ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಚುನಾವಣಾ ಪ್ರಣಾಳಿಕೆಯೆಂಬ ಕೋಡಂಗಿ’ – ಜಗದೀಶ್ ಕೊಪ್ಪ ಬರೀತಾರೆ

ಚುನಾವಣಾ ಪ್ರಣಾಳಿಕೆಗಳೆಂಬ ಪ್ರಹಸನ

ಡಾ. ಎನ್ ಜಗದೀಶ್ ಕೊಪ್ಪ

ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನ ಸಭಾ ಚುನಾವಣೆಗಾಗಿ ಎಲ್ಲಾ ಪಕ್ಷಗಳು ಪೈಪೋಟಿಗೆ ಬಿದ್ದಂತೆ ತಮ್ಮ ತಮ್ಮ ಚುನಾವಣಿಯ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುತ್ತಿವೆ, ಇವುಗಳನ್ನು ಗಮನಿಸಿದರೆ, ಅಥವಾ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಓದಿದರೆ, ಇವುಗಳನ್ನು ನಮ್ಮ ಪತ್ರಿಕೆಗಳು ‘ಹಾಸ್ಯಲೇಖನಗಳು ಎಂಬ ಶಿರ್ಷಿಕೆಯಡಿ ಪ್ರಕಟಿಸಬಹುದಾದ ಎಲ್ಲಾ ಗುಣಗಳನ್ನು ಹೊಂದಿವೆ ಎಂದು ನಿಸ್ಸಂಕೋಚವಾಗಿ ಹೇಳಬಹುದು. ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ, ದಿನದ 24 ಗಂಟೆ ವಿದ್ಯುತ್, ನಿರಂತರ ಕುಡಿಯುವ ಯೋಜನೆ, ರಸ್ತೆ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿ ಅಭಿವೃದ್ಧಿಗೆ ಒತ್ತು, ಹೀಗೆ ಪುಂಖಾನು ಪುಂಖವಾಗಿ ಬೊಗಳೆ ಬಿಡುತ್ತಿರುವ ರಾಜಕೀಯ ಪಕ್ಷಗಳಿಗೆ ತಾವು ಅಧಿಕಾರದಲ್ಲಿದ್ದಾಗ ಈ ಯೋಜನೆಗಳನ್ನು ಏಕೆ ಅನುಷ್ಟಾನಗೊಳಿಸಲಿಲ್ಲ? ಎಂದು ಯಾರೂ ಪ್ರಶ್ನಿಸಲಿಲ್ಲ, ಜೊತೆಗೆ ಪ್ರಶ್ನಿಸಲೂ ಬಾರದು ಏಕೆಂದರೆ, ಇವುಗಳು ಬಡವರನ್ನು ಬಡವರಾಗಿ ಇಡುವ ಒಂದು ವ್ಯವಸ್ಥಿತ ತಂತ್ರ ಅಷ್ಟೇ. ಇವುಗಳ ಬಗ್ಗೆ ಭಾರತದ ಮತದಾರರು ನಂಬಿಕೆಗಳನ್ನು ಕಳೆದುಕೊಂಡು ಎಷ್ಟೋ ವರ್ಷಗಳಾಗಿವೆ, ಈಗಿನ ಚುನಾವಣಾ ಪ್ರಣಾಳಿಕೆಗಳೆಂದರೆ, ಮನಸ್ಸಿಗೆ ತುಂಬಾ ಬೇಸರವಾದಾಗ ಓದಬಹುದಾದ ಹಾಸ್ಯದ ಕರಪತ್ರಗಳು ಎಂಬಂತಾಗಿವೆ.

ನಮ್ಮ ಜನಪ್ರತಿನಿದಿಗಳು ವಾಸ್ತವ ಬದುಕಿನಿಂದ ಎಷ್ಟೊಂದು ದೂರ ಚಲಿಸಿದ್ದಾರೆ ಎಂಬುದಕ್ಕೆ, ಚುನಾವಣಾ ಪ್ರಣಾಳಿಕೆಗಳು ಸಾಕ್ಷಿಯಾಗಿವೆ. ರಾಜಧಾನಿ ದೆಹಲಿ ಮಹಾನಗರ ಪಾಲಿಕೆ ಇತ್ತೀಚೆಗೆ ದೆಹಲಿ ರಸ್ತೆಗಳಲ್ಲಿ ಕಸ ಗುಡಿಸಲು, 5.400 ಹುದ್ದೆಗಳಿಗೆ, ಕೇವಲ ಐದನೇಯ ತರಗತಿ ಪಾಸಾಗಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು. ಒಟ್ಟು 18 ಸಾವಿರ ಅರ್ಜಿಗಳು ಆಕಾಂಕ್ಷಿಗಳು ಅರ್ಜಿಸಲ್ಲಿಸಿದ್ದು, ಇವರಲ್ಲಿ ಎಸ್.ಎಸ್,ಎಲ್.ಸಿ. ಪಾಸಾದವರು ಎರಡು ಸಾವಿರ ಮಂದಿ ಇದ್ದರೆ, 50 ಮಂದಿ ಪದವೀಧರರು ಇದ್ದರು. ಉದ್ಯೋಗ ಸೃಷ್ಟಿಯ ಬಗ್ಗೆ ಬೊಗಳೆ ಬಿಡುವ ನಮ್ಮ ರಾಜಕೀಯ ಪಕ್ಷಗಳಿಗೆ ಕಪಾಳಕ್ಕೆ ಬಾರಿಸಿದಂತೆ ಇರುವ ಈ ಕಟು ವಾಸ್ವವ ಸಂಗತಿ ಅರ್ಥವಾಗುವುದು ಯಾವಾಗ?

ಕಳೆದ ವಾರ ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಹಾಂಗ್ ಕಿನ್, ಜಾಗತಿಕ ಬಡತನದ ಕುರಿತಂತೆ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ವಿಶ್ವದಲ್ಲಿ 120 ಕೋಟಿ ಬಡಜನರಿದ್ದು, ಭಾರತದಲ್ಲಿ ಇಲ್ಲಿನ ಜನಸಂಖ್ಯೆಯ 120 ಕೋಟಿಯಲ್ಲಿ, ಶೇಕಡ 33 ರಷ್ಟು ಬಡವರಿದ್ದಾರೆ ಎಂದು ತಿಳಿಸಿದ್ದಾರೆ. ವಿಶ್ವಬ್ಯಾಂಕ್, ಬಡತನ ಕುರಿತಂತೆ ತನ್ನ ಮಾನದಂಡವನ್ನು ಬದಲಾಯಿಸಿದೆ. ದಿನವೊಂದಕ್ಕೆ ಒಂದು ಡಾಲರ್ ( ಸುಮಾರು 55 ರೂಪಾಯಿ) ಬದಲಾಗಿ, ಒಂದುಕಾಲು ಡಾಲರ್ ದುಡಿಯುವ ಅಂದರೆ, ಸುಮಾರು 68 ರೂಪಾಯಿ ಸಂಪಾದಿಸುವ ವ್ಯಕ್ತಿ ಬಡವನಲ್ಲ. ಆದರೆ, ಭಾರತದಲ್ಲಿ ಈ ಮಾನದಂಡವನ್ನು ದಿನವೊಂದಕ್ಕೆ 28 ರೂಪಾಯಿ ಎಂದು ನಿರ್ಧರಿಸಲಾಗಿದೆ. ಬಡತನ ಕುರಿತಂತೆ ವಿಶ್ವಬ್ಯಾಂಕ್ ನ ಮಾನದಂಡವನ್ನು ಭಾರತಕ್ಕೆ ಅಳವಡಿಸಿದರೆ, ಬಡವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ನಮ್ಮ ರಾಜಕಾರಣಿಗಳು ಎಷ್ಟು ಅವಿವೇಕದಿಂದ ವರ್ತಿಸಬಲ್ಲರು ಎಂಬುದಕ್ಕೆ ತಿಂಗಳಿಗೆ ನಾಲ್ಕು ನೂರು ಸಂಪಾದಿಸುವ ದಂಪತಿಗಳು ರಾಜಧಾನಿ ದೆಹಲಿಯಲ್ಲಿ ಬದುಕಬಹುದೆಂದು ದೆಹಲಿಯ ಮುಖ್ಯ ಮಂತ್ರಿ ಶೀಲಾದೀಕ್ಷಿತ್ ಹೇಳಿಕೆ ನೀಡಿದ್ದರು. ಭಾರತದ ಬಡತನದ ಮಾನದಂಡವನ್ನು ನಿರ್ಧರಿಸುವ ಯೋಜನಾ ಆಯೋಗ, ಕಳೆದ ನವಂಬರ್ ತಿಂಗಳಿನಲ್ಲಿ ತನ್ನ ಕಛೇರಿಯ ಎರಡು ಶೌಚಾಲಯಗಳ ನಿರ್ಮಾಣಕ್ಕೆ ಖರ್ಚು ಮಾಡಿದ ಹಣ, ಬರೋಬ್ಬರಿ 14 ಲಕ್ಷ ರೂಪಾಯಿ. ಇದೇ ಯೋಜನಾ ಆಯೋಗ, ಒಂದು ಶೌಚಾಲಯದ ವೆಚ್ಚ ಕ್ಕೆ 20 ಸಾವಿರ ರುಪಾಯಿಗಳನ್ನು ನಿಗದಿ ಮಾಡಿದೆ. ಇದನ್ನು ವ್ಯಂಗ್ಯ ಎಂದು ಕರೆಯಬೇಕೊ? ಅಥವಾ ದುರಂತವೆನ್ನಬೇಕೊ? ತಿಳಿಯದು.

