ಗಾಣಧಾಳು ಶ್ರೀಕಂಠ ಆತಂಕ: ಹಳ್ಳಿ ಮಾರಾಟವಾಗಿದೆ!

ಸಾಹಿತ್ಯ ಸಮ್ಮೇಳನದಲ್ಲಿ ‘ದೇಸಿ ಸಂಸ್ಕೃತಿ – ತವಕ ತಲ್ಲಣ’ ಗೋಷ್ಠಿ ನಡೆಯಿತುಹಿರಿಯ ಪತ್ರಕರ್ತ ಗಾಣಧಾಳು ಶ್ರೀಕಂಠ ಮಂಡಿಸಿದ್ದು ‘ನಗರದತ್ತ ಗ್ರಾಮೀಣರ ಚಿತ್ತ’ ಎಂಬ ವಿಷಯ. ಸಮಯದ ಅಭಾವ ಹಾಗೂ ಪುನರಾವರ್ತಿತ ಮಾಹಿತಿಗಳಿಂದಾಗಿ ಪ್ರಬಂಧ ಮಂಡನೆ ಅಪೂರ್ಣವಾಯಿತು.

ಆದ್ದರಿಂದ ಆ ಪ್ರಬಂಧದ ಪೂರ್ಣ ಪಾಠ ಇಲ್ಲಿದೆ..

ಹಳ್ಳಿ ಮಾರಾಟವಾಗಿದೆ !

ಕೆಲವು ತಿಂಗಳುಗಳ ಹಿಂದೆ ಗೆಳೆಯ ಪತ್ರಕರ್ತ ಶಿವಾನಂದ ಕಳವೆ ಹೀಗೊಂದು ಸುದ್ದಿ ಹೇಳಿದರು. ಅಚ್ಚರಿಯಾಯ್ತು. ಜಮೀನು, ಮನೆ ಮಾರಾಟವಾಗಿದ್ದನ್ನು ಕೇಳಿದ್ದೆ. ಊರಿಗೇ ಊರೇ ವ್ಯಾಪಾರವಾಯ್ತು ಅಂದಾಗ, ಇದು ಎಂಥಾ ದುರಂತ ಎನ್ನಿಸಿತು.

ಚಿತ್ರ: ವೇದಲವೇಣಿ

ಹಾಗೆ ಮಾರಾಟವಾದ ಊರಿನ ಹೆಸರು ಮೇಗನಿ. ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿ. ಎಂಟು ಮನೆಗಳ ಗ್ರಾಮ. ಕೊಲ್ಲೂರು ಸಮೀಪದ ಗುಡ್ಡದ ಮೇಲಿರುವ ಈ ಊರು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಸಂಚಾರ, ವಿದ್ಯುತ್.. ಎಲ್ಲವೂ ಅವ್ಯವಸ್ಥೆ. ಹಾಗಾಗಿ ಇಲ್ಲಿನ ಮಕ್ಕಳೆಲ್ಲ ದೂರದ ಊರಿನಲ್ಲಿ ಅಕ್ಷರ ಕಲಿಯುತ್ತಿದ್ದಾರೆ. ಈ ಊರಿನ ಗಂಡು ಮಕ್ಕಳಿಗೆ ಹೆಣ್ಣು ಕೊಡುವುದಿಲ್ಲ. ಇಲ್ಲಿನ ಹೆಣ್ಣು ಮಕ್ಕಳನ್ನು ಯಾರೂ ಮದುವೆಯಾಗುವುದಿಲ್ಲ. ಇಂಥ ತಾಪತ್ರಯ ಬೇಡ ಅಂತ ಊರಿಗೆ ಊರೇ ಮಾರಿದರು ಹಳ್ಳಿಗರು. ಹೀಗೆ ಮಾರಾಟ ಮಾಡಿ ಹಣ ಪಡೆದವರು ಅದೇ ಊರಿನಲ್ಲಿರುವ ತಮ್ಮದೇ ಜಮೀನಿನಲ್ಲೇ ಕೂಲಿ ಕೆಲಸಕ್ಕೆ ದುಡಿಯುತ್ತಿದ್ದಾರೆ, ಆ ಜಮೀನಿನ ಮಾಲೀಕರು ಮಾತ್ರ ಬದಲಾಗಿದ್ದಾರೆ !

****

ಹಳ್ಳಿ ಮಾರಾಟದ ಈ ಕಥೆ – ನಮ್ಮ ಗ್ರಾಮೀಣ ಭಾರತದಲ್ಲಿನ ಹಳ್ಳಿಗಳ ಪರಿಸ್ಥಿತಿಯ ಒಂದು ತುಣಕು. ಇಂಥ ಅದೆಷ್ಟೋ ಸಮಸ್ಯೆಗಳ ಸಾಲಿನಿಂದಾಗಿ ಸಾಕಷ್ಟು ಹಳ್ಳಿಗಳು ಇಂದು ಬರಿದಾಗುತ್ತಿವೆ. ಹವಾಮಾನ ವೈಪರೀತ್ಯ, ಬೆಳೆ ನಷ್ಟ, ವ್ಯಕ್ತಿ ಗೌರವದ ಕೊರತೆ.. ಹೀಗೆ ಹಲವು ಕಾರಣಗಳಿಂದ ಜಮೀನು ಉಳ್ಳವರು ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿದ್ದಾರೆ. ತುಂಬು ಕುಟುಂಬದಂತಿದ್ದ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ.

೪೦ ವರ್ಷದ ನಂತರದವರು ಮಾತ್ರ ಹಳ್ಳಿಗಳ ತೋಟ, ಹೊಲಗಳಲ್ಲಿ ದುಡಿಯುತ್ತಿದ್ದಾರೆ. ಹಳ್ಳಿಗಳಲ್ಲಿ ಹುಡುಕಿದರೂ ೨೫-೩೫ರ ಹರೆಯದ ಯುವಕರು ದೊರಯುವುದು ಕಷ್ಟ. ಇದೇ ಪರಿಸ್ಥಿತಿಯಲ್ಲಿ ೨೦ ವರ್ಷದ ಬಳಿಕ ನಮ್ಮ ಹಳ್ಳಿ ಭವಿಷ್ಯ ಏನಾಗುತ್ತದೆ? ಎಂದು ಚರ್ಚೆ ಆರಂಭಿಸಿದರೆ, ಎರಡು ವರ್ಷಕ್ಕೆ ಏನಾಗುತ್ತದೆ ಎಂಬುದೇ ತಿಳಿದಿಲ್ಲ ಎಂಬ ದಿಗಿಲು ಎದೆ ನಡುಗಿಸುತ್ತಿದೆ.

ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಬರುತ್ತಿರುವವರದ್ದು ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ. ಮಲೆನಾಡು, ಘಟ್ಟ ಪ್ರದೇಶ, ಕರಾವಳಿಯಲ್ಲಿ ಕೂಲಿಕಾರ್ಮಿಕರ ಸಮಸ್ಯೆ. ಉತ್ತರ ಕರ್ನಾಟಕ ಹಾಗೂ ಬಯಲು ಸೀಮೆಯಲ್ಲಿ ಮಳೆ ಕೊರತೆ, ಉತ್ಪಾದನೆ ಕ್ಷೀಣ. ಈ ಭಾಗಗಳಲ್ಲಿರುವ ಸಾಮಾನ್ಯ ಸಮಸ್ಯೆಗಳೆಂದರೆ ಹವಾಮಾನ ವೈಪರೀತ್ಯ, ಬೆಳೆಗೆ ಸಿಗದ ವ್ಶೆಜ್ಞಾನಿಕ ಬೆಲೆ, ರೈತರ ಮಕ್ಕಳಿಗೆ ಹೆಣ್ಣು ಕೊಡುವುದಿಲ್ಲ, ಕೃಷಿ ಕುಟುಂಬಕ್ಕೆ ದೊರಕದ ವ್ಯಕ್ತಿ ಗೌರವ.

ಇತ್ತೀಚೆಗಿನ ವರ್ಷಗಳಲ್ಲಿ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್, ವಿಶೇಷ ಆರ್ಥಿಕ ವಲಯ (ಎಸ್‌ಇಎಜ್)ದಿಂದಾಗಿ ಭೂಮಿ ಸ್ವಾಧೀನ ಪ್ರಕ್ರಿಯೆಗಳಿಂದಾಗಿ ಜನರು ಅನಿವಾರ್ಯವಾಗಿ ಬೇರೆ ಕಡೆಗೆ ವಲಸೆ ಹೋಗಬೇಕಿದೆ. ಇತ್ತೀಚೆಗೆ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ನಡೆದ ಘಟನೆಗಳು ಸಂಕಟಪಡುವಂತಹವು. ಅಭಿವೃದ್ಧಿ ಹೆಸರಲ್ಲಿ ಹೀಗೆ ಹುಟ್ಟಿದ ಊರನ್ನು, ನೆಟ್ಟ ಗಿಡ-ಗಂಟೆಗಳನ್ನು, ತಲೆತಲಾಂತರದಿಂದ ಉತ್ತಿ-ಬಿತ್ತಿ-ಬೆಳೆದ ಭೂಮಿ ತಾಯಿಯನ್ನು ಬಿಟ್ಟು ಹೋಗುವುದು ಎಷ್ಟು ಕಷ್ಟ ಅಲ್ವಾ ?

ಒಂದು ಕಡೆ ಸಮಸ್ಯೆಗಳಿಂದಾಗಿ ಜನ ಹಳ್ಳಿ ತೊರೆಯುತ್ತಿದ್ದಾರೆ. ಇನ್ನೊಂದೆಡೆ ವ್ಯಕ್ತಿ ಗೌರವಕ್ಕಾಗಿ (ರೆಕಗ್ನೀಷನ್‌ಗಾಗಿ) ಪಟ್ಟಣಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಿದೆ.

ಬೆಂಗಳೂರಿನಲ್ಲಿರುವ ವರ್ಷಕ್ಕೆ ೧೨ ಲಕ್ಷ ತೆಗೆದುಕೊಳ್ಳುವ ಸಾಫ್ಟ್‌ವೇರ್ ಎಂಜಿನಿಯರ್‌ಗೆ ಮಗಳನ್ನು ಕೊಡುತ್ತಾರೆ ಹೆತ್ತಮ್ಮಂದಿರು. ಅವರ ಊರಿನ ಪಕ್ಕದಲ್ಲಿರುವ ರೈತರೊಬ್ಬರ ಮಗ ಅದರ ಒಂದೂವರೆ ಪಟ್ಟು ಹಣ ಸಂಪಾದಿಸುತ್ತಾನೆ. ಆದರೆ ಅವನಿಗೆ ಹೆಣ್ಣು ಕೊಡುವುದಿಲ್ಲ.

ಅಪ್ಪಂದಿರಿಗೆ ಮಗ ಊರಿನಲ್ಲಿ ಉಳಿಯಬೇಕೆಂಬ ಆಸೆಯಿದೆ. ತನ್ನ ಕೃಷಿ ಬದುಕನ್ನು ಉಳಿಸಿಕೊಂಡು ಹೋಗಲೆಂಬ ಹಂಬಲವಿದೆ. ಆದರೆ ತಾಯಿ, ತನ್ನ ಗಂಡ ಈ ಕೊಂಪೆಯಲ್ಲಿ ಏಗಿದ್ದು ಸಾಕು. ಮಗನಾದರೂ ಚೆನ್ನಾಗಿರಲಿ ಅಂತ ಪಟ್ಟಣದಲ್ಲೇ ನೆಲಸಲು ಪ್ರೋತ್ಸಾಹಿಸುತ್ತಾಳೆ. ಅಮ್ಮನ ಮಾತು ವೇದವಾಖ್ಯವಾಗುತ್ತದೆ. ಮಕ್ಕಳು ಊರು ತೊರೆಯಲು ಸಿದ್ಧರಾಗುತ್ತಾರೆ.

ಇವತ್ತು ಹವ್ಯಕ ಸಮುದಾಯದಲ್ಲಿ ಇಂಥದ್ದೊಂದು ಸಮಸ್ಯೆ ಎದುರಾಗಿದೆ. ಆ ಸಮುದಾಯದಲ್ಲಿ ಹೆಣ್ಣು- ಗಂಡಿನ ಅನುಪಾತದಲ್ಲಿ ತೀರಾ ವ್ಯತ್ಯಾಸವಿದೆ. ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣ. ಈ ಸಮುದಾಯದಲ್ಲಿ ಎರಡು ವರ್ಗದ ವ್ಯಕ್ತಿಗಳಿದ್ದಾರೆ. ಒಂದು ವರ್ಗದವರು ಉನ್ನತ ವ್ಯಾಸಂಗ ಮಾಡಿ ಪಟ್ಟಣ ಸೇರಿ ಕೈತುಂಬಾ ಸಂಬಳ ಪಡೆಯುತ್ತಾರೆ. ಇನ್ನೊಂದು ವರ್ಗದವರು ಸಂಬಳಕ್ಕಿಂತ ಹೆಚ್ಚಾಗಿ ಕೃಷಿಯಲ್ಲೇ ಹಣ ಗಳಿಸುತ್ತಾರೆ. ಇವರಿಬ್ಬರ ಆದಾಯದಲ್ಲಿ ವ್ಯತ್ಯಾಸವಿಲ್ಲ. ಆದರೆ ಹಳ್ಳಿಯಲ್ಲಿರುವ ವ್ಯಕ್ತಿಯನ್ನು ಅದೇ ಸಮುದಾಯದವರು ಮದುವೆಯಾಗಲು ಒಲ್ಲೆ ಎನ್ನುತ್ತಾರೆ. ರೂಪ, ವಿದ್ಯೆ, ಆದಾಯ ಎಲ್ಲವೂ ಇದ್ದರೂ ರೈತರಾಗಿದ್ದಾರೆ, ಹಳ್ಳಿಯಲ್ಲಿದ್ದಾರೆ ಎಂಬ ಕಾರಣಕ್ಕೆ ಮದುವೆಯಾಗುವುದಿಲ್ಲ. ಈ ಸಾಮಾಜಿಕ ಸಮಸ್ಯೆಯಿಂದಾಗಿ ಉತ್ತರ ಕನ್ನಡದ ಗಂಡು ಮಕ್ಕಳು ಪಟ್ಟಣದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ಯುವಕರ ವಲಸೆ ಹೆಚ್ಚಿಸಿದ ಸಾಫ್ಟ್‌ವೇರ್ ಕ್ರಾಂತಿ :

ಗ್ರಾಮೀಣ ವ್ಯವಸ್ಥೆ ಹದಗೆಡಲು ಇವತ್ತಿನ ಕೃಷಿ ಸಮಸ್ಯೆಗಳಷ್ಟೇ ಕಾರಣವಲ್ಲ. ಕಳೆದ ದಶಕಗಳಿಂದ ನಮ್ಮಲ್ಲಿ ಬದಲಾಗುತ್ತಿರುವ ಶೈಕ್ಷಣಿಕ ಪ್ರಗತಿ ಮತ್ತು ಶಿಕ್ಷಣ ವ್ಯವಸ್ಥೆಯೂ ಕಾರಣ. ನಮ್ಮ ರಾಜ್ಯದಲ್ಲಿ ಗ್ರಾಮೀಣ ವಲಸೆ ಗುರುತಿಸುವ ರೀತಿಯಲ್ಲಿ ಆರಂಭವಾಗಿದ್ದು ೯೦ರ ದಶಕದಲ್ಲಿ. ಖ್ಯಾತ ಸಮಾಜಶಾಸ್ತ್ರಜ್ಞ ದೀಪಾಂಕರ ಗುಪ್ತಾ ಅವರ ತಮ್ಮ ಪ್ರಬಂಧವೊಂದರಲ್ಲಿ ಉಲ್ಲೇಖಿಸಿರುವಂತೆ ಮೂರ‍್ನಾಲ್ಕು ದಶಕಗಳ ಹಿಂದೆ ಉತ್ತರ ಭಾರತದಲ್ಲಿ ಗ್ರಾಮೀಣ ವಲಸೆ ಆರಂಭವಾಗಿತ್ತು. ಕೃಷಿ ವಲಯದಲ್ಲಿ ಉಂಟಾಗುತ್ತಿದ್ದ ಏರುಪೇರು, ಜೀವನ ನಡೆಸಲು ದುಸ್ತರ ಎಂದು ಉತ್ತರ ಭಾರತದ ಹಳ್ಳಿಗಳಲ್ಲಿನ ಕೃಷಿಕರು ಮಹಾನಗರಗಳಿಗೆ ವಲಸೆ ಬರಲು ಆರಂಭಿಸಿದರು.

ಕೃಷಿ ಸಮಸ್ಯೆ, ಮೂಲಸೌಲಭ್ಯಗಳ ಕೊರತೆಯಿಂದಾಗಿ ರಾಜ್ಯದಲ್ಲಿ ವಲಸೆ ಆರಂಭವಾಯಿತು. ಇದು ಮೇಲ್ನೋಟಕ್ಕೆ ಕಾಣುವ ಸತ್ಯ. ಆದರೆ ವಲಸೆಯ ಮೂಲ ಇರುವುದು ಶೈಕ್ಷಣಿಕ ಪ್ರಗತಿಯಲ್ಲಿ ಎನ್ನುವುದು ಗಮನಿಸಬೇಕಾದ ಅಂಶ.

