ಬಲೆ
ಜ್ಯೋತಿ ಬಸವರಾಜ ದೇವಣಗಾವ
ಮಾಯಾಜಾಲ ಆವರಿಸಿದೆ ಜಗವ
ಅಪ್ಪಿಕೊಂಡಿಲ್ಲ, ಬಂಧಿಸುತ್ತಿದೆ
ತನ್ನ ಪರಿಧಿಯಲ್ಲಿ, ಸುತ್ತಲೂ
ಕತ್ತಲಿಟ್ಟು ಬೆಳಗುತ್ತಿರುವ ಭ್ರಮೆ ವ್ಯಾಪಿಸಿ
ಮೂಲ ಮರೆತು ಏಕಾಂಗಿ, ಸಂಗಜೀವನ ಬಯಸಿ ಕಟ್ಟಿಕೊಳ್ಳುತ್ತಲೆ
ನಡೆದ ಬದುಕೀಗ, ಒಂಟಿ ಹಕ್ಕಿ
ಗೊಣಗಾಟವೂ ನೆನಪಿಲ್ಲ ಸಣ್ಣ ದನಿಯು ಹೊಮ್ಮುತ್ತಿಲ್ಲ
ಯಂತ್ರದಂತೆ ನಾವು, ಕೃತ್ರಿಮತೆ ಮೈತಾಳಿ, ಕತ್ತರಿಸಿ ಮರೆತ ಕರುಳ ಬಂಧಗಳು,
ಹುಡುಕ ಹೊರಟವಗೆ ಸಿಗದಷ್ಟು ದೂರ,
ತಬ್ಬಲಿಯಾಗಿ ನರಳುತ್ತಿವೆ
ಶತಮಾನದ ಬೋಧನೆ, ತಗ್ಗಿಸಲಿಲ್ಲ
ಕುಗ್ಗಿಸಲಿಲ್ಲ, ಅರಿಷಡ್ವರ್ಗಗಳ
ಹೆಚ್ಚುತ್ತಲೇ ಇದೆ ವೇಗದ ಆವೇಶ
ಹುಚ್ಚು ನೆರೆಯಾಗಿ ಹೊಮ್ಮಿ ಬೋರ್ಗರೆಯುತ್ತಿವೆ
ಅರಿವು ನೀಡದ ಜ್ಞಾನ, ಗುರುವಿಲ್ಲದ ಬೋಧೆ
ಎತ್ತ ಕೊಂಡೊಯ್ಯುತ್ತಿವೆ ಹೊಸ ನೀರ,
ಹಳೆ ಕೊಳೆ ಬದುಕಲಾದರು ಬಿಟ್ಟಿತ್ತು
ಇದು ಅದಕ್ಕೂ ಬಿಡದು
ನೆಲದ ಹುಸುರಿನ ಒಲವಿಲ್ಲ
ಶುಭ ಉದಯದ ಬಲ, ಹುಂ ಹೂಂ
ಏಕಾಂತ ಕೊರೆತ, ನಿಟ್ಟುಸಿರ ಹುಂಕಾರ
ಒಮ್ಮೆ ತೊರೆದು, ಓಡಿಬಿಡು ಹುಡುಕಿ ಮೂಲ ದಕ್ಕಬಹುದು
ಉಪಮೆ ರೂಪಕಗಳ ಯಾವ ಗೋಜಲಿಗು ಹೋಗದ ‘ಬಲೆ’ ಕವಿತೆ ಯಾವ ವ್ಯತೆಯನ್ನು ಪ್ರಕಟಿಸ ಹೊರಟಿದೆ?
ವೈಯಕ್ತಿಕ ಇಕ್ಕಟ್ಟುಗಳು ಲೋಕನೋವುಗಳ ಹುಡುಕಿ ಮಾತಾಡ್ತಿವೆಯ? ಒಟ್ಟು ಬಲೆಯೊಳಗೆ ಗೋಡೆಗಳೆದ್ದಿವೆ. ಓದುಗರು ಗೋಡೆ ಕೆಡವಿ ಬಯಲು ನೋಡಬೇಕ ಅಥವಾ ಬಲೆ ಹರಿದು ಬೇಟೆ ನಿಲ್ಲಿಸಬೇಕ ಗೊತ್ತಾಗ್ತಿಲ್ಲ…,