ಈ ಹಿನ್ನಲೆಯಲ್ಲಿ ಚುನಾವಣಾ ಪ್ರಣಾಳಿಕೆಗಳು, ಭರವಸೆಗಳಂತೆ ಕಾಣದೆ, ಕೇವಲ ಆಮೀಷಗಳಂತೆ ಕಾಣುತ್ತವೆ. ವಿಶ್ವ ಬ್ಯಾಂಕ್ ಸಮೀಕ್ಷೆ ಪ್ರಕಾರ, 2026 ರ ವೇಳೆಗೆ ಭಾರತದ ಜನಸಂಖ್ಯೆ 150 ಕೋಟಿಗೆ ಏರಲಿದ್ದು, ಎರಡು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿದೆ. ಭಾರತದಲ್ಲಿ ಶೇಕಡ 46 ಮಂದಿಗೆ ಇಂದಿಗೂ ಶೌಚಾಲಯ ಇಲ್ಲ, ಇಂತಹ ಸ್ಥಿತಿಯಲ್ಲಿ ನಮ್ಮ ರಾಜಕೀಯ ಪಕ್ಷಗಳಿಂದ ಅಥವಾ ಸರ್ಕಾರಗಳಿಂದ ಉದ್ಯೋಗ ಸೃಷ್ಟಿ ಸಾಧ್ಯವೆ? ಆ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು ದೂರರದೃಷ್ಟಿಯ ಯೋಜನೆಗಳನ್ನು ರೂಪಿಸಿದಂತೆ ಕಾಣುವುದಿಲ್ಲ. ಭಾರತದ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ಚುನಾವಣೆ ಎಂದರೆ, ಹಣ, ಹೆಂಡ, ಮಾಂಸ, ಮತ್ತು ಆಮೀಷ ಎಂಬುದು ಜಗಜ್ಜಾಹಿರಾಗಿದೆ. ಚುನಾವಣೆ ಆಯೋಗದ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಗಾಳಿಗೆ ತೂರುವ ಕಲೆಯನ್ನು ನಮ್ಮ ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳು ಕರಗತ ಮಾಡಿಕೊಂಡಿದ್ದಾರೆ. ಇದಕ್ಕೆ ಒಂದು ಜ್ವಲಂತ ಉದಾಹರಣೆಯಾಗಿ ನಮ್ಮ ಮಹಿಳಾ ಸ್ವಸಹಾಯ ಸಂಘಗಳ ದುರ್ಬಳಕೆಯನ್ನು ಗಮನಿಸಿಬಹುದು