ಶೈಕ್ಷಣಿಕ ಪ್ರಗತಿ ಏರುತ್ತಿರುವಂತೆ ಗ್ರಾಮೀಣ ಪ್ರದೇಶದಿಂದ ಕೃಷಿಯೇತರ ಕ್ಷೇತ್ರಗಳೆಡೆಗೆ ನಗರ ವಲಸೆ ಹೆಚ್ಚಿದೆ. ಉನ್ನತ ಶಿಕ್ಷಣ ಕಲಿತವರು ಹಳ್ಳಿಗಳಿಗೆ ಹಿಂದಿರುಗುತ್ತಿಲ್ಲ. ಒಂದೂವರೆ ದಶಕದ ಹಿಂದೆ ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರ ಪ್ರವೇಶಿಸಿದ ಸಾಫ್ಟ್‌ವೇರ್ ಕ್ರಾಂತಿ ಗ್ರಾಮೀಣದಲ್ಲಿನ ಬುದ್ಧಿವಂತ ಯುವಕರನ್ನು ಅಯಸ್ಕಾಂತದಂತೆ ಸೆಳೆಯಿತು. ಪಿಯುಸಿ ಪಾಸಾದವರು, ಡಿಗ್ರಿ ಫೇಲಾದವರು, ಮಾತು ಬಲ್ಲವರು, ಅಂದವಾಗಿರುವವರು ಬಹುರಾಷ್ಟ್ರೀಯ ಕಂಪೆನಿಗಳ ಹಿಂದೆ ಓಡಿದ್ದಾರೆ. ತಿಂಗಳ ಸಂಬಳ ನಾಲ್ಕಂಕೆ ದಾಟಿದೆ. ಎಕರೆ ಕೃಷಿಯ ಆದಾಯವನ್ನು ಕಂಪ್ಯೂಟರ್ ಎಂಜಿನಿಯರ್ ತನ್ನ ಒಂದು ತಿಂಗಳ ಸಂಬಳಕ್ಕೆ ಹೋಲಿಸಿ ನೋಡಲಾರಂಭಿಸಿದ್ದಾರೆ. ಎಂಜಿನಿಯರ್ ಅಪ್ಪ ಕೂಡ, ತನ್ನ ವಾರ್ಷಿಕ ಕೃಷಿ ಆದಾಯವನ್ನು ಮಕ್ಕಳ ಸಂಬಳಕ್ಕೆ ಹೋಲಿಸುತ್ತಾ, ಎಷ್ಟು ಕಡಿಮೆಯಾಯ್ತು ಎಂದು ಅಲ್ಲಗೆಳೆದ. ಹೀಗೆ ಕೃಷಿಯ ಒಟ್ಟೂ ಆದಾಯ, ಖರ್ಚಿನ ತುಲನೆಯಲ್ಲಿ ಬೇಸಾಯ ಬಡವಾಯಿತು. ಆ ಬಡತನ ಈಗಲೂ ಮುಂದುವರಿದಿದೆ. ಶೈಕ್ಷಣಿಕ ಕ್ರಾಂತಿ ಹಳ್ಳಿಯನ್ನು ಬರಿದಾಗಿಸುತ್ತಿದೆ.

ಇವೆಲ್ಲದರ ಹಿಂದೆ ಅಪ್ಪ ಅಮ್ಮಂದಿರ ಕಾಣಿಕೆಯೂ ಇಲ್ಲದಿಲ್ಲ. ಶಾಲೆಗೆ ಹೋಗುವ ಮಕ್ಕಳಿಗೆ ಯೂನಿಫಾರಂ ತೊಡಿಸಿ, ಟೈಕಟ್ಟಿ, ಸೊಂಟ್ಟಕ್ಕೆ ಬೆಲ್ಟ್ ಕಟ್ಟುತ್ತಾ… ನನ್ನ ಹಾಗೆ ನೀವು ಮೈ-ಕೈ ಕೊಳೆ ಮಾಡ್ಕೊಳ್ಳೋದು ಬೇಡ. ನೀನೊಬ್ಬ ದೊಡ್ಡ ಆಫೀಸರ್ ಆಗಬೇಕು. ಡಾಕ್ಟರ್ ಆಗಬೇಕು.. ಎಂಜಿನಿಯರ್ ಆಗಬೇಕು.. ಎಂದು ಮಕ್ಕಳ ತಲೆಗೆ ಪಟ್ಟಣದ ಬಣ್ಣದ ಬದುಕನ್ನು ತುಂಬಿದ್ದಾರೆ. ಆಗಿನಿಂದಲೇ ಉಣ್ಣುವ ಅನ್ನದ ಮೂಲ ಅರ್ಥವಾಗದಂತೆ ಮಕ್ಕಳನ್ನು ಬೆಳೆಸುವ ಪರಿಪಾಟ ಬೆಳೆದಿದೆ. ಕೃಷಿ ಚಟುವಟಿಕೆಗಳು, ಹಳ್ಳಿ ಸಂಸ್ಕೃತಿ ಎನ್ನುವುದು ಶಾಲೆಯ ಪಾಠಗಳಿಗಷ್ಟೇ ಸೀಮಿತವಾಗಿದೆ. ಭತ್ತ, ರಾಗಿ, ಬೇಳೆ ಕಾಳು, ಕೃಷಿ ಬದುಕನ್ನು ಪ್ರಾಯೋಗಿಕವಾಗಿ ಹೇಳುವಂತಹ ಶಿಕ್ಷಣ ಇಲ್ಲದಂತಾಗಿದೆ. ಮಣ್ಣಲ್ಲಿ ಬೇರುಬಿಡಿಸಿ ಬದುಕಿನ ದಾರಿ ತೋರಿಸಿದ ಕೃಷಿಕರಿಗಿಂತ ರಾಜಕೀಯ ಮುತ್ಸದ್ದಿಗಳ ಜೀವನ ಓದುವುದು ಪರೀಕ್ಷೆಯಾಗಿದೆ. ಇದೆಲ್ಲದರ ಜೊತೆಗೆ ಸಣ್ಣ ವಯಸ್ಸಿನಲ್ಲೇ ಊರು ಬಿಡಲು ಮಕ್ಕಳ ಜೇಬಲ್ಲಿ ಪಾಸ್‌ಪೋರ್ಟ್, ವೀಸಾ ತುರುಕಿದ್ದೇವೆ. ಇದ್ದೊಬ್ಬ ಮಗನನ್ನು ನಗರದ ನೌಕರಿಗೆ ಕಳಿಸಿ, ಈಗ ಕೃಷಿ ನಿರ್ವಹಣೆಗೆ ಜನಗಳಿಲ್ಲ ಎಂದು ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದೇವೆ. ಹಳ್ಳಿ ಖಾಲಿ ಮಾಡುತ್ತಿದ್ದೇವೆ. ಇಂಥದ್ದೊಂದು ತಳಹದಿ ಮೇಲೆ ಬೆಳೆದ ಮಕ್ಕಳು ಹಳ್ಳಿಯಲ್ಲಿರುವುದಾದರೂ ಹೇಗೆ ?

ದಿಢೀರ್ ದುಡ್ಡು ಮಾಡುವ ಕನಸು:

ಶೈಕ್ಷಣಿಕ ಪ್ರಗತಿ ಒಂದೆಡೆ ಗ್ರಾಮೀಣರನ್ನು ಪಟ್ಟಣಕ್ಕೆ ಸೆಳೆಯುತ್ತಿದ್ದರೆ, ಇನ್ನೊಂದೆಡೆ ದಿಢೀರ್ ದುಡ್ಡು ಮಾಡುವ ಪ್ರವೃತ್ತಿ ಕೂಡ ಪಟ್ಟಣದ ರುಚಿ ಹತ್ತಿಸಿದೆ. ಇಂದು ಬಿತ್ತಿ, ನಾಳೆ ಬೆಳೆದು, ನಾಡಿದ್ದು ಹಣ ಸಂಪಾದಿಸಲು ವಿವಿಧ ಬೆಳೆಗಳ ಪ್ರಯೋಗ ನಡೆಸಿದ ರೈತರಲ್ಲಿ ಕೈ ಸುಟ್ಟುಕೊಂಡವರೇ ಹೆಚ್ಚು. ಹೀಗೆ ಹಳ್ಳಿಯಲ್ಲಿ ಸೋಲು ಕಂಡವರು, ಪಟ್ಟಣದಲ್ಲಿ ಗೆಲುವು ಹುಡುಕುತ್ತಾ ಹೊರಟರು. ಬಾಡಿಗೆ ರೂಮು ಹಂಚಿಕೊಂಡು, ಶಿಫ್ಟ್‌ಗಳಲ್ಲಿ ಕೆಲಸ ಹುಡುಕಿಕೊಂಡರು. ಮೊದಲು ಒಬ್ಬ, ನಂತರ ಮತ್ತೊಬ್ಬ.. ಹೀಗೆ ಒಬ್ಬರ ಕೈ ಹಿಡಿದು ಎಳೆಯುತ್ತಾ ಹಳ್ಳಿ ಬಿಟ್ಟರು.

ಹೀಗೆ ಬದಲಾದ ಮನಸ್ಥಿತಿಯಿಂದಾಗಿ ಹಳ್ಳಿಗಳಲ್ಲಿನ ಅವಿಭಕ್ತ ಕುಟುಂಬಗಳಲ್ಲಿ ಬಿರುಕು ಉಂಟಾಯಿತು. ಹಳ್ಳಿಗಳಲ್ಲಿ ಅಪ್ಪ-ಅಮ್ಮನ ಜೊತೆಯಿದ್ದ ಮಕ್ಕಳೂ ಕೂಡ, ಪಟ್ಟಣದ ಸಹೋದರರ ದಾರಿ ಹಿಡಿಯಲು ಸಿದ್ಧರಾದರು. ಹೀಗಾಗಿ ಮನೆಗಳು ಇಬ್ಬಾಗವಾದವು. ಮನೆ ಮನೆಗಳ ನಡುವೆ ಗೋಡೆ ಎದ್ದಿತು. ಅದು ಮನಸ್ಸುಗಳ ನಡುವೆಯೂ ಗೋಡೆ ಕಟ್ಟುತ್ತಿದೆ. ಹದ ಮಳೆ ಬಿದ್ದ ಕೂಡಲೇ ಹೊಲದ ಕಡೆ ಹೆಜ್ಜೆ ಹಾಕುತ್ತಿದ್ದವರು, ಈಗ ಪಟ್ಟಣದಲ್ಲಿ ಕುಳಿತು ಮಳೆಯನ್ನು ಶಪಿಸುವ ಮಟ್ಟಕ್ಕೆ ಬದಲಾಗಿದ್ದಾರೆ.

ಜಾಗತೀಕರಣ, ಉದಾರೀಕರಣ :

ಜಾಗತಿಕರಣದ ಪ್ರಭಾವದಿಂದಾಗಿ ವಿದೇಶಿ ಕಂಪೆನಿಗಳು ನಮ್ಮ ನೆಲದಲ್ಲಿ ಗುತ್ತಿಗೆ ಕೃಷಿ ಬೀಜ ಬಿತ್ತಿದವು. ಆನಂತರದಲ್ಲಿ ಗ್ರಾಮೀಣ ಪರಿಸ್ಥಿತಿಯೇ ಬದಲಾಯಿತು. ವೆನಿಲ್ಲಾದಂತಹ ಚಿನ್ನದ ಬೆಳೆಗಳು ಅನೇಕ ಆಸೆಗಳನ್ನು ಹುಟ್ಟಿಸಿ ಕೆಲವೇ ವರ್ಷದಲ್ಲಿ ನಿರಾಸೆ ಮೂಡಿಸಿತು. ನಂತರ ಬಹುರಾಷ್ಟ್ರೀಯ ಕಂಪೆನಿಗಳು ಶುಂಠಿ ಹಿಡಿದುಕೊಂಡು ಕೃಷಿ ಜಮೀನನ್ನು ಗುತ್ತಿಗೆ ಪಡೆಯಲು ಮಲೆನಾಡಿನ ಅಂಗಳಕ್ಕೆ ಜಿಗಿದವು. ಕೂಲಿಕಾರ್ಮಿಕರ ಕೊರತೆಯಿಂದ ಸೋತಿದ್ದ ರೈತರು, ಕಂಪೆನಿಗಳ ಜೊತೆ ಶುಂಠಿ ಬೆಳೆಯಲು ಒಪ್ಪಿಕೊಂಡವು. ಅಧಿಕ ಇಳುವರಿ, ರೋಗ ನಿಯಂತ್ರಣಕ್ಕಾಗಿ ಕಂಪೆನಿಗಳು ವರ್ಷಗಟ್ಟಲೆ ಜಮೀನಿಗೆ ವಿಷ ಸುರಿದವು. ಬಂದಿದ್ದೆಲ್ಲವನ್ನು ಬಾಚಿಕೊಂಡು ಮಣ್ಣಿನ ಫಲವತ್ತತೆ ಬರೀದು ಮಾಡಿದವು. ಮುಂದೊಂದು ದಿನ ಜಮೀನಿನಲ್ಲಿ ಏನೂ ಬೆಳೆಯದಾದಾಗ ಅನಿವಾರ್ಯವಾಗಿ ರೈತರು ಜಮೀನು ಮಾರಾಟ ಮಾಡುವ ಸ್ಥಿತಿ ಎದುರಾಯಿತು.

ಅನೇಕ ಸಮಸ್ಯೆಗಳ ನಡುವೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗಲಿಲ್ಲ. ಕಳೆದ ಒಂದು ದಶಕದಿಂದೀಚೆಗೆ ಬಹುರಾಷ್ಟ್ರೀಯ ಕಂಪೆನಿಗಳೆಲ್ಲ ಚಿಲ್ಲರೆ ಮಾರಾಟಕ್ಕೆ ಇಳಿದ ಮೇಲಂತೂ ದಲ್ಲಾಳಿಗಳ ಸಂಖ್ಯೆ ವಿಪರೀತವೆನ್ನುವಷ್ಟಾಯಿತು. ಬೆಳೆದ ರೈತನಿಗೆ ಅಸಲು ದೊರಕದ ರೀತಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾಯಿತು. ಇವೆಲ್ಲದರ ಪರಿಣಾಮ ಬೆಳೆಗೆ ಬೆಲೆ ಸಿಗಲಿಲ್ಲ. ಗಳಿಸಿದ ಹಣ ಮಾಡಿದ ಸಾಲಕ್ಕೆ ಸಮವಾಯಿತು. ಮತ್ತೆ ಸಾಲ ಮಾಡಿ ಕೃಷಿ ಮಾಡಬೇಕಾದ ಪರಿಸ್ಥಿತಿ ಬಂತು. ಇಂಥ ಬದುಕಿನಿಂದ ಬೇಸತ್ತ ಕೃಷಿಕರು ಜಮೀನು ಗುತ್ತಿಗೆ ಕೊಟ್ಟು ತಾವು ಬೇರೆ ಪಟ್ಟಣಗಳಲ್ಲಿ ಕೆಲಸ ಹುಡುಕಿಕೊಂಡರು. ಇತ್ತ ಜಮೀನಿನಲ್ಲಿ ಹಣ ಸಿಕ್ಕಿತು. ಇನ್ರ್ನೆಂದೆಡೆ ದುಡಿಮೆಯೂ ಆಯಿತು.

ಹೀಗೆ ದುಬಾರಿ ಒಳಸುರಿ – ದಲ್ಲಾಳಿ ಮಾರಾಟ – ಬೆಲೆ ಏರಿಳಿತ- ಬ್ಯಾಂಕ್ ಸಾಲ.. ಇಂಥ ಹೊಡೆತ ತಾಳಲಾರದೇ ಬೇಸತ್ತ ರೈತರು ಊರು ಬಿಟ್ಟು ಪಟ್ಟಣಕ್ಕೆ ವಲಸೆ ಬಂದರು. ವರ್ಷಪೂರ್ತಿ ಕೃಷಿಯಲ್ಲಿ ದುಡಿಯಲಾಗದ್ದನ್ನೂ, ಪಟ್ಟಣದಲ್ಲಿ ಕೆಲಸಕ್ಕೆ ಸೇರಿ ದುಡಿಯಲಾರಂಬಿಸಿದರು. ಕೈ ತುಂಬಾ ಹಣ ಸಂಪಾದಿಸಿದರು. ಆದರೆ ಹಳ್ಳಿಯಲ್ಲಿ ಸಮಸ್ಯೆಗಳ ನಡುವೆ ಇದ್ದ ಖುಷಿಯ ಕ್ಷಣಗಳು ಮಾತ್ರ ನಾಪತ್ತೆಯಾಗಿವೆ ಎಂಬುದು ಅವರಿಗೆ ಅನ್ನಿಸಿತು.

ಮಾಧ್ಯಮಗಳ ಭರಾಟೆ – ಯವಕರ ವಲಸೆ

ತೆಂಗಿನ ನುಸಿಪೀಡೆ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಟೊಮೇಟೊ ಬೆಳೆಯಲ್ಲಿ ಸುಖವಿಲ್ಲ. ಕಾಫಿ ಕಾಯಿಕೊರಕ ಕಾಡುತ್ತಲೇ ಇದೆ. ಇಂಥ ಕೃಷಿಯಲ್ಲಿ ಸುಖ ಕಾಣುವುದೆಂತೋ.. ಹೀಗೆ ನೂರೆಂಟು ನೆಪಗಳನ್ನು ಮುಂದಿಟ್ಟುಕೊಂಡು ಗ್ರಾಮೀಣ ಮಕ್ಕಳು ಬೆಂಗಳೂರಿಗೆ ಓಡಿದ್ದಾರೆ.

ನಗರ ವಲಸೆಗೆ ಉದ್ಯೋಗ ಹುಡುಕಾಟ ಮಾತ್ರ ಕಾರಣ ಎಂದರೆ ಅದು ನಂಬುವ ವಿಷಯವಲ್ಲ. ಏಕೆಂದರೆ, ಇಂದಿನ ಯುವಕರಿಗೆ ಬದಲಾವಣೆ ಬೇಕಿದೆ. ಹಿರಿಯರ ಅಂಕೆ-ಶಿಕ್ಷೆಯಿಂದ ದೂರ ಬದುಕುವ ಆಸೆ ಹೆಚ್ಚಿದೆ. ಬಿಸಿಲಿನಲ್ಲಿ ನೇಗಿಲು ಹಿಡಿದು ಬೆವರಿಳಿಸುವುದು ಅವರಿಗೆ ಬೇಕಿಲ್ಲ. ಮಾಧ್ಯಮಗಳಲ್ಲಿ ಬಿತ್ತರವಾಗುವ ಕನಸಿನ ಬೀಜಗಳು, ವಯಸ್ಸಿಗೆ ಮೀರಿದ ಆಸೆಯನ್ನು ಹುಟ್ಟು ಹಾಕಿವೆ. ಅದಕ್ಕೆ ಬೇಕಾದ ಖರ್ಚಿನ ಗಳಿಕೆಗೆ ಕೆಲಸದ ಅವಶ್ಯಕತೆ. ಇವೆಲ್ಲ ಕಾರಣಗಳೂ ಯುವಕರನ್ನು ಪಟ್ಟಣದೆಡೆಗೆ ಆಕರ್ಷಿಸುತ್ತವೆ.

ಪಿಯುಸಿ ಫೇಲಾದರೂ ಕಾಲ್ ಸೆಂಟರ್‌ನಲ್ಲಿ ಕೆಲಸ. ಸಾವಿರಾರು ರೂಪಾಯಿ ಸಂಬಳ. ಉಂಡು – ಮಲಗುವ ಹೊತ್ತಿನಲ್ಲಿ ದುಡಿಮೆ, ಕೆಲಸ ಮಾಡುವ ಹೊತ್ತಿನಲ್ಲಿ ನಿದ್ದೆ. ವಾರಕ್ಕೆ ಐದು ದಿನ ಕೆಲಸ. ಆರೋಗ್ಯಕ್ಕೆ ಕುತ್ತು. ಅಕಾಲ ವೃದ್ಧಾಪ್ಯ ಪ್ರಾಪ್ತಿ. ಪರಿಣಾಮ ಅತ್ತ ಹಳ್ಳಿಗೆ ಹೋಗಲಾಗದೇ ಪಟ್ಟಣದಲ್ಲಿರಲೂ ಆಗದಂತಹ ತ್ರಿಶಂಕು ಸ್ಥಿತಿ ಗ್ರಾಮೀಣ ಯುವಕರದ್ದು.

ಪರಿಹಾರಗಳಿವೆ, ತಾಳ್ಮೆ ಸಂಯಮ ಬೇಕಿದೆ ;

ಹಳ್ಳಿಗಳಿಂದ ನಗರದ ವಲಸೆ ತಪ್ಪಿಸಲು, ಹಳ್ಳಿ ಮಕ್ಕಳನ್ನು ಹಳ್ಳಿಯಲ್ಲೇ ಉಳಿಸಲು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಪುರ ಎಂಬ ಯೋಜನೆ ರೂಪಿಸಲು ಸರ್ಕಾರಕ್ಕೆ ಸಲಹೆ ನೀಡಿದ್ದರು. ಹಳ್ಳಿಯಲ್ಲಿ ಮೂಲಭೂತ ಸೌಲಭ್ಯಕಲ್ಪಿಸಿ ಸಣ್ಣಪುಟ್ಟ ಕೈಗಾರಿಕೆ ಮುಖೇನ ಉದ್ಯೋಗ ಸೃಷ್ಟಿಸುವುದು ಈ ಸರ್ಕಾರಿ ಯೋಜನೆಯ ಉದ್ದೇಶ. ಅದಕ್ಕಾಗಿ ಗ್ರಾಮಗಳನ್ನೂ ಆಯ್ಕೆ ಮಾಡಲಾಗಿತ್ತು. ಈವರೆಗೂ ಯೋಜನೆಯ ಮಾತು ಕೇಳಿದ್ದೇವೆಯೇ ವಿನಃ ಪರಿಣಾಮ ಅರಿಯಲು ಸಾಧ್ಯವಾಗಿಲ್ಲ.

ಆದರೆ ನಗರದ ಸೌಲಭ್ಯಗಳನ್ನು ಹಳ್ಳಿಗೆ ನೀಡಿದ ಕೂಡಲೇ ಸಮಸ್ಯೆ ಬಗೆಹರಿಯುವುದಿಲ್ಲ. ಯಾವತ್ತೂ ಹಳ್ಳಿಗಳಿಗೆ ನಗರ ಮಾದರಿಯಲ್ಲ. ಹಳ್ಳಿಗಳು ನಗರಗಳ ಹಾಗೆ ಕಲ್ಲು, ಇಟ್ಟಿಗೆ, ಕಾಂಕ್ರಿಟ್‌ನಿಂದ ದಶಕಗಳಲ್ಲಿ ರೂಪುಗೊಂಡಿಲ್ಲ. ಶತಮಾನಗಳ ಹಿಂದೆ ಅಲೆಮಾರಿಗಳು ನದಿ ತಟದಲ್ಲಿ ಗುಡಿಸಿಲು ಕಟ್ಟಿದರು. ಕೃಷಿ ಭೂಮಿ ಗುರುತಿಸಿದರು. ಉಳುಮೆ ಮಾಡಿ ಭೂಮಿ ಹದ ಮಾಡಿದರು. ಉತ್ತಿದರು. ಬಿತ್ತಿದರು. ಹಾಡು ಹೇಳಿ, ಹಬ್ಬ ಮಾಡಿ, ಜಾತ್ರೆ ಮಾಡಿ, ಮನ-ಮನಗಳ ನಡುವೆ ಸಂಬಂಧದ ಕೊಂಡಿ ಬೆಸೆದರು. ಇಂಥ ಸಂಸ್ಕೃತಿಯ ಬೇಲಿಯಲ್ಲಿ, ಭಾವನಾತ್ಮಕ ಸಂಬಂಧಗಳ ನಡುವೆ ಹಳ್ಳಿಗಳು ನಿರ್ಮಾಣವಾಯಿತು. ಇಂಥ ಹಳ್ಳಿಗಳಿಗೆ ನಗರ ಸೌಲಭ್ಯಗಳು ದೊರೆತರೆ, ಅಲ್ಲಿ ಮತ್ತೊಂದು ಯಾಂತ್ರಿಕ ಜಗತ್ತು ನಿರ್ಮಾಣವಾಗುತ್ತದೆ.

ಹಳ್ಳಿಗಳಲ್ಲಿ ಏನಿದೆ ? ಎಂದು ಪ್ರಶ್ನಿಸುತ್ತಲೇ ಹಳ್ಳಿ ಖಾಲಿ ಮಾಡುತ್ತಿರುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಪ್ರಸ್ತುತದ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ನಾವಿರುವ ಹಳ್ಳಿಯಲ್ಲೇ ಏನೆಲ್ಲಾ ಸಾಧಿಸುವ ಅವಕಾಶಗಳಿವೆ. ಅದಕ್ಕೆ ತಾಳ್ಮೆ ಬೇಕು, ಕಾಯುವ ಸಂಯಮ ಬೇಕು ಅಷ್ಟೇ.

ಒಮ್ಮೆ ನಮ್ಮ ರಾಜ್ಯದ ಹಳ್ಳಿಯಲ್ಲಿ ಬದುಕುತ್ತಾ ನೆಮ್ಮದಿ ಕಂಡವರ ಕಡೆಗೆ ಕಣ್ಣು ಹಾಯಿಸಿ. ಪಾವಗಡದ ಸಮೀಪವಿರುವ ಸಿ.ಕೆ.ಪುರ ಎಂಬ ಗ್ರಾಮದಲ್ಲಿ ವಿಜ್ಞಾನಿ ಶೇಷಗಿರಿ ರಾವ್ ಅವರು, ತಮ್ಮ ಊರಿನ ಜಮೀನುಗಳಲ್ಲೇ ಬೆಳೆಗಳಿಗೆ ತಗಲುವ ರೋಗ-ಕೀಟ ಬಾಧೆ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಕರ್ನಾಟಕದ ಗಡಿಭಾಗ ಕಾಸರಗೋಡಿನ ಹಳ್ಳಿಯೊಂದರಲ್ಲಿ ಕುಳಿತ ಜಲಪತ್ರ ಶ್ರೀ ಪಡ್ರೆಯವರು ನಾಡಿನೆಲ್ಲೆಡೆ ಜಲ ಸಾಕ್ಷರತೆ ಮೂಡಿಸಿದ್ದಾರೆ. ಶಿರಸಿ ಸಮೀಪದ ಹಳ್ಳಿಯಲ್ಲಿರುವ ಗ್ರಾಮೀಣ ಪತ್ರಕರ್ತ ಶಿವಾನಂದ ಕಳವೆ ಗ್ರಾಮೀಣ ಬದುಕಿನ ತವಕ-ತಲ್ಲಣಗಳನ್ನು ನಾಡಿಗೇ ಪರಿಚಯಿಸುತ್ತಿದ್ದಾರೆ. ಹಾಸನ ಜಿಲ್ಲೆಯ ಸಂತೆಶಿವರದ ಬಸವರಾಜು ಬಿಎಸ್‌ಸಿ ಕೃಷಿ ಪದವೀಧರ. ೨೫ ವರ್ಷಗಳಿಂದ ಕೃಷಿ ಪದವಿಯನ್ನು ತನ್ನ ಜಮೀನಿನಲ್ಲಿ ಪ್ರಯೋಗ ಮಾಡುವುದಕ್ಕೆ ಬಳಸಿಕೊಂಡಿದ್ದಾರೆ. ರಾಜ್ಯ, ಅಂತರರಾಜ್ಯಗಳಲ್ಲೆಲ್ಲಾ ವಿಜ್ಞಾನಿಗಳಿಗೆ ಕೃಷಿ ಪಾಠ ಮಾಡುತ್ತಾರೆ. ಮೈಸೂರಿನ ಕಳಲವಾಡಿಯ ಎ.ಪಿ.ಚಂದ್ರಶೇಖರ್, ಬೆಳಗಾವಿಯ ಅಭಯ್ ಮುತಾಲಿಕ್ ದೇಸಾಯಿ ಇಬ್ಬರೂ ಮೆಕಾನಿಕಲ್ ಎಂಜಿನಿಯರ್‌ಗಳು. ಓದಿದ್ದನ್ನು ಬಿಟ್ಟು ಹಳ್ಳಿಯಲ್ಲೇ ನೆಲಸಿ, ಪ್ರಗತಿಪರ ರೈತರಾಗಿದ್ದಾರೆ. ಇವರೆಲ್ಲ ವೃತ್ತಿಯಲ್ಲಿ ಕೃಷಿಕರಾಗಿ ಪ್ರವೃತ್ತಿಯಲ್ಲಿ ಬರಹಗಾರ, ವಿಜ್ಞಾನಿ ಹೀಗೆ ಹಲವು ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಇವರೆಲ್ಲ ಕೇವಲ ಉದಾಹರಣೆಗಳಷ್ಟೇ ಇಂಥ ಅನೇಕ ಮಹನೀಯರು ರಾಜ್ಯದ ಹಳ್ಳಿಗಳಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.

ಹಳ್ಳಿಗಳಲ್ಲಿ ಎಲ್ಲವೂ ಇದೆ. ಬೇಕಾದ್ದನ್ನು ಹುಡುಕಿಕೊಳ್ಳುವ ಮನಸ್ಸು ಇರಬೇಕು ಅಷ್ಟೇ

 

‍ಲೇಖಕರು avadhi

February 6, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಗಾಣಧಾಳು ಶ್ರೀಕಂಠ

    ಪ್ರಬಂಧವನ್ನು ಕ್ಷಿಪ್ರವಾಗಿ ಪ್ರಕಟಿಸಿದ ಅವಧಿ ಬಳಗಕ್ಕೆ ತುಂಬು ಹೃದಯದ ಅಭಿನಂದನೆಗಳು.

    ಪ್ರತಿಕ್ರಿಯೆ
  2. ಈಶ್ವರ ಭಟ್,ತೋಟಮನೆ

    ಪ್ರಬಂಧ ಹಳ್ಳಿಗರ ಬದುಕಿನಲ್ಲಿ ಉಂಟಾಗುತ್ತಿರುವ ಸುಧಾರಣೆ-ಬವಣೆ ಗಳನ್ನು ವಿಶ್ಲೇಷಿಸಿರುವುದು ಸತ್ಯ ವಾಗಿದೆ. ಸಾಂಗತ್ಯದಿಂದ ಬದುಕನ್ನು ಕಟ್ಟಿಕೊಂಡು ಜೀವನ ನಡೆಸಿದರೂ, ಪ್ರತಿಯೊಬ್ಬನನ್ನು ಅವನ ಸಾಧನೆಯನ್ನು ಅವನು ಗಳಿಸಿರುವ ಹಣ, ಆಸ್ತಿ, ಅಂತಸ್ತು ಗಳಿಂದ ಆಳೆಯಲಿಕ್ಕೆ ಸಮಾಜ ಪ್ರಾರಂಭಿಸಿದ್ದರಿಂದ, ಅಂತಹ ಆಮೀಷಕ್ಕೆ ಬಿದ್ದ ಹಳ್ಳಿಯ ಬದುಕು ಬರಡಾಗಲು ಕಾರಣವಾಯಿತೇನೋ?. ಮುಂದೊಂದು ದಿನ ಹಳ್ಳಿಯ ಬದುಕು ಕಾಣೆಯಾಗುವುದಂತು ನಿಜ. ಇದಕ್ಕೆ ನಮ್ಮಲ್ಲಿ ಸೂಕ್ತ ಪರಿಹಾರವಿಲ್ಲ! ಪರಿಹಾರವಾಗುವುದೂ ಅಲ್ಲ?.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: