ಸತ್ಯಮಂಗಲ ಮಹಾದೇವ
ಒಗಟು ಬಿಡಿಸುವರಿಲ್ಲ
ಒಡಪು ನುಡಿವವರಿಲ್ಲ
ಗಂಟು ಗಂಟಾಗಿರುವ ಕಾಲದ ಘನವನು
ಊರೂರು ತಿರುಗಿ ಅಲೆದು ಹಾರಿದ
ಹೇ ಕಾಲಪಕ್ಷಿಯೆ
ನನ್ನ ಕನ್ನಡದ ತಿಳಿ ಬೆಳಕಿನಲ್ಲಿ ತಿಳಿಸಿ ಹೇಳೆ.
ನಂಬಿದ ನೆನಪನು
ನೆಪವಿಲ್ಲದ ಸುಳ್ಳಿಗೆ ಹೆಣೆದು
ಬೆಸುಗೆಯ ಹದಗೊಳಿಸುವ ಕಲೆ
ಎಷ್ಟೊಂದು ಕಷ್ಟ ಕಲಿಯುವುದು
ಹೇ ಕಾಲಪಕ್ಷಿಯೆ
ನನ್ನ ದುಗುಡದ
ಈ ಬುದ್ದಿಯ ಬಗ್ಗಡಕೆ
ಹಂಸೆಯಾಗಿದ್ದ ಆ ನಿನ್ನ ಅನುಭವದ
ಮಾತುಗಳ ಬಿಡಿಸಿ ಹೇಳೆ.
ಹರಾಜಿಗಿಟ್ಟಿರುವ ಮಾನದ ಬಗ್ಗೆ
ಯೋಚಿಸುವುದು ಹೇಗೆ
ಸತ್ಯ-ಅಸತ್ಯಗಳ ಅಂತರಂಗವನು ಕುರಿತು
ಅರಿಯುವುದು ಹೇಗೆ
ನಾದವಿಲ್ಲದ ಶಬ್ದದ ಬಂಜೆತನವನು ಕಂಡು
ಹಿಂಸೆಯ ಮುಖವಾಡಗಳ ಕಳಚುವುದ
ಕಲಿಯುವುದು ಹೇಗೆ
ಮತ್ತೆ ಮತ್ತೆ ಅರ್ಥವಾಗದ ವಸ್ತುಗಳ ಅರಸುತ್ತಾ
ಮಾಗಿದ ಹಣ್ಣೊಳಗೆ ಹುಳಗಳ ಕಂಡು
ಹೆಪ್ಪಾಗದ ಹಾಲಿನ ಪುರುಷತ್ವಗಳ ಅರಣ್ಯದಲಿ
ನೆಡೆಯುವುದು ಹೇಗೆ
ಅಸಹಾಯಕ ನಿಸ್ತಂತುಗಳ ನೀರವತೆಯ ಜಂತುಗಳು
ಉಸಿರಾಡುವ ಈ ನಾಜೂಕಿನ ಆಟಗಳ ನಡುವೆ
ನಿಲ್ಲುವುದಾದರೂ ಹೇಗೆ
ನೀರ ಮೇಲೆ ನೆಡೆಯುವ ಹಗುರತೆಯ ಸಾಧಿಸಿದ
ನಿನ್ನ ಕಣ್ಣ ಬೆಳಕಿನ ನಡಿಗೆಗೆ
ನನ್ನ ರೂಪಾಂತರಿಸುವ ದಾರಿಯಲಿ
ಹೇ ಕಾಲ ಪಕ್ಷಿಯೇ ಜೊತೆಯಾಗೆ
ಬಣ್ಣದ ಕೆಸರು ಆನಂದದ ಒಳಗೆ
ಕತ್ತಲು ಹಾಸಿ ಹೊದ್ದು ಮಲಗಿದೆ ಬೆಳಕಿನಲ್ಲಿ
ತಿಳಿಗಾಳಿಯ ಸೀಳಿ ಹಾರುವ
ಎದೆಗಾರಿಕೆಯ ಕಲಿಸಿಕೊಡು
ರಕ್ತದ ನದಿಗಳ ದಾಟಬೇಕಿದೆ
ಕ್ರೌರ್ಯ ಕಾಲಿಗೆ ಅಂಟದAತೆ
ನೆಲವಿಲ್ಲದ ನೆಲೆಯ ಹುಡುಕಾಟದ
ಹಂಬಲದಲ್ಲಿ ಜೊತೆಗಾರನಾಗಿರು
ಹೇ ಕಾಲ ಪಕ್ಷಿಯೆ
0 ಪ್ರತಿಕ್ರಿಯೆಗಳು