ಜಯಂತ ಕಾಯ್ಕಿಣಿ ‘ಪಾರ್ಲರ್ ಕಿಟಕಿಯಿಂದ’ ಎನ್ನುವ ಲಹರಿಯನ್ನು ಕಟ್ಟಿಕೊಟ್ಟಿದ್ದರು. ಅದು ‘ಅವಧಿ’ಯಲ್ಲಿ ಮೊನ್ನೆ ಮೊನ್ನೆ ತಾನೇ ಪ್ರಕಟವಾಗಿತ್ತು.
ಅದು ಕಟ್ಟಿಕೊಟ್ಟ ಶಬ್ದ ಚಿತ್ರಗಳು ಗಾಢವಾಗಿ ತಾಕಿ ಸಂಯುಕ್ತಾ ಪುಲಿಗಳ್ ತಮ್ಮ ಲಹರಿಯನ್ನೂ ಜೋಡಿಸಿದರು.
ಕಾಯ್ಕಿಣಿ ಎಲ್ಲಿ ನಿಲ್ಲಿಸಿದ್ದರೋ ಅಲ್ಲಿಂದ ಸಂಯುಕ್ತಾ ಮುಂದುವರೆಸಿದ್ದರು.
ನಿಮಗೂ ಇಷ್ಟವಾದರೆ ಅಥವಾ ನಿಮ್ಮ ಮನದೊಳಗೆ ಈ ಲಹರಿ ಇನ್ನೂ ಬೆಳೆದರೆ ನಮಗೆ ಕಳಿಸಿಕೊಡಿ ಎಂದು ಕೇಳಿದ್ದೆವು ..
ಹಾಗೆ ಮುಂದುವರೆದ ಎರಡು ಲಹರಿಗಳು ಇಲ್ಲಿವೆ. ಅದಕ್ಕೆ ಎಸ್ ಪಿ ವಿಜಯಲಕ್ಷ್ಮಿ ತಮ್ಮದೊಂದು ಹೂ ಸೇರಿಸಿದರು.
ನಂತರದ ಸರದಿ ಚೈತ್ರಾ ಅವರದ್ದು. ತಮ್ಮ ಹುಬ್ಬುಗಳ ಲೋಕವನ್ನು ಅವರು ಹಿಡಿದಿಟ್ಟರು.
ರೇಷ್ಮಾ ನಾರಾಯಣ ಉಪ್ಪುಂದ ಈ ಲಹರಿಯನ್ನು ಮುಂದುವರಿಸಿದರು. ಕರ್ಚೀಫಿನ ಮೂಲಕ
ಪಾರ್ಲರ್ ನಲ್ಲಿ ಇದುವರೆಗೆ ಇಣುಕಿದ್ದು ಹೆಣ್ಣು ಮಕ್ಕಳು ಮಾತ್ರ ಆದರೆ ಮೊದಲ ಬಾರಿಗೆ ಪುರುಷನೊಬ್ಬರು ರಂಗಪ್ರವೇಶ ಮಾಡಿದರು. ವೀರೇಶಕುಮಾರ ಬೆಟಗೇರಿ ಪಾರ್ಲರ್ ಹೊಕ್ಕರು.
ಸ್ಫೂರ್ತಿ ಗಿರೀಶ್ ಪಾರ್ಲರ್ ಹೊಕ್ಕ ನಂತರ ಈಗ ರವಿ ಕುಲಕರ್ಣಿಎಂಟ್ರಿ ಕೊಟ್ಟಿದ್ದಾರೆ
ನಿಮ್ಮ ಮನದಾಳದೊಳಗೂ ನವಿರಾದ ಭಾವಗಳಿದ್ದರೆ ತಡ ಯಾಕೆ?
ನೀವೂ ಬರೆದು ಕಳಿಸಿ
ರವಿ ಕುಲಕರ್ಣಿ
ಹಾಗೆ ಹುಬ್ಬು ಮೇಲೇರಿಸಿ ಕಣ್ಣು ಮುಚ್ಚಿದವಳಿಗೆ ನೆನಪಾದದ್ದು ತನ್ನ ಮದುವೆಯ ಘಟನೆ. ಅಂದು ಶನಿವಾರ, ಕಾಲೇಜ್ ಮುಗಿಸಿ ಮನೆ ತಲುಪಿದವಳಿಗೆ ಶಾಕಿಂಗ್ ನ್ಯೂಸ್ ಕಾದಿತ್ತು. ಟೀ ಮಾಡಿಕೊಂಡು ಬಂದ ಅಮ್ಮ, ನಾಳೆ ಬೆಂಗಳೂರಿನಿಂದ ಗಂಡಿನ ಕಡೆಯವರು ಬರ್ತಾರೆ, ಎಲ್ಲೂ ಹೋಗದೆ ಮನೆಯಲ್ಲೇ ಇರಬೇಕು ಅಂತ ಸಣ್ಣನೆಯ ಬಾಂಬ್ ಹಾಕಿದ್ದಳು. ಅಮ್ಮನ ಈ ತಾಕೀತು ಇವಳನ್ನು ಬೀರುಗಾಳಿ ಮರವನ್ನು ಅಲ್ಲಾಡಿಸುವಂತೆ ನಕಾಶಿಕಾಂತ ಅಲ್ಲಾಡಿಸಿಬಿಟ್ಟಿತ್ತು. ಟೀ ಕಪ್ಪಲ್ಲಿ ಬಿದ್ದ ಅವಳ ಕಣ್ಣೀರಿನ ಹನಿಯಿಂದ ಉಂಟಾದ ಅಲೆಗಳು ಅವಳ ಸೋದರತ್ತೆಯ ಮಗನ ಚಿತ್ರವನ್ನೇ ತೇಲಿಸುತ್ತಿದ್ದವು.
ಚಿಕ್ಕಂದಿನಿಂದಲೂ ಕೂಡಿ ಬೆಳಿದವಳಿಗೆ ಸೋದರತ್ತೆಯ ಮಗನಲ್ಲಿ ತಿಳಿಯಾದ ಪ್ರೀತಿ. ಇಬ್ಬರೂ ಜೊತೆ ಜೊತೆಗೆ ಅಲೆದಾಟ, ಮೂವೀ, ಶಾಪಿಂಗ್ ಅಂತೆಲ್ಲಾ ನಡೆತಿತ್ತು. ತುಂತುರು ಮಳೆಯಲ್ಲಿ ಬೈಕ್ಅಲ್ಲಿ ಸುತ್ತಾಡಿದ್ದು, ಬೇಕಲ್ ಕಡಲ ದಡದಲ್ಲಿ ಕೈ ಕೈ ಹಿಡಿದು ನಡೆದ ಕ್ಷಣಗಳು, ಮಡಿಕೇರಿಯ ಮಂಜಲ್ಲಿ ಬೆಳಿಗ್ಗಿನ ವಾಕಿಂಗ್, ಶಟಲ್ ಆಡುತ್ತಿದ ವೇಳೆ ನಡೆದ ಜಗಳ ಇತ್ಯಾದಿ ಅಕ್ಷಿಪಟದಲ್ಲಿ ಹಾದುಹೋಗಿ ಅವಳನ್ನು ಕಂಪಿಸುವಂತೆ ಮಾಡಿದ್ದವು. ಇಬ್ಬರಲ್ಲೂ ಹೇಳಿಕೊಳ್ಳದ ಪ್ರೇಮವಿತ್ತು.ಅಪ್ಪ ಅಮ್ಮನ ಮೇಲಿದ್ದ ಗೌರವ &ಪ್ರೀತಿ, ಸೋದರತ್ತೆಯ ಮಗನ ಪ್ರೀತಿಯನ್ನು ಗೌಣ ಮಾಡಿತ್ತು.
ಮರುದಿನ ನೋಡಲು ಬಂದ ಹುಡುಗನೋ ಸಲ್ಮಾನ್ ಖಾನ್ನಂತೆ ಸುರಸುಂದರಾಂಗ, ಅಲ್ಲದೆ ಕೈ ತುಂಬಾ ಸಂಪಾದಿಸುವ ಮೆಕ್ಯಾನಿಕಲ್ ಇಂಜಿನಿಯರ್. ಒಳ್ಳೆಯ ಮನೆತನದವನ. ಮೋಸ್ಟ್ ಎಲಿಜಿಬಲ್ ಬ್ಯಾಚಲರ್. ಚುಟುಕೆಯಂತೆ ನಡೆದ ನೋಡುವ ಶಾಸ್ತ್ರ, ಮದುವೆಯ ಸಂಭ್ರಮವನ್ನೇ ಹೊತ್ತು ತಂದು ಹೊಸ ತಲ್ಲಣವನ್ನೇ ಸೃಷ್ಟಿಸಿತ್ತು. ಕಿಟಕಿಯಿಂದಾಚೆ ಕಾಣುವ “ಸಮಾಜ”ಕ್ಕೆ ಹೆದರಿ ಕಂಕಣಕ್ಕೆ ಒಪ್ಪಿಕೊಂಡಿದ್ದಳು. ಮುಂದೆ ನಡೆದಿದ್ದೆಲ್ಲವೂ ಇತಿಹಾಸ ಎನ್ನುವಂತೆ ಇವಳ ಗಂಡ ಹೂವಂತೆ ಕಾಪಾಡಿಕೊಂಡು ಬಂದ ಇವಳನ್ನು. ಹೊಸ ಮನೆಯ ಕಟ್ಟಿದಗಂತಲೂ ” ನೀನೇ ನನ್ನ ಬದುಕು, ಬದುಕಿಗೊಂದು ಸೂರು ಈ ಮನೆ” ಎಂದು ಕೈ ಹಿಡಿದು ಹೇಳಿದ ಮಾತಿಗೆ, ಅವನ ನಿಷ್ಕಲ್ಮಶ ಪ್ರೇಮಕ್ಕೆ ಕೊಚ್ಚಿ ಹೋಗಿದ್ದಳು. ಮದುವೆಯ ದಿನ ಜಗತ್ತೇ ತನಗೆ ಮುಳುವಾಗುತ್ತಿದೆಯೆಂದೆನಿಸಿದವಳಿಗೆ ಅಂದು ಜಗತ್ತೇ ಹೂಮಳೆಗರೆದಂತೆ ಕಾಣುತಿತ್ತು.
ಕೆಳಗೆ ಹುಡುಗಿಗಾಗಿ ಕಾಯುತ್ತಿದ ಹುಡಗನೆದೆಯಲ್ಲಿ ವಿಚಿತ್ರ ಇಲಿ ಸಂಕಟ..!ತನ್ನ ಸುತ್ತಲಿರವ ಸಮಾಜಕ್ಕೆ ಸವಾಲ್ ಹಾಕಿ ಮುದುವೆಗೆ ಸಿದ್ದನಾಗಿರುವವನಿಗೆ ಇನ್ನಿಲ್ಲಿದ ಚಿಂತೆ.. ನಾಳೆಯಿಂದ ಕಿರಾಣಿ, ತರಕಾರಿ, ಹಾಲು, ಮೊಸರು ಇತ್ಯಾದಿ ತಂದು ಹಾಕುವ, ಮನೆಯ ಸೂತ್ರಧಾರನಾಗುವ ಸಂತಸದ ಭಯ..!! ಕೂಸು ಹುಟ್ಟೋಕು ಮುಂಚೆಯೇ ಕುಲಾವಿ ಹೋಲಿಸದಂತೆ, ಇವನು ಮಕ್ಕಳ ಲಾಲನೆ, ಪಾಲನೆ, ಶಿಕ್ಷಣದ ಬಗ್ಗೆಯ ವಿಚಾರದಲ್ಲೂ ಮುಳಗಿ ಹೋಗಿದ್ದ. ಇಷ್ಟೆಲ್ಲಾ ಉದ್ವೇಗಗಳು ಪ್ರೀಯತಮೆಯ ನಗು ಮೊಗವ ಕಂಡ ಕ್ಷಣ ಸದ್ದಿಲ್ಲದೆ ಸಮಾಜದಲ್ಲೇ ಮರೆಯಾದವು….
ಐಬ್ರೊ ಮುಗಿದ ತಕ್ಷಣ ಫೇಶಿಯಲ್ ಮಾಡ್ಲಾ ಎಂದು ಬ್ಯೂಟೀಶಿಯನ್ ಕೇಳಿದಾಗಲೇ ಅರಿವಾಗಿದ್ದು ನಡುವಯಸಿನ ಈ ಸುಂದರಿಗೆ..! ಫೇಸ್ಬುಕ್ಲ್ಲಿ ಎಂದೊ ಜೋಗಿ ಬರೆದ “ಬದುಕು ಮಾಯೆಯ ಮಾಟ” ಎನ್ನುವ ಸಾಲುಗಳು ನೆನಪಾಗಿ ನಸು ನಕ್ಕು ಇಷ್ಟೇ ಸಾಕು ಎನ್ನುತ್ತಾ ಬಿಲ್ಲ್ ಪೇ ಮಾಡಿ ಎದ್ದವಳಿಗೆ ಕಂಡಿದ್ದು ಉತ್ಸಾಹದ ಬುಗ್ಗೆಯಿಂದ ಕಿಟಕಿಯ ಗಾಜೋರೆಸುತ್ತಿದ್ದ ಆ ಸಣ್ಣ ಪೋರ.. ಮತ್ತೆ ನಾಣ್ಯ ಕೆಳಗೆ ಬೀಳಬಾರದೆಂದು ಎಡಗೈಯಲ್ಲೇ ಗಟ್ಟಿಯಾಗಿ ಹಿಡಿದಿದ್ದ.. ಅವನ ತಲೆ ನೇವರಿಸಿದ ಆ ಹೆಂಗಸು, ನಿನ್ನ ಕೈಲಿರುವ ನಾಣ್ಯದ ಬೆಲೆ ಕೋಟಿಗಿಂತಲೂ ಹೆಚ್ಚು ಕಂದ, ಅದಕ್ಕೆ ನಿನ್ನ ನಗುವಿನ ಲೇಪನವಿದೆ..!! ಚೆನ್ನಾಗಿರು ನೀನು…, ಎಂದು ಹರಿಸಿ ಕೆಳಗೆ ನಿರಂತರವಾಗಿ ಅನಾದಿಕಾಲದಿಂದಲೂ ಬದುಕುತ್ತಿದ್ದ ಸಮಾಜದಲ್ಲಿ ಮರೆಯಾದಳು..!
0 ಪ್ರತಿಕ್ರಿಯೆಗಳು