ಎರಡನೇ ವನವಾಸ
ಕೈಫಿ ಆಜ್ಮಿ
ಕನ್ನಡಕ್ಕೆ : ಚಿದಂಬರ ನರೇಂದ್ರ
ವನವಾಸ ಮುಗಿಸಿ ಶ್ರೀರಾಮ ಮರಳಿ ತನ್ನೂರಿಗೆ ಓಡಿ ಬಂದ
ಬಂದವನ ಬೆಂಬಿಡದೆ ಕಾಡಿತು, ಕಾಡಿನ ಅಪಾರ
ಆನಂದ
ಆ ಹುಚ್ಚು ಉನ್ಮಾದ ಅಂಗಳದಲ್ಲಿ ಶ್ರೀರಾಮ ನೋಡಿರಬೇಕು
ಡಿಸೆಂಬರ್ ಆರಕ್ಕೆ ರಾಮನ ಮನ ಹೀಗೆ ನೊಂದಿರಬೇಕು
ಎಲ್ಲಿದ್ದರು ಇವರು? ಎಲ್ಲಿಂದ ಬಂದರು ಈ ಭಕ್ತ ಮಹಾಶಯರು ?
ಹೊಳೆಯುತ್ತಿತ್ತು ಅಯೋಧ್ಯೆಯ ನೆಲ ಶ್ರೀರಾಮ ಕಾಲೂರಿದಲ್ಲೆಲ್ಲ
ಮೈಮುರಿಯುತ್ತಿತ್ತು ಪ್ರೇಮದ ನದಿ ಸೀತೆ ಕಣ್ಚಾಚಿದಲ್ಲೆಲ್ಲ.
ಯಾವಾಗಿನಿಂದ ದ್ವೇಷದ ತಿರುವು ಈ ಪ್ರೀತಿಯ ದಾರಿಯಲ್ಲಿ?
ಏನವರ ಜಾತಿ, ಧರ್ಮ ಯಾವುದು, ನಿಮಗಾರಿಗಾದರೂ ಗೊತ್ತೆ?
ರಾತ್ರಿ ಹೊತ್ತಿ ಉರಿಯದಿದ್ದರೆ ಆ ಮುಖಗಳ ಚೂರು ಕಾಣಬಹುದಿತ್ತೆ ?
ಮನೆ ಸುಡಲು ರಾತ್ರಿ ನನ್ನ ಬಾಗಿಲಿಗೆ, ಧಾವಿಸಿ ಬಂದವರೇ
ನಿಮ್ಮ ಚೂರಿಗಳು ಶಾಖಾಹಾರಿ ಮರೆತಿರಾ ಗೆಳೆಯರೇ
ನಿಮ್ಮ ಕಲ್ಲೆನೋ ಬಾಬರನನ್ನು ಹುಡುಕಿಕೊಂಡು ಹೋಯ್ತು
ತಪ್ಪು ನನ್ನ ತಲೆಯದೇ, ಗಾಯ ಹುಡುಕಿಕೊಂಡು ಬಂತು.
ಕಾಲಿಟ್ಟಿರಲಿಲ್ಲ ರಾಮ ಇನ್ನೂ ಸರಯೂ ನದಿಯಲ್ಲಿ
ಹರಿದು ಬಂದವು ರಕ್ತದ ಕಲೆ ನೀರಿನ ಜೊತೆಯಲ್ಲಿ
ಕಾಲ್ತೊಳೆಯದೇ ಎದ್ದ ಶ್ರೀರಾಮ ಸರಯೂ ತಟದಿಂದ
” ಯಾಕೋ ಈ ಊರಿನ ಹವೆ ಒಗ್ಗುತ್ತಿಲ್ಲ,
ಮನೆ ಹೊರಗಾಯಿತೆ, ವನವಾಸ ಮತ್ತೆ ಶುರುವಾಯಿತಲ್ಲ
When does the Hatred and Violence replace Love and affection of Lord Sri Rama and Mata Sita??? Introspect honestly