ಡಾ. ಜಿ. ಪರಮೇಶ್ವರರಿಗೊಂದು ಬಹಿರಂಗ ಪತ್ರ

shridhar-prabhu

ಶ್ರೀಧರ್ ಪ್ರಭು 

ಶ್ರೀಯುತರೇ,

ತಮಗೆ ಸಪ್ರೇಮ ವಂದನೆಗಳು.

ನಾನು ಯಾವುದೇ ಪಕ್ಷ, ಪಂಗಡ ಅಥವಾ ರಾಜಕಾರಣವನ್ನು ಪ್ರತಿನಿಧಿಸಿ ಈ ಪತ್ರ ಬರೆಯುತ್ತಿಲ್ಲ. ಇದು ನನ್ನ ವ್ಯಕ್ತಿಗತ ಸಂವಾದ. ಹಾಗೆಯೇ ನಾನು ಈ ರಾಜ್ಯದ ಗೃಹ ಮಂತ್ರಿಗಳಿಗಾಗಲಿ ಅಥವಾ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿಗಾಗಲಿ ಈ ಪತ್ರವನ್ನು ಬರೆಯುತ್ತಿಲ್ಲ. ನನ್ನ ಮನವಿ ವಯಕ್ತಿಕವಾಗಿ ತಮಗೆ. ಇನ್ನೂ ನೇರವಾಗಿ ಹೇಳುವುದಾದರೆ ದಿವಂಗತ ಹೆಚ್. ಎಂ. ಗಂಗಾಧರಯ್ಯನವರ ಸುಪುತ್ರನಿಗೆ.

ತಮಗೆ ವಯಕ್ತಿಕವಾಗಿ ಒಂದು ವರ್ಚಸ್ಸಿದೆ. ತಮಗೆ ಅಧಿಕಾರವೂ ಇದೆ. ಸಾಕಷ್ಟು ವಿದ್ಯಾಸಂಸ್ಥೆಗಳನ್ನೂ ನಡೆಸುತ್ತಿರುವ ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯೆ ಪಡೆಯುತ್ತಿದ್ದಾರೆ. ತುಮಕೂರು ಭಾಗದ ಜನರು, ಅದರಲ್ಲೂ ದಲಿತರು ಮೊಟ್ಟ ಮೊದಲ ಬಾರಿಗೆ ವಿದ್ಯಾಸಂಸ್ಥೆಗಳನ್ನು ನೋಡಿದ್ದು ಶಿಕ್ಷಣ ಭೀಷ್ಮ ದಿವಂಗತ ಹೆಚ್. ಎಂ. ಗಂಗಾಧರಯ್ಯನವರ ಅವಿರತ ಶ್ರಮದಿಂದ.

h-m-gangadharaiahಮಾಗಡಿ ತಾಲೂಕಿನ ಗ್ರಾಮ ಹೆಬ್ಬಾಳಾಲುವಿನಲ್ಲಿದ್ದ ತಮ್ಮ ಪೂರ್ವಿಕರು ಸಾಕಷ್ಟು ಸಂಕಷ್ಟಗಳನ್ನನುಭವಿಸಿದ್ದಾರೆ. ತಮ್ಮ ತಾತನವರು ಸೇನೆಗೆ ಸೇರಿದ ನಂತರದಲ್ಲಿ ಮಾಗಡಿ ಜಿಲ್ಲೆಯ ಗ್ರಾಮದಲ್ಲಿ ಹುಟ್ಟಿ ಅಲ್ಲಿನ ಬಲಾಢ್ಯ ಜನಾಂಗಗಳ ದೌರ್ಜನ್ಯಕ್ಕೆ ನಲುಗಿ ಪಕ್ಕದೂರಿಗೆ ವಲಸೆ ಹೋದವರು. ಮಾಗಡಿ ತಾಲೂಕಿನ ಸುಂದರ ಪರಿಸರದಲ್ಲಿ ಬೆಳೆದ ಗಂಗಾಧರಯ್ಯನವರು ಅತ್ಯುತ್ತಮ ಕುಂಚಕಲಾವಿದರಾಗಿ ಬೆಳೆದರು. ನಾಲ್ವಡಿಯವರ ಪರಿಶ್ರಮದಿಂದ ಎಲ್ಲ ಸಮುದಾಯಗಳಿಗೆ ಶಾಲೆಗೆ ಪ್ರವೇಶವಿದ್ದರೂ, ಅಲ್ಲಿನ ಗ್ರಾಮಸ್ಥರ ಒತ್ತಡದಿಂದಾಗಿ ಗಂಗಾಧರಯ್ಯನವರಿಗೆ ಸವರ್ಣೀಯ ಮಕ್ಕಳ ಜೊತೆ ತರಗತಿಯಲ್ಲಿ ಕೂಡಲು ಅವಕಾಶವಿರಲಿಲ್ಲ. ಆದರೂ, ಕಷ್ಟಪಟ್ಟು ಸಾಕಷ್ಟು ವಿದ್ಯಾಭ್ಯಾಸ ಪಡೆದರು.

ಗಾಂಧಿಯವರು ನಂದಿ ಬೆಟ್ಟಕ್ಕೆ ವಿಶ್ರಾಂತಿಗೆಂದು ಬೆಂಗಳೂರಿಗೆ ಬಂದಾಗ ಬಾಲಕ ಗಂಗಾಧರಯ್ಯನವರನ್ನು ಪಂಚಮರ ಗೋಪಾಲಸ್ವಾಮಿ ಅಯ್ಯರ್ ಭೇಟಿಗೆಂದು ಕರೆದೊಯ್ದರು. ತಮ್ಮ ಸರದಿ ಬರಲು ಸುಮಾರು ಅರ್ಧ ಗಂಟೆ ಕಾಯಬೇಕಾದಾಗ, ದೂರದಿಂದಲೇ ಗಾಂಧಿಯವರನ್ನು ನೋಡುತ್ತಾ ಗಂಗಾಧರಯ್ಯನವರು ಗಾಂಧಿ ಚಿತ್ರ ಬಿಡಿಸಿದರು. ಗಂಗಾಧರಯ್ಯನವರು ಗಾಂಧಿಯವರ ಅಪಾರ ಮೆಚ್ಚುಗೆ ಪಡೆದರು.

ಈ ಚಿತ್ರವನ್ನು ತಾವು ಸಾಧ್ಯವಾದರೆ ಯಾರಿಗಾದರೂ ಮಾರಾಟಮಾಡಿ ಇದನ್ನು ತಮ್ಮ ದೇಶಕಾರ್ಯಕ್ಕೆ ಬಳಸಿಕೊಳ್ಳಿ ಎಂದರು ಗಂಗಾಧರಯ್ಯನವರು.

ಗಾಂಧಿಯವರ ಆಶಯದಂತೆ ಗಂಗಾಧರಯ್ಯನವರು ಚಿತ್ರಕಲೆಯ ಶಿಕ್ಷಕ ತರಬೇತಿ ಪಡೆದು ಮಾಗಡಿ ತಾಲೂಕಿನಲ್ಲಿ ಶಿಕ್ಷಕರಾಗಿ ಸೇರಿದ ನಂತರದಲ್ಲಿ ತಾವು ಪಟ್ಟ ಪಾಡು ಬೇರೆಯವರಿಗೆ ಬರಬಾರದೆನ್ನುವ ಕಾಳಜಿಯಿಂದ ಮನೆಮನೆಗೂ ಹೋಗಿ ಅಕ್ಷರಶಃ ಕಾಡಿ ಬೇಡಿ ಹಣ ಸಂಗ್ರಹಿಸಿ ತುಮಕೂರು ಜಿಲ್ಲೆಯ ನೂರಾರು ಕಡೆ ದಲಿತರ ಶಾಲೆ ತೆರೆದರು. ಇಂದು ಗಂಗಾಧರಯ್ಯನವರ ಪರಿಶ್ರಮದಿಂದ ತುಮಕೂರು ಸಮೀಪದ ಕುಗ್ರಾಮ ಗೊಲ್ಲಹಳ್ಳಿ ಸಿದ್ಧಾರ್ಥನಗರವಾಗಿ ಹತ್ತಾರು ವಿದ್ಯಾಸಂಸ್ಥೆಗಳಿಗೆ ತವರೂರಾಗಿದೆ.

ಇಂಥ ಹೆಮ್ಮೆಯ ಹಿನ್ನೆಲೆಯಿಂದ ಬಂದಿರುವ ತಾವು, ಗೊಲ್ಲಹಳ್ಳಿಯಲ್ಲಿ ತಮ್ಮ ತೀರ್ಥರೂಪರೇ ಕಟ್ಟಿಸಿದ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿ ನಂತರದಲ್ಲಿ ಆಸ್ಟ್ರೇಲಿಯಾದ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಸಸ್ಯಜೀವ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದೀರಿ. ತಮ್ಮ ಪರಿಣಿತಿಯನ್ನು ಪರಿಗಣಿಸಿ ತಮಗೆ ಆಸ್ಟ್ರೇಲಿಯಾದ ಪ್ರತಿಷ್ಠಿತ ಸೊಸೈಟಿ ಆ ಪ್ಲಾಂಟ್ ಫಿಸಿಯೋಲಾಜಿಯ (Australian Society of Plant Physiology) ಗೌರವ ಸದಸ್ಯತ್ವ ನೀಡಲಾಗಿದೆ. ತಾವು. ಹಾಗೆಯೇ ಭಾರತದ ಪ್ರತಿಷ್ಠಿತ ಕೃಷಿ ತಂತಜ್ಞರ ಸಂಸ್ಥೆಯ Indian Institute of Agricultural Technologists ಅಜೀವ ಸದಸ್ಯರು.

ಇಷ್ಟು ಜ್ಞಾನ ಮತ್ತು ವಿಜ್ಞಾನ ಪರಿಣಿತರಾದ ತಾವು ಈ ರಾಜ್ಯದ ಮುಖ್ಯಮತ್ರಿಯಾಗಬೇಕೆಂದು ಬಯಸುವ ಪಕ್ಷಾತೀತವಾಗಿ ಬಯಸುವ ತಮ್ಮ ಲಕ್ಷಾಂತರ ಜನ ಅಭಿಮಾನಿಗಳು ಕರ್ನಾಟಕದಲ್ಲಿದ್ದಾರೆ.

ಇಷ್ಟೆಲ್ಲಾ ಜನರ ಅಭಿಮಾನ ಗಳಿಸಿರುವ, ಗಂಗಾಧರಯ್ಯನವರ ಸುಪುತ್ರರಾದ ತಾವು ಗಂಗಾಧರಯ್ಯನವರ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿಯುಳ್ಳವರು. ಗಂಗಾಧರಯ್ಯನವರು ಬೌದ್ಧ ಧಮ್ಮ ದೀಕ್ಷೆ ಸ್ವೀಕರಿಸಿದವರು; ತಾವು ಧಮ್ಮ ದೀಕ್ಷೆ ಪಡೆದಿದ್ದೀರಿ. ತಮ್ಮ ವಿದ್ಯಾಸಂಸ್ಥೆಯಲ್ಲಿ ಮಾತ್ರವಲ್ಲ, ಕರ್ನಾಟಕದ ಮೂಲೆ ಮೂಲೆಗಳಲ್ಲೂ ನಿಮ್ಮ ಮಾರ್ಗದರ್ಶನಕ್ಕೆ ವಿದ್ಯಾರ್ಥಿ ಯುವಜನರು ಹಾತೊರೆಯುತ್ತಾರೆ.

ನೀವು ನಿಮ್ಮ ವಿದ್ಯಾಸಂಸ್ಥೆಗೆ ಸಿದ್ಧಾರ್ಥನ ಹೆಸರಿಟ್ಟಿದ್ದೀರಿ. ಗಂಗಾಧರಯ್ಯನವರಂಥ ಮಹಾನ್ ವ್ಯಕ್ತಿಯ ಸಂಸ್ಕಾರ ತಮಗೆ ಲಭಿಸಿದೆ. ತಮ್ಮ ಜೀವನದಲ್ಲಿ ತಥಾಗತನಿದ್ದಾನೆ. ನಿಮ್ಮ ತಂದೆಯ ನೆನಪುಗಳಿವೆ, ಪ್ರೇರಣೆಯಿದೆ.

ಒಂದು ಪ್ರಶ್ನೆ ಸರ್.

janardhan-reddy-daughter-marriageನಿಮ್ಮದೇ ವಿದ್ಯಾಸಂಸ್ಥೆಯ ಓರ್ವ ವಿದ್ಯಾರ್ಥಿ/ ನಿ ತನ್ನ ಮದುವೆಗೆ ಸುಮಾರು ೫೦೦ ಕೋಟಿ ಖರ್ಚುಮಾಡಿ ಬೆಂಗಳೂರು ಅರಮನೆಯಲ್ಲಿ ಅದ್ದೂರಿಯಾಗಿ ಮದುವೆಯಾಗಲು ಬಯಸಿದರೆ ನಿಮ್ಮ ಪ್ರತಿಕ್ರಿಯೆ ಏನು?

ಸರ್, ತಮ್ಮ ಪಕ್ಷ ಗಣಿಧಣಿಗಳ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ಮಾಡಿದ ವಿಚಾರ ಪಕ್ಕಕ್ಕಿಡೋಣ ಏಕೆಂದರೆ ಇಲ್ಲಿ ರಾಜಕಾರಣ ಬೇಡ. ವೈಯಕ್ತಿಯ ನೆಲೆಯಲ್ಲಿ ತಮ್ಮ ಅಭಿಪ್ರಾಯ ತಿಳಿಸಿ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ, ಈ ರಾಜ್ಯದ ಗೃಹ ಮಂತ್ರಿಗಳ ಸಮಾಚಾರ ಪಕ್ಕಕ್ಕಿಡಿ.

ಗಾಂಧಿವಾದಿ, ಶಿಕ್ಷಣ ಭೀಷ್ಮ, ಕರ್ನಾಟಕದ ವಿದ್ಯಾಸಾಗರ ಎನಿಸಿಕೊಂಡ ದಿವಂಗತ ಹೆಚ್ ಎಂ ಗಂಗಾಧರಯ್ಯನವರ ಸಂಸ್ಕಾರ ಪಡೆದ ಮಗ ಡಾ ಪರಮೇಶ್ವರ್, ಜನಾರ್ಧನ ರೆಡ್ಡಿಯವರ ಪುತ್ರಿಯ ಅದ್ದೂರಿ ಮದುವೆಗೆ ಹೋಗಿದ್ದು ಭೂಷಣವೇ?

ಪ್ರೀತಿಯಿಂದ,

ಹೀಗೊಬ್ಬ ಗಂಗಾಧರಯ್ಯನವರ ಅಭಿಮಾನಿ

‍ಲೇಖಕರು Admin

November 19, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: