ಕೃಷ್ಣಮೂರ್ತಿ ಬಿಳಿಗೆರೆ ಕವಿತೆ ಗುಚ್ಛ- ಕಣ್ಣಲ್ಲಿ ನಿದ್ದೆಯ ದೀಪ

(ಪುಟ್ಟ ಬಟ್ಟಲ ಪದ್ಯ ಸಾರ)

ಕೃಷ್ಣಮೂರ್ತಿ ಬಿಳಿಗೆರೆ

ಮನುಷ್ಯರು
ಹಕ್ಕಿ ಪಕ್ಷಿಗಳಿಗೆ ಎಂದು
ಮುಚ್ಚಳದಲ್ಲಿ ಇಡುವ ನೀರು
ನೀರಲ್ಲ ಅಹಂ ಕೆಸರು

ಎರೆಹುಳು ಮೆತ್ತಗೆ ನಿಜ
ಅವು ಕತ್ತಲಲ್ಲಿರುತ್ತವೆ
ಅದೂ ನಿಜ
ಭೂಮಿಗೆ ನೀರ ಬಾಗಿಲಿಟ್ಟು
ನೀರು ಕುಡಿಸುತ್ತವೆ ಅದೂ ನಿಜ

ಮಣ್ಣು ತಿನ್ನುವ
ಎರೆಹುಳಕ್ಕೆ ಎಷ್ಟೊಂದು ಬುದ್ಧಿ
ಮಣ್ಣೇ ಬುದ್ಧಿ

ಎರೆಹುಳದ ಮಾತು
ಮಣ್ಣಿನ ಜೊತೆ ಮಾತ್ರ
ಮನುಷ್ಯರೇನಾದರೂ ಮಾತಾಡಿಸಿ ಕೆದಕಿದರೆ
ಹಿಂಗುತ್ತವೆ ಮಣ್ಣಿಗೆ
ಅರ್ಧ ದೇಹವ ಅಲ್ಲೆ ಬಿಟ್ಟು

ಎರೆಹುಳು
ರೈತನ ಗೆಳೆಯ ಎಂದರೆ
ಅವು ನಗುತ್ತವೆ
ರೈತರು ನೆಲಕ್ಕೆ ಬೆಂಕಿ ಇಟ್ಟಾಗ
ಅವು ಅಳುತ್ತವೆ

ಎರೆಹುಳುಗಳು
ತಮ್ಮ ತಂದೆ ತಾಯಿ ಗುರುಗಳು
ಯಾರೂ ಪಕ್ಕದಲ್ಲಿಲ್ಲದಿದ್ದರೂ
ಕತ್ತಲೆಯಲ್ಲಿದ್ದರು
ಮಣ್ಣಿನ
ಚರಿತ್ರೆ ಬರೆಯುವುದ ನಿಲ್ಲಿಸುವುದಿಲ್ಲ

ಎರೆಹುಳುಗಳು
ಎಡೆ ಎತ್ತದಿದ್ದರೂ
ವಿಷ ಕಕ್ಕದಿದ್ದರೂ
ಅವುಗಳಿಗೆ ಗೌರವ ಕೊಡಬೇಕು

ಒಂದೊಂದು ಎರೆಹುಳಕ್ಕೂ
ಹೆಸರೇನೂ ಇರುವುದಿಲ್ಲ
ಹೆಸರಿಲ್ಲದಿದ್ದರೂ ಒಳ್ಳೆಯದು ಮಾಡಬಹುದು

ಹುಲ್ಲುಗರಿಕೆ ಇಲ್ಲದಿದ್ದರೆ
ನೆಲ ನೀರು ಕುಡಿಯುಲು ನಿರಾಕರಿಸುತ್ತದೆ
ಹುಲ್ಲಿನ ಬೇರು
ನೆಲಕ್ಕೆ ನೀರು
ಅದಕ್ಕೆ ದೊಡ್ಡವರು ಹೇಳುವುದು
ಚಿಕ್ಕದು ದೊಡ್ಡದು ಎಂಬುದಿಲ್ಲ ಎಂದು

ಹುಲ್ಲಿನ ಮೇಲಿನ ಇಬ್ಬನಿ
ಹುಲಿಗೂ ಅಲ್ಲ
ಮನುಷ್ಯರಿಗೆ ಮೊದಲೇ ಅಲ್ಲ
ಮೊಲ ನೆಂಚಿಕೊಂಡು ತಿನ್ನಲು

ಕೊಕ್ಕರೆಗಳು ಹುಲ್ಲಿನೊಳಗೆ ನಡೆದರೆ
ಅದೇ ಉಳುಮೆ
ಮಿಡತೆ, ಹುಲ್ಲು ನೊಣಗಳೇ ಫಸಲು
ಕೊಕ್ಕರೆಗಳೂ ರೈತರೇ

ಕೀಟಗಳನ್ನು
ಪುರಾತನ ಕಾಲದಿಂದಲೂ
ತಿನ್ನುತ್ತಲೇ ಇವೆ ಹಕ್ಕಿಗಳು
ಕೀಟಗಳು ಮಾತ್ರ
ಯಾರು ಎಷ್ಟು ತಿಂದರೂ ಹಾಡುತ್ತಲೇ ಇವೆ

ಉಳುಮೆ ನಡೆಯುತ್ತದೆ ಹುಲ್ಲು ಕಳೆಯಲು
ಹುಲ್ಲು ಹುಟ್ಟುತ್ತಿರುತ್ತದೆ ಹೂವು ಬೆಳೆಯಲು
ಹುಲ್ಲು ದೊಡ್ಡದು ಉಳುಮೆ ಚಿಕ್ಕದು

ಶಾಲೆಗೆ ಹೋಗದಿದ್ದರೂ
ಕೀಟಗಳು ಎಲೆಗಳ ಮೇಲೆ
ದಿನಕ್ಕೊಂದು ಬಗೆಯ ಅಕ್ಷರಗಳ ಬರೆಯುತ್ತವೆ
ತರತರದ ಚಿತ್ರ ಕೊರೆಯುತ್ತವೆ
ಹೂವಿನೊಳಗೆ ಹಣ್ಣಿನೊಳಗೆ ಕೂತು
ಪಾಸಾಗುತ್ತವೆ

ಜಾಲಿ ಮರದ ಕೊಂಬೆಯಲ್ಲಿ
ಕನಸಿನಂತೆ ಎಲ್ಲೋ ಕೂತ
ಹೆಬ್ಬೆಟ್ಟು ಗಾತ್ರದ ಜೀರುಂಡೆಗಳು
ಜೀಗುಡುವ ಶಬ್ಧಕ್ಕೆ ರಾತ್ರಿ ತಲೆಮರೆಸಿಕೊಳ್ಳುತ್ತದೆ
ಆಗ ಬೆಳಗಾಗುತ್ತದೆ

ನವಿಲಿಗೆ ಮೊಟ್ಟೆ ಇಡಲು ಬರುವುದಿಲ್ಲ
ಒಂದೇ ಕಡೆ ನಾಲ್ಕು ಮೊಟ್ಟೆ ಇಟ್ಟು
ಕಾವು ಕೂರುತ್ತದೆ
ಹಸಿದ ನರಿ ನವಿಲ ಎಬ್ಬಿಸಿ ನುಂಗುತ್ತದೆ
ಒಂದೇ ಕಡೆ ನಾಲ್ಕು ಮೊಟ್ಟೆ
ನರಿಯ ಹಸಿದ ಹೊಟ್ಟೆ

ನವಿಲಿಗೆ ಸರಿಯಾಗಿ
ಹಾರಲೂ ಬರುವುದಿಲ್ಲ ಓಡುವುದೂ ಅಷ್ಟೆ
ಕುಣಿತ ಚೆಂದ
ಕುಣಿದರೆ ಯಾರು ತಾನೆ ಕುಣಿಸದೆ ಬಿಡುತ್ತಾರೆ

ನಿಂತ ಮರದೊಳಗೆ
ನೀರು ನಿಂತಿದೆ
ಅದಕ್ಕೆ ಅದು ಮಳೆಯ ಸುರಿಸುತ್ತಿದೆ

ಮರವೆಂದರೆ ಒಂದು ಊರು
ಆಕಾಶಕ್ಕೆ ಇಳಿಬಿಟ್ಟ ಹಸಿರು ನೀರು
ನೆಲದೊಳಗೆ ಅನೂಹ್ಯ ಬೇರು
ಅದರಡಿಯಲ್ಲಿ ಕೂತಿದ್ದಾನಲ್ಲ
ಬೆಂಕಿ ಕಾಯಿಸಿಕೊಂಡು
ಅವನು ಯಾರು

ಬೆಂಕಿಯನ್ನು ಬಿಟ್ಟು ಮೇಯಿಸಬಾರದು
ಕಟ್ಟಿ ಹಾಕಿಯೂ ಮೇಯಿಸಬಾರದು
ಅದನ್ನು ಒಲೆಯೊಳಗಿಟ್ಟು
ಬೇಯಿಸಬೇಕು

ಎರೆಹುಳು ಇಟ್ಟ
ಮಿಲಿಗ್ರಾಂ ಹಿಕ್ಕೆಯ ಲೆಕ್ಕ ಇಟ್ಟರೆ
ಮರವೊಂದರ ಎಲೆಯ ಲೆಕ್ಕ ಸಿಕ್ಕುತ್ತದೆ

ಎರೆಹುಳು ಕಕ್ಕಸ್ಸು ಮಾಡಿದರೆ
ಅದು ಪ್ರಸಾದ
ಜೇನುಹುಳು ಉಗಿದರೆ
ಅದೇ ತೀರ್ಥ

ಭೂಮಿ ನಕ್ಕು ಹೂ ಬಿಡಲು
ಒಣ ಎಲೆಗಳ ಮಿಂಚು ಹೊಡೆಯ ಬೇಕು
ಗೆದ್ದಲು ಪೂಜೆ, ಎರೆಹುಳುಗಳ ಮೆರವಣಿಗೆ ನಡೆಯಬೇಕು
ತೇವ ತಾಯಿಯ ಜೊತೆಗೆ ಸಗಣಿ ದೇವರು ಬರಬೇಕು

ಭೂಮಿ ಆಕಾಶದಲ್ಲಿ ತೇಲುತ್ತಿದ್ದರೂ
ಹಗುರವಲ್ಲ
ಟೊಳ್ಳಲ್ಲ
ಎಷ್ಟು ಬೆಳೆಯನ್ನಾದರೂ ತೆಗೆಯಬಹುದು
ಒಂದೇ ಶರತ್ತು
ಮನುಷ್ಯರು ತಮ್ಮ ದುರಾಸೆಯ ಬಾಣಲೆಯಲ್ಲಿ
ಬೀಜಗಳ ಉರಿಯಬಾರದು ಅಷ್ಟೆ

ಬೇಸಾಯ ಒಳ್ಳೆಯದೆ
…ರೆ
…ರೆ
…ರೆ
…………………..

ದೊಡ್ಡ ಮರ ನಿಂತಿದೆ
ನೆರಳು ಸುರಿಸುತ್ತಿದೆ
ಮನುಷ್ಯ ಇಂದು ಹಲ್ಲು ಕಡಿಯುತ್ತಿದ್ದಾನೆ
ನಾಳೆ ಮರ ಕಡಿಯುತ್ತಾನೆ

ಭೂಮಿ ಮೇಲಿನ ಮಣ್ಣ ಪಾತ್ರೆಯ ನೀರು
ಗಿಡಗಳಿಗೆ ಮರಗಳಿಗೆ
ಹಕ್ಕಿ ಪಕ್ಷಿ ಮನುಷ್ಯರಿಗೆ ಮುಕ್ತ
ಭೂಮಿಯಾಳದ
ಪಾತಾಳ ಪಾತ್ರೆಯ ನೀರು ನೀರಲ್ಲ
ನೆಲದ ರಕ್ತ

