ಹೇಮಾವತಿ ವೆಂಕಟ್
ಸಮ್ಮೇಳನದ ಎರಡನೇ ದಿನದ ಗೋಷ್ಠಿಯೊಂದು ಹಲವು ಅಸಹ್ಯಕರ ಬೆಳವಣಿಗೆಯ ಮೂಲಕ ಮರೆಯಲಾರದ ಗೋಷ್ಠಿ ಎನಿಸಿತು.
ಬೆಳಿಗ್ಗೆ ಹತ್ತು ಗಂಟೆಗೆ ಕಲಾಮಂದಿರದಲ್ಲಿ ನಡೆದ ಮಕ್ಕಳ ಸಾಹಿತ್ಯ ಗೋಷ್ಠಿಯಲ್ಲಿ ಬೊಳುವಾರು ಮಹಮದ್ ಕುಂಞಿ ಅವರು ಆಶಯ ಭಾಷಣ ಮಾಡುವುದಕ್ಕೂ ಮುನ್ನ ಹಿರಿಯರೊಬ್ಬರು ಬೊಳುವಾರರ ಪರಿಚಯ ಮಾಡುತ್ತಾ, ಮಹಮದ್ ‘ಕುಯಿ’ ಎಂದರು.
ನಂತರ ಆಶಯ ಭಾಷಣ ಶುರು ಮಾಡಿದ ಬೊಳುವಾರರು, ಇದೇ ವಿಚಾರದ ಬಗ್ಗೆ ಕನಿಷ್ಠ ಐದು ನಿಮಿಷ ಮಾತನಾಡಿದರು. ಕನ್ನಡದ ಒಂದು ಅಕ್ಷರ “ಞ” ವನ್ನು ಉಚ್ಛರಿಸಲು ನಮ್ಮ ಮಕ್ಕಳಿಗೆ ಕಲಿಸಲಿಲ್ಲವೆಂದರೆ ನಾವೆಂಥಾ ಕನ್ನಡಿಗರು ಎಂಬ ಪ್ರಶ್ನೆ ಎತ್ತಿದರು. “ಕಯ್ಯಾರ ಕಿಂಞಣ್ಣ ರೈ ಕೂಡಾ ಸಾಯುವವರೆಗೂ ಇದೇ ಸಂಕಟ ಅನುಭವಿಸಿದರು. ಅವರ ಹೆಸರನ್ನೂ ಸರಿಯಾಗಿ ಹೇಳುತ್ತಿರಲಿಲ್ಲ” ಎಂದರು.
ಅವರ ಭಾಷಣ ಮುಗಿದ ನಂತರ ವಂದನೆ ಸಲ್ಲಿಸಲು ಬಂದ ಅದೇ ಮಹಾತ್ಮ ಮೊದಲ ತಪ್ಪನ್ನು ತಿದ್ದಿಕೊಂಡಿದ್ದ. ಈ ಸಲ ಅವನು ಕುಯಿ ಅನ್ನಲಿಲ್ಲ, ಆದರೆ ಕುಂಞಿ ಅಂತಹೇಳುವ ಬದಲು ” ಕುನ್ನಿ” ಅಂದ.
ಬೊಳುವಾರು ಮನಸಿಗೆ ಏನನ್ನಿಸಿತೋ. ನನಗಂತೂ ಹತ್ತು ಸಲ ಕುಂಞಿ ಅಂತ ಅವನ ಬಾಯಿಯಲ್ಲಿ ಅದೇ ವೇದಿಕೆಯಲ್ಲಿ ಹೇಳಿಸಬೇಕು ಅನ್ನಿಸಿತು.
ಅದಿರಲಿ. ನಂತರ ಭಾಷಣ ಮಾಡಿದ ಬಾಲಕ, ಆತ ಮಹಾನ್ ಸಾಧಕನಂತೆ. ಹನ್ನೆರಡರ ಬಾಲಕ 20 ಪುಸ್ತಕ ಬರೆದಾಗಿದೆ. ಆತನೂ ಮಹಮದ್ ಕುಯಿ ಅಂದ.
ತನ್ನ ಹೆಸರನ್ನು ಹಲವರು ಸರಿಯಾಗಿ ಉಚ್ಛರಿಸುತ್ತಿಲ್ಲ ಎಂಬ ನೋವು, ಆಕ್ರೋಶ ವ್ಯಕ್ತಪಡಿಸುವ ಸ್ಥಿತಿ ಬೊಳುವಾರು ಮಾತ್ರವಲ್ಲ ಯಾರಿಗೇ ಆದರೂ ಬರಬಾರದು. ಆ ಬಗ್ಗೆ ತಾವೇ ಹೇಳಿದ ಮೇಲೂ ಅದೇ ವೇದಿಕೆಯಲ್ಲಿ ಕುಳಿತ ಮಂದಿಗೆ ತಾವಾದರೂ ತಿದ್ದಿಕೊಳ್ಳಬೇಕು ಅನ್ನಿಸದಿರುವುದು ಕನ್ನಡ ಭಾಷೆಯ ಭವಿಷ್ಯದ ಸ್ಥಿತಿಗೆ ಹಿಡಿದ ಕನ್ನಡಿ.
ಬೊಳುವಾರರು ತಮ್ಮ ಭಾಷಣದ ಉದ್ದಕ್ಕೂ ಹೇಳಿದಂತೆ ” ನಾವು ರಿಪೇರಿ ಆಗುವುದಿಲ್ಲ ಮಾರಾಯ್ರೆ”
ಡಾ ಮಲ್ಲಿಕಾರ್ಜುನ ಕಲಮರಹಳ್ಳಿ ಸಂಯುಕ್ತ, ಅನುನಾಸಿಕ ಅಕ್ಷರಗಳ ಉಛ್ಛಾರಣೆ ಕೊಡಗು ಕರಾವಳಿಯಲ್ಲಿ ಸರಾಗ ಹಾಗೂ ಸಹಜ.. ಬಯಲು ಸೀಮೆಯಲ್ಲಿ ತ್ರಾಸದಾಯಕ. ಬೋಳುವಾರರು ಆ ಪ್ರಮಾಣದಲ್ಲಿ ರೇಗಾಡುವ ಅಗತ್ಯವಿರಲಿಲ್ಲ..
Bhagyalakshmi V Bilijaji …ಕರೆಯೋರದ್ದಲ್ಲ…ಕರೆಯೋಕೆ ಚಂದವಾದ ಸರಳವಾದ ಹೆಸರನ್ನು ಇಡೋದು ಸರಿ ಅಲ್ವಾ.? ಮೊನ್ನೆ ಕಲ್ಕತ್ತಾದಲ್ಲಿ ನನ್ನ ಹೆಸರನ್ನು ಭೋಗಿಯ ಲಚಮಿ ಅಂತಾ ಕರೆದರು.. ಹಾಗೇ ತಮಿಳು ಫ್ರೆಂಡ್ಸ್ ಪಾಕಿಯ ಲಕಸಮಿ ಅಂದರು ! ಏನು ಮಾಡೋದು?





ಸಮ್ಮೇಳನದಲ್ಲೇ ಕನ್ನಡದ ಕಗ್ಗೊಲೆ