ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚುನಾವಣೆಗೆ ಮಾಡಿದ ಖರ್ಚೂ, ಅಯೋಗಕ್ಕೆ ಕೊಟ್ಟ ಲೆಕ್ಕವೂ..

ಶಾಸಕರ ಚುನಾವಣಾ ಲೆಕ್ಕ ಪಕ್ಕನಾ?

ಶರಣಪ್ಪ ಬಾಚಲಾಪುರ

ಇತ್ತೀಚಿಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಶಾಸಕರಾಗುವವರು ಚುನಾವಣೆಯಲ್ಲಿ ಇಂತಿಷ್ಟೆ ಖರ್ಚು ಮಾಡಬೇಕು. ಈ ಖರ್ಚಿನ ವಿವರವನ್ನು ಆಗಾಗ ನೀಡಬೇಕು. ಅದು ನೀವು ಹೇಳಿದಷ್ಟು ಅಲ್ಲ. ನಮ್ಮ ವಿಕ್ಷಕರು ಒಪ್ಪಿಕೊಂಡಷ್ಟು, ಹೆಚ್ಚಿಗೆ ಖರ್ಚು ಮಾಡಿದರೆ ನಿಮ್ಮ ಮೇಲೆ ಕ್ರಮ ಎಂದು ಅಭ್ಯರ್ಥಿಗಳಿಗೆ ಚುನಾವಣಾ ಅಯೋಗ ಸೂಚನೆ ನೀಡಿತ್ತು.
ವಿಧಾನ ಸಭಾ ಚುನಾವಣೆಯಲ್ಲಿ ಅಭ್ಯರ್ಥಿ ಗರಿಷ್ಟ 16 ಲಕ್ಷ ರೂಪಾಯಿಯನ್ನು ತನ್ನ ಚುನಾವಣಾ ಖರ್ಚು ಮಾತ್ರ ಮಾಡಬೇಕು ಎಂದು ಮಿತಿಗೊಳಿಸಿತ್ತು. ಇದನ್ನು ಕೇಳದವರಿಗೆ ಅಭ್ಯರ್ಥಿಗಳು ಇಷ್ಟೆ ಖರ್ಚು ಮಾಡುತ್ತಾರಾ..ಕಡಿಮೆಯಾಯಿತು ಎನ್ನುತ್ತಾರೆ. ಆದರೆ ಅಭ್ಯರ್ಥಿಗಳು ಚುನಾವಣೆ ಆಯೋಗ ನಿಗದಿ ಮಾಡಿದ್ದಕ್ಕಿಂತ ಕಡಿಮೆ ಲೆಕ್ಕ ನೀಡಿದ್ದಾರೆ. ಕೊಪ್ಪಳ ಜಿಲ್ಲೆಯ ಮಟ್ಟಿಗೆ ಹೇಳುವದಾದರೆ ಎಲ್ಲ ಅಭ್ಯರ್ಥಿಗಳು ಚುನಾವಣೆಗೆ ಮಾಡಿರುವ ಪ್ರತಿಯೊಬ್ಬರ ಖರ್ಚು 10 ಲಕ್ಷ ದಾಟಿಲ್ಲ.
ಹೌದಾ! ಇವರು ಇಷ್ಟೆ ಖರ್ಚು ಮಾಡಿದರಾ? ಎಂದು ಕೊಂಡವರೆ ಹೆಚ್ಚು. ಇಷ್ಟೆ ಹಣದಲ್ಲಿ ಪ್ರತಿಯೊಬ್ಬ ಮತದಾರನಿಗೂ 300-1000 ರೂಪಾಯಿ ನೀಡಿದ್ದು ಹೇಗೆ?. 1.5 ಲಕ್ಷ ಮತದಾರರಿಗೆ ಇಷ್ಟೆ ಹಣದಲ್ಲಿ ಹೇಗೆ ಹಣ ಹಂಚಿದರು. ಮತದಾನಕ್ಕಾಗಿ ಖಂಡ-ತುಂಡು, ಹೆಂಡ ಸರಬರಾಜು ಮಾಡಿದ್ದು ಹೇಗೆ. ಪ್ರತಿನಿತ್ಯ ತಮ್ಮ ಮತ್ತು ಬೆಂಬಲಿಗರು ಖರ್ಚು ವೆಚ್ಚುಗಳನ್ನು ಹೇಗೆ ನಿಭಾಯಿಸಿದರು. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ರಾಜ್ಯ ಮತ್ತು ರಾಷ್ಟ್ರ ಮುಖಂಡರು ಬಂದು ಪ್ರಚಾರ ಮಾಡಿದರೆ ಈ ಸಂದರ್ಭದಲ್ಲಿ ಅಭ್ಯರ್ಥಿ ಪರವಾಗಿ ಮತನಾಡಿದರೆ ಅವರ ಅಕೌಂಟಿಗೆ ಅಂದಿನ ಖರ್ಚು ಶೇ 25 ರಷ್ಟು ಬೀಳುತ್ತದೆ. ಇದು ಮೇಲ್ನೋಟಕ್ಕೆ ಕಂಡು ಬರುವ ಖರ್ಚು ಆದರೆ ಇನ್ನು ಅನೇಕ ರೀತಿಯ ಖರ್ಚುಗಳಿವೆ ಅವುಗಳನ್ನು 16 ಲಕ್ಷ ರೂಪಾಯಿಯಲ್ಲಿಯೇ ನೀಡಿದರೆ. ಹಾಗಾದರೆ ಲಕ್ಷಕ್ಕೆ ಎಷ್ಟು ಸೊನ್ನೆಗಳೇಷ್ಟು. ಈ ಸೋನ್ನೆಗಳಲ್ಲಿ ಏನಾದರು ವ್ಯಾತ್ಯಾಸವಾಗಿದಿಯೇ ಎಂಬ ಚಿಂತನೆ ಮಾಡುವಂತಾಗಿದೆ.
ಚುನಾವಣೆಗಳು ನ್ಯಾಯ ಸಮ್ಮತವಾಗಲಿರಲಿ, ಆಯ್ಕೆಯಾದ ಆಭ್ಯರ್ಥಿ ಜನತೆಯನ್ನು ಮೋಸ ಮಾಡದೆ ಇರಲಿ, ಅಕ್ರಮ ಗಳಿಕೆ ಮಾಡುವುದು ಬೇಡ ಎಂಬ ಕಾರಣಕ್ಕೆ ಚುನಾವಣಾ ಅಯೋಗ ಚುನಾವಣೆಯಲ್ಲಿ ಅಭ್ಯರ್ಥಿ ಇಂತಿಷ್ಟೆ ಖರ್ಚು ಮಾಡಬೇಕು ಎಂದು ನಿಯಮವನ್ನು ರೂಪಿಸಿದೆ. ಆದರೆ ಗೆದ್ದು ಬಂದವರು ನಾನೇನು ಹಾಗೆಯೇ ಗೆದ್ವು ಬಂದಿಲ್ಲ. ನಾನು ದುಡ್ಡು ಚೆಲ್ಲಿದ್ದೇನೆ. ಈಗ ಆಯ್ಕೆಯಾಗಿದ್ದೇನೆ, ಮುಂದೆ ನಾನು ಮಾಡಿರುವ ಖರ್ಚನ್ನು ವಾಪಸ್ಸು ತೆಗೆದುಕೊಳ್ಳುತ್ತೇನೆ ಎಂಬಂತೆ ವರ್ತಿಸುತ್ತಿದ್ದಾರೆ.
ಕೇಂದ್ರ ಚುನಾವಣಾ ಅಯೋಗವು ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಗೊಳಿಸಿದೆ. ಲೋಕಸಭಾ ಚುನಾವಣೆಯಲ್ಲಿ ದೊಡ್ಡ ರಾಜ್ಯಗಳಾದ ಆಂಧ್ರಪ್ರದೇಶ, ಉತ್ತರ ಪ್ರದೇಶ, ಮಧ್ಯೆ ಪ್ರದೇಶಗಳಂತಹ ರಾಜ್ಯದಲ್ಲಿ ಪ್ರತಿ ಅಭ್ಯರ್ಥಿ 40 ಲಕ್ಷ ರೂಪಾಯಿಯವರಿಗೂ ಖರ್ಚು ಮಾಡಬಹುದು, ಉಳಿದ ರಾಜ್ಯಗಳಲ್ಲಿ ಪ್ರತಿಯೊಬ್ಬ ಅಭ್ಯರ್ಥಿ 25 ಲಕ್ಷ ರೂಪಾಯಿಯವರಿಗು ಖರ್ಚುಮಾಡಬಹುದು. ವಿಧಾನ ಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಆಭ್ಯರ್ಥಿ 16 ಲಕ್ಷ ರೂಪಾಯಿ ಖರ್ಚು ಮಾಡಬಹುದು. ಆದರೆ ಚಿಕ್ಕ ರಾಜ್ಯಗಳಾದ ದಾದರ-ನಗರಹವೇಲಿ, ಡಮನ್ ಮತ್ತು ಡಿಯೂ, ಮೇಘಾಲಯ, ಲಕ್ಷದ್ವೀಪ, ಮಣಿಪುರ, ಗೋವಾ, ಮೀಜೋರಾಂ, ನಾಗಾಲ್ಯಾಂಡ, ಸಿಕ್ಕಿಂ, ತ್ರಿಪುರ ಮತ್ತು ಪಾಂಡಿಚೇರಿ ರಾಜ್ಯಗಳಲ್ಲಿ ಅಭ್ಯಥರ್ಿಗಳು 8 ಲಕ್ಷ ರೂಪಾಯಿ ಮಾತ್ರ ಖರ್ಚು ಮಾಡಬಹುದು ಎಂಬ ಸೂಚನೆಯನ್ನು ನೀಡಿದೆ.

ಅದೇ ರೀತಿ ತಾಲೂಕಾ ಪಂಚಾಯತ್ ಅಭ್ಯರ್ತಿಗಳು 50 ಸಾವಿರ, ಜಿಲ್ಲಾ ಪಂಚಾಯತ್ ಅಭ್ಯರ್ಥಿಗಳು 1 ಲಕ್ಷ ರೂಪಾಯಿವರಿಗೆ ಖರ್ಚು ಮಾಡಬಹುದು, ನಗರ ಸ್ಥಳೀಯ ಸಂಸ್ಥೆಗಳಾದ ಸಿಟಿ ಕಾರ್ಪೊರೇಶನ್ ಅಭ್ಯರ್ಥಿ 3 ಲಕ್ಷ ರೂಪಾಯಿಯವರಿಗೆ, ನಗರಸಭೆಯ ಅಭ್ಯರ್ಥಿ 2 ಲಕ್ಷ ರೂಪಾಯಿಯವರಿಗೆ, ಪುರಸಭೆಗಳ ಅಭ್ಯರ್ಥಿಗಳು 1.5 ಲಕ್ಷ ರೂಪಾಯಿ ಮತ್ತು ಪಟ್ಟಣ ಪಂಚಾಯತ್ ಅಭ್ಯರ್ಥಿಗಳು 1 ಲಕ್ಷ ರೂಪಾಯಿಯವರಿಗೆ ಖರ್ಚು ಮಾಡಬಹುದೆಂದು ಸೂಚನೆ ನೀಡಿದೆ.
ಚುನಾವಣಾ ಅಯೋಗ ನೀಡಿದ ಖರ್ಚಿನ ಹಣವನ್ನು ಲೆಕ್ಕ ಹಾಕಿ ಅಭ್ಯರ್ಥಿಗಳು ಚುನಾವಣಾ ದಿನದಿಂದ ಮುಗಿದ ನಂತರ ನಿಗಿದಿತ ದಿನಾಂಕದೊಳಗೆ ಪಕ್ಕ ಲೆಕ್ಕವನ್ನು ಚುನಾವಣಾ ಅಯೋಗಕ್ಕೆ ನೀಡಬೇಕು. ನೀಡದಿದ್ದರೆ ಅಂತಹ ಅಭ್ಯರ್ಥಿ ಮುಂದೆ 6 ವರ್ಷಗಳ ಕಾಲ ಯಾವದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಳಿಸಿ ಆದೇಶ ಹೊರಡಿಸಿದೆ. ಮೇಲೆ ಹೇಳಿದ ಲೆಕ್ಕವನ್ನು ಅಭ್ಯರ್ತಿಗಳು    ಘೋಷಣೆ ಮಾಡಿದರೆ ಸಾಲದು ಅದನ್ನು ಚುನಾವಣಾ ಅಯೋಗ ನೇಮಿಸಿದ ವಿಕ್ಷಕರು ಒಪ್ಪಿಕೊಳ್ಳಬೇಕು. ಚುನಾವಣಾ ಅಯೋಗವು ಪ್ರತಿಯೊಂದಕ್ಕೂ ಇಂತಿಷ್ಟು ಹಣವೆಂದು ನಿಗಿದಿ ಮಾಡಿದೆ. ಅದರಷ್ಟೆ ನೀಡಬೇಕು, ಉದಾಹರಣೆಗೆ ಚುನಾವಣೆಯಲ್ಲಿ ಒಂದು ಕಾರು ಬಾಡಿಗೆ ಪಡೆದರೆ ಅದಕ್ಕೆ 1600 ರೂಪಾಯಿ ನಿಗಿದಿ ಮಾಡಿದೆ ಅಷ್ಟೆ ಹಣವನ್ನು ಲೆಕ್ಕದಲ್ಲಿ ದಾಖಲಿಸಬೇಕು. ಅದರಂತೆ ಪೆಂಡಾಲ, ಮೈಕು, ಊಟ ಎಲ್ಲವನ್ನು ನಿಗಿದಿ ಮಾಡಿದ್ದು ಅದೇ ದರದಲ್ಲಿ ಅಭ್ಯರ್ಥಿಗಳು  ಲೆಕ್ಕ ನೀಡಬೇಕು.  ಅಭ್ಯರ್ಥಿಗಳು ನೀಡಿದ ಲೆಕ್ಕ ಪಕ್ಕವಿಲ್ಲ ಎನಿಸಿದರೆ ವಿಕ್ಷಕರು ದಾಖಲಿಸಿದ ಲೆಕ್ಕವನ್ನು ಅವರ ಖರ್ಚಿನಲ್ಲಿ ನಮೂದಿಸಬೇಕು.
ಚುನಾವಣಾ ಅಯೋಗ ಇಷ್ಟೇಲ್ಲಾ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದರಿಂದ ಅಭ್ಯರ್ಥಿಗಳು ತಮ್ಮ ಚುನಾವಣಾ ವೆಚ್ಚುವನ್ನು ಅಯೋಗಕ್ಕೆ ನೀಡುತ್ತಿದ್ದಾರೆ. ಈ ಲೆಕ್ಕವನ್ನು ನೋಡಿದರೆ ಚುನಾವಣಾ ಅಯೋಗ ಮಾಡಿರುವ ಅಂದಾಜು ಸಹ ಹೆಚ್ಚಿಗೆ ಇದೆ ಎನ್ನುವಂತೆ ಇದೆ. ಉದಾಹರಣೆಗೆ ಇತ್ತೀಚಿನ ವಿಧಾನ ಸಭಾ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆಯಿಂದ ಸ್ಪರ್ದಿಸಿದ್ದ ಅಭ್ಯರ್ಥಿಗಳು ನೀಡಿರುವ ಲೆಕ್ಕ ಈ ರೀತಿ ಇದೆ. ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ 728540 ರೂಪಾಯಿ ಅವರ ಪ್ರತಿಸ್ಪರ್ಧಿ  ಅಮರೇಗೌಡ ಬಯ್ಯಾಪೂರ 432181 ರೂಪಾಯಿ. ಸಚಿವ ಶಿವರಾಜ ತಂಗಡಗಿ 743008 ರೂಪಾಯಿ ಅವರ ಪ್ರತಿಸ್ಪರ್ಧಿ  ಬಸವರಾಜ ದಡೇಸಗೂರು 567355 ಲಕ್ಷ ರೂಪಾಯಿ, ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ 819717 ಲಕ್ಷ ರೂಪಾಯಿ, ಅವರ ಪ್ರತಿಸ್ಪರ್ಧಿ ಸಂಗಣ್ಣ ಕರಡಿ 596401 ರೂಪಾಯಿ, ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ 837562 ರೂಪಾಯಿ, ಅವರ ಪ್ರತಿಸ್ಪರ್ಧಿ  ಪರಣ್ಣ ಮುನವಳ್ಳಿ 794057 ರೂಪಾಯಿ. ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ 482250 ರೂಪಾಯಿ ಮತ್ತು ಅವರ ಪ್ರತಿಸ್ಪರ್ಧಿ ಹಾಲಪ್ಪ ಆಚಾರ 391210 ರೂಪಾಯಿ ಖರ್ಚು  ಮಾಡಿದ್ದಾಗಿ ಪೈಸೆ ಪೈಸೆ ಲೆಕ್ಕ ನೀಡಿದ್ದಾರೆ. ಇದನ್ನು ಚುನಾವಣಾ ಅಯೋಗದ ವಿಕ್ಷಕರು ಒಪ್ಪಿಕೊಂಡಿದ್ದಾರೆ. ಇದು ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳು ಲೆಕ್ಕ ಮಾತ್ರವಲ್ಲ ರಾಜ್ಯದ ಬಹುತೇಕ ಅಭ್ಯರ್ಥಿಗಳು ಇದೇ ರೀತಿ ಲೆಕ್ಕವನ್ನು ನೀಡಿದ್ದಾರೆ.
ಈ ಲೆಕ್ಕವನ್ನು ನೋಡಿದರೆ ಚುನಾವಣಾ ಅಯೋಗದ ಮಿತಿಯೇ ಹೆಚ್ಚಿದೆ ಅನಿಸುತ್ತಿದೆ. ಆದರೆ ವಾಸ್ತವದಲ್ಲಿ ನೋಡಿದರೆ ಜನತೆ ದಿಗ್ಭ್ರಾಂತರಾಗುವುದಂತೂ ಸತ್ಯ. ಚುನಾವಣಾ ಸುಗ್ಗಿಯನ್ನು ಮಾಡಿದ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳು ತಾವು ಕೋಟಿಗಟ್ಟಳೆ ಖರ್ಚು ಮಾಡಿದ್ದೇವೆ ಎಂದು ಹೇಳುತ್ತಾರೆ. ಚುನಾವಣಾ ಮುನ್ನವಂತೂ ತಾವು ತಮ್ಮ ವಿರೋಧಿ ಅಭ್ಯರ್ಥಿಗಳಿಗಿಂತ ಕಡಿಮೆ ಖರ್ಚು ಮಾಡಿಲ್ಲ ಎಂದು ಕೋಟಿ ಲೆಕ್ಕದಲ್ಲಿ ಹೇಳುತ್ತಾರೆ ಆದರೆ ಚುನಾವಣಾ ಅಯೋಗಕ್ಕೆ ನೀಡಿದ ಲೆಕ್ಕಯಾವದು ಎಂಬುವದು ಜನತೆಗೆ ಸಿಗುತ್ತಿಲ್ಲ.
ನಮ್ಮ ಜನಪ್ರತಿನಿಧಿಗಳಾ ಕಾನೂನು, ಶಾಸನಗಳನ್ನು ರೂಪಿಸುವ ಅಭ್ಯರ್ಥಿಗಳು, ನಮ್ಮ ಪ್ರತಿನಿಧಿಗಳು ತಾವು ಕಾರ್ಯನಿರ್ವಹಿಸುವ ಮುನ್ನವೇ ಶಾಸನ. ಕಾನೂನು ಮುರುಯುವದನ್ನು ತೊರಿಸಿಕೊಡುವಂತೆ ಲೆಕ್ಕ ನೀಡುತ್ತಿದ್ದಾರೆ.
ಹಿಂದೆ ಒಂದು ಕಾಲವಿತ್ತು ಜನರಿಂದ ಆಯ್ಕೆಯಾಗಬೇಕಾದ ಅಭ್ಯರ್ಥಿಯು ಜನರ ದುಡ್ಡಿನಿಂದ ಆಯ್ಕೆಯಾಗಿ ಜನತೆಯ ಕೆಲಸವನ್ನು ಯಾವದೇ ಫಲಾಪೇಕ್ಷೆ ಇಲ್ಲದೆ ಮಾಡಿಕೊಡುತ್ತಿದ್ದರು. ಆದರೆ ಇಂದು ಈ ರೀತಿ ರಾಜಕಾರಣಿಗಳನ್ನು ಕಾಣುವುದು ಅಪರೂಪ. ಇತ್ತೀಚಿನ ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳು ಕನಿಷ್ಠ 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗುತ್ತದೆ ಆದರೆ ಅದಕ್ಕೆ ದಾಖಲೆಗಳನ್ನು ಕೇಳಿದರೆ ಇಲ್ಲ.
ಚುನಾವಣೆಗಳು ಶುದ್ದವಾಗಿ ನಡೆದರೆ ಮುಂದೆ ಆಡಳಿತವು ಶುದ್ದವಾಗಿರುತ್ತದೆ ಎನ್ನಲಾಗುತ್ತದೆ. ಆದರೆ ಚುನಾವಣೆಗಳಲ್ಲಿ ಪರಿಶುದ್ದತೆ ಇಲ್ಲದಂತಾಗಿ ಕ್ಷೇತ್ರದ ಜನ ಅಲ್ಪ ಆಸೆಯಿಂದ ಒಬ್ಬನನ್ನು ಶ್ರೀಮಂತರನ್ನಾಗಿ ಮಾಡಿ ತಾವು ಎಲ್ಲಿದ್ದರು ಅಲ್ಲಿಯೇ ಇರುವಂತೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜನತೆ, ಆಯೋಗ ಮರುಚಿಂತನೆ ಮಾಡಬೇಕಾಗಿದೆ.

‍ಲೇಖಕರು avadhi

16 July, 2013

2 Comments

  1. nagraj.harapanahalli

    ಕಾರವಾರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಗೆದ್ದ, ಸೋತ ಅಭ್ಯರ್ಥಿಗಳು ( ಶೇ.೯೯ ) ಕೊಟ್ಟದ್ದು ಸುಳ್ಳು ಲೆಕ್ಕ . ಅಧಿಕಾರಿಗಳು ವ್ಯವಸ್ಥೆಯ ಕೈಗೊಂಬೆಗಳು ಮಾತ್ರ. ಜನಗಳು ಮೂಕ ಪ್ರೇಕ್ಷಕರು …

    • Amaresh

      ಏಕೆ ಹೀಗಿದೆ ಅಂತ ಯೋಚನೆ ಮಾಡಿ ನಾಗರಾಜ್. ಸುಮ್ಮನೆ ಎಲ್ಲದಕ್ಕೂ ಜಾತಿ ವ್ಯವಸ್ಥೆ ಮನುಸ್ಮೃತಿ ವೈದಿಕಶಾಹಿ ಅಂತ ಕಾರಣ ಕೊಡುತ್ತ ಕುಳಿತರೆ ನಮ್ಮ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading