ಚಿತ್ರಾ ಸಂತೋಷ್
ಇಂದು ವಿಶ್ವ ಭೂಮಿತಾಯಿ ದಿನ. ಕರಾವಳಿ ಕಡೆ ಭೂಮಿಯನ್ನು ಆರಾಧಿಸುವ ವಿಶಿಷ್ಟ ಹಬ್ಬವೊಂದು ಆಚರಣೆಯಲ್ಲಿದೆ. ಅದರ ಹೆಸರು “ಕೆಡ್ಡಸ”. ಭೂಮಿತಾಯಿ ದಿನದಂದು ಈ ಹಬ್ಬವನ್ನು ನೆನಪಿಸುವ ಸಲುವಾಗಿ ಈ ಬರಹವನ್ನು ಇಲ್ಲಿ ಹಾಕಿದ್ದೇನೆ
ಇವತ್ತು ಭೂತಾಯಿಗೆ ಕಾಗೆ ಮುಟ್ಟಿದೆ. ನೀವು ಜಾಸ್ತಿ ಜಗ್ಳ ಆಡಬಾರದು. ಜಗ್ಳ ಆಡಿದ್ರೆ ಭೂಮಿತಾಯಿ ಬೇಜಾರುಪಡ್ಕೊಳ್ತಾಳೆ…ಅಮ್ಮ ಬೆಳ್ಳಂಬೆಳಿಗ್ಗೆ ರೊಟ್ಟಿ ತಟ್ಟುತ್ತಾ ಹೇಳುತ್ತಿದ್ದಳು. ಒಲೆ ಮೇಲೆ ಕಲ್ಲಿನ ಕಾವಲಿಯಲ್ಲಿ ರೊಟ್ಟಿ ಬೇಯಿತ್ತಿತ್ತು. ಮೊದಲ ರೊಟ್ಟಿ ನನಗೇ ಸಲ್ಲಬೇಕೆನ್ನುವುದು ತಮ್ಮನ ವಾದ. ಇದೇ ಸಿಟ್ಟಲ್ಲಿ ಒಲೆಯೊಳಗಿದ್ದ ಕಟ್ಟಿಗೆಯನ್ನು ಹಿಂದೆ-ಮುಂದೆ ಜಾರಿಸುತ್ತಿದ್ದ. ನನಗೆ ಕೊಡೆಂದು ಅಮ್ಮನ ಸೆರಗು ನಾನು ಹಿಡಿದುಕೊಂಡಿದ್ದೆ.

ಅಮ್ಮನ ಮಾತು ಒಗಟು.
“ಅರೆ! ಕಾಗೆ ಮುಟ್ಟುವುದಕ್ಕೂ, ನಾವು ಜಗ್ಳ ಆಡೋದಕ್ಕೂ ಏನು ಸಂಬಂಧ?” ಅಮ್ಮನ ಕೇಳಿಯೇ ಬಿಟ್ಬಿ.
ನೋಡು ಪಕ್ಕದ್ಮನೆ ಲಲಿತಕ್ಕ ಕಾಗೆ ಮುಟ್ಟಿದೆ ಅಂತ ತಿಂಗ್ಳಲ್ಲಿ ಮೂರು ದಿನ ಹೊರಗಡೆ ಕೂರ್ತಾಳೆ. ಆಗ ಅವಳಿಗೆ ಅವ್ಳ ಅಮ್ಮ ಏನೂ ಕೆಲ್ಸ ಕೊಡಲ್ಲ. ಮನೆ ಹಿಂದಿನ ಕೋಣೆಯಲ್ಲಿ ಲಲಿತಕ್ಕ ಸುಮ್ಮನೆ ಮಲಗಿರ್ತಾಳೆ. ಹಂಗೆ, ಭೂಮಿತಾಯಿಗೂ ಕಾಗೆ ಮುಟ್ಟಿದೆ. ಅವಳಿಗೆ ನೋವು ಕೊಡಬಾರದು, ಸಿಟ್ಟು ಮಾಡಿ ಜಗಳ ಮಾಡಿಕೊಂಡ್ರೆ ಅವಳಿಗೆ ಬೇಜಾರಾಗುತ್ತೆ. ನೀವು ಸುಮ್ಮನಿರಬೇಕು ಎಂದು ಹೇಳುತ್ತಿದ್ದಳು.
