– ಕೆ ಅಕ್ಷತಾ
ಜೀಶಂ ಪರಮಶಿವಯ್ಯ, ಕ.ರಾ.ಕೃಷ್ಣಕುಮಾರ್ ಹಾಗೂ ಪಿ.ಆರ್.ತಿಪ್ಪೇಸ್ವಾಮಿ ಇವರು ಮೂರು ಜನರದೊಂದು ಟೀಂ ಇತ್ತು. ಮೂವರು ಒಟ್ಟಾಗಿ ಹಳ್ಳಿ ಹಳ್ಳಿ ತಿರುಗಿ ಜನಪದ ಕಲೆ, ಸಂಸ್ಕೃತಿ ಹಾಗೂ ಕಲಾವಿದರ ಕುರಿತು ಮಾಹಿತಿ ಸಂಗ್ರಹ ಮಾಡ್ತಿದ್ದರು. ಜೀಶಂಪ ಮತ್ತು ಕರಾಕೃ ಮಾಹಿತಿ ಸಂಗ್ರಹಿಸಿದರೆ ತಿಪ್ಪೇಸ್ವಾಮಿ ಅಲ್ಲಿಯ ಜನಜೀವನದ ಚಿತ್ರ ಬಿಡಿಸೋರು. ಒಂದಿನ ನಾನು ಇವರು ಮೂವರನ್ನ ಭೇಟಿ ಮಾಡಿದ ಸಂದರ್ಭದಲ್ಲಿ ಒಂದು ಕ್ಯಾಮರ ತಗಳ್ಳಿ ನಿಮ್ಮ ಕೆಲಸಕ್ಕೆ ತುಂಬಾ ಉಪಯೋಗವಾಗ್ತದೆ. ಹಳ್ಳಿಗಾಡಿನ ಜನ ಜೀವನದ ರೀತಿ ನೀತಿಗಳನ್ನು ಫೋಟೊದಲ್ಲಿ ಹಿಡಿದಿಟ್ಟು ಒಂದು ಒಳ್ಳೆ ಆಲ್ಬಂ ಮಾಡಿದ್ರೆ ಅದು ಸಹ ತುಂಬಾ ಒಳ್ಳೆ ಕಲಾ ಸಂಗ್ರಹವಾಗ್ತದೆ ಅಂತ ಸಲಹೆ ಕೊಟ್ಟೆ. ನನ್ನ ಮಾತಿಗೆ ಮೂವರು ಕೂಡಲೇ ತಲೆ ಅಲ್ಲಾಡಿಸಿ `ನೀವು ಹೇಳದು ಬಹಳ ಸರಿ ಶಾಮಣ್ಣ. ನಾವು ಕ್ಯಾಮರಾ ತಗಳಕೆ ರೆಡಿ ಇದೀವಿ. ನೀವೆ ಯಾವ ಮಾಡೆಲ್ ಒಳ್ಳೆದು ಅಂತ ನೋಡಿ ಒಂದು ಕ್ಯಾಮರಾ ಕೊಡಿಸಿ’ ಅಂದ್ರು. ನಾನು ಅವರನ್ನ ಮೈಸೂರಿನ ರೇಖಾ ಸ್ಟುಡಿಯೋಗೆ ಕರ್ಕಂಡ್ಹೋಗಿ ರಷ್ಯಾದ ಜೆನಿತ್ ಕ್ಯಾಮರಾ ಕೊಡಿಸಿದೆ ಅದಕ್ಕಾಗ 1200 ರೂಪಾಯಿ.
ಇದು ನಡೆದು ಒಂದು ಹದಿನೈದು ದಿನವಾಗಿರಬಹುದು ಅಷ್ಟೆ. ಈ ಮೂವರು ಒಂದಿನ ನನ್ನ ಹಾಸ್ಟೆಲ್ಗೆ ಬಂದ್ರು. `ಹ್ಯಾಗಿದೇರಿ ಕ್ಯಾಮರಾ? ಎಷ್ಟು ರೀಲ್ ಖಾಲಿ ಮಾಡಿದ್ರಿ? ಏನಾದ್ರೂ ಉಪಯೋಗವಾಯ್ತೇನ್ರಿ?’ ಅಂತೆಲ್ಲ ಕೇಳಿದ್ರೆ ಮೂವರ್ದು ಉತ್ರಾನೇ ಇಲ್ಲ. `ಶ್ಯಾಮಣ್ಣೋರೆ ಅದೆಲ್ಲ ಆಮೇಲೆ ತಿಳೀತದೆ. ನಿಮ್ಮನ್ನ ಕೂಡ್ಲೆ ಕರ್ಕಂಡು ಬನ್ನಿ ಅಂತ ನಂಜುಂಡಿ ಹೇಳಿದಾರೆ. ಬನ್ನಿ’ ಅಂತ ಎಳ್ಕಂಡು ಹೋದ್ರು. ರೇಖಾ ಸ್ಟುಡಿಯೋ ಓನರ್ ನಂಜುಂಡಿ ನನಗೆೆ ಮೈಸೂರಿಗೆ ಬಂದಲ್ಲಿಂದ ಪರಿಚಯ ಇದ್ದೋರು. ಫೋಟೋಗ್ರಫಿದು ಏನೇ ಬೇಕಿದ್ರು ನಂಜುಂಡಿ ಹತ್ರವೇ ವ್ಯವಹಾರ. ಅಲ್ಲಿ ಹೋಗಿ `ಏನಾಯ್ತ್ರಿ ನಂಜುಂಡಿ?’ ಅಂತ ಕೇಳಿದ್ರೆ `ನೋಡಿ ಶಾಮಣ್ಣ ಇವ್ರು ತೆಕ್ಕಂಡು ಬಂದಿರೊ ಫೋಟೋಗಳು’ ಅಂತ ಐದು ಕಪ್ಪನೆಯ ರೀಲ್ಗಳನ್ನು ತಂದು ಹರವಿದರು. ನಾನು ಬೆಳಕಿಗೆ ಆ ರೀಲ್ಗಳನ್ನ ಹಿಡಿದು ನೋಡಿದ್ರೆ ಒಂದೆ ಒಂದು ಫೋಟೋನು ಬಂದಿಲ್ಲ.