ಪ್ರಾಣಿ ಪಕ್ಷಿ ಗಿಡ ಮರ
ರಾಷ್ಟ್ರಗೀತೆ ಹಾಡುವುದಿಲ್ಲ
ಕರೆನ್ಸಿ ಭೂಪಟಗಳ ಗಡಿ ನುಡಿಗಳ ಹಂಗಿಲ್ಲ
ಮನುಷ್ಯರು ಮಾತ್ರ
ಕರೆಂಟು ಮುಳ್ಳು ಬೇಲಿಗೆ
ತಮ್ಮ ತಮ್ಮ ರಾಷ್ಟ್ರಗಳ ಗೂಟಕ್ಕೆ
ನವಿಲು ಹುಲಿ ಹೂವುಗಳ
ಸಿಂಹ ಆಸ್ಟ್ರಿಚ್ ಕಾಂಗರು ಕಾಯಿಗಳ
ಕಟ್ಟಿ ಸಾಯಿಸುತ್ತಾರೆ ಮೇಯಿಸುತ್ತಾರೆ
ಇವರೇ ಮನುಷ್ಯರು

ಬೇಲಿಯ ಬುಡ ಮೆತ್ತಗೆ
ಹುಟ್ಟುವ ಬೀಜಗಳಿಗೆ ಹೊಟ್ಟೆ
ಕಟ್ಟುವ ಗೂಡುಗಳಿಗೆ ಮೆತ್ತೆ
ಉಣ್ಣುವ ಊಟಕ್ಕೆ ತಟ್ಟೆ

ಬೇಲಿಯೊಳಗೆ
ಏನು ಬಿದ್ದರೂ ಅದು ಬೀಜ
ಬೇಲಿಯ ಜಾಲ ಆಕಾಶ ಪಾತಾಳ
ಹುಟ್ಟುತ್ತದೆ ಗಿಡವಾಗಿ ಮರವಾಗಿ
ಹೂವಾಗಿ ಜೇನಾಗಿ ಹಾವು ಮುಂಗುಸಿಯಾಗಿ

ಬೀಜವ ಗೂಡಲ್ಲಿಟ್ಟು
ಎಷ್ಟು ಕಾದರೂ ಮೊಳಕೆಯ ಸದ್ದಿಲ್ಲ
ಸ್ಪೋಟವಿಲ್ಲದೆ ಬೀಜದಾಟವಿಲ್ಲ

ಬಯಲಲ್ಲಿ ಬಿಸಿಲಲ್ಲಿ
ಕತ್ತಲೆಯಲ್ಲಿ ಬೆಂಕಿಯ ಬಗಲಲ್ಲಿ
ಮನುಷ್ಯರ ಝಳದಲ್ಲಿ
ಪ್ರಾಣಿ ಪಕ್ಷಿಗಳ ದವಡೆಯಲ್ಲಿ
ಮೊಳಕೆಯೊಡೆದು ಮರವಾಗುವುದಿದೆಯಲ್ಲ
ಬೀಜಕ್ಕೆ ದೊಡ್ಡ ಸವಾಲು, ಮನುಷ್ಯರು ಬೀಜವಾಗುವುದು ಮೇಲು

ಬಳ್ಳಿಗಳ ಹೊಸ ಕುಡಿಗಳನ್ನು
ಹುಷಾರಾಗಿ ಕಾಪಾಡಬೇಕು
ಅವು ಸಹಸ್ರ ಮಾನದ ಸಾಲದ ಎಳೆ
ಮುಂದೆ ಅವುಗಳದೆ ಕಾಲ
ಮಕ್ಕಳ ಹೊಸ ಬೆಳೆ ಮಕ್ಕಳೂ ಕುಡಿಗಳೆ

ಫುಕುವೋಕಾ ಬಳ್ಳಿ ಎಡವಿ
ಕುಂಬಳ ಕಾಯಿಯ ಬಳಿ ಬಂದು ಬೀಳುತ್ತಾನೆ
ನಕ್ಕು ಕುಂಬಳಕಾಯಿಯ ಪಲ್ಯ ಮಾಡಿಕೊಂಡು
ತಿನ್ನುತ್ತಾನೆ
ಎಡವಿದರೆ ಹೀಗೆ ಎಡವಬೇಕು
ಎಡವುವ ಮುನ್ನ ಕುಂಬಳ ಕಾಯಿ ಬೆಳೆಯಬೇಕು

ಫುಕುವೋಕಾ ಕತ್ತಲಾದರೆ
ಎಣ್ಣೆಯ ದೀಪ ಹಚ್ಚುವುದಿಲ್ಲ
ಹಾಡು ಗೀರುತ್ತಾನೆ ಕಣ್ಣಲ್ಲಿ ನಿದ್ದೆಯ ದೀಪ

ಫುಕುವೋಕಾ ದಡ್ಡ
ವಿಜ್ಞಾನಿ ಪಟ್ಟಕ್ಕೆ ಚಟ್ಟ ಕಟ್ಟಿ
ತಿಂಗಳ ಸಂಬಳ ಬಿಟ್ಟು ಬಂದ
(ತಿಂಗಾ ತಿಂಗಳಿಗೂ..)
ಮಳೆಗೆ ನೆಂದ ಮಣ್ಣಿಗೆ ಮಣ್ಣು ತಿಂದ
ಸೊಗಸು ಕ್ಯಾರೆಟ್ಟು ಗೆಣಸು ಬೆಳೆದು ಮಿಂದ
ಇದೀಗ ದಡ್ಡನ ಕುರಿತು ವಿಚಾರ ಸಂಕಿರಣ
ಪೂಜೆ ಪುರಸ್ಕಾರ ಭಣ ಭಣ

ಉಕ್ಕಿನ ಚೂಪು ತುದಿಯ ರಕ್ತದ ನೇಗಿಲಲ್ಲಿ
ಉಳುಮೆ ಮಾಡುವವರ ಕಂಡರೆ
ಎರೆಹುಳಕ್ಕೆ ನಗು
ಗಾಯಗೊಂಡ ಎರೆಹುಳು
ನಗುತ್ತಲೇ ಉಳುಮೆ ಮುಂದುವರಿಸುತ್ತದೆ

ಮನುಷ್ಯರು ಸತ್ತರೂ
ಸುಮ್ಮನೆ ಮಲಗುವುದಿಲ್ಲ
ನೋಡಿ ಹೇಗೆ ಪ್ರತಿಮೆಯಾಗಿ
ಎದ್ದು ಗದ್ದಲ ಮಾಡುತ್ತಿದ್ದಾರೆ

ನಿನ್ನ ದೇಹ ಬಗ್ಗಿ
ನೆಲಕ್ಕೆ ನಮಸ್ಕರಿಸುವಾಗ
ಮಡಿಲಲ್ಲಿದ್ದ ಕುಂಬಳ ಬೀಜ
ನೆಲಕ್ಕೆ ಉದುರಿದರೆ ನೆಲಕ್ಕೇನು
ನಿನಗೇ ಲಾಭ

ಮನುಷ್ಯರು ನಗುವಾಗ
ಹುಷಾರಾಗಿರಬೇಕು
ಆಗ ಕಣ್ಣು ಕಾಡುವುದಿಲ್ಲ
ಕಿವಿ ಕೇಳುತ್ತಿರುವುದಿಲ್ಲ

ಗಿಡ ಮರಗಳಂತೆ
ಹೂ ಮುಡಿಯುತ್ತಿದ್ದ ಮನುಷ್ಯರೀಗ
ಬಾಯಲ್ಲಿ ಮುಳ್ಳು ಮೆತ್ತಿಕ್ಕೊಂಡು ಮುತ್ತು ಕೊಡುತ್ತಿದ್ದಾರೆ
ಎಲ್ಲರ ಬಾಯಲ್ಲು ರಕ್ತ

ಮನುಷ್ಯರ ತಲೆ ನೋವುಗಳಿಗೆ
ಮದ್ದಿಲ್ಲ
ಅವರ ತಲೆ ತುಂಬಾ ಮದ್ದು

ತೋಟದ ದಾರಿಯಲ್ಲಿ
ನನ್ನ ಕಣ್ಣಿಗೆ ಬೀಳುವ ಹುಳಕ್ಕೆ ಸಾವು
ನನಗೆ ನೋವು
ನೋವು ದೊಡ್ಡದೋ ಸಾವು ದೊಡ್ಡದೋ

ಮನುಷ್ಯರು ಎಂದರೆ
ಏನು ಎಂದರೆ
ಸ್ವಯಂ ತೊಂದರೆ

‍ಲೇಖಕರು Admin

October 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: