–ಸಿಕಂದರ್ ಅಲಿ
ದೇವರು ದಿಂಡರು ಒತ್ತಟ್ಟಿಗಿರಲಿ ಅನ್ನ-ರೊಟ್ಟಿಗಳ ಕುರಿತು ಮಾತಾಡು |
ಧರ್ಮಗಳು ಹೊಟ್ಟೆ ತುಂಬಿಸುವುದಿಲ್ಲ ಹಸಿವುಗಳ ಕುರಿತು ಮಾತಾಡು ||
ಹಳೆಯ ನೋವು ಮಾಸುವ ಮುನ್ನ ಮತ್ತೊಂದು ಗಾಯವಾಗುತ್ತಿದೆ |
ಕುಕ್ಕಿ ತಿನ್ನುವ ಅತ್ಯಾಚಾರಿಯ ವಿಕೃತ ನೋಟಗಳ ಕುರಿತು ಮಾತಾಡು ||
ರೆಕ್ಕೆ-ಪುಕ್ಕ ಕತ್ತರಿಸಿ ಹಾರುವ ಹಕ್ಕಿಗಳ ಬಂಧಿಸಲಾಗುತ್ತಿದೆ ನೋಡು |
ಗಡ್ಡಧಾರಿ ನಿತ್ಯ ಹೊದ್ದು ಬರುವ ಹಗಲುವೇಷಗಳ ಕುರಿತು ಮಾತಾಡು ||
ಬಂದೂಕು ನಳಿಕೆ ಒಮ್ಮೆಯಾದರೂ ಪ್ರೀತಿಯ ಗುಂಡು ಸಿಡಿಸಲಿ |
ದ್ವೇಷ ಬಿತ್ತಿ ಹುಸಿ ಭಕ್ತಿ ಬೆಳೆಸುವ ಮನಸುಗಳ ಕುರಿತು ಮಾತಾಡು ||
ಸೂಫಿ ಸಂತರ ನೆಲದಲಿ ಮಾನವೀಯತೆ ಫಸಲನು ನೆಡಬೇಕಿದೆ ಈಗ |
ಸಾಮರಸ್ಯ, ಸೌಹಾರ್ದತೆ ಉಳಿಸುವ ಒಡನಾಡಿಗಳ ಕುರಿತು ಮಾತಾಡು ||
ನಿಜ ನುಡಿಯುವ ಕನ್ನಡಿಯೂ ಸುಳ್ಳು ಹೇಳುವುದು ರೂಢಿಸಿಕೊಂಡಿದೆ |
ಬೇಟೆಗಾರ ರೂಪಿಸಲು ಹೊರಟ ಕರಾಳ ಭವಿಷ್ಯಗಳ ಮೇಲೆ ಮಾತಾಡು ||
ಮಾಯಪೆಟ್ಟಿಗೆ ವಿಕಾರ ಮಿಥ್ಯಗಳ ದಾಖಲಿಸಿ ಭಯಪಡಿಸುತಿದೆ ಗೆಳೆಯ |
ಅಲಿಯ ನೆತ್ತರಲಿ ಅದ್ದಿ ಸತ್ಯ ಬರೆಯುವ ಲೇಖನಿಗಳ ಕುರಿತು ಮಾತಾಡು. ||






0 Comments