ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಸು ಕುಡಿಕೆ: ಭೂತಕೋಲವೂ ಉಪಯೋಗಕ್ಕೆ ಬಾರದು ಎಚ್ಚರವಿರಲಿ!

ಕಾಸು ಕುಡಿಕೆ -63

ಬೆನ್ನುಬಿಡದ ಬೇತಾಳ-ಪೋಂಜ್ಹೀ  ಭೂತ.

ಜಯದೇವ ಪ್ರಸಾದ ಮೊಳೆಯಾರ

ಆಶೆ ಬಲೆಯನು ಬೀಸಿ ನಿನ್ನ ತನ್ನೆಡೆಗೆಳೆದು

ಘಾಸಿನೀಂಬಡುತ ಬಾಯ್ಬಿಡಲೋರೆ ನೋಡಿ

ಮೈಸವರಿ ಕಾಲನೆಡವಿಸಿ ಗುಟ್ಟಿನಲಿ ನಗುವ

ಮೋಸದಾಟವು ದೈವ ಮಂಕುತಿಮ್ಮ||

ಈ ಬಾರಿ ಗುರುಗುಂಟಿರಾಯರ ಬಾಯಲ್ಲಿ ನೀರೂರಿದ್ದು ಮಾತ್ರವಲ್ಲ, ಅಲ್ಲಿಗೆ ಬೋರ್ ಹೊಡೆದು ಒಂದು ಅರ್ಧ ಇಂಚು ನೀರೇ ಸಿಕ್ಕಿದಂತಾಯಿತು. ಕಾರಣ, ಬೆಳಗ್ಗಿನ ಚಳಿಗೆ ದಿನ ಪತ್ರಿಕೆಯ ಹೊದಿಕೆಯೆಡೆಯಲ್ಲಿ ಬೆಚ್ಚಗೆ ಹಾಯಾಗಿ ನಿದ್ದೆ ಹೊಡೆಯುತ್ತಾ ಮನೆಗೆ ಬಂದು ‘ಥಡ್’ ಅಂತ ಬಿದ್ದ ಗರಿ ಗರಿ ಪಾಂಪ್ಲೆಟ್!

ಈ ಪಾಂಪ್ಲೆಟ್ ನಲ್ಲಿ ‘ಬೇತಾಳ ಫೈನಾನ್ಸ್’ ಎಂಬ ಕಂಪೆನಿಯ ವಾರ್ಷಿಕ 120% ಬಡ್ಡಿ ಕೊಡುವಂತಹ ಒಂದು ಫಿಕ್ಸ್ಡ್ ಡೆಪಾಸಿಟ್ ಸ್ಕೀಮಿನ ಒಂದು ಸುಂದರ ಜಾಹೀರಾತು ಇತ್ತು. ಯಾವುದೇ ಸುರಸುಂದರಿಯ ಮುಖಾರವಿಂದವಿಲ್ಲದೆ ಬರೇ ದೊಡ್ಡ ದೊಡ್ಡ ಕುಂಬಳಕಾಯಿ ಅಕ್ಷರಗಳಲ್ಲಿ 120% ಬಡ್ಡಿ ದರದ ಸುವರ್ಣ ಅವಕಾಶ ಅಂತ ಬರೆದುಕೊಂಡು ಇತ್ತು. 120% ಬಡ್ಡಿದರ ಕೊಡ್ಬೇಕಾದ್ರೆ ಯಾವ ಹುಡುಗಿಯ ಮುಖಾರವಿಂದದ ಅಗತ್ಯ ಯಾಕೆ ಬೇಕು ಸ್ವಾಮಿ? ನೀವೇ ಹೇಳಿ. ಜುಜುಬಿ 10-12% ಗಾದ್ರೆ ಹುಡ್ಗೀರ್ ಬೇಕಾಗ್ತಾರೆ. ಇನ್ನೂ ಕಡಿಮೆ ಆದ್ರೆ ಕಿಲ್ಲರ್ ಬಿಪಾಶಾನೇ ಬೇಕು. ಆದ್ರೆ 120 ಕ್ಕೆ ಯಾರೂ ಬೇಡ. ಅಲ್ವೆ? ದುಡ್ಡಿನ ನಶೆಯೇ ಅಂತದ್ದು. ರಾಯರು ಪಂಪ್ಲೆಟ್ ಅನ್ನು ಒಮ್ಮೆ ಕೂಲಂಕುಶವಾಗಿ ಓದಿ ‘ಗ್ಯಾರಂಟಿ ಪ್ರತಿಫಲ’ ಎಂಬಿತ್ಯಾದಿ ವೇದವಾಕ್ಯಗಳನ್ನು ಎರಡೆರಡು ಬಾರಿ ಓದಿ ಭದ್ರತೆಯ ಬಗ್ಗೆ ಖಚಿತ ಪಡಿಸಿಕೊಂಡು ಮನಸ್ಸಿನಲ್ಲಿಯೇ ಆ 120% ಮಂಡಿಗೆ ತಿನ್ನುವ ಸ್ಕೆಚ್ ಹಾಕತೊಡಗುತ್ತಾರೆ.

ಆ ಬಳಿಕ, ಸ್ನಾನಮಾಡಿ ಶುಚೀಭೂತರಾದ ರಾಯರು ತಮ್ಮ ಫೇಸಾರವಿಂದವನ್ನು ಸಿಂಗರಿಸಿ, ಇಲ್ಲದ ಕೂದಲಿನ ತಲೆಯ ಮೇಲೆ ಒಮ್ಮೆ ಶಾಸ್ತ್ರಕ್ಕೆ ಕೂಂಬಾಡಿಸಿ, ತಮ್ಮ ಚರ್ಮದ ಮೆಟ್ಟನ್ನು ಮೆಟ್ಟಿ ಚರ್ ಚರ್ ಎನ್ನಿಸುತ್ತಾ ಬಸ್ಟಾಪಿನ ಕಡೆ ತಮ್ಮ ಪಾದವನ್ನು ಬೆಳೆಸಿದರು. ಕಿಸೆಯಲ್ಲಿ ನೀಟಾಗಿ ನಾಲ್ಕು ಮಡಿಸಿದ ಪಾಂಪ್ಲೆಟ್ ಭದ್ರವಾಗಿ ಕುಳಿತಿತ್ತು. ರಾಯರು ಈ ಬೇತಾಳ ಫೈನಾನ್ಸ್ ಕಚೇರಿಯನ್ನು ತಲಪಿದಾಗ ಬೆಳಗ್ಗೆ ಹತ್ತು ಘಂಟೆಯಾಗಿತ್ತು. ಆಗಾಗಲೇ ಹತ್ತಾರು ಜನ ಫೈನಾನ್ಸ್ ಕಚೇರಿ ತೆರೆಯುವುದನ್ನೇ ಕಾದು ಕುಳಿತಿದ್ದರು.

ಬೇತಾಳ ಫೈನಾನ್ಸ್ನ ಯಂಗ್, ಡೆಬೋನೇರ್, ಡಾಶಿಂಗ್, ಡೈನಾಮಿಕ್, ಡ್ಯಾಮೇಜರ್ ಸ್ಕೀಮಿನ ಬಗ್ಗೆ ವಿವರ ತಿಳಿಸಿದ್ದು ಹೀಗೆ:

‘ಮಿನಿಮಮ್ ಒಂದು ಹತ್ಸಾವ್ರ ಡೆಪಾಜಿಟ್ ಇಡಿ ಸಾರ್, ತಿಂಗ್ಳಾ ಒಂದೊಂದು ಸಾವ್ರ ಬಡ್ಡಿ ಇಸ್ಕೊಂಡು ಹೋಗಿ. ಒಂದು ವರ್ಷಕ್ಕೆ ಹತ್ಸಾವ್ರದ ಮೇಲೆ ಹನ್ನೆರಡು ಸಾವ್ರ ಬಡ್ಡಿ. 120% ವಾಷರ್ಿಕ ಬಡ್ಡಿ. ಎಲ್ಲಿ ಸಿಗತ್ತೆ ಹೇಳಿ ಸಾರ್ ಇಷ್ಟೊಂದು ಬಡ್ಡಿ? ಬ್ಯಾಂಕ್ನಲ್ಲಿ ಇಡ್ತೀರಾ, ವರ್ಷಕ್ಕೆ ಜುಜುಬಿ 8% ಕೊಟ್ಟು ಕಳಿಸ್ತಾವ್ರೆ. ಇನ್ಫ್ಲೇಶನ್ನೇ 15% ಇದೆ. ಬಂದ ಬಡ್ಡಿನಲ್ಲಿ ತರಕಾರಿ ಕೂಡಾ ತಗೊಳಕ್ಕೆ ಆಗಲ್ಲ ಸಾರ್’ ಅಂತ ಸ್ಪಷ್ಟವಾದ ಸ್ವರದಲ್ಲಿ ಸೂಕ್ತ ಹಾವ ಭಾವಗಳೊಂದಿಗೆ ಮೇಜು ಕುಟ್ಟಿ ನೆರೆದಿರುವ ಸರ್ವ ಸಭಿಕರನ್ನೂ ಅಠಟಿವಿನ್ಸ್ ಮಾಡುತ್ತಾನೆ. ನೆರೆದವರು ತಲೆದೂಗುತ್ತಾರೆ. ತಮ್ಮ ತಮ್ಮ ಜೇಬಿನಲ್ಲಿ ಕೇರ್ಫುಲ್ಲೀ ಬಚ್ಚಿಟ್ಟಿದ್ದನಗದ್ ನಾರಾಯಣನನ್ನು ಪ್ರತ್ಯಕ್ಷಗೊಳಿಸಿ ಎದುರಿಗಿದ್ದ ಬೇತಾಳನ ಕೈಗೆ ಹಸ್ತಾಂತರಿಸಿ ಕಿಸೆಹಗುರಿಗರಾಗುತ್ತಾರೆ. ನಮ್ಮ ಗುರುಗುಂಟಿರಾಯರೂ ಈ ಮಳೆರಾಯನ ಅರ್ಥವಿಲ್ಲದ ಅರ್ಥಶಾಸ್ತ್ರಕ್ಕೆ, ಪ್ರತಿ ಸೋಮವಾರ ಬೆಳಗ್ಗಿನ ಅಪ್ಪರ್ದಂಡದ ವಿತ್ತಪ್ರವಚನಕ್ಕೆ ಹಿಡಿಶಾಪ ಹಾಕುತ್ತಾ ಒಂದು ಹತ್ತು ಸಾವಿರ ಕಟ್ಟಿ ರಿಸಿಟ್ ಪಡಕೊಳ್ಳುತ್ತಾರೆ.

ಇನ್ನು ಕೆಲವರು ‘ಈಗ ಹತ್ತು ಇಲ್ಲ. ಒಂದೈದ್ಸಾವ್ರ ಇದೆ, ಅದ್ರಲ್ಲೇ ಏನಾರ ಎಜೆಸ್ಟ್ ಮಾಡ್ಕೊಳಕ್ಕಾಗುತ್ಯೇ?’ ಅಂತ ಆತನಿಗೆ ದುಂಬಾಲು ಬೀಳುತ್ತಾರೆ. ‘ಹ್ಹೂಂ! ಸರಿ. ಬಾಕಿ ದುಡ್ಡು ನಾಳೆ ತಂದ್ಕೊಡಿ, ಕಷ್ಟ ಕಣ್ರೀ, ಈ ಚಿಲ್ರೆ ಸಹವಾಸ!’ ಅಂತ ಗೊಣಗಾಡ್ಕೊಂಡು ದುಡ್ಡು ಇಸ್ಕೊಂಡು ರಿಸೀಟ್ ನೀಡುತ್ತಾನೆ. ರಿಸೀಟ್ ಅನ್ನು ಭದ್ರವಾಗಿ ಇಟ್ಕೊಳಿ. ಪ್ರತೀ ತಿಂಗಳೂ ಬಡ್ಡಿ ಪಡಕೊಳ್ಳಲು ಬರುವಾಗ ಎಂಟ್ರಿ ಮಾಡ್ಸೋಕೆ ತಗೊಂಡು ಬರ್ಬೇಕು ಎಂದೂ ಅದಿಲ್ಲದೆ ಬಂದ್ರೆ ದುಡ್ಡು ಕೊಡಕ್ಕಾಗೋದಿಲ್ಲ ಎಂದೂ ಎರಡೆರಡು ಬಾರಿ ಒತ್ತಿ ಹೇಳುತ್ತಾನೆ.

ಇದಿಷ್ಟು ಸ್ವಂತ ದುಡ್ಡಿನಿಂದ ಪಡೆಯಬಹುದಾದ ಪ್ರತಿಫಲ. ಇನ್ನು ಈ ಸ್ಕೀಮನ್ನು ಬೇರೆಯವರಿಗೆ ಶಿಪಾರಸ್ಸು ಮಾಡಿ ಅವರಿಂದ ಡೆಪಾಸಿಟ್ ಇರಿಸಿದರೆ ಅಂತಹ ದುಡ್ಡಿನ ಮೇಲೆ 20% ಕಮಿಶನ್ ಬೇರೆ ಕೊಡ್ತಾರಂತೆ. ಅಬ್ಬಬ್ಬ!! ಕೆಲವರಂತೂ ತತ್ಕ್ಷಣವೇ ಒಂದು ಚಿಕ್ಕ ಕೈಬ್ಯಾಗ್ ಹಿಡ್ಕೊಂಡು ಈ ಫೈನಾನ್ಸ್ ಕಂಪೆನಿಯ ಏಜೆಂಟರಾಗಿ ಬಂಧು ಮಿತ್ರರನ್ನು ಪೀಡಿಸಲು ಆರಂಭಿಸುತ್ತಾರೆ. ‘ಜುಜುಬಿ 8-10% ಬಡ್ಡಿಗೇ ಅಲ್ಪತೃಪ್ತರಾಗುವ ನಿಮಗೆಲ್ಲಾ ತಲೆಯೇ ಇಲ್ಲ, ಈ ಸ್ಕೀಮಿನಲ್ಲಿ ಹೂಡಿ’ ಎಂದು ಈ ಸ್ಕೀಮನ್ನು ಧರೆಗಿಳಿಸಿದ ಬೇತಾಳನೆಂಬ ದೇವದೂತನನ್ನು ಹಾಡಿ ಹೊಗಳುತ್ತಾರೆ.

ಹೀಗೆ ಕಾಲಚಕ್ರ ಉರುಳುತ್ತವೆ. . .

ತಿಂಗಳುಗಳು ಉರುಳಿದಂತೆಯೇ ಮಾಸಿಕ ಬಡ್ಡಿಗಳನ್ನು ಟೈಮಿಗೆ ಸರಿಯಾಗಿ ಪಡೆದ ಇನ್ನಿತರ ಜನತೆ ಸಂಪೂರ್ಣವಾಗಿ ತೃಪ್ತರಾಗಿ ತಾವೂ ಕೂಡಾ ಒಂದು ಕೈಬ್ಯಾಗ್ ಹಿಡಕೊಂಡು ಏಜೆಂಟರಾಗಿ ‘ನನ್ನನ್ನೇ ನೋಡಿ ನಾನೇ ಗ್ಯಾರಂಟಿ’ ಎಂದೆಲ್ಲಾ ಎದೆ ತಟ್ಟಿ ಹೇಳಿ ಡೆಪಾಸಿಟ್ ಮೊಬಿಲೈಸ್ ಮಾಡಲು ಊರು ಸುತ್ತುತ್ತಾರೆ. ಮೊದಲೆಲ್ಲಾ ನಂಬದವರು ಕ್ರಮೇಣ ನಂಬಲು ಆರಂಬಿಸುತ್ತಾರೆ. ತಾವೂ ಅಲ್ಪ ಸ್ವಲ್ಪ ಡೆಪಾಸಿಟ್ ಮಾಡುತ್ತಾರೆ. ಪೂರ್ತಿ ನಂಬಿದವರು ಇದ್ದದ್ದನ್ನೆಲ್ಲಾ ಮಾರಿ ಇನ್ನು ಕೆಲವರು ಸಾಲ ಕೂಡಾ ಮಾಡಿ ಬೇತಾಳನ ಮೇಜಿಗೆ ಬಂದು ದುಡ್ಡು ಸುರಿಯುತ್ತಾರೆ. ಏಜೆಂಟರಾದವರು ಹಳೆ ಸೈಕಲ್ ಗುಜುರಿಗೆ ಬಿಸಾಕಿ ಹೊಸ ಮಾರುತಿ ಖರೀದಿಸಿ ರೋಡಿನಲ್ಲಿ ದೂಳೆಬ್ಬಿಸುತ್ತಾ ಹೋಗುತ್ತಾರೆ. ಒಂದು ಸೈಟ್ ಕೊಂಡು ಹೊಸ ಮನೆಯ ಕನ್ಸ್ಟ್ರಕ್ಷನ್ ಕೂಡಾ ಆರಂಭಿಸುತ್ತಾರೆ. ದಿನಾ ಬೆಳಗ್ಗೆ ಹಣೆಯಲ್ಲಿ ಎರಡು ನಾಮ ಬಳಿದುಕೊಂಡು ದಿನಾ ಸಂಜೆ ದೇವಸ್ಥಾನಗಳಿಗೆ ಸುತ್ತು ಬರುತ್ತಾರೆ. ‘ಎಲ್ಲಾ ದೈವ ಲೀಲೆ’ ಎಂದು ಆಕಾಶ ನೋಡಿ ಕೈ ಮುಗಿಯುತ್ತಾರೆ.

ಇದೀಗ ಈ ಕತೆ ಒಂದು ಹಂತಕ್ಕೆ ಬಂತು. ಈಗ ಕಂಪೆನಿಯ ಮೇಲೆ ಭಾರಿ ನಂಬಿಕೆ ಹುಟ್ಟಿರುತ್ತದೆ. ಇಡೀ ಊರಿಗೆ ಊರೇ ಈ ಫೈನಾನ್ಸ್ ಅನ್ನು ನಂಬಿ ಬಾಳುತ್ತದೆ. ಮೊದಲು ಅದರ ವಿರುದ್ಧ ಮಾತನಾಡಿದವರೆಲ್ಲಾ ಸುಮ್ಮನಾಗಿಸಲ್ಪಡುತ್ತಾರೆ. ಪ್ರತಿಯೊಬ್ಬರೂ ಸಾಲ ಸೋಲ ಮಾಡಿಯಾದರೂ ಬೇತಾಳ ಫೈನಾನ್ಸ್ ನಲ್ಲಿ ದುಡ್ಡು ಹೂಡಲು ಅದರ ಕಚೇರಿಯ ಹೊರಗೆ ಕ್ಯೂ ನಿಲ್ಲುತ್ತಾರೆ.

ಈಗ ಈ ಕತೆ ಇಲ್ಲಿಗೆ ನಿಲ್ಲಿಸೋಣ. ನಿಲ್ಲಿಸಿ, ಇಧರ್ ಹಮ್ ಲೇಂಗೇ ಏಕ್ ಚೋಟಾ ಸಾ ಬ್ರೇಕ್! ಔರ್ ಬ್ರೇಕ್ ಕೇ ಬಾದ್, ಇನ್ನೊಂದು ಹಳೆ ಕತೆ ಕೇಳುವಂತವರಾಗಿ. ಈ ಬಾರ್ಕಾಕುವಿನಲ್ಲಿ ಎರಡೆರಡು ಕತೆ, ಡಬ್ಬಲ್ ಧಮಾಕಾ. ಪ್ಲೀಸ್ ಡೋಂಟ್ ಗೋ ಅವೇ. . .

* * *

ಬ್ರೇಕ್ ಕೆ ಬಾದ್ ಸ್ವಾಗತ್ ಹೈ|

1919 ರ ಸಮಯ. ದೂರದ ಅಮೆರಿಕಾದ ಬೋಸ್ಟನ್ ಪಟ್ಟಣದಲ್ಲಿ ಚಾರ್ಲ್ಸ್ ಪೊಂಜ್ಹೀ (1882-1949) ಎಂಬ ಇಟಾಲಿಯನ್ ಮೂಲದ ಒಬ್ಬ ಚೋರನಿದ್ದನು. ಅವನು ಅಂತಿಂತಹ ಚೋರನಲ್ಲ. ಅವನೊಬ್ಬ ಸೂಟ್ ಬೂಟ್ ಧರಿಸಿ, ಬಿಸಿನೆಸ್ ನಡೆಸಿ ಒಂದು ಅತ್ಯಾಕರ್ಷಕ ‘ಇನ್ವೆಸ್ಟ್ಮೆಂಟ್ ಸ್ಕೀಂ’ ಮುಖಾಂತರ ಲಕ್ಷಾಂತರ ಜನರ ಕೋಟ್ಯಾಂತರ ‘ಗುಳುಂ’ ಮಾಡಿದ ಕುಖ್ಯಾತ ಚೋರ – ವಿತ್ತ ಜಗತ್ತಿನ ವೀರಪ್ಪನ್!

ಆತ ಮಾಡಿದ್ದಾದರೂ ಏನು?

ಸಣ್ಣ ಪುಟ್ಟ ಕಳ್ಳತನ ಮಾಡುತ್ತಾ ಅಲ್ಲಿ ಇಲ್ಲಿ ಕೆಲಸ ನೋಡುತ್ತಾ ಇರುತ್ತಿದ್ದ ಈ ಪೋಂಜ್ಹೀಗೆ ಒಂದು ದಿನ ಸ್ಪೈನ್ ದೇಶದ ಒಬ್ಬ ಗ್ರಾಹಕನಿಂದ ಒಂದು ಓಲೆ ಬಂತು. ಅದರೊಳಗೆ ಮರು ಉತ್ತರಕ್ಕಾಗಿ ಬೇಕಾದ ಅಂಚೆ ವೆಚ್ಚಕ್ಕಾಗಿ ‘ಅಂತರಾಷ್ಟ್ರೀಯ ರಿಪ್ಲೈ ಕೂಪನ್’ (IRC) ಒಂದನ್ನು ಇರಿಸಲಾಗಿತ್ತು. ಪದ್ಧತಿ ಪ್ರಕಾರ ಆ ಕೂಪನನ್ನು ಅಮೇರಿಕಾದ ಪೋಸ್ಟ್ ಆಫೀಸಿನಲ್ಲಿ ತೋರಿಸಿ ಸ್ಪೈನ್ ದೇಶಕ್ಕೆ ಮರು ಉತ್ತರಕ್ಕೆ ಬೇಕಾದಷ್ಟು ಅಂಚೆ ಚೀಟಿಯನ್ನು ವಿನಿಮಯದಲ್ಲಿ ತೆಗೆದುಕೊಳ್ಳಬಹುದಿತ್ತು. ಅದನ್ನು ಮಾಡುವಾಗ ಆತನು ಗಮನಿಸಿದ ಅಂಶವೆಂದರೆ ಸ್ಪೈನ್ ನಲ್ಲಿ ಅಂತಹ ಒಂದು ಕೂಪನ್ನಿಗೆ ತಗಲುವ ವೆಚ್ಚ ಅಮೇರಿಕಾದಿಂದ ಮರುಟಪ್ಪಾಲಿಗೆ ತಗಲುವ ಅಂಚೆ ವೆಚ್ಚಕ್ಕಿಂತ ಕಡಿಮೆಯಾಗಿತ್ತು. ಅಂತಹ ‘ಆರ್ಬಿಟ್ರಾಜ್’ ಅಥವಾ ಬೆಲೆಯ ವ್ಯತ್ಯಾಸದಲ್ಲಿ ಸುಮಾರು 400 % ದಷ್ಟು ಲಾಭ ಗಳಿಸಬಹುದಾಗಿತ್ತು. ಪೋಂಜ್ಹೀಯ ತೀಕ್ಷ್ಣ ಬುದ್ಧಿಗೆ ಇಷ್ಟೇ ಸಾಕಿತ್ತು. ಕೂಡಲೇ ಪೋಂಜ್ಹೀ ಅದರಲ್ಲಿ ಒಂದು ಬಿಸಿನೆಸ್ ಶುರು ಮಾಡೇ ಬಿಟ್ಟ.

ಸಾರ್ವಜನಿಕರಿಗೆ ಈ ಲಾಭದ ಕತೆಯನ್ನು ಹೇಳಿ ಅಂತಹ ಕೂಪನ್ಗಳಲ್ಲಿ ಹೂಡಿ 90 ದಿನಗಳಲ್ಲಿ ಹಣವನ್ನು ದುಪ್ಪಟ್ಟು ಮಾಡಿಕೊಡುತ್ತೇನೆ ಎಂದು ಹಣ ಸಂಗ್ರಹ ಶುರು ಮಾಡಿದ. ಜನರು ಅವನ ಸ್ಕೀಂ ವಿವರಣೆಯನ್ನು ಕೇಳಿ ಅತಿಯಾಸೆಯಿಂದ ಮರುಳಾಗಿ ಹಣ ಹೂಡಿಕೆಗೆ ಮುಗಿಬಿದ್ದರು.

ಈ ರಿಪ್ಲೈ ಕೂಪನಿನ ಕತೆ ‘ನೋಡಲು-ಕೇಳಲು’ ಚಂದ. ಅದರೆ ವಾಸ್ತವವೇ ಬೇರೆ. ವಾಸ್ತವದಲ್ಲಿ ಸಾರ್ವಜನಿಕರು ಹೂಡಿದ ಹಣದಷ್ಟು ಪೋಸ್ಟಲ್ ಕೂಪನ್ ಇಡೀ ಜಗತ್ತಿನಲ್ಲೇ ರಿಲೀಸ್ ಆಗಿರಲಿಲ್ಲ. ಅಲ್ಲದೆ ಪೋಂಜ್ಹೀ ವಾಸ್ತವದಲ್ಲಿ ಕೂಪನ್ನುಗಳನ್ನು ಆಂತಹ ಸಗಟು ಪ್ರಮಾಣದಲ್ಲಿ ವಿನಿಮಯ ಮಾಡಿಕೊಳ್ಳಲೇ ಇಲ್ಲ. ಅವನು ಮಾಡಿದ್ದೆಂದರೆ, ‘ರಿಪ್ಲೈ ಕೂಪನ್’ ಕತೆ ಹೇಳಿ ಹೊಸ ಹೂಡಿಕೆದಾರರ ಹಣದಿಂದ ಹಳೆ ಹೂಡಿಕೆದಾರರಿಗೆ ಬಡ್ಡಿ ಪಾವತಿ ಮಾಡುತ್ತಿದ್ದದ್ದು. ಹಾಗೂ ಸಾಕಷ್ಟು ಪ್ರಮಾಣದಲ್ಲಿ ಮುಗಿಬಿದ್ದು ಬರುತ್ತಿದ್ದ ಹೂಡಿಕೆಗಳನ್ನು ಬಾಚಿ ಬಾಚಿ ತನ್ನ ಜೇಬು ತುಂಬಿಸಿಕೊಳ್ಳುತ್ತಿದ್ದದ್ದು.

ಪೋಂಜಿ ಹುಟ್ಟು ಹಾಕಿ ‘ಪೊಂಜ್ಹೀ ಸ್ಕೀಮ್’ ಎಂದೇ ಜಗತ್ಪ್ರಸಿದ್ಧಿಯಾದ ಇಂತಹ ತಂತ್ರಗಳು ಈ ರೀತಿ ನಡೆಯುತ್ತವೆ:

ಒಂದು ಸ್ಕೀಂನಲ್ಲಿ ಒಂದು ಆಕರ್ಷಕ ಉದ್ಯಮದ ಕತೆ ಹೇಳಿ ಅದರ ಹೂಡಿಕೆದಾರನಿಗೆ ಪ್ರತಿಫಲ ಅಥವಾ ರಿಟರ್ನ್ ಕೊಡುವುದು ಮುಂಬರುವ ಇನ್ನೊಬ್ಬನ ಹೂಡಿಕೆಯಿಂದಲೇ ಹೊರತು ಬೇರೆ ಯಾವುದೇ ಔದ್ಯಮಿಕ ಲಾಭದಿಂದಲ್ಲ. ಅತೀ ಹೆಚ್ಚು ಬಡ್ಡಿದರ ಅಥವ ಪ್ರತಿಫಲದ ಘೋಷಣೆಯನ್ನು ಮಾಡಿ ಹೆಚ್ಚೆಚ್ಚು ಮೂಲಧನವನ್ನು ಸಂಗ್ರಹಿಸುತ್ತಾ ಅದೇ ಮೂಲಧನವನ್ನು ಹಳೆ ಹೂಡಿಕೆದಾರರಿಗೆ ಕೊಡುತ್ತಾ ಮುಂದುವರಿಯುವುದೇ ಇದರ ಮೂಲ ತಂತ್ರ. ಹೊಸ ಹೊಸ ಅಮಾಯಕರು ಸ್ಕೀಮಿಗೆ ಸೇರುತ್ತಲೇ ಇರುವವರೆಗೆ ಈ ಸರಣಿ ಮುಂದುವರಿಯುತ್ತದೆ ಹಾಗೂ ಹಳಬರಿಗೆ ಪ್ರತಿಫಲ ಸಿಗುತ್ತದೆ. ಹೊಸ ಹೂಡಿಕೆದಾರರು ಬೇಕಾದಷ್ಟು ಸಂಖ್ಯೆಯಲ್ಲಿ ಸಿಗದೇ ಹೋದಾಗ ಈ ಸರಣಿ ತುಂಡಾಗಿ ಹಳೆ ಹೂಡಿಕೆದಾರರಿಗೆ ಕೊಡಲು ಹಣ ಇರುವುದಿಲ್ಲ. ಹೂಡಿಕೆದಾರರು ದಿವಾಳಿಯಾಗುತ್ತಾರೆ. ಅದರೆ ಅಗಲೇ ಅದನ್ನು ಅರಂಭಿಸಿದ ಖದೀಮರು ತಮ್ಮ ಜೇಬು ತುಂಬಿಸಿ ಆಗಿರುತ್ತದೆ. ಇನ್ನು ಕೆಲವೊಮ್ಮೆ ಈ ಪೋಂಜ್ಹೀ ಭೂತಗಳು ಸಂಗ್ರಹಿಸಿದ ನಿಧಿಯನ್ನು ಎತ್ತಿ ಗಂಟು ಮೂಟೆ ಕಟ್ಟಿ ರಾತ್ರೋ ರಾತ್ರಿ ಪರಾರಿಯಾಗುತ್ತಾರೆ. ಹೀಗೆ ಎಲ್ಲರ ಹೂಡಿಕೆಯೂ ಒಂದು ದಿನ ತೆಳುಗಾಳಿಯಲ್ಲಿ ಆವಿಯಾಗಿ ಹೋಗುತ್ತದೆ.

now the moral of the story is. . .

ಯಾವುದೇ ಒಂದು ಹಣಕಾಸಿನ ವ್ಯವಸ್ಥೆಯಲ್ಲಿ ಪ್ರತಿಯೊಂದು ಕಾಲಘಟ್ಟದಲ್ಲೂ ಬಡ್ಡಿದರ ‘ಇಂತಿಷ್ಟು’ ಎಂದು ಇರುತ್ತದೆ. ರಿಸರ್ವ್ ಬ್ಯಾಂಕ್ ಇದನ್ನು ನಿರ್ಧರಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಅದರಿಂದ ಅತೀ ಹೆಚ್ಚು ಬಡ್ಡಿದರದ ಆಮಿಷ ತೋರಿಸಿ ದುಡ್ಡು ಸಂಗ್ರಹ ಮಾಡಿದಲ್ಲಿ ಅದನ್ನು ಯಾವುದೇ ನೈಜ ಉದ್ಯಮದಲ್ಲಿ ಹೂಡಿ ಘೋಷಿತ ಪ್ರತಿಫಲ ನೀಡುವುದು ಸಾಧ್ಯವಿರುವುದಿಲ್ಲ. ಒಂದು ವೇಳೆ ಸಾಧ್ಯವಿದ್ದರೂ, ಪ್ರಚಲಿತ ಬ್ಯಾಂಕು ದರಕ್ಕಿಂತ ಅತಿಹೆಚ್ಚನ ದರದಲ್ಲಿ ಅವರು ಡೆಪಾಸಿಟ್ ಯಾಕೆ ಪಡೆಯಬೇಕು? ಬ್ಯಾಂಕಿನಿಂದಲೇ ಸಾಲ ಪಡೆಯಬಹುದಲ್ಲವೇ? ಕೇವಲ ಜನರನ್ನು ಮರುಳು ಮಾಡಲು ಯಾವ್ಯಾವುದೋ ವಿಚಿತ್ರ ಉದ್ಯಮಗಳ ಬಗ್ಗೆ ಬುರುಡೆ ಬಿಟ್ಟು ಅದರಲ್ಲಿ ಭಾರೀ ಲಾಭ ಸಿಗುತ್ತಾ ಇದೆ ಎಂದು ಜನರನ್ನು ನಂಬಿಸುತ್ತಾರೆ. ಅದನ್ನೆಲ್ಲಾ ಬಿಟ್ಟು ದುಡ್ಡಿನ ಸರಳ ತತ್ವಗಳನ್ನು ಮನದಟ್ಟು ಮಾಡಿಕೊಂಡಲ್ಲಿ ಈ ಪೋಂಜ್ಹೀ ಭೂತಗಳಿಂದ ಬಚಾವಾಗಿ ಬದುಕಬಹುದು. ಅತಿಯಾದ ದುಡ್ಡಿನಾಸೆಗೆ ಮರುಳಾಗಿ ಅತೀ ಹೆಚ್ಚಿನ ಬಡ್ಡಿದರಗಳ ಹಿಂದೆ ಹೋದಲ್ಲಿ ಪೋಂಜ್ಹೀ ಭೂತದ ಪೀಡೆಗೆ ಬಲಿಯಾಗುವುದು ಗ್ಯಾರಂಟಿ. ಹಾಗೆ ಆಗಿ ಹೊಂಡಕ್ಕೆ ಬಿದ್ದ ಮೇಲೆ ಯಾವ ಭೂತಕೋಲವೂ ಉಪಯೋಗಕ್ಕೆ ಬಾರದು.

ಎಚ್ಚರವಿರಲಿ !

‍ಲೇಖಕರು avadhi

11 February, 2011

3 Comments

  1. Vinay

    Can I get the PDF versions of the ‘Kaasu Kudike’ articles?

    • Anonymous

      no you cant

  2. Niranjan Kumar

    ತುಂಬಾ ಒಳ್ಳೆಯ ಬರಹ. ಪೊಂಜ್ಹೀಯಂಥವರು ಎಷ್ಟೆಷ್ಟೋ ಜನರು ಬಂದು ನಾಮ ಹಾಕಿದರೂ ನಮ್ಮ ಜನಗಳಿಗೆ ಬುದ್ಧಿ ಬರುವುದಿಲ್ಲ. ಇನ್ನು ಇಂಥದೇ ಕೆಲಸಗಳನ್ನು ಅಧಿಕೃತವಾಗಿಯೂ ಮಾಡುವವರಿದ್ದಾರೆ. ಉದಾಹರಣೆಗೆ ಮಣಿಪಾಲ ಫೈನಾನ್ಸ್-ನವರ ಐಸಿಡಿಎಸ್. ಇದರಲ್ಲಿ ಹಣ ಹೂಡಿದ ನನ್ನ ಸಂಬಂಧಿಕರು ಇಬ್ಬರೂ ಸಹ ಕನಿ್ಷ್ಟ ತಲಾ ನಾಲ್ಕು ಲಕ್ಷ ಕಳೆದುಕೊಂಡರು. ಅವರಲ್ಲಿ ಒಬ್ಬರು ತಮ್ಮ ನಿವೃತ್ತಿ ವೇತನದ ಮುಕ್ಕಾಲು ಪಾಲು ಹಣ ಹೂಡಿದ್ದರು. ಈ ಕಂಪೆನಿಯಿಂದ ವಂಚನೆಗೊಳಗಾಧ ಇಂತಹ ನೂರಾರು ಜನರಿದ್ದಾರೆ. ಅತ್ಯಂತ ವ್ಯವಸ್ಥಿತವಾಗಿ ಮಾಡಲಾದ ಈ ವಂಚನೆಯ ಬಗ್ಗೆಯಾಗಲೀ , ಇದರ ಹಿಂದಿರುವ, ಮಾಧ್ಯಮಗಳಿಗೆ ಈಗಲೂ ಭಾರೀ ಸಂಭಾವಿತರಂತೆ ಪೋಸು ಕೊಡುವ, ತಮ್ಮದೇ ಮಾಧ್ಯಮಗಳನ್ನೂ ಹೊಂದಿರುವ ಮಣಿಪಾಲದ ಖದೀಮ ಪೊಂಜ್ಹೀಗಳ ಬಗ್ಗೆಯಾಗಲೀ ಯಾವುದೇ ಮಾಧ್ಯಮಗಳಲ್ಲೂ ಸರಿಯಾದ ವರದಿ ಆಗದೇ ಇರುವುದು ಖೇದಕರ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading