ಜೀವಜೋಕಾಲಿ..
ಎಸ್. ಪಿ. ವಿಜಯಲಕ್ಷ್ಮಿ
‘ಉಧೋ ಉಧೋ, ಸುಧೆಯುಗಾದಿ
ಮಧುಮಾಸದಿ ನವದ ನಾಂದಿ
ಛಿಲ್ ಛಿಲ್ಲೆನೆ ಚಿಮ್ಮಿದೆ ಕಳೆ
ಸ್ಮರವಿಸ್ಮರ ತೂಗುಯ್ಯಾಲೆಯಲಿ
ಕಿಸಿರು ಬಿತ್ತೊ, ಹಸಿರು ಹೊತ್ತೊ
ನಳನಳ ಬಸಿರಾಡಿತು
ಕಿಲ ಕಿಲ ಕಿಲ ಹಸಿರುಕ್ಕಿತು
ಗೆಲ್ಲು ಗೆಲ್ಲು ಚೆಲು ಉಕ್ಕಿತು
ವರ್ಣ ವರ್ಣ ಹೊಳೆಯುಕ್ಕಿತು
ತಳಿರು ಮಾವು, ಚೆಲುವೆ ಬೇವು
ಘಲ್ ಘಲ್ ಘಲ್ ಪೃಥೆ ನಕ್ಕಳು…..
ಬಿರಿಬಿರಿಯುತ ನಶೆಯುಕ್ಕಿಸಿ
ಅಮಲು ಘಮಲು ಅಲ್ಲಿ ಇಲ್ಲಿ
ಹೂವ್ವಿನೊಡಲ ಸೂಸಲು
ಬಂಗಾರಕೆ ಮೀಸಲು…
ಚೆಲು ಚಿತ್ತರ ಹೊಸಿತಿಲಲ್ಲಿ
‘ಬೇವು-ಬೆಲ್ಲ’ ಬಾಗಿನದಲಿ
ಮನ್ವಂತರ ಕಳೆಯುತ್ತ
ಮನ್ವಂತರ ಬೆಳೆಯುತ್ತ
ಚೆಲ್ಲುತಿಹುದು ಚೇತನ…
‘ಝುಂಯ್ಯ್, ಝುಂಯ್ಯೆ’ನೆ ಗಾಯನ
ಗಾನ ಋಷಿಯ ಗಮನ
‘ಕುಹೂ…ಕುಹೂ…’ಜನನ,
‘ತಟತಟನೆ’ ಉಕ್ಕುತಿದೆ
ಬಿಡದೆ ಹಿಡಿ, ಮಡಿಲ ಉಡಿ
ಕರ್ಣ ಕೊಡು, ನಯನವಿಡು
ಹಳತು ಸರಿಸು, ಹೊಸತು ಧರಿಸು
ನುಂಗು ಕಹಿ, ಹಂಚು ಸಿಹಿ
ತುಂಬು ಬಾಳ ಬಟ್ಟಲ,
ತೂಗು,
‘ಯುಗಾದಿ’ ಜೀವತೊಟ್ಟಿಲ….
ಆಹಾ ! ಜೀವನೋತ್ಸಾಹದ ಖನಿ ! ಸವಿಗಾನದ ಬನಿ !
– ಶ್ಯಾಮಲಾ ಮಾಧವ
ಕವನ ಪ್ರಕಟಿಸಿದ್ದಕ್ಕೆ ಧನ್ಯವಾದಗಳು ಅವಧಿ….
ಶ್ಯಾಮಲಾ ಧನ್ಯವಾದಗಳು…