“ಹಾಗಾದ್ರೆ ಲಲಿತಕ್ಕನ ತರ ಭೂತಾಯಿಗೂ ತಿಂಗಳಿಗೊಮ್ಮೆ ಕಾಗೆ ಮುಟ್ಟುತ್ತಾ?” ತಮ್ಮನ ಮಾತು ಅಮ್ಮನನ್ನು ಪೇಚಿಗೆ ಸಿಲುಕಿಸಿತ್ತು. “ಮನುಷ್ಯರು ತಿಂಗಳಿಗೊಮ್ಮೆ, ಭೂತಾಯಿ ವರ್ಷಕ್ಕೊಮ್ಮೆ” ಎಂದು ಅಷ್ಟೇ ಹೇಳಿ, ನಮ್ಮಿಬ್ಬರಿಗೆ ಬೈದು ಸುಮ್ಮನಾಗಿಸುತ್ತಿದ್ದಳು. ಅಮ್ಮನ ಮಾತು ನಂಬಿದ ನಾವಿಬ್ಬರೂ ಜಗಳವಾಡದೆ ಸುಮ್ಮನಿರುತ್ತಿದ್ದೇವು.
ವರ್ಷದಲ್ಲಿ ಒಂದು ಸಲ ಭೂತಾಯಿಗೆ ಕಾಗೆ ಮುಟ್ಟುತ್ತಿತ್ತು. ಅಮ್ಮ ತುಳಸಿ ಗಿಡದ ಪಕ್ಕದಲ್ಲಿ ಮಸಿಯಿಂದ ಚೌಕ ತರ ಮಾಡಿ, ಅಲ್ಲಿ ಸೀಗೆಕಾಯಿ, ಮಸಿ ತುಂಡು ಇಡುತ್ತಿದ್ದಳು. ನಾಲ್ಕನೇ ದಿನಕ್ಕೆ ಅದೇ ಜಾಗದಲ್ಲಿ ಸೆಗಣಿ ಸಾರಿ, ಬಾಳೆಲೆ ಹಾಕುತ್ತಿದ್ದಳು. ಬಳಿಕ ಅದರ ಮೇಲೆ ಎಣ್ಣೆ, ಅರಿಶಿನ, ಕುಂಕುಮ, ಬಳೆ, ಹೂವುಗಳನ್ನು ಇಟ್ಟು ಭೂಮಿಗೆ ಎಣ್ಣೆ ಬಿಡುತ್ತಿದ್ದಳು. “ಭೂಮಿತಾಯಿಯನ್ನು ಸ್ನಾನ ಮಾಡಿಕೊಂಡು ಬಂದರ್ತಾಳೆ” ಎನ್ನುವ ಅಮ್ಮ, ಒಂದು ಎಲೆಯಲ್ಲಿ ರೊಟ್ಟಿ, ಸಾರು ಹಾಕಿಡುತ್ತಿದ್ದಳು. ಭೂತಾಯಿ ತಿಂದ ಮೇಲೆ ನಾವು ಅಂಗಳದಲ್ಲೇ ಕುಳಿತು ತಿನ್ನುತ್ತಿದ್ದೆವು.
ತುಳುವಿನಲ್ಲಿ ಪುಯಿಂತೆಲ್(ಮಕರ ಮಾಸ) ತಿಂಗಳಿನ ಕೊನೆಯ ಅಂದ್ರೆ ೨೭, ೨೮, ೨೯ನೇ ದಿನ ಕೆಡ್ಡಸ ಎಂದು ಆಚರಿಸುತ್ತಾರೆ.
ಭೂಮಿ ಹೊರಗಾಗಿದ್ದಾಳೆ ಎಂದು ಹೇಳುತ್ತಿದ್ದರು.
ಆ ಮೂರು ದಿನವೂ ಭೂಮಿತಾಯಿಗೆ ನೋವಾಗುವ ಯಾವುದೇ ಕೆಲಸಗಳನ್ನು ಅಮ್ಮ ಮಾಡುತ್ತಿರಲಿಲ್ಲ, ತೋಟದ ಕೆಲಸಗಳಿಗೆ ರಜೆ, ಹೊಲ ಗದ್ದೆಗಳಲ್ಲೂ ಹಾರೆ-ಗುದ್ದಲಿಗಳ ಸದ್ದಿಲ್ಲ.
ಇಂದು ಅಮ್ಮನೂ ಕೆಡ್ಡಸ ಮರೆತುಬಿಡ್ತಾರೆ!






ಕೆಡ್ದಸದ ಬಗ್ಗೆ ಗೊತ್ತೇ ಇರ್ಲಿಲ್ಲ. ಅಂದ ಹಾಗೆ ನಮ್ಮ ಮಲೆನಾಡಿನಲ್ಲೂ ಒಂದು ಹಬ್ಬ ಇದೆ. ಭೂಮಿ ಹುಣ್ಣಿಮೆ ಅಂತ. ಅದರ ಮಜಾನೆ ಬೇರೆ. ಆದಿನ ಕಾಡಿನಲ್ಲಿ ಸಿಗುವ ಅಷ್ಟೂ ಗಿಡದ ಎಲೆಗಳಿಂದ ಮಾಡಿದ ಪಲ್ಯ – ಬೆರಕೆ ಸೊಪ್ಪಿನ ಪಲ್ಯ(ಈ ಎಲ್ಲಾ ಎಲೆಗಳಿಂದ ಇದಕ್ಕೊಂದು ವಿಶಿಷ್ಟವಾದ ರುಚಿ ಬಂದಿರತ್ತೆ) ಹಾಗು ಕೊಟ್ಟೆ ಕಡಬುಗಳನ್ನು ಮಾಡಿ ಭೂಮಿಗೆ ಹಾಕ್ತಾರೆ. ಆವತ್ತು ಬಹುಷಃ ಯಾವುದೇ ರೀತಿಯ ಭೂಮಿಯ ಕೆಲಸ ಮಾಡುವುದಿಲ್ಲ ಅನ್ಸತ್ತೆ. ಇದು ಅಕ್ಟೋಬರ್ ತಿಂಗಳಿನಲ್ಲಿ ಬರತ್ತೆ. ದೀಪಾವಳಿಗಿಂತ ಒಂದು ಚೂರು ಮುಂಚೆ. ಆಗಂತೂ ಮಲೆನಾಡಿನ ಗದ್ದೆಗಳಲ್ಲಿ ಬಾಳೆದಿಂಡಿನ ಮಂಟಪ, ಮಾವಿನ ಎಲೆಯ ತೋರಣಗಳು, ಗೌರಿ ಬಳೆಗಳು…. ಹೀಗೆ ಏನೇನೋ ಸುಮಂಗಲೆಯರಿಗೆ ಸಂಭಂದಪಟ್ಟ ವಸ್ತುಗಳು ಇರುತ್ತವೆ. ಈ ಎಲ್ಲಾ ವಸ್ತುಗಳಿಂದ ಇಡಿ ದೃಶ್ಯಕ್ಕೆ ಒಂದು ರೀತಿ ಪಾವಿತ್ರ್ಯತೆ ಬಂದಿರತ್ತೆ. ನಾಸ್ತಿಕರನ್ನು ಕೂಡ ಖುಷಿಗೊಳಿಸುವಂತಹ ಆಚರಣೆಗಳಿವು. ಇಂತಹ ಆಚರಣೆಗಳು ಮನುಷ್ಯನಲ್ಲಿ ಮನುಷ್ಯತ್ವವನ್ನು ವೃದ್ದಿಸುತ್ತವೆ ಅನ್ನೋದು ನನ್ನ ವಯಕ್ತಿಕ ನಂಬಿಕೆ. ನಿಮ್ಮ ಲೇಖನ ಓದಿ ಇಷ್ಟೆಲ್ಲಾ ನೆನಪಾಯಿತು. ಧನ್ಯವಾದಗಳು.
“”Keddasa mattu Kage muttisikondavalu mooru dinagalu horage”, Nenapisuvdarondige ‘Ammana Nenapannu ummalisidiri. Thank you.
sandarbochita baraha. tuluvara matru mooliya samskrutika nelegalive