ರೇಖಾ ಹೆಗ್ಡೆ
ಹೈದರಾಬಾದ್ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಒದಗಿಸಿದ ಕ್ಷಿಪ್ರ ನ್ಯಾಯ ಬೆಚ್ಚಿ ಬೀಳಿಸುವಂತಿದೆ.
ಆರೋಪಿಗಳು ಅತ್ಯಂತ ಹೀನಾಯ ಕೃತ್ಯ ಎಸಗಿದ್ದರು ಮತ್ತು ತಪ್ಪು ಒಪ್ಪಿಕೊಂಡಿದ್ದರು, ನಿಜ. ಆದರೆ ಅವರನ್ನು ಸೆರೆ ಹಿಡಿದ ಮೇಲೆ ಅಪರಾಧ ದಂಡ ಸಂಹಿತೆಯ ಅನ್ವಯ ಅವರನ್ನು ಶಿಕ್ಷಿಸಬೇಕಾದದ್ದು ಪೋಲೀಸರ ಕರ್ತವ್ಯ.
ಸಂತ್ರಸ್ತರ ದೃಷ್ಟಿಯಿಂದ ನೋಡಿದಾಗ ಇದು ಸಮರ್ಥನೀಯ ಎನಿಸಿದರೂ, ಅಂತಿಮವಾಗಿ ಇದು ಅರಾಜಕತೆ ಸೃಷ್ಟಿಸುತ್ತದೆ ಎಂಬುದನ್ನು ಮರೆಯಬಾರದು.
ನಮ್ಮ ದೇಶದ ಕಾನೂನಿನಲ್ಲಿ ಸಾಕಷ್ಟು ಕಳ್ಳಗಿಂಡಿಗಳಿವೆ ಎನ್ನುವುದನ್ನು ಒಪ್ಪುತ್ತೇನೆ. ಅದರಿಂದಾಗಿಯೇ ಜಾಮೀನಿನ ಮೇಲೆ ಹೊರಬಂದ ಆರೋಪಿಗಳು ಸಂತ್ರಸ್ತೆಯನ್ನು ಕೊಲ್ಲಲು ಯತ್ನಿಸುತ್ತಾರೆ. ಇನ್ನೊಬ್ಬ ಸಂತ್ರಸ್ತೆಯ ಮೇಲೆ ಅತ್ಯಧಿಕ ಕ್ರೌರ್ಯ ತೋರಿದ್ದ ಅಪರಾಧಿಯೊಬ್ಬ ‘ಬಾಲಾಪರಾಧಿ’ ಎನ್ನುವ ಕಾರಣಕ್ಕೆ ಎರಡೇ ವರ್ಷದಲ್ಲಿ ಬಂಧಮುಕ್ತನಾಗುವುದಲ್ಲದೇ, ಸರ್ಕಾರದಿಂದಲೇ ಪುನರ್ವಸತಿ ಭಾಗ್ಯ ಪಡೆಯುತ್ತಾನೆ. ಅತ್ಯಾಚಾರಿ ಧರ್ಮಗುರುಗಳು ವಕೀಲರ ಪಡೆ ಇಟ್ಟುಕೊಂಡು ಕಾನೂನಿನ ನ್ಯೂನ್ಯತೆಗಳನ್ನೇ ಗುರಾಣಿಯನ್ನಾಗಿ ಮಾಡಿಕೊಂಡಿದ್ದರೆ, ಅಂಧ ಭಕ್ತರು ಅಂಥವರಿಗೆ ‘ಉಘೇ ಉಘೇ’ ಅನ್ನುತ್ತ ಗಾಂಧಾರಿಯಾಗಿ ಬದುಕುತ್ತಿದ್ದಾರೆ.
ಇನ್ನೊಂದಿಷ್ಟು ಜನ ಆರೋಪಿಗಳ, ಸಂತ್ರಸ್ತರ ಜಾತಿ, ಧರ್ಮ ಕೆದಕುತ್ತ ಸೆಲೆಕ್ಟಿವ್ ಬೆಂಬಲ/ಆಕ್ರೋಶ ವ್ಯಕ್ತಪಡಿಸುತ್ತ ಎಡಬಿಡಂಗಿತನದಲ್ಲಿ ಬದುಕುತ್ತಿದ್ದಾರೆ.
ಅತ್ಯಾಚಾರ ಎಸಗಿದ ಮೇಲೆ ಆರೋಪಿಗಳಿಗೆ ಶಿಕ್ಷೆಯಾಗಲೇ ಬೇಕು, ಅದೂ ಕಾನೂನಿನ ಪ್ರಕಾರ. ಸರ್ಕಾರ ಇಂಥ ಪ್ರಕರಣಗಳಿಗಾಗಿ ವಿಶೇಷ ಕ್ಷಿಪ್ರ ನ್ಯಾಯಾಲಯ ರೂಪಿಸಲಿ, ತ್ವರಿತಗತಿಯಲ್ಲಿ ಶಿಕ್ಷೆಯನ್ನೂ ಜಾರಿಗೆ ತರಲಿ. ಆರೋಪಿಗಳು/ಅಪರಾಧಿಗಳು ಸರ್ಕಾರಿ ಆತಿಥ್ಯ ಉಣ್ಣುತ್ತ ಬದುಕುವುದರಲ್ಲಿ ಯಾವ ಅರ್ಥವೂ ಇಲ್ಲ.
ಎಲ್ಲಕ್ಕಿಂತ ಮುಖ್ಯ, ಹೆಣ್ಣೂ ಸಹ ತಮ್ಮದೇ speciesನ ತಮ್ಮಂತೇ ನಿಸರ್ಗ ರೂಪಿಸಿದ ಜೀವಿ. ತಮ್ಮಂತೇ ಆಕೆಗೂ ಸ್ವತಂತ್ರ ಜೀವನ ಮಾಡುವ ಹಕ್ಕಿದೆ ಎಂಬುದನ್ನು ಗಂಡಸರು ಅರ್ಥ ಮಾಡಿಕೊಳ್ಳಬೇಕು. ಹೆಣ್ಣಿನ ಉಡುಗೆ-ತೊಡಿಗೆ, ಆಚಾರ-ವಿಚಾರಗಳ ಮೇಲೆ ಹೇರುವ ಕಟ್ಟುಪಾಡನ್ನು ಮೊದಲು ತಮ್ಮ ಮನಸ್ಸಿನ, ಇಂದ್ರಿಯಗಳ ಮೇಲೆ ಅನ್ವಯಿಸಬೇಕು.
ಜನರಿಗೆ ಇಂತಹ ವಿಷಯಗಳಲ್ಲಿ ನ್ಯಾಯ ಸಿಗುವ ನಂಬಿಕೆ ಇಲ್ಲದಿರುವುದರಿಂದಲೇ ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆಯೇ?