ಆರೇಳು ದಶಕಗಳ ಕಾಲ ನಾಡಿನ ರಂಗಭೂಮಿಯ ಆಳಗಲಗಳನ್ನು ಕಂಡ, ಅದರ ಏಳುಬೀಳುಗಳಲ್ಲಿ ಭಾಗಿಯಾದ ಒಬ್ಬ ಬೋಧಕ, ನಾಟಕಕಾರ, ನಿರ್ದೇಶಕ, ಪ್ರೇಕ್ಷಕ ಮತ್ತು ವಿಮರ್ಶಕ ಹಿರಿಯ ಚೇತನ ಕ.ವೆಂ.ರಾಜಗೋಪಾಲ ಇಂದು ಬೆಳಗಿನ ಜಾವ ಬೆಂಗಳೂರಿನ ಮನೆಯಲ್ಲಿ ನಿಧನರಾದರು. ಅವರಿಗೆ 92 ವರ್ಷ.
ಇವರು ೧೯೨೪ರಲ್ಲಿ ಕಟ್ಟೆಪುರದಲ್ಲಿ ಜನಿಸಿದರು. ಕೆಲ ಕಾಲ ಬೆಂಗಳೂರು ವಿಶ್ವವಿದ್ಯಾಲಯದ ನೃತ್ಯ,ನಾಟಕ,ಸಂಗೀತ ವಿಭಾಗದ ನಿರ್ದೇಶಕರಾಗಿದ್ದರು.
ಎಂ.ಇ.ಎಸ್. ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಕವನ, ಕಥೆ, ನಾಟಕ, ರೇಡಿಯೊ ನಾಟಕ ಹಾಗು ವಿಮರ್ಶೆಗಳನ್ನು ರಚಿಸಿದ್ದಾರೆ.
ಇವರ ಕೆಲವು ಕೃತಿಗಳು:
- ಎಣಿಸಿದ ಹಣ
- ರಾಗ-ಜಯಂತಿ
- ಅರ್ಧ ತೆರೆದ ಬಾಗಿಲು
- ಅಂಜೂರ
- ನದಿಯ ಮೇಲಿನ ಗಾಳಿ
- ಈ ನೆಲದ ತೆನೆ
ಅವರ ಕಲ್ಯಾಣದ ಕೊನೆಯ ದಿನಗಳು ನಾಟಕ ಕೃತಿಯನ್ನು ಇತ್ತೀಚೆಗೆ ರಂಗ ಪ್ರಯೋಗವನ್ನಾಗಿಸಿದ್ದು ಬೆಂಗಳೂರು ‘ಸಮುದಾಯ’. “ಕನ್ನಡ ರಂಗಭೂಮಿಯ ಶೋಧದಲ್ಲಿ” ಎಂಬ ಅವರ ಕೃತಿಯ ಬಗ್ಗೆ ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರು ‘ಇದೊಂದು ಅಪರೂಪದ ಆಚಾರ್ಯ ಕೃತಿ’ ಎಂದು ಬಣ್ಣಿಸಿದ್ದಾರೆ.
ನದಿಯ ಮೇಲಿನ ಗಾಳಿ ನನ್ನನ್ನು ಬಹುವಾಗಿ ಆಕರ್ಷಿಸಿತ್ತು. ಅಗಲಿದ ಅವರಿಗೆ ನಮನಗಳು
ಹಿರಿಯರಾದ ಪ್ರೊ. ಕ.ವೆಂ. ರಾಜಗೋಪಾಲ ಅವರ ನಿರ್ಗಮನವು ನನ್ನಲ್ಲಿ ಒಂದುಖಾಲಿತನವನ್ನು ಮೂಡಿಸಿದೆ. ನಲವತ್ತೈದು ವರ್ಷಗಳಿಂದ ಅವರು ನನಗೆ ಕಲಿಸಿದ್ದಾರೆ. ಮಾತಿನಿಂದ, ಕೃತಿಗಳಿಂದ ಮತ್ತು ಅವರ ಜೀವನಶೈಲಿಯಿಂದ. ಅವರ ಕವಿತೆ, ಕತೆಗಳು, ನಾಟಕ ಮತ್ತು ಸಂಶೋಧನಗಳು ಹಲವು ಓದುಗಳನ್ನು ಬೇಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ರಂಗೋತ್ಸಾಹ ಅಸಮಾನವಾದುದು. ತೊಂಬತ್ತರ ವಯಸ್ಸಿನಲ್ಲಿಯೂ ಅವರ ಉತ್ಸಾಹ, ಮುಗ್ಧತೆ ಮತ್ತು ಜನಪರತೆಗಳು ಒಂದಿಷ್ಟೂ ಮಾಸಿರಲಿಲ್ಲ. ನಾನು ಅವರಿಂದ ಹಲವು ಬಗೆಯ ಶಕ್ತಿಗಳನ್ನು ಪಡೆದುಕೊಂಡವನು. ಅವರ ಆಶಯಗಳು ಮುದುವರಿಯಲಿ.
ಎಚ್.ಎಸ್.ರಾಘವೇಂದ್ರ ರಾವ್