ಚಿನ್ನಸ್ವಾಮಿ ವಡ್ಡಗೆರೆ
ನಮ್ಮ ಕಾಳು, ನೇಗಿಲು ಕದ್ದ ಜಾಣಜಾಣೆಯರು ಎಲ್ಲವರೆಲ್ಲವರೆ ಅಣ್ಣಾ ಎಲ್ಲವರೆಲ್ಲವರೇ ಅಂತ ಕಳೆದು ಹೋದ ದೇಸಿ ಬದುಕು ಮತ್ತು ದೇಸಿ ಕೃಷಿಯ ಬಗ್ಗೆ ರಂಗದ ಮೇಲೆ ನಟರು ಹುಡುಕುತ್ತಾ ಹೋಗುತ್ತಿದ್ದರೆ ಕಾರ್ಪೊರೇಟ್ ಖಳರು ಕೃಷಿಕರ ಬದುಕನ್ನು ನಾಶ ಮಾಡಲು ಹೊರಟ ಕರುಣಾಜನಕ ಕ್ರೂರ ಪ್ರಭುತ್ವದ ಬಗ್ಗೆ ಅಸಹನೆ ಸಿಟ್ಟು ಬರುತ್ತದೆ.
ನಮ್ಮ ಪಾರಂಪರಿಕ ದೇಸಿ ಕೃಷಿ ಕಳೆದು ಹೋದ ದೇಸಿ ಬೀಜ, ದೇಸಿ ತಂತ್ರಜ್ಞಾನ ಕಣ್ಮರೆಯಾದ ಕತೆಯನ್ನು ನಿರಂತರ ಸಹಜ ರಂಗದ ವಿದ್ಯಾರ್ಥಿಗಳು ‘ಕೃಷ್ಣ ಪಕ್ಷ ‘ಎಂಬ ನಾಟಕದ ಮೂಲಕ ಮನಮುಟ್ಟುವ ಹಾಗೆ ರಂಗದ ಮೇಲೆ ತಂದಿದ್ದಾರೆ. ರೈತರನ್ನು, ಅವರ ಹೋರಾಟವನ್ನು ಯಾವ ಪ್ರಭುತ್ವಗಳು ಇಷ್ಟೊಂದು ನಿಕೃಷ್ಟವಾಗಿ ಕಂಡಿರಲಿಲ್ಲ.
ಮೂರು ಮಾರಕವಾದ, ರೈತರ ಪಾಲಿನ ಮರಣಶಾಸನವಾದ ಕೃಷಿ ಕಾಯಿದೆಗಳು ಜಾರಿ ಮಾಡಿಯೇ ತೀರುತ್ತೇವೆ ಎಂಬ ಹಠಕ್ಕೆ ಬಿದ್ದಿರು ಕೇಂದ್ರ ಸರ್ಕಾರ ರೈತರನ್ನು ಕಸಕ್ಕಿಂತಲ್ಲೂ ಕಡೆಯಾಗಿ ಕಂಡಿದೆ. ಇಂತಹ ಆತಂಕಕಾರಿ ಪರಿಸ್ಥಿತಿಯಲ್ಲಿ ನಿರಂತರ ಫೌಂಡೇಶನ್ ಗೆಳೆಯರಾದ ಪ್ರಸಾದ್ ಕುಂದೂರು, ಸುಗುಣ, ಶ್ರೀನಿವಾಸ್ ಮತ್ತು ತಂಡ ಕಾಲೇಜು ವಿದ್ಯಾರ್ಥಿಗಳಿಗೆ ಸಹಜರಂಗದ ಮುಲಕ ವರ್ತಮಾನದ ತಲ್ಲಣಗಳನ್ನು ತಿಳಿಸಹೊರಟಿರುವುದು ನನಗೆ ರೈತ ಹೋರಾಟಗಳನ್ನು ಜೀವಂತವಾಗಿಡುವುದರ ರೂಪಕವಾಗಿ ಕಾಣುತ್ತದೆ. 40 ಮಂದಿ ವಿದ್ಯಾರ್ಥಿಗಳು ರಂಗದ ಮೇಲೆ ಅದ್ಭುತವಾಗಿ ನಟಿಸಿದ್ದಾರೆ.
ಕಳೆದುಹೋದ ಎನ್ನುವುದಕ್ಕಿಂತ ಕಾರ್ಪೊರೇಟ್ ದಣಿಗಳು ಕಿತ್ತುಕೊಂಡು ಕದ್ದ ಅಕ್ಷಯ ಪಾತ್ರೆಯಂತಿದ್ದ ದೇಸಿ ಕೃಷಿ ಕಥನವನ್ನು ಪರಿಣಾಮಕಾರಿ ರೀತಿಯಲ್ಲಿ ನೋಡುಗರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮಶೇಖರ ಸಿರಾ ಸರಳ ಅರ್ಥಪೂರ್ಣವಾಗಿ ರಚನೆಮಾಡಿದ ರಂಗಪಠ್ಯವನ್ನು ಸುಗುಣ ಅತ್ಯಂತ ಪರಿಣಾಮಕಾರಿಯಾಗಿ ರಂಗದ ಮೇಲೆ ತಂದಿದ್ದಾರೆ.
ವಿದ್ಯಾರ್ಥಿಗಳ ಅಭಿನಯ ನುರಿತ ನಟರಂತೆ ಇದೆ. ಒಟ್ಟಾರೆಯಾಗಿ ತುಂಬಾ ಒಳ್ಳೆಯ ರಂಗ ಪ್ರಯೋಗ ಕೃಷ್ಣ ಪಕ್ಷ.
0 ಪ್ರತಿಕ್ರಿಯೆಗಳು