`ಏನ್ರಿ ಇದು?’ ಅಂತ ನಂಜುಂಡಿ ಮುಖ ನೋಡಿದರೆ ಅವರಿದ್ದೋರು `ಕ್ಯಾಮರಾದಲ್ಲಿ ಏನು ಡಿಫೆಕ್ಟ್ ಇಲ್ಲ. ಫಿಲಂ ಸಹ ಔಟ್ ಡೇಟೆಡ್ ಅಲ್ಲ. ಹೀಗ್ಯಾಕಾಯ್ತೋ ಗೊತ್ತಾಗ್ತಿಲ್ಲ’ ಅಂತ ನನ್ನ ಮುಖ ನೊಡಿದರು. `ಫಿಲಂ ಲೋಡ್, ಅನ್ ಲೋಡ್ ಹೆಂಗೆ ಮಾಡಿದ್ರಿ?’ ಅಂತ ಪ್ರಶ್ನಿಸಿದರೆ ಕರಾಕೃ ಇದ್ದವರು ಹೀಗೀಗೆ ಅಂದ್ರು. ನನಗೆ ಕೂಡ್ಲೆ ಕಾರಣ ಹೊಳೆದು `ಮೂವತ್ತಾರು ಫೋಟೊ ತೆಗೆದಾದ ಮೇಲೆ ಬೆಳಕಿನಲ್ಲಿ ಕ್ಯಾಮರಾ ಓಪನ್ ಮಾಡಿ ಫಿಲಂಗಳನ್ನ ತೆಗೆದು, ಅದನ್ನ ಮೊಳ ಹಾಕಿ ಮತ್ತೆ ಸುತ್ತಿಟ್ಕಂಡು ಬಂದಿದಾರೆ. ಬೆಳಕಿಗೆ ಫಿಲಂ ಎಕ್ಸಪೋಸ್ ಆಗಿದೆ. ಅದಕ್ಕೆ ಒಂದು ಫೋಟೋನು ಬಂದಿಲ್ಲ’ ಅಂದೆ. `ಹೌದು ಹೌದು’ ಅಂತ ಜೀಶಂಪ, ತಿಪ್ಪೇಸ್ವಾಮಿ ನಗೋಕೆ ಶುರು ಮಾಡಿದ್ರು.
ನಂಜುಂಡಿ ತಮಗೆ ಕೆಟ್ಟ ಹೆಸರು ಬರೋದು ತಪ್ತು ಅಂತ ನಿರಾಳವಾದ್ರು. ಕ.ರಾ.ಕೃ ಮಾತ್ರ ಇಂಗು ತಿಂದ ಮಂಗನಂತೆ ಮುಖ ಮಾಡ್ಕಂಡು ಕೂತರು. ಆಮೇಲೆ ತುಂಬಾ ದಿನ ಮೂವರು ರಾಮನಗರದ ಹಳ್ಳಿಗಳ ಕಡೆ ಮುಖ ಹಾಕ್ಲಿಲ್ವಂತೆ. 150ಕ್ಕಿಂತ ಹೆಚ್ಚಿನ ಕಲಾವಿದರ ಫೋಟೋ ತೆಗೆೆದು,ಹಳ್ಳಿಜನಕ್ಕೆ ಫೋಟೊ ತನ್ಕೊಡತೀವಿ ಅಂತೆಲ್ಲ ಭರವಸೆ ಕೊಟ್ಟು ಬಂದಿದ್ದರು. ಅವರೆಲ್ಲ ಫೋಟೋ ಕೇಳಕೆ ಶುರು ಮಾಡಿದ್ರೆ ಏನು ಮಾಡೋದು ಅಂತೇಳಿ.]]>





0 Comments