ನಾಟಕದ ಕುರಿತು : ಯಾಕೆ ಅಸಂಗತ|ಗಳು?
ಕನ್ನಡದ ‘ಅಸಂಗತ’ ನಾಟಕಗಳನ್ನು ಹುಡುಕುತ್ತಾ ಹೊರಟರೆ ಅಸಂಗತ ನಾಟಕ ಮತ್ತು ನಾಟಕಕಾರರ ಪಟ್ಟಿಯಲ್ಲಿ ಚಂದ್ರಶೇಖರ ಪಾಟೀಲರ (ಚಂಪಾ) ಹೆಸರು ನಮಗೆ ಮುಂಚೂಣಿಯಲ್ಲಿ ಸಿಗುತ್ತದೆ. ಈ ಅಸಂಗತ ನಾಟಕಗಳನ್ನು ಬರೆಯಲು ಅವರು ಶುರು ಮಾಡಿದ ಘಟನೆ ನಮಗೆ ನೆನಪಿಗೆ ಬರುತ್ತದೆ, ೧೯೬೭-೬೮ರ ಅವಧಿಯಲ್ಲಿ ಚಂಪಾ ಅವರು ಹೈದ್ರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ದಲ್ಲಿ ತರಬೇತಿ ಪಡೆಯುತ್ತಿದ್ದಾಗ. ಒಮ್ಮೆ ಮೈಸೂರಿನ ಗೆಳೆಯ ವಿಶ್ವನಾಥ ಮಿರ್ಲೆ ಅವರು ನ. ರತ್ನ ಅವರು ಬರೆದ ‘ಗೋಡೆ ಬೇಕೇ ಗೋಡೆ’ ನಾಟಕದ ಹಸ್ತಪ್ರತಿಯನ್ನು ಚಂಪಾ ಅವರಿಗೆ ಓದಲು ಕೊಟ್ಟರು. ಸಣ್ಣ ನಾಟಕ ಒಂದೇ ಮೆಟ್ಟಿಗೆ ಓದಿ ಮುಗಿಸಿ ಇಷ್ಟ ಪಟ್ಟು ಇಡೀ ಒಂದು ದಿನ ಒಂದು ರಾತ್ರಿ ಕುಂತು ಅವರ ಮೊದಲ ನಾಟಕ ‘ಕೊಡೆಗಳು’ ನಾಟಕ ಬರೆದರು. ಅದನ್ನೋದಿದ ವಿಶ್ವನಾಥ ಮಿರ್ಲೆ ‘A genuine absurd play’ ಅಂದಿದ್ದರು. ಅಲ್ಲಿಯವರೆಗೂ ಚಂಪಾ ಅವರಿಗೆ ‘Absurd’ ಎನ್ನುವುದು ಪಾಶ್ಚಿಮಾತ್ಯ ಸಾಹಿತ್ಯದ ಒಂದು ಸಾಹಿತ್ಯ ಪ್ರಕಾರವಾಗಿ ಮಾತ್ರ ಪರಿಚಿತವಿತ್ತು. ಅಸಂಗತ ನಾಟಕಗಳ ರುಚಿ ಹತ್ತಿಸಿದ್ದು ನ.ರತ್ನ ಅವರ ಗೋಡೆ ಬೇಕೆ ಗೋಡೆ ಚಂಪಾ ಅವರಿಗೆ ಅವರ ಒಳಗಡೆ ಒದ್ದಾಡುತ್ತಿದ್ದ ಹಲವಾರು ಅನುಭವಗಳಿಗೆ ರೂಪು ಕೊಡಲು ಹಾದಿಯಾಯಿತು. ಹೀಗೆ ಚಂಪಾ ಅವರ ಅಸಂಗತ ನಾಟಕ ರಚನೆಯ ಹಾದಿಯನ್ನು ನೆನೆಯುತ್ತ ರಂಗದಮೇಲೆ ಮತ್ತೆ ಚಂಪಾ ಅಸಂಗತ ನಾಟಕಗಳನ್ನು ತರುವ ಪ್ರಯತ್ನವನ್ನು ನಮ್ಮ ಕಲಾವಿಲಾಸಿ ತಂಡ ಮಾಡುತ್ತಿದೆ.
ಚಂಪಾ ಅವರು ಹೇಳಿದ ಹಾಗೆ “ಯಾವುದೋ ಒಂದು ಸಾಹಿತ್ಯದ ಪ್ರಕಾರ ಎಂದೂ ‘ಮುಗಿದುಹೋದ ಅಧ್ಯಾಯ’ ವಾಗುವುದಿಲ್ಲ – ನವೋದಯ, ನವ್ಯ, ಪ್ರಗತಿಶೀಲ, ಅಸಂಗತ, ಬಂಡಾಯ ಇವುಗಳೆಲ್ಲವೂ ಮತ್ತೆ ಮತ್ತೆ ಪುನರಾವರ್ತನೆಗೊಳ್ಳುವ ಸಾಧ್ಯತೆಯುಳ್ಳ ಪ್ರವೃತ್ತಿಗಳು.“
ಅವರು ಯಾವಾಗಲೂ ಹೇಳುತ್ತಿದ್ದ ಮತ್ತೊಂದು ಮಾತೆಂದರೆ “ನನ್ನ ನಾಟಕಗಳೆಲ್ಲ ನನ್ನನ್ನು ಕಾಡುವ, ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ – (ಪರಿಹಾರವನ್ನಲ್ಲ) ಒಂದು ರೂಪು ಕೊಡಲು ಮಾಡಿದ ಪ್ರಯತ್ನಗಳೇ.”







0 Comments