ನಮ್ಮ ನೆರೆಯ ಬಂಗ್ಲಾ ದೇಶದಲ್ಲಿ 1970 ದಶಕದಲ್ಲಿ ಗ್ರಾಮೀಣ ಬ್ಯಾಂಕ್ ಸ್ಥಾಪನೆ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ಪರಿಕಲ್ಪನೆಯನ್ನು ಕೊಟ್ಟ ಡಾ. ಮಹಮ್ಮದ್ ಯೂನಸ್ ರವರ ಕನಸಿನ ಕೂಸಾದ ಮಹಿಳೆಯರ ಸ್ವ ಸಹಾಯ ಗುಂಪು ಯೋಜನೆ ಭಾರತದಲ್ಲಿ ಮತಬೇಟೆಯ ಮಾರುಕಟ್ಟೆಯಾಗಿ ಪರಿವರ್ತನೆ ಹೊಂದಿದೆ. ವಿಶ್ವ ಬ್ಯಾಂಕ್ ಸೇರಿದಂತೆ, ಜಗತ್ತಿನ ಎಂಬತ್ತೊಂಬತ್ತು ರಾಷ್ಟ್ರಗಳು ಈ ಯೋಜನೆಯನ್ನು ಅಳವಡಿಸಿಕೊಂಡು, ಬಡತನದ ನೇರ ಪರಿಣಾಮದ ಮೊದಲ ಬಲಿ ಪಶುವಾಗುವ ಮಹಿಳೆಯನ್ನು ಹಸಿವು ಮತ್ತು ಬಡತನದ ಕೂಪದಿಂದ ಮೇಲೆತ್ತಲು ಶ್ರಮಿಸುತ್ತಿವೆ. ಆದರೆ, ಭಾರತದಲ್ಲಿ ಚುನಾವಣಾ ಪ್ರಚಾರಕ್ಕಾಗಿ, ಮತಕ್ಕಾಗಿ ಸ್ರೀ ಸಹಾಯ ಗುಂಪುಗಳನ್ನು ಯಾವ ವಿವೇಚನೆಯಿಲ್ಲದೆ, ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅನಕ್ಷರಸ್ತ ಮುಗ್ಧ ಮಹಿಳೆಯರು ಈ ದಿನ ಐನೂರು ರೂಪಾಯಿ ಕಾಣಿಕೆಗಾಗಿ ಊರಿಗೆ ಬರುವ ರಾಜಕಾರಣಿಗಳಿಗೆ ಆರತಿ ಬೆಳಗುತ್ತಿದ್ದಾರೆ. ಮನೆಗೆ ಬಂದ ಮಗನಿಗೆ, ಅಥವಾ ಸೊಸೆಗೆ ಆರತಿ ಎತ್ತುತ್ತಿದ್ದ ಸಾಂಸ್ಕೃತಿಕ ಸಂಪ್ರದಾಯ ಈಗ ಹಣದಾಸೆಗೆ ಮುಖಹೇಡಿ ಜನಪ್ರತಿನಿಧಿಗಳಿಗೆ ಮೀಸಲಾಗಿದೆ. ಇದೊಂದು ರಾಜಕೀಯ ವ್ಯವಸ್ಥೆಯ ವ್ಯಭಿಚಾರವಲ್ಲದೆ ಮತ್ತೇನು? ಭಾರತದಲ್ಲಿ ಪ್ರತಿ ಮುವತ್ತು ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಈವರೆಗೆ ಒಟ್ಟು 2 ಲಕ್ಷದ 56 ಸಾವಿರ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಗತಿ ಈ ನಾಡಿನ ದುರಂತ ಎಂದು ಪರಿಭಾವಿಸಲಾಗದ ರಾಜಕೀಯ ಪಕ್ಷಗಳು, ಚುನಾವಣೆ ಸಂದರ್ಭದಲ್ಲಿ ಮೂಗಿಗೆ ತುಪ್ಪ ಸವರುವ ಪ್ರಣಾಣಿಕೆಗಳನ್ನು ಪ್ರಕಟಿಸಿದರೆ, ನಾವುಗಳು ಅವುಗಳನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದೆಯಾ?

‍ಲೇಖಕರು avadhi

25 April, 2013

2 Comments

  1. Kiran

    Is there any legal accountability for these manifestos? If not, why should it be brought out? Waste of precious paper! It is more like: I will give you a bunch of lies and you give me your vote.

  2. chalam

    ಮೊದಲಗೆ ರಾಜಕಾರಣಿಯಾಗುವ ಕನಸು ಹೊತ್ತ ಈಗಿನ ಸ್ನೇಹಿತರ ಮನಸ್ಥಿತಿಯನ್ನು ನೋಡಿದರೆ ಯಾವ ಆಸೆಯನ್ನು ಇಟ್ಟುಕೊಳ್ಳಲು ಸಾದ್ಯವೇ ಇಲ್ಲ.ನಮ್ಮ ಬುದ್ದಿಜೀವಿಗಳು ಒಮ್ಮೊಮ್ಮೆ ಆಸೆ ಹುಟ್ಟಿಸಿ ಯಾವ ಮಟ್ಟಿಗಿನ ಭ್ರಮೆಯಲ್ಲಿ ಮುಳುಗಿಸುತ್ತಾರೆಂದರೆ ಈ ರಾಜಕಾರಣಿಗಳೇ ವಾಸಿ ಅನ್ನುವಂತಾಗುತ್ತದೆ.ತುಂಬಾ ಆತಂಕದ ದಿನಗಳಲ್ಲಿದ್ದೇವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading