ನಾನು ಮಾಡಿದ ಅಡಿಗೆ ಊಟ ಮಾಡಿ .. ನಮ್ಮನೆ ಎಮ್ಮೆ ಡುಮ್ಮ ಆಯ್ತು..!

– ಪ್ರಕಾಶ್ ಹೆಗ್ಡೆ
ಇಟ್ಟಿಗೆ ಸಿಮೆ೦ಟು
ತುಂಬಾ ದಿನಗಳಾಗಿತ್ತು ಶಾರಿಗೆ ಫೋನ್ ಮಾಡದೆ…
ಬಹಳ ಖುಷಿಯಿಂದ ಮಾತನಾಡಿದಳು..
“ಏನೋ ಡುಮ್ಮಣ್ಣಾ…
ಹೇಗಿದ್ದೀಯೋ…?…
ನಿನ್ನ ಆಕಾರಕ್ಕೆ ಗೊಮಟೇಶ್ವರನನ್ನೂ ಹೋಲಿಸೋ ಹಾಗಿಲ್ಲವಲ್ಲೊ…
ನಿನ್ನ ಸೈಜಿನ ಬಟ್ಟೆ ಸಿಗುತ್ತದೋ…?
ಅಥವಾ ಫ್ಯಾಕ್ಟರಿಗೇ ಹೋಗಿ ತರ್ತೀಯೋ…?
ಅಲ್ಲಾ…
ಯಾವ ಅಂಗಡಿ ಸಾಮಾನು ತಿಂತೀಯಾ ಮಾರಾಯನೆ…?
ಊರಿಗೆ ಬರ್ತಾ ನಮ್ಮನೆಗೂ ಸ್ವಲ್ಪ ತಗೊಂಡು ಬಾ…
ನಮ್ಮ ಯಜಮಾನ್ರೀಗೂ ಹಾಕ್ತಿನಿ….!
ನಾನು ಮಾಡಿದ ಅಡಿಗೆ ಊಟ ಮಾಡಿ ..
ನಮ್ಮನೆ ಆಳು ಡುಮ್ಮ ಆದ…!
ಕೊಟ್ಟಿಗೆಯಲ್ಲಿ ನಮ್ಮನೆ ಎಮ್ಮೆನೂ ದಪ್ಪಗಾಯ್ತು….!
ಮಾರಾಯನೆ…
ಇವರು ಮಾತ್ರ ಹೀಗೆ ಇದ್ದಾರೆ ನೋಡು…! ”
ಈ ಶಾರಿ ಮಾತನಾಡಿದರೆ ಹೀಗೆನೇ…
“ಅಯ್ಯೋ ಬಿಡು ಮಾರಾಯ್ತಿ…!
ನನ್ನ ಸೈಜಿನ ಕಷ್ಟ ನಿನಗೆಲ್ಲಿ ಅರ್ಥ ಆಗಬೇಕು…?
ಈ ದಪ್ಪ ಆಗೋದು…
ತೆಳ್ಳಗಾಗೋದು ನಮ್ಮ ಕೈಯಲ್ಲಿ ಇಲ್ಲ ನೋಡು…
ನನ್ನ ಟೆನ್ಷನ್ ನನಗೆ ಮಾರಾಯ್ತಿ…”
“ನಿನಗೆಂಥಹ ಟೆನ್ಷನ್ನೋ…
ನಮ್ಮ ಯಡಿಯೂರಪ್ಪನಿಗೆ ಇಲ್ದೇ ಇರುವಂಥಾದ್ದು…?
ನಮ್ಮ ಯಡಿಯೂರಪ್ಪನ್ನ ನೋಡು…
ಪಾಪ ಅನ್ನಿಸ್ತದೆ…
ಹೆಂಗಿದ್ದವ ಹೆಂಗಾಗಿ ಹೋದ… !”
“ಹೌದು ಕಣೆ ಶಾರಿ…
ಯಡಿಯೂರಪ್ಪನವರ ವರ್ತನೆ ನನಗೂ ಅರ್ಥ ಆಗ್ಲಿಲ್ಲ…
ಬಿಜೇಪಿ ಇಷ್ಟ ಇಲ್ಲ ಅಂದ್ರೆ ..
