ಕುರ್ಚಿ

ಮುರುಳಿ ಹತ್ವಾರ

ತಣ್ಣಗೆ ಕುಳಿತಿತ್ತು ಆ ನಾಲ್ಕು ಕಾಲಿನ ಕುರ್ಚಿ:
ಏಸಿ ರೂಮಿನೊಳಗೆ, ಮಾರ್ಬಲ್ಲು ಹಾಸಿನ ಮೇಲೆ.  
ಒಂದಿಷ್ಟೂ ಬಿಸಿಯಾಗಲಿಲ್ಲ ಅದು 
ಅದರ ಮೇಲೇ ಕುಳಿತು ಆ ಒಂದೂವರೆ ಕಾಲಿನ, ಒಂಟಿ ಕಣ್ಣಿನ
ಇರಾಕಿನವ ಕಣ್ಣು ಕಿತ್ತು ಬರುವ ಹಾಗೆ ಅವನ ಕಥೆ ಹೇಳಿಕೊಂಡಾಗ 

ಹೇಗೆ ಬಿಸಿಯಾದೀತು? ನಾಜೂಕಿನಿಂದ 
ಧೂಳೊರೆಸಿಕೊಳ್ಳುವದು ಅಭ್ಯಾಸವಾದಮೇಲೆ. 
ಬೇರು ಕಿತ್ತು, ಕೈ-ಕಾಲು ಕೊಯ್ದು, 
ನೀರು, ಎಣ್ಣೆಯಲದ್ದಿದ ತುಂಡುಗಳ ಅಂಟಿಸಿ, 
ಮೇಲೊಂದು ಹತ್ತಿಯ ಮೆತ್ತೆಯಿಟ್ಟು ಕಟ್ಟಿದ ಕುರ್ಚಿಯಲ್ಲವೇ ಅದು. 
ಆ ಆಫ್ರಿಕಾದ ಅಮ್ಮ, ಅಲ್ಲ, ಎಲ್ಲರ ಅಮ್ಮ 
ಅವಳ ಕಥೆ ಹೇಳಿಕೊಂಡಾಗಲೂ ಅಷ್ಟೇ. 

ಆಕೆ “ಅಯ್ಯೋ, ನಂಬಿಬಿಟ್ಟೆ ಆ ಜನದ ಮಾತು,
‘ಅಮ್ಮ, ಬೇಡಮ್ಮ, ಬಿಡಬೇಡ ನನ್ನ ಇವರೊಟ್ಟಿಗೆ”
ಎಂದ ಇನ್ನೂ ನೆರೆಯದ ಕೂಸಿನ ಮಾತೂ ಕೆಳದಷ್ಟು. 
ಕೆಟ್ಟೆ, ನಾ ಕೆಟ್ಟೆ, ನನ್ನ ಮಕ್ಕಳನ್ನು ಇನ್ನಾದರೂ ಬದುಕಲು ಬಿಟ್ಟುಬಿಡಿ”
ಎಂದು ಗೋಳಿಟ್ಟರೂ ಒಂದಿಷ್ಟೂ ಒದ್ದೆಯಾಗಲಿಲ್ಲ ಆ ಕುರ್ಚಿ. 
ಅದರ ಒಣ ಪ್ರತಿಷ್ಠೆ ನೋಡಿ ನೋಡಿ ಸಾಕಾಗಿತ್ತು ಅವನಿಗೂ. 
ಎತ್ತಿ ನೆಲಕ್ಕೆಸೆದ ಜೋರಾಗಿ. ಶಬ್ದ ಹುಟ್ಟಿ ಮೌನವಾಯಿತು ಅಷ್ಟೇ.  

ಕತ್ತಿಯಲಿ ಕೊಚ್ಚಿದ-ನೋವು ಹುಟ್ಟಬಹುದೆಂದು. 
ಒಂದಿಷ್ಟು ತರಚಿತಷ್ಟೇ. ಅಲ್ಲಾಡಲಿಲ್ಲ ಅದು. ಅವನೂ ಬಿಡಲಿಲ್ಲ:
ಮಾರಮ್ಮನ ಗುಡಿಯ ಸುತ್ತ ಸುತ್ತಿಸಿದ;
ರಕ್ತೇಶ್ವರಿಯ ಕೋಲ ಕಟ್ಟಿದ; ಕೆಂಡದ ಮೇಲೆ ದೂಡಿದ 
ಸುಟ್ಟು ಬೂದಿಯಾಯಿತೇ ಹೊರತು ಕೆಚ್ಚು ಕೆರಳಲಿಲ್ಲ. 

ಕಣ್ಣಿಗೆ ಸಿಡಿದ ಆ ಬೂದಿ ಬೆಳೆದ ರೊಚ್ಚಿನಲಿ, 
ದುರ್ಗಮ್ಮನಿಗೆ ಹೊದಿಸಿದ್ದ ಸೀರೆಯಲಿ ಮೈ ಸುತ್ತಿಕೊಂಡ; 
ಅಣ್ಣಮ್ಮನ ಅರ್ಚನೆಯ ಕೆಂಪನ್ನ ಹಣೆಗೊತ್ತಿಕೊಂಡ 
ಗಿರಗಿರನೆ, ಗಿರಗಿರನೆ, ಗಿರಗಿರನೆ ತಿರುಗಿದ:
ಉಧೋ! ಉಧೋ! ಎನ್ನುತೆದ್ದವು 

ನೆಲದಡಿಯ ಚಿನ್ನ, ಚಿಪ್ಪಿನೊಳಿಟ್ಟ ಮುತ್ತು
ಕುದಿಯುತಲಿ-ಕುಣಿಕುಣಿದು ಕಂಪಿಸಿ. 
ಅಲ್ಲೋಲ ಕಲ್ಲೋಲ ಎಲ್ಲೆಲ್ಲೂ 
ಎಲ್ಲವೂ ಛಿದ್ರ, ಛಿದ್ರ, ಛಿದ್ರ;
ಉಸಿರಿಲ್ಲದ ಕಾರ್ಗತ್ತಲ ಮೌನಗರ್ಭದಲಿ ಲೀನ. 

ಆ ತುಂಬು ಗರ್ಭದ 
ಮೌನದ ಬಸಿರೊಡೆದು 
ಹೊಸ ಬೆಳಕೊಂದು ಹುಟ್ಟಿ 
ಮತ್ತೆ ಅದಿತಿಯಾಯಿತು!

‍ಲೇಖಕರು Avadhi

November 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: