪವಿತ್ತು. ಎಸ್ ದಿವಾಕರ್ ಅವರು ಅದನ್ನು ಅನುವಾದ ಮಾಡಿಯೇ ಇಲ್ಲ ಎನ್ನುವುದು ಫೇಸ್ ಬುಕ್ ನಲ್ಲಿ ಪ್ರಕಟವಾದ ಪ್ರತಿಕ್ರಿಯೆ ಮೂಲಕ ಗಮನಕ್ಕೆ ಬಂದಿತು.
ರಾಘವೇಂದ್ರ ಜೋಶಿ ಅವರು ನವೀನ್ ಅವರ ಲೇಖನವನ್ನು ಆಧರಿಸಿ ಫೇಸ್ ಬುಕ್ ನಲ್ಲಿ ಬರೆದ ಪ್ರತಿಕ್ರಿಯೆ ಅವಧಿಯಲ್ಲಿ ‘ಡೈನೋಸಾರ್ ಮತ್ತು ಮಗುವಿನ ಪಾದರಕ್ಷೆ’ ಹೆಸರಿನಲ್ಲಿ ಪ್ರಕಟವಾಯಿತು. ನಂತರ ನಡೆದ ಚರ್ಚೆಯನ್ನು ಅವಧಿಯಲ್ಲೂ ಫೇಸ್ ಬುಕ್ ಪುಟದಲ್ಲೂ ನೀವು ಓದಿದ್ದೀರಿ. ಹಲವು ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿದೆ.
ಈ ಮಧ್ಯೆ ನವೀನ್ ಅವರು ಆದ ಪ್ರಮಾದದ ಬಗ್ಗೆ ಕ್ಷಮೆ ಕೋರಿ ಬರೆದ ಲೇಖನವೂ ಪ್ರಕಟವಾಗಿದೆ.
ಎಸ್ ದಿವಾಕರ್ ಅವರು ಬರೆದ ಪ್ರತಿಕ್ರಿಯೆ ‘ನಾನು ತುಂಬ ನೋವಿನಿಂದ ವ್ಯಕ್ತಪಡಿಸುತ್ತಿರುವ ಈ ಪ್ರತಿಕ್ರಿಯೆಗೆ ಕಾರಣವಿಷ್ಟೆ..’ ಹೆಸರಿನಲ್ಲಿ ಅವಧಿಯಲ್ಲಿ ಪ್ರಕಟವಾಗಿದೆ. ಈ ಮೂಲಕ ಚರ್ಚೆ ಒಂದು ಸುತ್ತು ಬಂದಿದೆ.
ರಾಘವೇಂದ್ರ ಜೋಶಿ ಅವರು ಬರೆದದ್ದು ಎಸ್ ದಿವಾಕರ್ ಅವರಿಗೂ, ಅವರನ್ನು ತುಂಬು ಪ್ರೀತಿಯಿಂದ ಓದಿರುವವರಿಗೂ ಅಸಮಾಧಾನ ಉಂಟುಮಾಡಿದೆ ಎನ್ನುವುದು ಆದ ಚರ್ಚೆಯಿಂದ ಅವಧಿಯ ಓದುಗರಿಗೆ ಗೊತ್ತಾಗಿದೆ. ರಾಘವೇಂದ್ರ ಜೋಶಿ ಅವರ ನೋಟ, ಎಸ್ ದಿವಾಕರ್ ಅವರು ವ್ಯಕ್ತಪಡಿಸಿರುವ ನೋವು ಬಗ್ಗೆ ತೀರ್ಮಾನವನ್ನು ನೀಡಲು ಸಾಧ್ಯವಿರುವುದು ಈ ಚರ್ಚೆಯನ್ನು ಓದಿದ ಓದುಗರಿಗೇ ಎಂದು ನಾವು ಭಾವಿಸಿದ್ದೇವೆ
ಆದರೆ ಅದೇ ಸಮಯದಲ್ಲಿ ಎಸ್ ದಿವಾಕರ್, ರಾಘವೇಂದ್ರ ಜೋಶಿ ಅವರಿಬ್ಬರ ಓದಿನ ಬಗೆಗಿನ ಗೌರವದಿಂದ, ಅವರ ತುಂಬು ಪುಸ್ತಕ ಪ್ರೀತಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ನವೀನ್ ಮಧುಗಿರಿ ಅವರ ಲೇಖನದಿಂದ ಆರಂಭಿಸಿ ಎಸ್ ದಿವಾಕರ್ ಅವರ ಪ್ರತಿಕ್ರಿಯೆವರೆಗೆ ಅವಧಿ ಈ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಬರಹಗಳನ್ನು ತನ್ನ ತಾಣದಲ್ಲಿ ಸಾರ್ವಜನಿಕದಿಂದ ತೆರವುಗೊಳಿಸಿ ಖಾಸಗಿ ವಿಭಾಗಕ್ಕೆ ವರ್ಗಾಯಿಸುತ್ತಿದೆ.
ಇದರೊಂದಿಗೆ ಈ ಕುರಿತ ಎಲ್ಲಾ ಚರ್ಚೆ ಅವಧಿಯಲ್ಲಿ ಮುಕ್ತಾಯವಾಗುತ್ತದೆ
-ಸಂಪಾದಕ
0 ಪ್ರತಿಕ್ರಿಯೆಗಳು