ಬಿಟ್ಟು ಹೋಗಿಬಿಡ್ಬೇಕಿತ್ತು…
ಬೇರೆ ಪಕ್ಷ ಸೇರ ಬಹುದಿತ್ತು…
ಅಥವಾ ಹೊಸ ಪಕ್ಷ ಮಾಡ ಬಹುದಿತ್ತು…
ದಿನಾಲೂ ಈ ರಂಪಾಟ…
ಜಗಳ…
ಈ ಬ್ರೇಕಿಂಗ್ ನ್ಯೂಸು… ಬೇಜಾರಾಗಿದೆ ಕಣೆ…”
ಯಾವಾಗ್ಲೂ ರಾಜಕೀಯ ಅಂದ್ರೆ ಅಲರ್ಜಿ ಅಂತಿದ್ದವ ..
ನನಗೆ ತಡೇಯಲಾಗದೆ ಶಾರಿ ಹತ್ತಿರ ಹೇಳಿಕೊಂಡೆ…
“ಹೊಟ್ಟೆ ಇದ್ದವರೆಲ್ಲ ಬುದ್ಧಿವಂತರಾಗಿದ್ರೆ …
ನೀನು ..
ಇಷ್ಟು ಹೊತ್ತಿಗೆ ನೊಬೆಲ್ ಬಹುಮಾನ ಗೆಲ್ತಿದ್ದೆ ಬಿಡು…!
ದಿನಾಲೂ ಪೇಪರ್ ಓದ್ತೀಯಾ…
ಒಂದು ಅರ್ಥ ಆಗೋದಿಲ್ಲ ಬಿಡು…”
“ಏನು ಅದು ನನಗೆ ಅರ್ಥ ಆಗ್ದೇ ಇರೋ ರಾಜಕೀಯ…?”
” ಅದೆಲ್ಲಾ… ರಾಜಕೀಯ ತಂತ್ರ ಕಣೊ…
ಸೋನಿಯಾ ಗಾಂಧಿ ಬಂದ್ರು….
ಎಲ್ಲೆಲ್ಲಿ ಹೋದ್ರು…
ಏನೇನೋ ಮಾತುಕಥೆ ನಡೀತು…
ಒಂದು ಡೀಲು ಆಗಿರ್ಲಿಕ್ಕೂ ಸಾಕು…”
“ಏನದು?….”
“ನಮ್ಮ ಸೋನಿಯಾ ಯಡ್ಯೂರಪ್ಪಂಗೆ ಹೇಳಿದ್ರು…
“ನೋಡಿ..
ಯಡಿಯೂರಪ್ಪನವರೆ…
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸು ಗೆಲ್ಲಬೇಕು…
ಬಿಜೇಪಿ ಸೋಲಬೇಕು…
ಹಾಗಾಗಿ ನೀವು ಬೀಜೇಪಿಯಲ್ಲೇ ಇದ್ದು ಬೀಜೇಪಿ ಹೆಸರು ಹಾಳು ಮಾಡ್ರಿ…
ಅದರಿಂದ ನಿಮಗೂ ಲಾಭ…
ನಮಗೂ ಲಾಭ….”
“ಹೋಗೆ…
ಏನಾದ್ರು ಕಥೆ ಕಟ್ಟ ಬೇಡ…”
“ಆಗ ನಮ್ಮ ಯಡಿಯೂರಪ್ಪ ..
“ನನಗೇನು ಲಾಭ?” ಅಂತ ನಿನ್ನ ಹಾಗೆ ಕೇಳಿದ್ರು…
ನಮ್ಮ ಸೋನಿಯಾರವರದ್ದು ಇಟಲಿ ತಲೆ ಕಣೋ….
“ನೋಡಿ ಯಡಿಯೂರಪ್ಪನವರೆ…
ನಿಮ್ಮ ಮೇಲೆ ಸಿಬಿಐ ಕೇಸು ಬೀಳ್ತಾ ಇದೆ…
ಆ ಕೇಸಿನಲ್ಲಿ ನಿಮಗೆ ತೊಂದ್ರೆ ಆಗ್ದೆ ಇರೊ ಹಾಗೆ ನಾನು ನೋಡ್ಕೋತೆನೆ…
ಒಂದೆರಡು ವರ್ಷದಲ್ಲಿ ..
ಕೇಸು ಬಿದ್ದು ಹೋಗೋ ಹಾಗೆ ಮಾಡಿಕೊಡ್ತೇನೆ…”
ನಾನು ತಲೆ ಕೆರೆದು ಕೊಂಡೆ…
“ಅಲ್ವೋ…
ಬಳ್ಳಾರಿ ರೆಡ್ಡಿಗಳ ಜೊತೆನೂ ಇಂಥಹುದೇ ಒಪ್ಪಂದ ಆಗಿದೆ ಕಣೊ…
“ರೆಡ್ಡಿಗಳೆ…
ನೀವು ಬೇರೆ ಪಕ್ಷ ಕಟ್ಟಿ..
ಪಾದಯಾತ್ರೆ ಮಾಡಿ ಬಿಜೇಪಿಗೆ ಮಂಗಳಾರತಿ ಎತ್ತತಾ ಇರಿ…
ಬಿಜೇಪಿ ಓಟು ಕಸಿಯಿರಿ…
ಮುಂದಿನ ಲೋಕಸಭೆ ಚುನಾವಣೆ ಮುಗಿಯೋ ಹೊತ್ತಿಗೆ ..
ನಿಮ್ಮ ಕೇಸು ಬಿದ್ದು ಹೋಗುವ ಹಾಗೆ ಮಾಡಿ ಕೊಡ್ತಿನಿ…”
“ಶಾರೀ…
ಸುಮ್ಮ ಸುಮ್ನೆ ಏನೇನೋ ಮಾತನಾಡಬೇಡ…
ನಮ್ಮ ದೇಶದಲ್ಲಿ ಸಿಬಿಐ…
ಸುಪ್ರೀಂ ಕೋರ್ಟ್ ತುಂಬಾ ಚೆನ್ನಾಗಿ ಕೆಲಸ ಮಾಡ್ತಿದೆ…
ಈ ಮಧ್ಯೆ “ಅಣ್ಣಾ ಹಜಾರೆ…
ಆರ್.ಸಿ. ಹಿರೇಮಠ್” ಇಂಥವರೂ ಇದ್ದಾರೆ…
ಟಿವಿಗಳು..
ಪೇಪರುಗಳು ಸದಾ ಜಾಗ್ರತವಾಗಿ ಪ್ರಜಾಪ್ರಭುತ್ವ ಕಾಯ್ತಾ ಇವೆ….
ಹಾಗಾಗಿ ಸುಖರಾಮ್ … ರಾಜಾ… ಕನಿಮೋಳಿ ಅಂಥವರು ಜೈಲು ಕಾಣುತ್ತಿದ್ದಾರೆ…”
“ಪ್ರಕಾಶು…
ನಿನ್ನ ದಪ್ಪ ಚರ್ಮಕ್ಕೆ ಸೂಕ್ಷ್ಮ ವಿಚಾರಗಳು ಹೋಗಲ್ಲ ಕಣೊ…”
“ಶಾರೀ…
ನೀನು ಹೇಗೆ ಮಾತಾಡ್ತಿದ್ದೀಯಾ ಅಂದ್ರೆ..
ಅವರಿಬ್ಬರ ನಡುವೆ ನೀನು ಮಧ್ಯಸ್ತಿಕೆ ವಹಿಸಿದ್ದೀಯಾ ಅಂತ ಕಾಣಿಸ್ತಿದೆ”
ಅಷ್ಟರಲ್ಲಿ ಶಾರೀ ಗಂಡ “ಗಣಪ್ತಿ ಭಾವ” ಫೋನ್ ಕಸಿದು ಕೊಂಡರು…
“ಪ್ರಕಾಶು…
ಇವಳ ತರ್ಕಕ್ಕೂ…
ತುಘಲಕ್ಕನ ತರ್ಕಕ್ಕೂ ಜಾಸ್ತಿ ವ್ಯತ್ಯಾಸ ಇಲ್ಲ ಕಣೊ…
ಇತ್ತೀಚೆಗೆ ಪೇಪರ್ ಓದೋದು ಜಾಸ್ತಿ ಆಗಿದೆ…
ಸಂಗಡ ಟಿವಿ ನ್ಯೂಸು ನೋಡೋದು…
ದಿನಾಲೂ ಆ ಹಾಳು ರಾಜಕೀಯ ನನಗೆ ಕೊರೆಯೋದು….
ಒಂದು ದಿನ ಬಿಜೇಪಿ…
ಇನ್ನೊಂದಿನ ಕಾಂಗ್ರೆಸ್ಸು…
ಇನ್ನೊಂದು ದಿನ ಕುಮಾರಸ್ವಾಮಿ ಪಕ್ಷ…
ಇವಳದ್ದು ಒಂದು ಪಕ್ಷ ಅಂತ ಇಲ್ಲ ಕಣೊ…
ಆದರೆ ಒಂದು ವಿಚಾರ ಮಾರಾಯಾ…
ಪ್ರತಿ ಬಾರಿಯೂ ಇವಳು ಹೇಳೊದು ಸರಿ ಅಂತಾನೆ ಅನ್ನಿಸ್ತದೆ…!!
ಒಟ್ಟಿನಲ್ಲಿ ನಾನೂ ಸಹ ರಾಜಕೀಯಾದ ಬಗೆಗೆ ತಲೆ ಕೆಡಿಸ್ಕೊಂಡು ..
ತಲೆ ಕೂದಲು ಉದರಿ ಹೋಗ್ತಾ ಇದೆ ಕಣೊ…”
“ಗಣಪ್ತಿ ಭಾವಯ್ಯಾ…
ನಮ್ಮ ಶಾರಿನ ಈ ಸಾರಿ ಗ್ರಾಮ ಪಂಚಾಯತಿ ಚುನಾವಣೆಗೆ ನಿಲ್ಲಿಸಿಬಿಡು…
ಎಲ್ಲ ಪಕ್ಷದವರೂ ಓಟು ಹಾಕ್ತಾರೆ…”
“ಆಯ್ಯೋ ಮಾರಾಯನೆ..
ಒಳಗಿನ ಕೆಲಸ..
ಹೊರಗಿನ ಕೆಲ್ಸ ..
ನನ್ನ ಕೆಲ್ಸಕ್ಕೆಲ್ಲ “ಲಲಿತಕ್ಕ”ನ್ನೇ ನಂಬಿಕೊಳ್ಳಬೇಕು ಅಷ್ಟೆ…”
“ಈ ಲಲಿತಕ್ಕ ಯಾರು?”
“ಲಲಿತಕ್ಕ ಗೊತ್ತಿಲ್ವೇನೋ…
ನಮ್ಮನೆ ಆಳು ಲಕ್ಕುನ ಹೆಂಡತಿ…
ಪಾಪ ಅವಳಾದರೂ ಎಷ್ಟು ಅಂತ ಮಾಡ್ತಾಳೆ…
ಅತ್ತ ಲಕ್ಕು…
ಇತ್ತ ನಾನು….”..
ಲೊಚಗುಟ್ಟಿದ..
ನನಗೆ ಗಣಪ್ತಿ ಭಾವನ ಪರಿಸ್ಥಿತಿ ನೆನೆದು ನಗು ಬಂತು…
ಸಂಜೆ ನಾಗು ಬಂದಿದ್ದ..
ಶಾರಿಯ ತರ್ಕ ನಾಗೂಗೆ ಹೇಳಿದೆ…
ಆತನೂ ನಗೆಯಾಡಿದ….
“ಪ್ರಕಾಶೂ…
ನಮ್ಮ ಯಡಿಯೂರಪ್ಪ ಅನ್ನೋದು ಒಂದು ಸಂಕೇತ ಕಣೊ….
ಒಂದು ಸೂಕ್ಷ್ಮ ಹೇಳ್ತಿನಿ..
ನಾಳೆ “ಸದಾನಂದ ಗೌಡರ” ನೇತ್ರತ್ವದಲ್ಲಿ ಚುನಾವಣೆ ಗೆದ್ರು ಅಂತಿಟ್ಟುಕೊ…
ಅಥವಾ…
ಸಿದ್ಧರಾಮಯ್ಯ.. ಕುಮಾರಸ್ವಾಮಿ.. ಯಾರೇ ಇರಲಿ…
ಅವರೂ ಸಹ ಮುಂದಿನ ಯಡಿಯೂರಪ್ಪ ಆಗ್ತಾರೆ…”
ನನಗೆ ಅರ್ಥ ಆಗ್ಲಿಲ್ಲ….
“ನೋಡೊ…
ಒಂದು ರಾಜ್ಯದ ಮುಖ್ಯ ಮಂತ್ರಿ ಅಂದರೆ ಸುಮ್ಮನೆ ಆಗೋದಿಲ್ಲ…
ಅವನು ಕೇಂದ್ರದ ಹೈ ಕಮಾಂಡಿಗೆ…
ರಾಜ್ಯದ ಪಕ್ಷಕ್ಕೆ “ಹಣದ” ವ್ಯವಸ್ಥೆ ಮಾಡಬೇಕು…
ಮುಂದಿನ ಚುನಾವಣೆಯ ಪ್ರತಿ ಕ್ಷೇತ್ರದ “ಹಣದ” ಜವಾಬ್ದಾರಿ ಅವನಿಗಿರ್ತದೆ….
ಪಾರ್ಟಿ ಜನರ ದೆಹಲಿ…
ವಿಮಾನದ ಓಡಾಟದ ಖರ್ಚು.. ಸಭೆ ಸಮಾರಂಭಗಳ ಖರ್ಚು…
ಎಲ್ಲವನ್ನೂ “ಆಡಳಿತ” ಪಕ್ಷ ನೋಡಿಕೊಳ್ಳಬೇಕು…
ಆಗ ಒಬ್ಬರು ಬಲಿ ಪಶುವಾಗಬೇಕು…
ಈ ರಾಜಗಳು ಸಿಕ್ಕಿ ಹಾಕಿಕೊಂಡರೆ “ಬಂಗಾರು ಲಕ್ಷ್ಮಣ” ಆಗ್ತಾರೆ…
ಅಥವಾ ಸುಖರಾಮ ಆಗ್ತಾರೆ..
ಹಗರಣದಲ್ಲಿ ಸಿಕ್ಕಿ ಹಾಕಿಕೊಳ್ಳಲಿಲ್ಲ ಅಂದ್ರೆ ಮುಂದಿನ ಮುಖ್ಯ ಮಂತ್ರಿ ಆಗ್ತಾರೆ…
“ನಮ್ಮ ರಾಜಕೀಯ ವ್ಯವಸ್ಥೆಯ ವಿಪರ್ಯಾಸಗಳು “ಜಯಾಲಲಿತರನ್ನು…
ಕರುಣಾನಿಧಿಗಳನ್ನು.. ಲಾಲು.. ರಾಜಾ..
ಕಲ್ಮಾಡಿಗಳನ್ನು ಹುಟ್ಟಿಸುತ್ತಿದೆ….
ಸಂವಿಧಾನ ಬರೆದವರಿಗೆ ಈ ವಿಪರ್ಯಾಸಗಳ ಕಲ್ಪನೆ ಕೂಡ ಇದ್ದಿತ್ತಿಲ್ಲ…
ಯಾಕೆಂದರೆ ಅವರೆಲ್ಲ ಶುದ್ಧ ಹೃದಯವಂತರಾಗಿದ್ರು…
ಅಂಬೇಡ್ಕರ್… ವಲ್ಲಭ ಭಾಯ್, ಶಾಸ್ತ್ರಿಗಳು ಇಂಥವರೆಲ್ಲ ಇದನ್ನು ನೋಡಿದ್ರೆ ಎದೆಯೊಡೆದು ಹೋಗ್ತಿದ್ರು….
ಒಂದೊಂದು ಗ್ರಾಮ ಪಂಚಾಯತಿ ಚುನಾವಣೆ ಗೆಲ್ಲಲ್ಲಿಕ್ಕೆ ಕೋಟ್ಯಾಂತರ ರುಪಾಯಿ ಖರ್ಚು ಮಾಡ್ತಾರೆ…
ಆಮೇಲೆ ಆ ಹಣವನ್ನು ದುಡಿಯಬೇಕಲ್ಲ….”
“ಇದಕ್ಕೆಲ್ಲ ಏನು ಪರಿಹಾರ…?
“ವಿದೇಶಿ ಬ್ರಿಟಿಶರನ್ನು ಓಡಿಸಲು ಇನ್ನೂರು ವರ್ಷ ಬೇಕಾಯ್ತು…
ನಮ್ಮವರೇ ಆದ ಬ್ರಿಟಿಷರನ್ನು ಓಡಿಸಲು ಇನ್ನೂ ಒಂದಷ್ಟು “ಇನ್ನೂರು” ವರ್ಷ ಬೇಕಾಗ ಬಹುದು….”
ನಾನು ತಲೆಕೆರೆಯಲು ಹೋದೆ…
ತಲೆ ನುಣ್ಣಗೆ ಆದ …
ತಣ್ಣಗಿನ ಅನುಭವ ಆಗ್ತಿತ್ತು….. !
(ಇಲ್ಲಿ ವ್ಯಕ್ತ ಪಡಿಸಿರಿವ ಅಭಿಪ್ರಾಯಗಳು “ಶಾರಿಯ0ತಹ ಮುಗ್ಧ ಜನರ ಅಭಿಪ್ರಾಯ..
ಯಾರಿಗೂ ನೋವು ತರಿಸುವ ಉದ್ದೇಶ ಇಲ್ಲ..
ಹಾಸ್ಯ ಅಂತ ಓದಿ…ದಯವಿಟ್ಟು…)]]>
Like this:
Like Loading...
Related
thumba chennagithu….mathu kattuva bage tumba interesting..
ಪ್ರೀತಿಯ ಅವಧಿಗೆ ಪ್ರೀತಿಯ ವಂದನೆಗಳು…!
ಇಷ್ಟಪಟ್ಟ ಎಲ್ಲರಿಗೂ ವಂದನೆಗಳು…Jai Ho !!
Super Anna. Chenagithu. .