ಚಂದ್ರಶೇಖರ ಆಲೂರು ಕಾಲಂ :ಕಾಡು, ಕಡಲು, ಬಯಲು ತೊರೆದು ಮರಳುಗಾಡಿಗೆ …

ಅಲ್ಲಿ: ದೃಷ್ಟಿ ಹಾಯಿಸುವಲ್ಲೆಲ್ಲಾ ಕಾಣುವುದು ಮರಳು, ಬರೀ ಮರಳು. ಬಸ್ಸಿನಲ್ಲಿಯೋ, ಕಾರಿ ನಲ್ಲಿಯೋ ಪ್ರಯಾಣ ಮಾಡುತ್ತಿದ್ದಾಗ ಮಧ್ಯ ನಿಂತರೆ ಮರಳ ಕಡಲಿನ ನಡುವೆ ನಿಂತ ಅನುಭವ. ಒಂದೇ ಒಂದು ಹಸಿರು ಗಿಡವಿಲ್ಲ, ಜೀವರಾಶಿಯ ಸುಳಿವೇ ಇಲ್ಲ. ದೂರದಲ್ಲೆಲ್ಲೋ ಒಂದು ಓಯಸಿಸ್, ಕೆಲವು ಖರ್ಜೂರದ  ಮರಗಳನ್ನ ಬಿಟ್ಟರೆ ಬೇರೇನೂ ಇಲ್ಲ. ಹಸಿರು, ಜೀವರಾಶಿ ಇರಲಿ ನೂರಾರು ಮೈಲಿ ಪಯ ಣಿಸಿದರೂ ಒಂದು ಹನಿ ನೀರೂ ಕಾಣುವುದಿಲ್ಲ! ನಮಗೆ ಕಾಣದ ಎಣ್ಣೆ ಬಾವಿಗಳಷ್ಟೇ ಅಲ್ಲಿರುವುದು. ಅದೊಂದೇ ಅಲ್ಲಿನ ನೈಸರ್ಗಿಕ   ಸಂಪತ್ತು. ಅದೊಂದೇ ಪ್ರಕೃತಿ ನೀಡಿದ ಭಾಗ್ಯ!

ಈ ಪುಟ್ಟ ರಾಜ್ಯವೇ ಒಂದು ಮಲೆನಾಡು. ಎಲ್ಲಿ ಸಂಚರಿಸಿದರೂ ಹಸಿರು ಹೊದ್ದ ಪರ್ವತಗಳು. ಬದಿಯಲ್ಲಿ ಮೇರೆಯರಿಯದ ಕಡಲು. ಹಸಿರೆಂದರೆ ಎಂಥ ಹಸಿರು, ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರ ಕಡಲು. ಒಂದಲ್ಲ, ಎರಡಲ್ಲ ಸಾವಿರಾರು ಸಸ್ಯ ಪ್ರಭೇ ದಗಳು. ಪರ್ವತಗಳಿಂದ ಧುಮುಕುತ್ತಿರುವ ನೂರಾರು ಜಲಪಾತಗಳು. ಬಸ್ಸು ಅಥವಾ ಕಾರಿನಲ್ಲಿ ಪಯಣಿಸುತ್ತಿದ್ದರೆ ನೂರಾರು ಮೈಲಿಗಳ ಹಾದಿಗುಂಟ ಅಸಂಖ್ಯಾತ ನೀರಿನ ಝರಿಗಳು.

ಇಲ್ಲಿ ಏನು ಬೆಳೆಯುವುದಿಲ್ಲ? ಕಾಫಿ, ಟೀ, ಬಾಳೆ, ಏಲಕ್ಕಿ, ರಬ್ಬರ್, ಭತ್ತ; ಕಡಲತಡಿಯ ಗುಂಟ ಹಬ್ಬಿದ ತೆಂಗು, ಸಮುದ್ರ ತಂದು ಸುರಿಯುವ ಮೀನು… ಪುಟ್ಟ ರಾಜ್ಯಕ್ಕೆ ಹಲವು ನೈಸರ್ಗಿಕ   ಬಂದರುಗಳನ್ನ ನೀಡಿರುವ ಸಮುದ್ರ, ಪುಟ್ಟ ಕಡಲಿನಂತೆ ಕಾಣುವ ಬೃಹತ್ ಜಲರಾಶಿ. ಅರೆ ಏನಿಲ್ಲ, ಇದು ನಿಜಕ್ಕೂ ದೇವತೆಗಳು ತಮ್ಮ ಸ್ವಂತಕ್ಕಾಗಿ ಸೃಷ್ಟಿಸಿಕೊಂಡ ಸ್ವರ್ಗವೇ ಸರಿ.

ಇದು ಕೇರಳ. ಅವರೇ ಹೇಳಿಕೊಳ್ಳುವಂತೆ God’s own country. ನಾಲ್ಕು ದಿನಗಳ ಪುಟ್ಟ ಪ್ರವಾಸ ಮುಗಿಸಿ ಅಲ್ಲಿಂದ ಬರುವಾಗ ನನ್ನನ್ನ ಗುಂಪಾಗಿ ಕಾಡಿದ್ದು: ಇಂಥ ನಿಸರ್ಗದತ್ತ ಸ್ವರ್ಗವನ್ನ ತೊರೆದು ಜನ ಕೊಲ್ಲಿ ದೇಶಗಳು ಅಥವಾ ಗಲ್ ಎಂದು ಕರೆಯ ಲ್ಪಡುವ ಆ ಮರಳುಗಾಡನ್ನ ಯಾಕೆ ಹಂಬಲಿಸುತ್ತಾರೆ, ಕನಸುತ್ತಾರೆ? ಅಲ್ಲಿಗೆ ಹೇಗಾದರೂ ಹೋಗಿ ಬಿಡಬೇ ಕೆಂದು ಯಾಕೆ ಹಂಬಲಿಸುತ್ತಾರೆ.

ಪ್ರಕೃತಿ ಸೃಷ್ಟಿಸಿದ ಅಸ ಮತೋಲನವನ್ನ ಗಮನಿಸಿದರೆ ಅಲ್ಲಿ ವಾಸಿಸುವವರು ಇಲ್ಲಿಗೆ ಓಡಿ ಬರಬೇಕಿತ್ತು. ಅಲ್ಲಿ ನಿಸರ್ಗದತ್ತವಾಗಿ ಲಭ್ಯವಿ ರುವುದು ಕೇವಲ ಪೆಟ್ರೋಲ್ ಎಂಬ ಎಣ್ಣೆ ಮಾತ್ರ. ಇಲ್ಲಿ ಮನುಷ್ಯ ಮಾತ್ರವಲ್ಲ, ಸಕಲೆಂಟು ಜೀವರಾಶಿ ಗಳೂ ಬಯಸುವ ಎಲ್ಲವೂ ನಿಸರ್ಗದತ್ತವಾಗಿ ಲಭ್ಯವಿವೆ. ಅದೊಂದು, ಎಲ್ಲ ಜೀವರಾಶಿಗಳ ಉಗಮಕ್ಕೆ ಕಾರಣ ವಾದ ಮಳೆಯನ್ನೇ ಕಾಣದ ದೇಶ. ಇಲ್ಲಿ ದಿನವಿಡೀ ಸುರಿಯುವ ಮುಂಗಾರು ಮಳೆಗೆ ಮೈಯೊಡ್ಡಿ ನಡೆಯು ವುದೇ ಒಂದು ಚಂದ ಮತ್ತು ಛಂದ. ಕಾಡು, ಕಡಲು ಮತ್ತು ಹೊಳೆಯಲ್ಲಿ ಮೀಯುವ ಬಯಲನ್ನ ಸಮೃದ್ಧ ಹಾಗೂ ಸಮಪ್ರಮಾಣದಲ್ಲಿ ಪಡೆದ ಇಂಥ `ದೇವರ ದೇಶ’ವನ್ನು ಬಿಟ್ಟು ಜನ ಆ ಮರುಭೂಮಿಯತ್ತ ಯಾಕೆ ಮುಖ ಮಾಡುತ್ತಾರೆ?

ಈ ಜಿಜ್ಞಾಸೆಗೆ ಮುನ್ನ:

ಮೂರು ನಾಲ್ಕು ದಿನದ ಮಟ್ಟಿಗಾದರೂ ಎಲ್ಲಾದರೂ ಹೊರಗೆ ಹೋಗಿ ಬರೋಣ ಎಂದುಕೊಂಡರೆ ಈ ಅಮ್ಮ-ಮಗಳ ಬಿಡುವಿಲ್ಲದ ಟೈಂ ಟೇಬಲ್ನಿಂದ ಸಾಧ್ಯವೇ ಆಗಿರಲಿಲ್ಲ. ಮೊನ್ನೆ ನನ್ನ ಮಗಳ ಕಾಲೇಜಿಗೆ ರಜೆ ಶುರು ವಾದಾಗಿನಿಂದ ಅವಳೇ ಅವರ ಅಮ್ಮನನ್ನ ಒತ್ತಾಯಿಸಲಾರಂಭಿಸಿದಳು. ಕಡೆಗೂ ಅವರ ಅಮ್ಮ ಒಂದು ವಾರದ ರಜೆ ಪಡೆದಳು. ತಕ್ಷಣಕ್ಕೆ ಹೊಳೆದದ್ದು ಕೇರಳ. ಕೂಡಲೇ ಕೆ.ಎಸ್.ಟಿ.ಡಿ.ಸಿಯ ಒಂದು ಪ್ಯಾಕೇಜ್ ಪ್ರವಾಸಕ್ಕೆ ಬುಕ್ ಮಾಡಿದೆ. ಅಷ್ಟು ಸುಲಭವಾಗಿ ಹೇಗೆ ಟಿಕೆಟ್ ಸಿಕ್ಕಿತು ಎಂದು ಬಾದಾಮಿ ಹೌಸ್ನಿಂದ ಬರು ವಾಗ ಆಲೋಚಿಸಿದೆ. ಹೌದು ಈ ಕಾಲದಲ್ಲಿ ಪ್ರವಾಸಿ ಗರು ಅಷ್ಟಾಗಿ ಕೇರಳಕ್ಕೆ ಹೋಗುವುದಿಲ್ಲ. ಅವತ್ತೇ ಮಾನ್ಸೂನ್ ಕೇರಳದ ಕರಾವಳಿಯನ್ನು ಅಪ್ಪಳಿಸಿತ್ತು. ಇರಲಿ ಸುರಿವ ಮಳೆ ಯನ್ನು ನೋಡುವುದೇ ಒಂದು ಸೊಗಸು ಎಂದು ಸಮಾಧಾನ ಪಟ್ಟುಕೊಂಡೆ!

* * *

ಕೇರಳ ಪ್ರವಾಸಕ್ಕೆ ಮುನ್ನುಡಿ ಎಂಬಂತೆ, ಆ ಗುರು ವಾರ ಮುಸ್ಸಂಜೆ ಮನೆಯಿಂದ ಹೊರಟಾಗಲೇ ಬಿರು ಸಾದ ಮಳೆ. ಆಟೊದಲ್ಲಿ ಕುಳಿತ ಮೂವರನ್ನೂ ಮಳೆ ಚೆನ್ನಾಗಿಯೇ ತೋಯಿಸಿತು. ಬಾದಾಮಿ ಹೌಸ್ ಹಿಂಭಾಗ ದಲ್ಲಿಯೇ ಸ್ವಂತ ಕಚೇರಿ ಹೊಂದಿರುವ ಗೆಳೆಯ ಶಿವ ಕುಮಾರ್ ಪೈ ವಿಹಾರ್ಗೆ ಕರೆದುಕೊಂಡು ಹೋಗಿ ಬಿಸಿ ಬಿಸಿ ಕಾಫಿ ಕೊಡಿಸಿದರು. ನಾವೆಲ್ಲ ಕಾಫಿ ಹೀರುತ್ತಿದ್ದರೆ ನನ್ನ ಮಗಳು ಬಿಸಿಯಾದ ಕಾಫಿ ಬಟ್ಟಲನ್ನು ತೊಯ್ದ ಬಟ್ಟೆಯ ಮೇಲಿಟ್ಟು ಇಸ್ತ್ರಿ ಮಾಡಿಕೊಳ್ಳುತ್ತಿದ್ದಳು! ಮೂರು ವರ್ಷದ ಹಿಂದೆ ಬಾದಾಮಿ ಹೌಸ್ನ ಪುಷ್ಪ ಥಿಯೇಟರ್ನಲ್ಲಿ ಸಬ್ಸಿಡಿ ನಿರ್ಧರಿಸಲು ಇಪ್ಪತ್ತು ದಿನದಲ್ಲಿ ಅರವತ್ತ ಮೂರು ಕನ್ನಡ ಸಿನೆಮಾಗಳನ್ನು ನೋಡಿದ್ದು ನೆನಪಾಯ್ತು.

ಬಸ್ಸಿಗಾಗಿ ಕಾಯುತ್ತಾ ಲಾಂಜಿನಲ್ಲಿ ಕುಳಿತಿದ್ದಾಗ ಅಲ್ಲಿನ ಪ್ರಧಾನ ವ್ಯವಸ್ಥಾಪಕರಾದ ಪ್ರಭುದೇವ್ ಬಂದು ಪರಿಚಯ ಮಾಡಿಕೊಂಡು ಅಲ್ಲಿಯೇ ಅವರ ಕಚೇರಿಗೆ ಕರೆದುಕೊಂಡು ಹೋದರು. ಅವರು ನನ್ನ ಕಿರಿಯ ಮಿತ್ರ ರವಿಕಾಂತೇಗೌಡನ ಸಹಪಾಠಿ. ಅವರೂ ರವಿಯಂತೆಯೇ ಇಂಜಿನಿಯರಿಂಗ್ ಓದಿ ಕನರ್ಾಟಕ ಸಕರ್ಾರದ ಆಡಳಿತ ಸೇವೆಗೆ ಬಂದವರು. ಉತ್ಸಾಹಿ ತರುಣ ಅಕಾರಿ. ಈಚಿನ ದಿನಗಳಲ್ಲಿ ಇಂಜಿನಿಯರು, ಡಾಕ್ಟರ್ಗಳನ್ನು ಈ ಐ.ಎ.ಎಸ್ ಮತ್ತು ಕೆ.ಎ.ಎಸ್ ಎಂಬ ಆಡಳಿತಾತ್ಮಕ ಪರೀಕ್ಷೆಗಳು ದೊಡ್ಡ ಮಟ್ಟದಲ್ಲಿ ಸೆಳೆಯುತ್ತಿರುವುದು ಸೋಜಿಗದ ಸಂಗತಿ. ಆದರೂ ಇದೊಂದು ಆರೋಗ್ಯಕರ ಬೆಳವಣಿಗೆ. ಅಪ್ಪಾ ನೀನೇನು ನಮ್ಮ ಜತೆ ಬರೊಲ್ವ ಬಸ್ಸು ಇನ್ನೇನು ಹೊರಡ್ತಾ ಇದೆ” ಎಂದು ಮಗಳು ಮೊಬೈಲ್ನಲ್ಲಿ ರೋಪ್ ಹಾಕುತ್ತಿರುವಾ ಗಲೇ ಟೂರ್ ಮ್ಯಾನೇಜರ್ ಬಂದು “ಸರ್ ಬಸ್ ರೆಡಿ” ಎಂದರು.

ಪ್ರಭುದೇವ್ಗೆ ಬೈ ಹೇಳಿ ಬಂದು ಬಸ್ ಹತ್ತಿ ದಾಗ ಆಶ್ಚರ್ಯವಾಯ್ತು. ನಮ್ಮ ವಯೋಮಾನದ ಆಸುಪಾಸಿನ ಮೂರು-ನಾಲ್ಕು ಜೋಡಿಗಳನ್ನು ಬಿಟ್ಟರೆ ಉಳಿದವೆಲ್ಲ ಮಧುಚಂದ್ರ ಜೋಡಿಗಳೇ. ಕೈಯಲ್ಲಿ ಹಸಿರು ಬಳೆ, ಕತ್ತಲ್ಲಿ ಅರಿಸಿನ ದಾರ. ಮದುವೆ ಸುಗ್ಗಿಯ ಪರಿಣಾಮ. ಬೇರೆ ಸಮಯ ದಲ್ಲಿ ತೀರಾ ಹೀಗೆ ಇರೋಲ್ಲವಂತೆ! ಆರಂಭದಲ್ಲಿ ಎಲ್ಲವೂ ಜೋಡಿಗಳೇ, ನಾನೊಬ್ಬಳೇ ಒಂಟಿ ಆಗಿ ಬಿಟ್ಟೆ ಎಂದ ಮಗಳು ಮರುಕ್ಷಣದಲ್ಲಿಯೇ “ಹೇಗೂ ಮೂವರಿಗೆ ನಾಲ್ಕು ಸೀಟ್ ಇದೆ. ನೀವಿಬ್ಬರೂ ಬೇರೆ ಬೇರೆ ಕುಳಿತುಕೊಳ್ಳಿ. ನಾನು ಸ್ವಲ್ಪ ಹೊತ್ತು ಅಪ್ಪನ ಹತ್ತಿರ, ಸ್ವಲ್ಪ ಹೊತ್ತು ಅಮ್ಮನ ಹತ್ತಿರ” ಎಂದು ಥೇಟ್ ಪುಟ್ಟಿಯಂತೆ ಹೇಳಿದಳು ಹದಿನೆಂಟರ ಮಾಧುರ್ಯ!

ಗೆಳೆಯರು ಹೇಳುತ್ತಿದ್ದರು: “ತಮಿಳುನಾಡಿನ ರಸ್ತೆಗಳು ಈಗ ಅದ್ಭುತವಾಗಿವೆ. ಹೊಸೂರಿನಿಂದ ಚೆನ್ನೈಗೆ ನಾಲ್ಕು ಗಂಟೆ ಡ್ರೈವ್. ಅಷ್ಟೇ ಅಲ್ಲ ತಮಿಳು ನಾಡಿನ interior ಎಲ್ಲಿ ಹೋದರೂ ವಿಶಾಲವಾದ ರಸ್ತೆಗಳು…” ಮುಂತಾಗಿ ತಮಿಳುನಾಡಿನ ರಸ್ತೆಗಳನ್ನ ಹಾಡಿ ಹೊಗಳುವುದನ್ನ ಕೇಳಿದ್ದೆ. ನಮ್ಮ ಪ್ರಯಾಣ ಕೂಡ ಬೆಳಕು ಹರಿಯುವವರೆಗೆ ತಮಿಳುನಾಡಿ ನಲ್ಲಿಯೇ ಎಂದು ಕೇಳಿದ್ದರಿಂದ ರಸ್ತೆಗಳನ್ನೇ ಗಮನಿ ಸುತ್ತಿದ್ದೆ. ಹತ್ತು ವರ್ಷಗಳಿಂದ ಕೇಂದ್ರ ಮಂತ್ರಿ ಮಂಡಳದಲ್ಲಿ, ಸಿಂಹಪಾಲು

ಪಡೆಯುತ್ತಿರುವ ತಮಿಳುನಾಡು ನಿಜಕ್ಕೂ ಅದರ ಲಾಭವನ್ನು ಚೆನ್ನಾಗಿಯೇ ಪಡೆದುಕೊಂಡಿದೆ.ಬೆಳಗಿನ ಜಾವ ಪೊಲ್ಲಾಚಿ ಎಂಬ ಊರಿನಲ್ಲಿ ನಿತ್ಯಕರ್ಮಗಳನ್ನ ಪೂರೈಸಿಕೊಂಡು ಹೊಟೇಲೊಂದ ರಲ್ಲಿ ದೋಸೆ, ಇಡ್ಲಿ ತಿನ್ನಲು ಹೋದಾಗ ರಾತ್ರಿಯ ಅಪರಿಚಿತರೆಲ್ಲಪರಿಚಿತರಾದರು. ಮುನ್ನಾರ್ನ ಕಡೆ ಬಸ್ಸು ಹೊರಟಿತು.

ಮುಂದುವರೆಯುವುದು .

‍ಲೇಖಕರು avadhi

February 11, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: