ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.
ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ ಪುರಾಣ ಹಾಸ್ಯ ಲೇಖನ ಸಂಕಲನ… ಮಕ್ಕಳಿಗಾಗಿ ಅಜ್ಜನ ಹಲ್ಲುಸೆಟ್ಟು (ಮಕ್ಕಳ ಕವಿತೆಗಳ ಸಂಕಲನ) ಮಾಸಂಗಿ (ಮಕ್ಕಳು ಬರೆದ ಕತೆಗಳ ಸಂಪಾದನೆ) ಮಕ್ಕಳೇನು ಸಣ್ಣವರಲ್ಲ (ಮಕ್ಕಳ ಕತಾ ಸಂಕಲನ) ಕೃತಿಗಳು…
ಬಹತೇಕ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಲಲಿತ ಪ್ರಬಂಧ, ಹಾಸ್ಯ ಲೇಖನ, ಮಕ್ಕಳ ಕತೆ, ಕವಿತೆ, ನಾಟಕಗಳು ಪ್ರಕಟವಾಗಿವೆ. ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಹಲವಾರು ಮಕ್ಕಳ ಕಮ್ಮಟ, ರಂಗಶಿಬಿರ, ಸಾಹಿತ್ಯಿಕ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ…
18
“ಫ್ರೆಂಡು ಎಲ್ಲಿದ್ದೀಯಾ?”
“ನಾನು ಇಲ್ಲೇ ಇದ್ದೀನಿ”
“ನಾನು ಎಷ್ಟು ಹುಡುಕಾಡಿದೆ…ನೀನು ಎಷ್ಟು ಗದ್ದಲಕ್ಕೆ ಕೆಡುವಿದ್ದಿಯಾ ಗೊತ್ತಾ?”
“ನಾನು ಎಲ್ಲಿ ಕೆಡಿವಿದೆ..?ನಾನು ಇಲ್ಲೇ ಇದ್ದೀನಿ”
“ಸುಳ್ಳು ಹೇಳುಬೇಡ…ನನ್ನ ಸೊಳ್ಳೆ ಮಾಡಿ..ಎಲ್ಲೆಲ್ಲೊ ಕರುಕೊಂಡು ಹೋಗಿ..ನಿನ್ನ ಲೋಕಕ್ಕ..ಅಲ್ಲಿಂದ ಏಲಿಯನ್ಸ್ ಕಿಡ್ನಾö್ಯಪ್ ಮಾಡಿ ಅವರ ಲೋಕಕ್ಕ ಹೋಗಿ..ಮತ್ತೆ ವಾಪಸ್ಸು ಬಂದು…ಮತ್ತೆ ಮನುಷ್ಯನಾಗಬೇಕಂದ್ರ ಮಂತ್ರ ಮರತು ಹೋಗಿ..ಏನೆಲ್ಲಾ ಆಯ್ತು.”
“ಸಮು..ಏನು ಹೇಳತಿದ್ದಿಯೋ ಒಂದು ಅರ್ಥ ಆಗತಾ ಇಲ್ಲ”
“ಅಲ್ಲ..ನಾನು ಸೊಳ್ಳೆ ಆಗಿದ್ದು ಸುಳ್ಳಾ…”
“ನನಗ ಗೊತ್ತಿಲ್ಲಪಾ?”
“ತಡಿ..ಅಪ್ಪಾ..ಅಮ್ಮಾ.ಅಶು..ರಾಜು,ಅತ್ತಿ ಎಲ್ಲಾರನ್ನು ಕೇಳುತೀನಿ” ಎಂದು ಹೊರಗೆ ಹೋಗಿ ನೋಡಿದೆ…ಯಾರು ಇರಲಿಲ್ಲ…ಬಾಗಿಲು ತೆಗೆದು ಹೊರಗೆ ನೋಡಿದೆ..ಏನೂ ಇರಲಿಲ್ಲ..ಸ್ವಲ್ಪ ದೂರ ಹೋಗಿ ಬಾಬು ಸೇಟನ ಅಂಗಡಿ ನೋಡಿದೆ….ಹೊಸದಾಗಿ ದುರಸ್ತಿ ಮಾಡುತ್ತಿದ್ದ..ಮರಳಿ ಬಂದೆ..ಸೊಳ್ಳೆಯಾಗಿ ಹಾರಿ ಹೋಗಿದ್ದ ವೆಂಟಿಲೇಟರ್ನ ಕಿಂಡಿ ನೋಡಿದೆ..ಇತ್ತು.. ಎಲ್ಲವೂ ಅಯೋಮಯ.. ಸೊಳ್ಳೆ ಆಗಿ ಹೋಗಿ ಮಾಡಿದ ಅನಾಹುತ, ಆದ ಅನುಭವ ಎಲ್ಲಾ ಹಸಿರಾಗಿದೆ….ಮರಳಿ ಬಂದೆ ಟಿ.ವಿ ಹಚ್ಚಿದೆ…ಅಂತಹ ಯಾವ ಸುದ್ದಿಯೂ ಇರಲಿಲ್ಲ…ತಿರುಗಿ ಸೊಳ್ಳೆ ಹತ್ತಿರ ಬಂದೆ…
“ಈಗಲಾದರೂ ಅರ್ಥ ಆಯ್ತಾ..ಸೂಸು ಮಾಡಲಿಕ್ಕೆ ಹೋಗಿ ಇಸ್ಸಿ ಮಾಡಿ ಅಲ್ಲೆ ನಿದ್ದಿ ಹೋಗಿದ್ದೇನೊ..ಏನೇನೊ ಮಾತಾಡತಿದ್ದಿಯ?”
“ಇಲ್ಲ..ಏನೋ ನಡೆದಿದೆ..ನಡೆತಿದೆ..ಸತ್ಯ ಹೇಳು..ಎಲ್ಲಾ ನಿಂದೆ..”
“ಓ.ಕೆ ಸಮು… ಬರತಿನಿ….ನಿನ್ನ ಗೆಳೆತನ ನನಗ ಖುಷಿಕೊಟ್ಟಿತು”
“ಹೇಳದೆ ಹೋಗತಿಯಾ?”
“ ಏನೊ ಮುಂದಿನ ಜನರೇಶನ್ ಆದರೂ ಬದಲಾಗಲಿ, ಪ್ರಕೃತಿನ ಪ್ರೀತಿಸಲಿ ಅಂತ ತಿಳಿಸಬೇಕು ಅನಿಸ್ತು..ತಿಳಿಸಿದೆ.. ನಮ್ಮವರೆಲ್ಲರೂ ಬೇಡ ಅಂದರೂ….ಹಿರಿಯರು ಮಾಡಿದ ತಪ್ಪಿಗೆ ಮುಂದಿನ ಪೀಳಿಗೆಗೆ ಯಾಕ ತೊಂದರ ಅನುಭವಿಸಬೇಕು ಅಂತ ಹೇಳಿದೆ. ಇನ್ಮುಂದ ನಿಮ್ಮ ಕೆಲಸ…..ಇರಲಿ ನನ್ನ ಸಮಯ ಬಂತು ಬರತೀನಿ…” ಎಂದು ಹಾರಲು ಸಿದ್ಧವಾಯಿತು.
“ಅದೆಲ್ಲಾ ಬಿಡು..ನಿಜ ಹೇಳು ನಾನು ಸೊಳ್ಳೆ ಆಗಿದ್ದು..ಅಷ್ಟೆಲ್ಲಾ ಸುತ್ತಾಡಿದ್ದು..ನಿಜಾನಾ”
ನಗುತ್ತಾ “ಯಾವುದು ಹೌದೊ ಅದು ಅಲ್ಲ..ಯಾವುದು ಅಲ್ಲವೊ ಅದು ಹೌದು” ಎಂದಿAತು
“ನಿಜಾನಾ?”
“ನಿಜ ಅಂದ್ರೆ ನಿಜ..ಸುಳ್ಳು ಅಂದ್ರ ಸುಳ್ಳು..”
“ದಯವಿಟ್ಟು..ಕಾಡಬೇಡ…ಏನೋ ನಡೆದಿದೆ..ಏನೋ ನಡೆದಿದೆ..ನೀನು ಏಣೊ ಮಾಡಿದೆ..ಎಲ್ಲೆಲ್ಲೊ ನನ್ನ ಕರೆದೊಯ್ದಿರುವೆ….”
“ಹೂಂ..ಹೂA…ಜಗವಿದು ನಾಟಕ ರಂಗ…ಬಾಯ್ ಸಿ ಯೂ..ಟೈಮ್ ಬಂದಾಯಿತು” ಎಂದು ಆಪ್ತಮಿತ್ರ ಫಿಲ್ಮನಲ್ಲಿ ವಿಷ್ಣುವರ್ಧನ ಹೇಳುವಂಗ ಹೇಳಿ, ಕುಂಟುತ್ತಿದ್ದ ಅದಕ್ಕೆ ಯಾವ ಶಕ್ತಿ ಬಂತೊ ಧೀಡಿರನೆ ಹಾರಿ ಹೊಯಿತು. “ಫ್ರೆಂಡು..ನಿಲ್ಲು..ನಿಲ್ಲು….ಸತ್ಯ ಹೇಳು” ಎಂದು ನಾನು ಅದರ ಹಿಂದೆ ನಡೆದೆ.
ಅದು ಮುಂದೆ ಮುಂದೆ ನಾನು ಹಿಂದೆ ಹಿಂದೆ
“ಫ್ರೆಂಡು ಬಿಟ್ಟು ಹೋಗಬೇಡ ಇರು..ನಿಲ್ಲು” ಅಂದರೂ ಕೇಳದೆ ಮನೆಯ ಸಮೀಪದಲ್ಲಿ ನಿಂತಿದ್ದ ನೀರಿನ ಹೊಂಡದಲ್ಲಿ ಹೋಯಿತು….ಅದು ನೀರಿನ ಮೇಲೆ ನಿಲ್ಲುವುದಕ್ಕೂ ಮೀನು ಬಂದು ಪಕ್ಕನೆ ಹಿಡಿಯೋದಕ್ಕೂ ಸರಿ ಹೋಯ್ತು…. “ಅಯ್ಯೊ… ಫ್ರೆಂಡು” ಎಂದು ಬಹಳ ಸಂಕಟಪಟ್ಟೆ. ಅದುವರೆಗೂ ಆಪ್ತ ಮಿತ್ರನಂತೆ ಏನೆಲ್ಲ ಮಾತಾಡಿ, ಹೊಸ ವಿಷಯ ಹೇಳಿ,ನನ್ನನ್ನು ಹೊಸ ಲೋಕಕ್ಕೆ ಕೊಂಡೊಯ್ದು ಸಹಾಯ ಮಾಡಿ ಖುಷಿಕೊಟ್ಟಿದ್ದ ಅದರ ಅಗಲಿಕೆ ಬಹಳ ಮನಸ್ಸಿಗೆ ಕಾಡ ಹತ್ತಿತು… ಅಲ್ಲಿ ನಿಲ್ಲಲಾಗದೆ ಮನೆಗೆ ಬಂದೆ.
ಏನು ಇದು…ಇಷ್ಟು ದಿನ ಇದ್ದುದು ನನ್ನೊಂದಿಗೆ ಮಾತಾಡಿದ್ದು ಸುಳ್ಳಾ? ಇಲ್ಲ ಗೆಳೆಯರು ಗುರುಗಳು ನಾನು ಬದಲಾಗಿದ್ದು ಸುಳ್ಳಾ….? ನಾನು ಸೊಳ್ಳೆಯಾಗಿದ್ದು ಸುಳ್ಳಾ? ಅನೇಕ ಸಂಶಯಗಳು ಮನದಲ್ಲಿ ಕೊರೆಯುತ್ತಾ ಹೊರಟವು….ಮನದಲ್ಲಿಟ್ಟುಕೊಂಡು ಒದ್ದಾಡುವುದಕ್ಕಿಂತ ಮನೆಯಲ್ಲಿ ಹೇಳಿದೆ..ಗೆಳೆಯರಿಗೆ ಹೇಳಿದೆ, ಗುರುಗಳಿಗೆ ಹೇಳಿದೆ ರಾಜುಗೆ ಹೇಳಿದೆ….ಕೊನೆಗೆ ನಮ್ಮ ಸಿ.ಐ.ಡಿ ಮೈಂಡು ಇರೊ ಅಶುಗೂ ಹೇಳಿದೆ. ಎಲ್ಲರೂ ಸೊಳ್ಳೆ ಬಗ್ಗೆ ಹೇಳಿದ ವಿಚಾರ ಒಪ್ಪಿದರಾದರೂ..ಸೊಳ್ಳೆ ಮಾತಾಡಿರುವ, ನಾನು ಸೊಳ್ಳೆಯಾಗಿರುವ ಬಗ್ಗೆ ಯಾರು ಒಪ್ಪಲಿಲ್ಲ……ಎಲ್ಲೊ ಕನಸು ಕಂಡಿರಬೇಕು ಅಂದರೂ ನಾನು ಒಪ್ಪಲು ತಯಾರಿಲ್ಲ…..
ನಿಂತ ನೀರಿನಲ್ಲಿ…ತೇಲಾಡುತ್ತಿರುವ ಸೊಳ್ಳೆಗಳನ್ನು ಈಗಲೂ ಮಾತಾಡಿಸುತ್ತಿರುವೆ..ಅಂತಹ ಮತ್ತೊಬ್ಬ ಗೆಳೆಯ ಸಿಕ್ಕಾನೂ ಎಂದು…ಸಿಕ್ಕುತ್ತಿಲ್ಲ..ನನ್ನ ಮಾತನ್ನು ಯಾರು ನಂಬುತ್ತಿಲ್ಲ….ಪ್ರತಿ ಸೊಳ್ಳೆ ಜೊತೆ ಮಾತಾಡಿಸುತ್ತಿರುವೆ…ಕಡಿಯಲು ಬನ್ನಿರಿ ಎಂದರೂ ನನ್ನದು ರಕ್ತ ‘ಓ’ ಪಾಸೀಟೀವ್ ಇರೊ ಕಾರಣಕ್ಕೆ ಬಂದರೂ ಕೂತರೂ ಏನೂ ಮಾಡುತ್ತಿಲ್ಲ. ಏನು ಮಾಡಲಿ…..ಪ್ಲೀಜ್ ತಮಗೆ ಅಂತ ಸೊಳ್ಳೆ ಸಿಕ್ಕರೆ…ದಯವಿಟ್ಟು…ನನಗೂ ತಿಳಿಸಿ..ಪ್ಲೀಜ್ ಪ್ಲೀಜ್……
0 ಪ್ರತಿಕ್ರಿಯೆಗಳು