ಮತ್ತೆ ಸಿಕ್ಕಿದ ಖಲಂದರ್ ಬಾಬು
ದಯಾನಂದ ಟಿ ಕೆ
ಇಲ್ಲಿಗೆ 8-10 ವರ್ಷಗಳಷ್ಟು ಹಿಂದೆ ಬೆಂಗಳೂರಿನ ವಸಂತನಗರ ಸರ್ಕಲ್ ಬಳಿಯಲ್ಲಿ 40-50 ಹಾವಾಡಿಸುವ ಖಲಂದರ್ ಸಮುದಾಯದ ಜನರು ಜೋಪಡಿಗಳೊಳಗೆ ವಾಸಿಸುತ್ತಿದ್ದರು. ಸೋನಿಯಾಗಾಂಧಿ ಬೆಂಗಳೂರಿನ ಕೆಪಿಸಿಸಿ ಕಛೇರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಈ ಜೋಪಡಿಗಳು ಕಣ್ಣಿಗೆ ಕಾಣಬಾರದೆಂದು ಇವರನ್ನು ಅಲ್ಲಿಂದ ಒಕ್ಕಲೆಬ್ಬಿಸಲು ಅಂದಿನ ಬಿಬಿಎಂಪಿ ಅಧಿಕಾರಿಗಳು ರಾತ್ರೋರಾತ್ರಿ ಈ ಜೋಪಡಿಗಳನ್ನು ಕೆಡವಿ ಒಕ್ಕಲೆಬ್ಬಿಸಲು ಪ್ರಯತ್ನಿಸಿದ್ದರು. ಸಾಮಾಜಿಕ ಕಾರ್ಯಕರ್ತರು, ವಕೀಲರು ಮತ್ತು ಪ್ರಗತಿಪರ ಸಂಘನೆಗಳ ಒಕ್ಕೂಟ ಪ್ರಯತ್ನದಿಂದ ಈ ಕುಟುಂಬಗಳಿಗೆ ಲಗ್ಗೆರೆ ಪ್ರದೇಶದಲ್ಲಿ ಮನೆಗಳನ್ನು ಕೊಟ್ಟು ಪುನರ್ವಸತಿ ವ್ಯವಸ್ಥೆಯಾಯಿತು.
ಮೊನ್ನೆ ಮಾರ್ಕೆಟ್ಟಿನಲ್ಲಿ ಹಾವಾಡಿಸುತ್ತ ಕುಳಿತಿದ್ದ ಖಲಂದರ್ ಬಾಬು ಸಿಕ್ಕಿದ್ದರು. ಎಷ್ಟೋ ವರ್ಷಗಳ ನಂತರವೂ ಗುರುತು ಹಿಡಿದು ಮಾತನಾಡಿದ ಅವರು ಅವರ ಸದ್ಯದ ಸ್ಥಿತಿಗತಿಯ ಬಗ್ಗೆ ಹೇಳಿಕೊಳ್ಳುತ್ತ.. ” ಅರಣ್ಯಲಾಖೆಯವರ ಮತ್ತು ಅನಿಮಲ್ ರೈಟ್ಸ್ ಎನ್.ಜಿ.ಓಗಳ ಕಾಟದಿಂದ ಇದ್ದಬದ್ದ ಹಾವುಗಳನ್ನೂ ಕಳೆದುಕೊಂಡು ಈಗ ಕದ್ದುಮುಚ್ಚಿ ಒಂದು ಕೇರೆಹಾವನ್ನು ಇಟ್ಟುಕೊಂಡು ಅಲ್ಲಲ್ಲಿ ಅದನ್ನು ಗುಂಪುಸೇರಿಸಲು ಬಳಸುತ್ತ ತಮ್ಮ ಮ್ಯಾಜಿಕ್, ಮಾತು, ಮತ್ತು ತಮಾಷೆಯ ಪ್ರಸಂಗಗಳನ್ನು ಕಟ್ಟುವ ಮೂಲಕ ಪುಡಿಗಾಸು ಸಂಪಾದಿಸುತ್ತ ಹೊಟ್ಟೆ ಹೊರೆಯುತ್ತಿದ್ದಾರೆ.
ಉಪೇಂದ್ರ, ದುನಿಯಾ ವಿಜಯ್, ಶಿವರಾಜಕುಮಾರ್ ಜೊತೆಗೆ ತೆಗೆಸಿಕೊಂಡ ಫೋಟೋಗಳನ್ನು ಅಟ್ರಾಕ್ಷನ್ ಗೆಂದು ಇಟ್ಟು, ಒಂದು ಪ್ಲಾಸ್ಟಿಕ್ ಓತಿಕ್ಯಾತ ಮತ್ತು ಪ್ಲಾಸ್ಟಿಕ್ ಹಾವೊಂದನ್ನು ಜನಗಳನ್ನು ಸೇರಿಸಲು ಪ್ರಯತ್ನಿಸುತ್ತ ಹೈರಾಣಾಗುತ್ತಿದ್ದ ಬಾಬು ಮತ್ತು ಅವರ ಮನೆಮಂದಿಯ ಪಾಡು ನೋಡಿದ ಮೇಲೆ ಈ ದೇಶದ ಅಷ್ಟೂ ವನ್ಯಜೀವಿ ರಕ್ಷಣಾ ಕಾನೂನುಗಳನ್ನು ಗುಡ್ಡೆ ಹಾಕಿ ಬೆಂಕಿ ಇಡಬೇಕೆನ್ನುವಷ್ಟು ಬೇಜಾರಾಗಿ ಹೋಯಿತು. ಹತ್ತಿರದ ಟೀ ಅಂಗಡಿಯಲ್ಲಿ ಟೀ ಕುಡಿಸಿದ ಬಾಬು, ಇವಾಗ ಇರೋದು ಒಂದೇ ಹಾವು ಸಾರ್.. ಇನ್ನೊಂದೆರಡು ಕಲರ್ ಹಾವು ಹಿಡಕೊಂಡು ಬರಬೇಕು. ಜನ ಸೇರಲ್ಲ ಸಾರ್ ಏನ್ ಮಾಡನ ಅಂದ್ರು. ಖಲಂದರ್ ಹೊಟ್ಟೆ ಪಾಡಿನ ವೃತ್ತಿ ಜೀವನದ ಕೆಲವು ಕ್ಷಣಗಳಿವೆ ನಿಮಗಾಗಿ…
ಚಿತ್ರಗಳು ದಯಾನಂದ ಟಿ ಕೆ
ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ:






ನಿಜಕ್ಕೂ ಇದು ದಯನೀಯ ಸ್ಥಿತಿ… ಒಂದೆಡೆ ಕಾನೂನಿನ ಹೆಸರಲ್ಲಿ ದೌರ್ಜನ್ಯ ಮತ್ತೊಂದೆಡೆ ಅದೇ ಕಾನೂನುಗಳ ದುರುಪಯೋಗ ಏನು ಕಾಲ ಬಂತಪ್ಪ…