ರಂಗ ವಿಸ್ಮಯ

ಕೃಷ್ಣ ಶ್ರೀಕಾಂತ ದೇವಾಂಗಮಠ

ರಂಗದ ಮೇಲೆ ಯಾವ ಆಕೃತಿ
ಅನಾವರಣಗೊಳ್ಳುತ್ತದೆ ಕೊನೆಗೆ !
ಮನಸ್ಸು ನೂರಾರು ಪಟಗಳನ್ನು
ದರ ದರನೆ ಎಳೆದು ಬೀಸಾಕುತ್ತಿತ್ತು
ಮೆದುಳು ಇದಾದರೆ ಹೇಗೆ
ಅದಾದರೆ ಹೇಗೆ ಯಾವುದು ಚೆಂದ
ಶೋಭೆಗೊಳ್ಳುತ್ತದೆಯೇ ರಂಗಮಂಚ
ಇನ್ನೂ ಪ್ರಾರಂಭವಿಲ್ಲ ನನಗೋ ಚಡಪಡಿಕೆ
ಪಕ್ಕಕ್ಕಿದ್ದವರು ಕಿವಿಯಲ್ಲಿ ವಿಳಂಬವಾಗುತ್ತದೆ
ಮೈಕಿನಲ್ಲೊಬ್ಬ ಇನ್ನೇನು ಕೆಲವೇ ನಿಮಿಶಗಳ
ಬಾಕಿ ಕೂಗುತ್ತಾನೆ
ಬೇಗ ಬಂದು ಸೀಟು ಹಿಡಿದವನು ನಾನು ತಲೆ ಬಿಸಿಗೆ ಜೇಬಿನಲ್ಲಿದ್ದ ಸಿಗರೇಟ್
ಕೈಗೆ ಬಂತು ಅಷ್ಟರಲ್ಲಿ ಕಣ್ಣಿಗೆ ಕಂಡದ್ದು
ಧೂಮಪಾನ ನಿಷೇಧ ಫಲಕ
ತಲೆ ಕೆರೆದು ಅದನ್ನ ಜೇಬಿಗಿಳಿಸಿದೆ
ತೆರೆಯ ಹಿಂದೆ ಹೊಗೆಯಾಡುತ್ತಿತ್ತು
ನನ್ನ ಗದ್ದಲದಲ್ಲಿ ಅತ್ತ ನೋಡಿರಲೇ ಇಲ್ಲ
ಈಗ ಅಂಕ ಪರದೆ ಸರಿದು
ಸುತ್ತ ಹೊಗೆ ತಂಬಿಕೊಂಡು ಸ್ವರ್ಗವಾಯ್ತು
ಕಿಕ್ಕಿರಿದಿದ್ದ ಸದ್ದು ಸ್ಥಬ್ಧವಾಗಿ
ನಟರಾಜ – ನಾಟ್ಯ ಮಯೂರಿಯರ
ನೃತ್ಯವನ್ನು ಕಣ್ತುಂಬಿಕೊಳ್ಳುತ್ತಿತ್ತು
ಇನ್ನೇನು ಕೊನೆ ಹಂತ
ಎಲ್ಲರೂ ಬಾಯ್ಬಿಟ್ಟು ಕುಳಿತಿದ್ದರು
ಅವಳು ಅವನ ಬೆನ್ನೇರಿ ತುಳಿದು
ನಿಂತುಬಿಟ್ಟಳು ಕಣ್ಣುಗಳಲ್ಲಿ ಬೆಂಕಿ
ಹಣೆಯ ಕುಂಕುಮ ರಾರಾಜಿಸುತ್ತಿತ್ತು
ದುರ್ಗಾವತಾರ ದರ್ಶನ
ಚಪ್ಪಾಳೆ ಮೇಳೈಸಿ ಒಳಾಂಗಣ ಬರಿದಾಯ್ತು
ಮುಷ್ಟಿ ಹಿಡಿದು ಕೂತಿದ್ದ ನಾನು
ಚೇರಿಗೆ ಅಂಟಿಕೊಂಡವನಂತೆ ಕದಲದೆ
ಹಾಗೆ ಕೂತಿದ್ದೆ ಮುಖಕ್ಕೆ ಹೊಗೆ ತಾಗಿ
ನೆನಪಾಗಿ ಸಿಗರೇಟು ಹಚ್ಚಲು ಆಚೆ ಬಂದೆ
ಮನಸ್ಸು ಅದ್ಭುತ ಎಂದು ಉಧ್ಘಾರ
ಎಳೆಯುತ್ತಿತ್ತು ಕಡ್ಡೀ ಗೀರಿ ಹಿಂದೆ ತಿರುಗಿದರೆ ಮಹಿಷ ರಕ್ತ ಕಾರಿಕೊಂಡಿದ್ದ
ಹೊಗೆ ನನ್ನೊಳಗೆ ಹೊರಗೆ
ಉಸಿರಾಡುತ್ತಲೇ ಇತ್ತು
ಅದೇನೋ ಥಟ್ಟನೆ ಮಿಂಚು ಸುಳಿದಂತಾಗಿ
ನಾಳೆ ದಸರೆಯ ಹುರುಪು
ಕೆಡುಕಿಗೆ ಸಾವಿದೆ ಎಂದುಕೊಂಡು
ಸಿಗರೇಟ್ ನೆಲಕ್ಕೆ ಎಸೆದು
ಹೆಜ್ಜೆಯೂರಿ ತುಳಿದು ಅಲ್ಲಿಂದ ಹೊರಟೆ
ಒಳಗೊಳಗೆ ಮಯೂರಿಯ ಮೇಲೆ
ಪ್ರೀತಿ ಚಿಗುರೊಡೆದಿತ್ತು





ಸೊಗಸಾದ ಕವಿತೆ
ಧನ್ಯವಾದಗಳು ಸಂಗೀತಾ ಕಲ್ಮನೆ ಮೆಡಮ್
very nice poem
ಥ್ಯಾಂಕ್ಯು ಅಕ್ಕ