ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆದಿದ್ದಾರೆ : ಇದು ನಮ್ಮೂರ ಹುಡುಗರ ಹೊಸ ಆಟ

ಅಶ್ರಫ್, ಕುಂಟಿನಿ, ಮುಸ್ತಫಾ, ಮಹೇಂದ್ರ, ಕಿಶೋರ್ ಮತ್ತು ಉಪ್ಪಿನಂಗಡಿ ಎಂಬ ಪುಣ್ಯಭೂಮಿ

ಜೀವಂತವಾಗಿದ್ದಾರಾ?
ಹೂಂ.
ಕರ್ನಾಟಕದವರಾ? ಹೊರಗಿನವರಾ?
ಕರ್ನಾಟಕದವರು.
ಕಲೆ, ಧಾರ್ಮಿಕ, ಸಾಹಿತ್ಯ, ರಾಜಕೀಯ, ಸಿನಿಮಾ, ಕ್ರೀಡೆ…
ಸಾಹಿತ್ಯ.
ಪ್ರಶಸ್ತಿ ಬಂದಿದ್ಯಾ…
ಹೂಂ.
ನಮ್ಮ ದೇಶದ ಪ್ರಶಸ್ತಿಯಾ, ವಿದೇಶಿ ಪ್ರಶಸ್ತಿಯಾ?
ವಿದೇಶಿ..
ಅಡಿಗ, ಅರವಿಂದ ಅಡಿಗ.
ಎಲ್ಲರೂ ಹೋ’ ಎಂದು ಸಂಭ್ರಮಿಸಿದರು. ಕವಿಗಳು ಬೆರಗಾಗಿ ಕೂತರು.ಮತ್ಯಾರೋ ಕೈ ಕುಲುಕಿದರು. ಐದೇ ಪ್ರಶ್ನೆಗಳಲ್ಲಿ ಉತ್ತರ ಸಿಕ್ಕಿತು ಅಂದರು. ಇದು ನಮ್ಮೂರ ಹುಡುಗರ ಹೊಸ ಆಟ. ಅದಕ್ಕೆ ಅವರಿಟ್ಟ ಹೆಸರು ಅಶ್ವಮೇಧ’. ಆಟದ ನಿಯಮ ಇಷ್ಟೇ. ಒಂದು ಪುಟ್ಟ ಚೀಟಿಯಲ್ಲಿ ಒಬ್ಬ ಖ್ಯಾತನಾಮರ ಹೆಸರು ಬರೆದಿಟ್ಟುಕೊಳ್ಳಿ. ಅವರ ಬಗ್ಗೆ ಆಥ ಪ್ರಶ್ನೆಗಳನ್ನು ಕೇಳುತ್ತಾ ಹೋಗುತ್ತಾನೆ. ನೀವು ಇಪ್ಪತ್ತೊಂದು ಪ್ರಶ್ನೆಗಳಿಗೆ ಉತ್ತರ ಕೊಡುವ ಮೊದಲೇ ನೀವು ಬರೆದಿಟ್ಟುಕೊಂಡ ವ್ಯಕ್ತಿ ಯಾರೆಂದು ಆತ ಹೇಳುತ್ತಾನೆ. ಹಾಗೆ ಹೇಳುವವನ ಹೆಸರು ಮುಸ್ತಫಾ.
ಮೇಲ್ನೋಟಕ್ಕೆ ಇದೊಂದು ಅತ್ಯಂತ ಸರಳವಾದ ಆಟದಂತೆ ಕಾಣಿಸುತ್ತದೆ. ಆದರೆ ಒಂದು ಮಟ್ಟದ ಜನರಲ್ ನಾಲೆಜ್ ಇಲ್ಲದೇ ಹೋದರೆ, ನಿತ್ಯವೂ ಪೇಪರ್ ಓದದೇ ಇದ್ದರೆ, ಚರಿತ್ರೆಯಿಂದ ಹಿಡಿದು, ಇತ್ತೀಚಿನ ಆಗುಹೋಗುಗಳ ತನಕ ಎಲ್ಲವನ್ನೂ ತಿಳಿದುಕೊಂಡಿರದೇ ಇದ್ದರೆ ಕೇವಲ ಕೆಲವೇ ಕೆಲವು ಸೂಚನೆಗಳನ್ನು ಮುಂದಿಟ್ಟುಕೊಂಡು ಹೇಳುವುದು ಕಷ್ಟ. ಎಂಜಿಆರ್ ಪತ್ನಿ ಜಾನಕಿ ರಾಮಚಂದ್ರನ್, ದಕ್ಷಿಣ ಕನ್ನಡದ ವಿಟ್ಲ ಎಂಬ ಊರಿನ ಹವ್ಯಕ ಹೆಂಗಸು ಎಂಬ ಸಣ್ಣ ವಿವರಗಳೂ ಅಲ್ಲಿ ಮುಖ್ಯ.

ಇದನ್ನು ನೋಡುತ್ತಿದ್ದರೆ ಆಶ್ಚರ್ಯವಾಯಿತು. ಪ್ರಶ್ನೆಗಳನ್ನು ಕೇಳುತ್ತಿದ್ದ ಹಾಗೇ, ಕೆ ವಿ ತಿರುಮಲೇಶ್, ಯಶವಂತ ಚಿತ್ತಾಲ, ಭೀಮಸೇನ ಜೋಷಿ, ಅಷ್ಟೇನೂ ಖ್ಯಾತರಲ್ಲದ ಡಿ ಎ ಶಂಕರ್- ಹೀಗೆ ಎಲ್ಲರ ಕುರಿತು ಮಾಹಿತಿ ಇಟ್ಟುಕೊಂಡ ಮುಸ್ತಫಾ ಮತ್ತು ಗೆಳೆಯರ ಗುಂಪು ತಮ್ಮಷ್ಟಕ್ಕೇ ತಾವು ಓದುತ್ತಾ, ತಿಳಿದುಕೊಳ್ಳುತ್ತಾ, ಬೆರಗುಗೊಳ್ಳುತ್ತಾ, ಸಂಭ್ರಮಪಡುತ್ತಾ ಇರುವುದನ್ನು ನೋಡಿ ಡುಂಡಿರಾಜ್, ಸುಬ್ರಾಯ ಚೊಕ್ಕಾಡಿ, ಲಕ್ಷ್ಮಣರಾವ್ ಕೂಡ ಅಚ್ಚರಿಯಿಂದ ನೋಡತೊಡಗಿದರು. ಲಕ್ಷ್ಮಣರಾವ್ ಅವರ ಮೂವತ್ತೋ ನಲವತ್ತೋ ಕವಿತೆಗಳನ್ನು ಥಟ್ಟನೆ ಹೇಳಬಲ್ಲ ಆರೆಂಟು ಹುಡುಗರು ಅಲ್ಲಿದ್ದರು. ಎಷ್ಟೋ ವರ್ಷಗಳ ಹಿಂದೆ ಸಂತೋಷ’ ಪತ್ರಿಕೆಯಲ್ಲಿ ದೆಹಲಿಯ ಬಗ್ಗೆ ಚೊಕ್ಕಾಡಿ ಬರೆದ ಕವಿತೆಯನ್ನು ಮತ್ಯಾರೋ ನೆನಪಿಸಿದರು. ಡುಂಡಿರಾಜ್ ಎಂದೋ ಬರೆದಿದ್ದ, ಸದ್ಯಕ್ಕೆ ಯಾರೂ ನೆನಪಿಸಿಕೊಳ್ಳದ ಓಡುವವರು’ ನಾಟಕದ ಸಾಲುಗಳನ್ನು ಹೇಳಿದರು. ಹೀಗೆ ಇಡೀ ರಾತ್ರಿ ಉಲ್ಲಾಸದಿಂದ ಸರಿಯುತ್ತಿತ್ತು.
ಇದು ಉಪ್ಪಿನಂಗಡಿಯ ಕತೆ. ಅಲ್ಲಿ ಎದುರಾಗುವ ಅಶ್ರಫ್, ಮಹೇಂದ್ರ, ಶಾಹುಲ್ ಹಮೀದ್, ಕಿಶೋರ್ ಅಧಿಕಾರಿ, ಮುಸ್ತಫಾ ಮತ್ತು ಇವರೆಲ್ಲರ ಗುರುವಿನಂತಿರುವ ಗೋಪಾಲಕೃಷ್ಣ ಕುಂಟಿನಿ ಮುಂತಾದ ಗೆಳೆಯರ ಬಳಗವೊಂದು ತಣ್ಣಗೆ ತಮಗೆ ಬೇಕಾದ್ದನ್ನು ಓದಿಕೊಂಡು, ನೋಡಿಕೊಂಡು, ಮಾಡಿಕೊಂಡು ತಮ್ಮ ಆರೋಗ್ಯವನ್ನು ಅಭಿರುಚಿಯನ್ನು ಕಾಪಾಡಿಕೊಳ್ಳಲು ಹೆಣಗುತ್ತಿದೆ. ನಾನು ನೋಡಿದ ಎಲ್ಲ ಪುಟ್ಟ ಊರುಗಳಲ್ಲೂ ಇಂಥದ್ದೊಂದು ಗುಂಪಿದೆ. ಅವರು ತಮಗಿಷ್ಟ ಬಂದಿದ್ದನ್ನು ಓದುತ್ತಾ, ಪತ್ರಿಕೆಯಲ್ಲಿ ಬಂದ ಪುಸ್ತಕ ತರಿಸಿಕೊಂಡು ಓದಿ ಚರ್ಚಿಸುತ್ತಾ, ಬೆಂಗಳೂರಲ್ಲಿ ಮಾತ್ರ ಒಂದೋ ಎರಡೋ ಪ್ರದರ್ಶನ ಕಾಣುವ ಕಲಾತ್ಮಕ ಚಿತ್ರಗಳ ಡೀವೀಡಿ ತರಿಸಿಕೊಂಡು ಸಿನಿಮಾ ನೋಡುತ್ತಾ, ತಮ್ಮನ್ನು ಮುಖ್ಯವಾಹಿನಿಯಿಂದ ಹೊರಗಿಟ್ಟದ್ದರ ಬಗ್ಗೆ ಬೇಸರಪಡುತ್ತಾ, ಆ ಮಿತಿಯಲ್ಲೇ ಜೀವನೋತ್ಸಾಹ ಕಂಡುಕೊಳ್ಳುತ್ತಿರುತ್ತಾರೆ. ಅಂಥವರಿಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಬೆಂಗಳೂರು ತಲೆಕೊಡವಿಕೊಂಡು ಇನ್ನೆಲ್ಲೋ ನೋಡುತ್ತಿದೆ.
*****
ಇವತ್ತಿನ ಚೈತನ್ಯದ ಚಿಲುಮೆಗಳು ಗ್ರಾಮೀಣ ಕರ್ನಾಟಕದಲ್ಲಿವೆ ಅನ್ನುವುದಂತೂ ಸತ್ಯ. ಬೆಂಗಳೂರಿನ ಮಟ್ಟಿಗೆ ಇವತ್ತು ದುಡಿಮೆ ಎನ್ನುವುದು ಮೂಲಮಂತ್ರ. ದುಡಿಮೆ ಒಂದು ಮೌಲ್ಯ ಮಾತ್ರವೇ ಆಗಿದ್ದ ದಿನಗಳು ಕಣ್ಮರೆಯಾಗಿ, ದುಡಿಮೆಗೆ ಇವತ್ತು ಅದಕ್ಕಿಂತ ಹೆಚ್ಚಿನ ಮಹತ್ವ ಪ್ರಾಪ್ತವಾಗಿದೆ. ಕಾಯಕವೇ ಕೈಲಾಸ ಎನ್ನುವುದು ಸುಳ್ಳಾಗುತ್ತಿದೆ. ದುಡಿಮೆಯ ಜೊತೆಗೇ ಬೆಸೆದುಕೊಂಡಿದ್ದ ಸೌಖ್ಯ ಮಾಯವಾಗಿದೆ. ನಮ್ಮಲ್ಲಿ ಬಹುತೇಕ ಮಂದಿ, ನಾವು ಮಾಡಬೇಕಾದದ್ದನ್ನು ಸಂತೋಷದಿಂದ ಮಾಡುತ್ತಿಲ್ಲ. ಅದರ ಬದಲು, ಅಲ್ಲೊಂದು ಬಗೆಯ ಅನಿವಾರ್ಯ ಕರ್ಮದ ಒತ್ತಡ, ಸೂತಕದ ಛಾಯೆ ಕಾಣಿಸುತ್ತಿದೆ. ಹಾಡುತ್ತಾ ಗೆಯ್ಮೆ ಮಾಡುತ್ತಿದ್ದ, ನಾಟಿ ಮಾಡುತ್ತಾ, ಬತ್ತ ಕುಟ್ಟುತ್ತಾ, ರಾಗಿ ಬೀಸುತ್ತಾ ಆ ಕೆಲಸದ ಸಂತೋಷವನ್ನು ಅನುಭವಿಸುತ್ತಿದ್ದ ದಿನಗಳು ಇವತ್ತಿಲ್ಲ. ದಿನಕ್ಕೆ ಲಕ್ಷಾಂತರ ರುಪಾಯಿ ವ್ಯಾಪಾರ ಮಾಡುವ ಹೊಟೆಲೊಂದರ ಅಡುಗೆ ಭಟ್ಟರೊಬ್ಬರು ಹೇಳುತ್ತಿದ್ದರು; ಮೊದಲೆಲ್ಲ ನಮ್ಮ ಹೊಟೆಲಿಗೆ ನಾನು ಇಷ್ಟಪಡೋ ವ್ಯಕ್ತಿಗಳು ಬರುತ್ತಿದ್ದರು. ಸಾಹಿತಿಗಳು, ಸಂಗೀತಗಾರರು, ರಾಜಕಾರಣಿಗಳು, ಕ್ರೀಡಾಪಟುಗಳು ಬಂದು ನಾನು ಮಾಡಿದ ದೋಸೆ ತಿಂದು ಸಂತೋಷಪಡುತ್ತಿದ್ದರು. ಆಗೆಲ್ಲ ನನ್ನ ಬಗ್ಗೆ ಒಂಥರ ಖುಷಿಯಾಗುತ್ತಿತ್ತು. ಸಾರ್ಥಕತೆ ಮೂಡುತ್ತಿತ್ತು. ಇವತ್ತು ಹಾಗಿಲ್ಲ. ಆಗ ದಿನಕ್ಕೆ ನೂರಿನ್ನೂರು ದೋಸೆ ಮಾಡುತ್ತಿದ್ದೆ. ಈಗ ಎಂಟು ನೂರು ದೋಸೆ ಮಾಡುತ್ತೇನೆ. ಬರೀ ದೋಸೆ ಮಾಡುವುದಷ್ಟೇ ಜೀವನ ಎಂಬಂತಾಗಿದೆ.
ಪತ್ರಿಕೋದ್ಯಮದಲ್ಲೂ ಅದೇ ಆಗಿದೆ. ನಾವು ಸಿನಿಮಾ ಪತ್ರಿಕೋದ್ಯಮ ಆರಂಭಿಸಿದ ದಿನಗಳಲ್ಲಿ ಅಲ್ಲೊಂದು ಸಂಭ್ರಮ ಇರುತ್ತಿತ್ತು. ಸಿನಿಮಾ ನಟರು, ನಿರ್ದೇಶಕರು, ಸಂಗೀತ ನಿರ್ದೇಶಕರು ಸುಮ್ಮನೆ’ ಹರಟುವಷ್ಟು ವ್ಯವಧಾನ ಇಟ್ಟುಕೊಂಡಿದ್ದರು. ವಿಷ್ಣುವರ್ಧನ್ ಜೊತೆ ಕುಳಿತರೆ, ರಾಜಕೀಯ, ಕ್ರಿಕೆಟ್, ಸಂಗೀತ, ಮತ್ಯಾವುದೋ ಇಟೆಲಿಯ ಸಿನಿಮಾದ ಬಗ್ಗೆ ಮಾತಾಗುತ್ತಿತ್ತು. ಪರಸ್ಪರರನ್ನು ಗೇಲಿ ಮಾಡಿಕೊಳ್ಳುತ್ತಾ ಅಲೆಲ್ಲ ನಗು ಹರಡುತ್ತಿತ್ತು. ಇವತ್ತು ಪತ್ರಕರ್ತರಿಗೂ ಅಷ್ಟು ಪುರುಸೊತ್ತಿಲ್ಲ. ಸಿನಿಮಾನಟರಂತೂ ಸೆಕೆಂಡುಗಳ ಲೆಕ್ಕದಲ್ಲಿ ಬದುಕುತ್ತಿದ್ದಾರೆ. ಪತ್ರಕರ್ತ ತಾನು ಕೇಳಿಸಿಕೊಂಡಿದ್ದನ್ನೋ ಶೂಟ್ ಮಾಡಿದ್ದನ್ನೋ ತಕ್ಷಣ ಜನರಿಗೆ ತಲುಪಿಸಬೇಕು ಎಂದು ಓಡುತ್ತಿರುತ್ತಾನೆ. ನಟನಿಗೋಸ್ಕರ ಮುಂದಿನ ಚಿತ್ರದ ಕತೆ ಹೇಳುವವರು ಕಾಯುತ್ತಿರುತ್ತಾರೆ.
ಇಂಥದ್ದರ ಮಧ್ಯೆ ಪ್ರಕಾಶ್ ರೈ ಬೇರೆಯೇ ಆಗಿ ನಿಲ್ಲುತ್ತಾರೆ. ಮೊನ್ನೆ ಊರಿಗೆ ಹೋಗುತ್ತಾ ಅವರ ನಾನೂ ನನ್ನ ಕನಸು’ ಶೂಟಿಂಗ್ ನಡೆಯುತ್ತಿದ್ದ ಯಜಮಾನ್ ಎಸ್ಟೇಟ್‌ಗೆ ಹೋದರೆ ಅಲ್ಲಿ ಪ್ರಕಾಶ್ ರೈ ಎಂದಿನ ಉಲ್ಲಾಸದಲ್ಲಿ ಕೂತಿದ್ದರು. ಎರಡು ಹಾಡು ನೋಡೋಣ ಎಂದರು. ಹಾಡು ಮುಗಿಯುತ್ತಿದ್ದಂತೆ ಇತ್ತೀಚೆಗೆ ಓದಿದ ಪುಸ್ತಕಗಳ ಬಗ್ಗೆ ಮಾತಾಡಿದರು. ಹಳೆಯ ಗೆಳೆಯರಾದ ಶೆಣೈ, ಮರಕಿಣಿ ಹೇಗಿದ್ದಾರೆ ಎಂದು ವಿಚಾರಿಸಿಕೊಂಡರು. ಕರ್ತವ್ಯದಲ್ಲಿ ಕಳೆದು
ಹೋಗುತ್ತಿದ್ದೀರಿ. ಸುಮ್ಮನೆ ಎಲ್ಲರೂ ಹೊರಟು ಬನ್ನಿ, ಖುಷಿಯಾಗಿ ಒಂದೆರಡು ದಿನ ಇದ್ದು ಹೋಗಿ ಎಂದರು. ಇವತ್ತು ಖುಷಿಯಾಗಿ ಒಂದೆರಡು ದಿನ ಸುಮ್ಮನೆ ಇದ್ದುಹೋಗಿ ಎನ್ನುವವರು ಸಿಕ್ಕಿದ್ದೇ ಒಂದು ಪವಾಡ ಎಂದು ನಾವೊಂದಷ್ಟು ಮಂದಿ ಮಾತಾಡಿಕೊಂಡೆವು.
ಉಲ್ಲಾಸ ತುಂಬುವ ಸಂಗತಿಗಳು ತುಂಬಾ ಕಡಿಮೆ. ಅವುಗಳನ್ನು ನಾವು ಸವಿಯದೇ ಹೋದರೆ, ಆ ರಸಬಿಂದುಗಳೂ ಬತ್ತಿಹೋಗುತ್ತವೆ. ಅನ್ನಿಸಿದ್ದೇನನ್ನೋ ಬರೆದಾಗ, ಅದನ್ನು ಆಪ್ತರ ಜೊತೆ ಹಂಚಿಕೊಳ್ಳುವುದು, ಥ್ರೀ ಈಡಿಯಟ್ಸ್ ಸಿನಿಮಾದ ದೃಶ್ಯವೊಂದನ್ನು ನೆನೆದು ಹಳೆಯ ದಿನಗಳಿಗೆ ಜಾರುವುದು, ನಾಲ್ಕಾರು ಮಂದಿ ತಿಂಗಳಿಗೊಮ್ಮೆ ಕಾವೇರಿ ಫಿಷಿಂಗ್ ಕ್ಯಾಂಪಿಗೆ ಹೋಗಿ ಗಾಳ ಹಾಕುತ್ತಾ ಕೂರುವುದು, ಪಿವಿಆರ್ ಚಿತ್ರಮಂದಿರದ ಮೆಟ್ಟಲಲ್ಲಿ ಕೂತು ಪಾಪ್‌ಕಾರ್ನ್ ತಿನ್ನುತ್ತಾ ಆ ಗದ್ದಲವನ್ನು ಸವಿಯುವುದು.. ಇವೆಲ್ಲ ಇವತ್ತಿಗೂ ಜಗತ್ತಿನಲ್ಲಿ ನಡೆಯುತ್ತಲೇ ಇದೆ. ಮೊನ್ನೆ ಮೊನ್ನೆ ಒಂದಷ್ಟು ಮಿತ್ರರು ಕೊಡಗಿನ ಪುಷ್ಪಗಿರಿಗೆ ಹೋಗಿ ಇಪ್ಪತ್ತೋ ಮೂವತ್ತೋ ಕಿಲೋಮೀಟರ್ ನಡೆದಾಡಿ, ಸೂರ್ಯಾಸ್ತ ನೋಡಿ ಬಂದರು. ನಾವೊಂದಷ್ಟು ಮಂದಿ ಡ್ರೈವರ್ ಮೇಲೆ ರೇಗುತ್ತಾ, ಇನ್ನೊಂದು ದಾರಿಯಲ್ಲಿ ಬಂದಿದ್ದರೆ ಅರ್ಧಗಂಟೆ ಮುಂಚೆ ತಲುಪಬಹುದು ಎಂದು ಗೊಣಗಿಕೊಳ್ಳುತ್ತಾ, ಶೂಟಿಂಗು ಮುಗಿದಿದ್ದೇ ತಡ ಮತ್ತೊಂದು ಊರಿಗೆ ಹೋಗುವ ತರಾತುರಿಯಲ್ಲಿ ಧಾವಂತ ಮಾಡಿಕೊಳ್ಳುತ್ತಿದ್ದೆವು.
ಪಯಣಿಸಿದ ಹಾದಿ, ಹೊರಟ ಜಾಗ, ತಲುಪಬೇಕಾದ ಊರು, ಅಲ್ಲಿನ ತಂಗಾಳಿ, ಸೊರಗಿದ ನದಿ, ಮುಂಜಾವದ ಮಂಜು, ಹಳೆಯ ಗುಡಿ, ಕತ್ತಲ ಸುರಂಗ, ನೀರು ಜಿನುಗಿಸುವ ಗುಹೆ- ಎಲ್ಲವನ್ನೂ ಕರ್ತವ್ಯ ನಿಷ್ಠರಂತೆ ನೋಡುತ್ತಿದ್ದೆವು.
ವಾಪಸ್ಸು ಬರುವ ದಾರಿಯಲ್ಲಿ ಕೌದಿ ಹೊದ್ದುಕೊಂಡು ಬೆಂಕಿ ಕಾಯಿಸಿಕೊಳ್ಳುತ್ತಾ ಕುಳಿತಿದ್ದ ಅರುವತ್ತು ದಾಟಿದಂತಿದ್ದ ಮುದುಕನೊಬ್ಬನ ಕಣ್ಣುಗಳು, ಬೆಂಕಿಬೆಳಕಿಗೆ ಪ್ರಜ್ವಲಿಸುತ್ತಿದ್ದವು. ಆ ಕಾಡಿನ ಮಧ್ಯೆ ಕೂತುಕೊಂಡು ಎಲ್ಲಿಂದ ಬಂದೆ ಮತ್ತು ಎಲ್ಲಿಗೆ ಹೋಗುತ್ತಿದ್ದೇನೆ ಎಂಬ ಕಲ್ಪನೆಯೇ ಇಲ್ಲದೇ ಕಾಲಾಂತರದಲ್ಲಿ ಲೀನನಾದ ಅವನಂತೆ ಬದುಕಬೇಕು ಎಂದು ಆಸೆಯಾಯಿತು.
ನಡುರಾತ್ರಿ ಸಾಗರದ ಹೊಟೆಲ್ಲಿಗೆ ಕಾಲಿಟ್ಟರೆ, ನಿದ್ದೆಗಣ್ಣಿನ ಹುಡುಗನೊಬ್ಬ ರಿಜಿಸ್ಟರ್ ಮುಂದಿಟ್ಟು ತುಂಬಿ’ ಅಂದ. ಅದರಲ್ಲಿ ಎಲ್ಲಿಂದ ಬರುತ್ತಿದ್ದೀರಿ, ಎಲ್ಲಿಗೆ ಹೋಗುತ್ತೀರಿ, ಎಷ್ಟು ದಿನ ಇರುತ್ತೀರಿ ಎಂಬ ಪ್ರಶ್ನೆಗಳಿದ್ದವು. ಆ ಅಪರಾತ್ರಿಯಲ್ಲಿ ಅವು ನನಗೆ ಬದುಕಿನ ಬಹುಮುಖ್ಯ ಪ್ರಶ್ನೆಗಳಾಗಿ ಕಾಣಿಸಿದವು

‍ಲೇಖಕರು avadhi

12 February, 2010

10 Comments

  1. ಕೆಎಲ್ಕೆ

    ನೀವು ಹೇಳಿದ ಆಟ ಆರೇಳು ವರ್ಷಗಳ ಹಿಂದೆ ಮಲಯಾಳಂ ಚ್ಯಾನಲ್ ಒಂದರಲ್ಲಿ ಬರುತ್ತಿತ್ತು. ಆ ಕಾರ್ಯಕ್ರಮಕ್ಕೆ “ಅಶ್ವಮೇಧ” ಎಂಬ ಹೆಸರೇ ಇತ್ತು ಎಂಬ ನೆನಪು. ಅದು ಮಲಯಾಳಿ ವಲಯದಲ್ಲಿ ತುಂಬಾ ಜನಪ್ರಿಯತೆ ಪಡೆದುಕೊಂಡ ಕಾರ್ಯಕ್ರುಮ. ಅಶ್ವಮೆಧವನ್ನು ನಡೆಸುವ ವ್ಯಕ್ತಿಯ ಹೆಸರು ನೆನಪಿಲ್ಲ. ಯಾವುದೂ, ನಿಮ್ಮ ಲೇಖನ ಎಂದಿನಂತೆ ಚೆನ್ನಾಗಿದೆ.

    • rashmi

      ಅಶ್ವಮೇಧ ಎಂಬ ಕಾರ್ಯಕ್ರಮ ಕೈರಳಿ ಚಾನೆಲ್್ನಲ್ಲಿ ಪ್ರಸಾರವಾಗುತ್ತಿತ್ತು. ಅದನ್ನು ಜಿ ಎಸ್ ಪ್ರದೀಪ್ ನಿರೂಪಿಸುತ್ತಿದ್ದರು.
      ರಶ್ಮಿ

  2. malathi S

    it is a wake up call
    good one
    🙂
    malathi S

  3. Manjunatha HT

    ಬದುಕಿನ ಬಹು ಮುಖ್ಯವಾದ ಪ್ರಶ್ನೆಗಳ ಬಗ್ಗೆ ತುಂಬ ಚೆನ್ನಾಗಿ ಬರೆದಿದ್ದೀರಿ, ನಾನಿಂದು ಬಂದು ನಿಂತಿರುವ ಎತ್ತರದಿಂದ ಒಮ್ಮೆ ನೋಡಿದರೆ ನನ್ನ ಮುಂದೆಯೂ ಇವೇ ಪ್ರಶ್ನೆಗಳಿವೆ, ಉತ್ತರಗಳು ಮಾತ್ರ ಇಲ್ಲ.

  4. RJ

    ನಗು,ಲಘು ಹರಟೆಯೊಂದಿಗೆ ಸಾಗುತ್ತಲೇ ಎಲ್ಲೋ ಒಂದು ಕಡೆ ಪ್ಚ್ ಅನ್ನಿಸುತ್ತದೆ.ಕೊನೆಯ ಸಾಲುಗಳು ಇಡೀ ಟಿಪ್ಪಣಿಗೆ ಒಂಥರಾ ಗಂಭೀರತೆಯನ್ನು ತುಂಬಿವೆ..
    ಇಷ್ಟವಾಯಿತು.
    -RJ

  5. ಶ್ರೀವತ್ಸ ಜೋಶಿ

    “ರಿಜಿಸ್ಟರ್ ಮುಂದಿಟ್ಟು ತುಂಬಿ’ ಅಂದ. ಅದರಲ್ಲಿ ಎಲ್ಲಿಂದ ಬರುತ್ತಿದ್ದೀರಿ, ಎಲ್ಲಿಗೆ ಹೋಗುತ್ತೀರಿ, ಎಷ್ಟು ದಿನ ಇರುತ್ತೀರಿ ಎಂಬ ಪ್ರಶ್ನೆಗಳಿದ್ದವು. ಆ ಅಪರಾತ್ರಿಯಲ್ಲಿ ಅವು ನನಗೆ ಬದುಕಿನ ಬಹುಮುಖ್ಯ ಪ್ರಶ್ನೆಗಳಾಗಿ ಕಾಣಿಸಿದವು” – Beautiful, very meaningful!
    ಜೋಗಿ ಬರಹಗಳು ಚಿಂತನೆಯ ಅನಲಕ್ಕೆ(ಬೆಂಕಿಗೆ) ತುಪ್ಪವಿದ್ದಂತೆ. So, ನಮ್ಮ ಚಿಂತನಾಶಕ್ತಿಗೆ ಜೋ ’ಘೀ’ ಡಾಲ್‌ತಾ ಹೈ, ವೋ “ಜೋಗೀ’ ಹೈ!

  6. Prasad Koila

    ಉಪ್ಪಿನಂಗಡಿ ಎಂಬ ಪುಣ್ಯ ಭೂಮಿಯಲ್ಲಿ ಇಂಥ ಒಂದು ಗೆಳೆಯರ ಬಳಗವೊಂದು ಇರುವುದು ತುಂಬಾ ಸಂತೋಷ.. ನೀವು ಉಪ್ಪಿನಂಗಡಿಯ ಬಗ್ಗೆ ಬರೆದಾಗಲೆಲ್ಲ ಏನೋ ಒಂಥರ ಮನಸ್ಸಿಗೆ ಖುಷಿಯಾಗುತ್ತೆ. ಏನಿದೆ ನಿಮ್ಮ ಉಬಾರಿನಲ್ಲಿ ಅಂದವರಿಗೆಲ್ಲ ನಿಮ್ಮ ಲೇಖನಗಳೇ ಉತ್ತರ. ಎಸ್ಟಾದ್ರೂ ನಮ್ಮ ‘ಉಬಾರ್’ ಅಲ್ವೇ 🙂 ?

  7. ಅಶೋಕವರ್ಧನ ಜಿ.ಎನ್

    ಸಾಮಾನ್ಯೀಕರಣಗಳ ಸರಣಿಯಲ್ಲಿ ಇನ್ನೇನು ಪುಸ್ತಕ ವ್ಯಾಪಾರಿಯ ಉದಾಹರಣೆಯೂ ಬರುತ್ತದೆ ಎಂದು ನಾನು ಕಣ್ಣರಳಿಸಿ ಓಡೋಟವನ್ನು ಮಾಡಿದೆ. ಹೌದು, ಎಂಟ್ನೂರು ದೋಸೆ ಭಟ್ಟರ ಸ್ಥಿತಿಯೇ ನಮ್ಮದೂ. ನಾನು ಬಯಸಿ ಬಂದ ಪುಸ್ತಕ ವ್ಯಾಪಾರ ಇಂದು ನನಗೆ ಅನಿವಾರ್ಯ ಕರ್ಮ! ಏನೇ ಇರಲಿ, ಅಂಥಾ ಅಳಲಳಲಿಗೆ ಅಭಿವ್ಯಕ್ತಿ ಕೊಡಲು ಅವಕಾಶ ಕಲ್ಪಿಸಿದ ಸುಂದರ ಲಹರಿಗೆ ಕೃತಜ್ಞತೆಗಳು
    ಅಶೋಕವರ್ಧನ

  8. priya

    idellavannu meeri neeviga ondu chanelnalli
    work madta idira annodu gottagatte sir

  9. Ashraf Dammam

    ee appuchanannu yaradaru lift maduvare?avara hasya buddivanthike,vithandavaadha samanyavenalla.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading