ಕನಕನ ಕಿಂಡಿಯಲ್ಲಿ ಕಂಡ ” ಡುಂಡಿಪನ್ “
ಮುರಳೀಧರ ಉಪಾಧ್ಯ ಹಿರಿಯಡಕ
ಡುಂಡಿರಾಜರ ” ಕನಕನ ಕಿಂಡಿ ” ( 2016 ) – ಕಿಡಿ ಇಡಿ ಕವನಗಳ ಸಂಕಲನ . ಈ ಸಂಕಲನದ ಮೊದಲ ಭಾಗದಲ್ಲಿ 180 ಹನಿಗಳು ಹಾಗೂ ಎರಡನೆಯ ಭಾಗದಲ್ಲಿ 20 ಇಡಿಗವಿತೆಗಳಿವೆ. ಈ ಸಂಕಲನದ ಮೊದಲ ಹನಿಗವನ ” ಕನಕನ ಕಿಂಡಿ “.
” ಮಹಾಕಾವ್ಯದ ಬಾಗಿಲು
ತೆರೆಯಲಿಲ್ಲವೆಂದು
ಚಿಂತಿಸಬೇಡಿ.
ಇಲ್ಲಿದೆ ನೋಡಿ
ಹನಿಗವನ
ಕನಕನ ಕಿಂಡಿ ”
ಈ ಸಂಕಲನದಲ್ಲಿ ಕರ್ಣನನ್ನು ಕುರಿತ ಕೆಲವು ಹನಿಗವನಗಳಿವೆ-
” ಎಲ್ಲರ ಮುಖದಲ್ಲೂ
ಕಣ್ಣು ಮುಂದೆ
ಕರ್ಣ ಹಿಂದೆ
ಪಂಪ ಭಾರತ ಓದಿದರೆ
ಕರ್ಣ
ಕಣ್ಣ ಮುಂದೆ ”
ಹೆಚ್ಚುತ್ತಿರುವ ವೈಚಾರಿಕ ಅಸಹನೆ ಕುರಿತು ಡುಂಡಿರಾಜರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.-ಗಡಿಯಾರ ನಿಲ್ಲಿಸಬಹುದು/ ನಿಲ್ಲುವುದಿಲ್ಲ ಕಾಲ/ಸಾಹಿತಿಯನ್ನು ಕೊಲ್ಲಬಹುದು/ ಸಾಹಿತ್ಯ ಸಾಯುವುದಿಲ್ಲ ”

“ನಾಲ್ಕು ಕಂಬದ ನಡುವೆ ಚುಟುಕ ಸಾಮ್ರಾಜ್ಯ, ಈ ರಾಜ್ಯದೊಳಗಿಲ್ಲ ಯಾವುದೂ ಪೂಜ್ಯ “ಎಂದಿದ್ದಾರೆ ದಿನಕರ ದೇಸಾಯಿ .
ಡುಂಡಿರಾಜ್ಯದಲ್ಲು ಕೂಡ ಯಾರೂ ಪೂಜ್ಯರಲ್ಲ. ವಿಮರ್ಶೆ , ಹಾಸ್ಯ ನಮ್ಮ ಆರೋಗ್ಯಕ್ಕೂ ಪ್ರಜಾಪ್ರಭುತ್ವದ ಆರೋಗ್ಯಕ್ಕೂ ಒಳ್ಳೆಯದು ಎಂಬುದು ಅವರ ನಿಲುವು .
” ಗಂಡನು ಒಬ್ಬನು ಮನೆಯೊಳಗಿದ್ದರೆ ನನಗದೆ ದೇವರ ಕೊಡುಗೆ ” ಎನ್ನುವ ” ಹೆಂಡತಿಯ ಹಾಡು ” ಈ ಸಂಕಲನದಲ್ಲಿ ನನಗೆ ಇಷ್ಟವಾದ ಅಣಕುವಾಡು
ಹಾಸ್ಯದ ಮೂಲವಾದ ಹಗರಣ , ಅಸಂಬದ್ದತೆ , ಡಂಭಾಚಾರ , ಇತರರ ಫಜೀತಿಗಳಿಂದ ಪ್ರೇರಣೆ ಪಡೆಯುವ ಡುಂಡಿರಾಜರ ವಿಡಂಬನ ಪ್ರತಿಭೆ ಖುಷಿ ಕೊಡುತ್ತದೆ .
ಪ್ರಬುದ್ಧ ರಾಜಕೀಯ ಚಿಂತನೆಯ ಪಾ. ವೆಂ. ಆಚಾರ್ಯರನ್ನು ನೆನಪಿಸುವಂತೆ ಡುಂಡಿರಾಜರು ಬರೆಯುತ್ತಿರುವುದನ್ನು ನೋಡಿ ನಾನು ಸಂತೋಷಪಟ್ಟಿದ್ದೇನೆ. ಡುಂಡಿಪನ್ ( Dundipun ) ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯಕ್ಕೆ ಒಂದು ಮಹತ್ವದ ಸೇರ್ಪಡೆ . ” ಕನಕನ ಕಿಂಡಿ ” ಯಲ್ಲಿ ನಮ್ಮ ಅಸಮಾನತೆಯ ನಾಡಿನ ಡಾಂಬಿಕತೆ ಅನಾವರಣಗೊಳ್ಳುತ್ತದೆ.
‘ಕನಕನ ಕಿಂಡಿ’ ಗೆ ಬರೆದ ಮುನ್ನುಡಿಯ ಆಯ್ದ ಭಾಗ





ಬೀಚಿ, ಕೆಎಸ್ಸಾರ್ ನಂತರ ಕನ್ನಡಿಗರಿಗೆ ‘ಪನ್’ ಚ ಕಜ್ಜಾಯ ಉಣಿಸಿದವರು ಡುಂಡಿರಾಜ್. ದಿನಕರ ದೇಸಾಯಿ, ಅಕಬರ್ ಅಲಿಯವರ ಹಾದಿ ಹಿಡಿದರೂ ಹೊಸದೊಂದು ಸಾಹಿತ್ಯ ಪ್ರಕಾರವನ್ನು ಸೃಷ್ಟಿಸಿದ್ದಾರೆ.