ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೃಷ್ಣನೆಂಬ ಸಖ…

ಮಂಜುಳ ಸಿ ಎಸ್

ಕೃಷ್ಣಾ ಯಾವತ್ತಿಗೂ ಪುರಾಣ ಪುಣ್ಯ ಪುರುಷ ರೂಪಕ್ಕಿಂತಲೂ ಅನುದಿನದ ಅನುಕ್ಷಣದ ಜೀವ ಜಂಜಡದಿ ಆಸರೆಯಾಗುವ ಪರಿಯೇ ಅಧ್ಬುತ.ಆತನೆಂದಿಗೂ ಗೋಪಿಕೆಯರ  ಆರಾಧಕನಷ್ಟೇ ಅಲ್ಲ ಕಲಿಯುಗದ ಸಖಿಯರ ಆರಾಧ್ಯ ದೈವ. ಬೃಂದಾವನದಿ ಕೊಳಲನೂದುವ ಗೊಲ್ಲ ಮುಂದೇ ಕುರುಕ್ಷೇತ್ರದಿ ಪಾಂಚಜನ್ಯ ಊದದವನೀತ. ಬಾಲ್ಯದಲ್ಲಿ ಬೆಣ್ಣೆ ಕದ್ದಷ್ಟೇ ಸರಾಗವಾಗಿ ನಾರಿಯರ ಚಿತ್ತಚೋರ. ರಾಧೆ-ರುಕ್ಮಿಣಿ ಮುಂತಾದವರ ಜೊತೆಗಾರನಷ್ಟೇ ಅಲ್ಲ ಹೆಣ್ಣೊಬ್ಬಳ ಅಂತರಂಗ ಸಖ.

ಹೆಣ್ಣು ತನಗೆ ಯಾವದೋ ಕೊರತೆಯಾದರೆ ಸಹಿಸಿ ಕೊಂಡಾಳು ಆದರೆ ತನ್ನ ಬಾಳು ಪ್ರೇಮ ರಾಹಿತ್ಯವಾದರೆ ಕೊಂಚವೂ ಸಹಿಸುವ ಮಾತಿಲ್ಲ. ಪರಿಪೂರ್ಣ ಪ್ರೇಮ ಬರಡಾದ ನೆಲದಲ್ಲಿನ ಹಚ್ಚ ಹಸಿರಿನಂತೆ. ಹೊಚ್ಚ ಹೊಸ ಪುಷ್ಪದಂತೆ. ಒಳಗೆ ಪ್ರೇಮವೆಂಬ ದಿವ್ಯ ದೀವಿಗೆ ಹಚ್ಚಿ ಎಂದೂ ಆರದಂತೆ ಭರವಸೆಯನ್ನೇ ಉಸಿರ ನಿರಂತರವಾಗಿ ಕಾಪಿಟ್ಟು ಕೊಳ್ಳಲು ಕೃಷ್ಣನೆಂಬ ಸಖ ಉದಾಹರಣೆಯೇ ಎಲ್ಲಾ ಕಾಲದ ರಾಧೆ-ಮುಂತಾದ ಸಖಿಯರಿಗೆ.

ದಾರಿ ಕಾಣದಾದಾಗ ಮೊರೆ ಆಲಿಸುವನೊಬ್ಬನಿದ್ದರೆ ಕೃಷ್ಣನೇ. ಹೆಣ್ಣಿನ ಅಂತರಂಗವ ಕಂಡವರಾರು ಎಂದು ಸೋಜಿಗ ಪಟ್ಟಿ ಕೊಳ್ಳುವವರಿಗೆ ಕೃಷ್ಣನೇ ಸಾಕ್ಷಿ. ಅನಂತ ಪ್ರೇಮವ ನಿರಂತರವಾಗಿ ಮಧುರಗಾನದಂತೆ ಕೊಳಲ ನಾದದಂತೆ ಸವಿನುಡಿಯ ಮಧುಪಾಕವ ಹಂಚಿದ ಪರಿಯೇ ಚೆಂದ. ವ್ಯಕ್ತಿತ್ವ ಮಾಗ೯ದಶ೯ಕ. ಬದುಕಿನ ಪಯಣದಲ್ಲಿ ದುತ್ತೆಂದು ಎದುರಾಗುವ ಸುರಂಗ ಕತ್ತಲಲ್ಲಿ ಬೆಳಕಾಗುವ ದಾರಿದೀಪಕ ಈತ. ಹಿಂದೆಂದೊ ರಾಧೆಗೆ ತೋರಿದ ಪ್ರೇಮ ಇಂದಿಗೂ ಯುಗಯುಗಗಳಿಂದಲೂ ಯಮುನಾ ನದಿ ತೀರದ ದಡ ತಟದಲ್ಲಿ ನುಡಿಸಿದ ಮುರಳಿಗನವೂ ಕೇಳುತಲೇ ಇದೆ ಮನತೆರೆದು ಮುಗ್ದರಾಗಿ ಕೇಳುವ ಪ್ರೇಮಾಕಾಂಕ್ಷಿಗಳಿಗೆ. 

ಇನ್ನು ಮನುಷ್ಯನ ಉತ್ತಮ ಜೀವನವೇ ಗೀತೆಯ ಸಾರ. ಗೀತಾ ಸ್ತೋತ್ರ ಕದಂಬದಲ್ಲಿ ‘ಗೀ’ ಎಂದರೆ ತ್ಯಾಗ, ‘ತ’ ಎಂದರೆ ತತ್ವಜ್ಞಾನವಂತೆ. ಈ ಎರಡನ್ನೂ ಭೋದಿಸುವುದೇ ಗೀತೆ. ಯಾವುದೇ ಕೆಲಸ ಮಾಡಿದರೂ ತ್ರಿಕರಣ ಶುದ್ದಿಯಿಂದ ಫಲವನ್ನು ಆಶಿಸದೆ ಭವಬಂಧಗಳನ್ನು ಬಿಟ್ಟು ಫಲವನ್ನು ಆಶಿಸದೇ ಕತ೯ವ್ಯವನ್ಯು ಮಾಡೆಂದು ಕೃಷ್ಣ ನುಡಿದಿದ್ದಾನೆ. ಫಲದ ಕುರಿತು ಮೊದಲೇ ಕನಸನ್ನು ಕಾಣದೆ ಮಾಡುತ್ತಿರುವ ಕೆಲಸವನ್ನು ಚೆನ್ನಾಗಿ ನಿವ೯ಹಿಸುವುದರಲ್ಲಿ ಆನಂದ ಹೊಂದುವಂತರ ಶ್ರೀ ಕೃಷ್ಣ ಹೇಳುವುದು. ನನ್ನ ಪ್ರಕಾರ ಗೀತೆ ವ್ಯಕ್ತಿತ್ವ ವಿಕಸನ ಪುಸ್ತಕ.. ಕೃಷ್ಣ ಒಳ್ಳೆಯ ಮೋಟಿವೇಟರ್.

ಯುದ್ಧ ಮಾಡದೇ ಕೈ ಚೆಲ್ಲಿದ ಅಜು೯ನನಿಗೆ ಯುದ್ಧ ಮಾಡಲೇ ಬೇಕಾದ ಅನಿವಾರ್ಯತೆಯನ್ನು ತಿಳಿಸಿ ಕೊನೆಗೆ ನಿಧಾ೯ರವನ್ನು ಅಜು೯ನನಿಗೆ ಬಿಡುವ ರೀತಿ ಅನನ್ಯ. ತಾನು ಹೇಳಿದ್ದನ್ನು ಆಚರಿಸುವ ಆಯ್ಕೆ ಸ್ವಾತಂತ್ರ್ಯ ನೀಡುವ ಕೃಷ್ಣ  ಸಮಸ್ಯೆ ಏನೋ ವಿವರಿಸುತ್ತಾನೆ. ಸಮಸ್ಯೆ ಏಕೆ ಬಂತು ಬರುತ್ತದೆ ಹಾಗೂ ಯಾವ ದೌರ್ಬಲ್ಯದಿಂದ ಅದನ್ನು ಎದುರಿಸಲಾರೆವೋ ಸೂಚಿಸುತ್ತಾನೆ. ಸಮಸ್ಯೆಯನ್ನು ಯಾಕೆ ಎದುರಿಸ ಬೇಕೋ ಬೋದಿಸುತ್ತಾನೆ. ಅದರಿಂದ ಲಭಿಸುವುದೇನೋ ಹೇಳುತ್ತಾನೆ.

ನಶ್ವರವಾಗುವ ದೇಹದ ಮೇಲಿನ ಮೋಹಕ್ಕಿಂತ ಅನಂತಕಾಲಕ್ಕೂ ನಶಿಸದ ಆತ್ಮದ ಅವಲೋಕನಕ್ಕೆ ವಿಕಸನಕ್ಕೆ ಒತ್ತು ನೀಡಿದ. ಇದೇ ಕಾರಣಕ್ಕೆ ಮಹಾತ್ಮ ಗಾಂಧಿಯವರು ಗೀತೆಯನ್ನು ಕುರಿತು ಈ ರೀತಿ ನುಡಿದಿದ್ದಾರೆ. ‘ನನ್ನ ತಾಯಿ ಬಹಳ ಕಾಲದ ಹಿಂದೆಯೇ ಮರಣಿಸಿದಳು. ಆ ಸ್ಥಾನವನ್ನು ಭಗವದ್ಗೀತೆ ತೆಗೆದುಕೊಂಡಿತು. ಕಷ್ಟ ಬಂದಾಗಲೆಲ್ಲಾ ನಾನು ಆ ತಾಯಿ (ಗೀತೆ) ಮಡಿಲನ್ನು ಆಶ್ರಯಿಸುತ್ತೇನೆ. ಜೀವನದ ಕಷ್ಟದ ಸಮಯದಲ್ಲಿ ಕೃಷ್ಣನ ಆಶ್ರಯಿಸಿ ಅವನ ಸಲಹೆಯನ್ನು ಪಾಲಿಸಿದರೆ ಸುಲಭವಾಗಿ ಮನಶ್ಯಾಂತಿ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.

ಸಮಯ ಬಂದಾಗ ಎದುರಿರುವ ಶತ್ರುವಿನ ಶಕ್ತಿಯ ಅಂದಾಜು ಮಾಡಿ ಆತನ ಬಲಿಷ್ಠತೆಯೇ ಹೆಚ್ಚಾದರೆ ಸಮಯ ಕಾದು ತನ್ನ ಶಕ್ತಿಗೂಡಿಸಿ ಕೊಂಡು ಅಚಾನಕ್ಕಾಗಿ ಎದುರಿಸಿ ಮಣಿಸುವ ಯುಕ್ತಿ ಸಹನೆ ಮತ್ತು ಕಾಯ೯ತಂತ್ರವ ತೋರಿದ ಚಾಣಾಕ್ಷಮತಿ ಕೃಷ್ಣ. ಕೃಷ್ಣ ಮುಂದಾಲೋಚನೆಯುಳ್ಳ ಅಪಾರ ಬುದ್ದಿಮತ್ತತೆಯ ಹಾಗೂ ತಾಳ್ಮೆಯುಳ್ಳ ಸದಾ ಮುಗುಳ್ಗೆಯ ಧರಿಸಿದ ಮೋಹನನೀತ. ಈ ತಂತ್ರವು ಎಲ್ಲ ಕಾಲಕ್ಕೂ ಸಲ್ಲುವಂತದ್ದೇ. ಸುಖಾಸುಮ್ಮನೆ ಒಣ ಅಭಿಮಾನಕ್ಕೆ ಬಲಿಯಾಗದೇ ಸಮಯಕಾದು ಶತ್ರುಗಳ ಮಣಿಸುವ ಕಲೆ ಕೃಷ್ಣನಿಗೆ ಕರಗತ.

ಕೃಷ್ಣನೆಂಬ ಸಖನಿಗೆ ಜನ್ಮಾಷ್ಟಮಿಯ ಶುಭಾಶಯಗಳು.

‍ಲೇಖಕರು Admin

30 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading