ಸೂರ್ಯಣ್ಣನಸ್ತಂಗತ
ಡಾ. ಬಸವರಾಜ ಸಾದರ
ಸಂಜೆ ಹೊತ್ತಿಗೆ
ಕೆಂಪು ಸೂರ್ಯನ
ಅಸ್ತಂಗತ,
ಕತ್ತಲಾಗುವ ಮೊದಲೇ
ವ್ಯೋಮಾವ್ಯೋಮದಲ್ಲಿ
ಮೂಡಿತೊಂದು
ಬದ್ಧ ಬುದ್ಧತ್ವದ
ಹೊಸ ನಕ್ಷತ್ರ.
ಉಂಡ ನೋವು
ಕೆಂಡವಾಗಿ
ಕೆಂಪೇರಿತ್ತು ನಡೆ-ನುಡಿ,
ಭಿಡೆಯಿಲ್ಲದ
ಬಂಡಾಯದ
ಭೀಮ ಹೆಜ್ಜೆಯಲ್ಲಿ
ನಿತ್ಯದ ನಡೆಯೂ ಚೆನ್ನ,
ಸತ್ಯದ ನುಡಿಯೂ ಚೆನ್ನ.
ಅಂಬಲಿಯ ನೇಮವಂತೂ
ಚಿನ್ನ-ಅಮೃತಕ್ಕೂ ಚೆನ್ನ.
ಬಾಯ್ತುಂಬ
ತಮ್ಮ, ತಂಗಿ, ಅಕ್ಕ, ಅವ್ವರ
ಶಬ್ದಾರ್ಥಗಳ ಹುಗ್ಗಿ,
ಆದರೂ,
ಅಂಗಿ-ಅಂಗ- ಸಂಗ
ಸಹವಾಸಗಳಲ್ಲೂ
ಕೆಂಪಿನದೇ ಸುಗ್ಗಿ.
ಹಂಪನಾಗೆ ಕೊಟ್ಟ
ಪರ್ಯಾಯದ ಕಾಟ,
ಚಂಪಾ ಮನೆಯ
ಶತಮಾನದ ಊಟ,
ಸಾವಿರದ ಏಕಲವ್ಯರ
ಬೆರಳುಳಿಸಿ ಕಲಿಸಿದ
ನಿತ್ಯ ಪಾಠ-
ಗೆಣೆಯ- ಗೆಣತಿಯರ
ಮಹಾಕೂಟ!!
ಅವರವರ ಭಾವಕ್ಕೆ
ಥರಥರಗುಡಿಸಿಯೂ
ನಾಡಿನೆಲ್ಲರ ಬಾಯಲ್ಲೂ
ಉಳಿದ ಒಬ್ಬನೇ ಅಣ್ಣ
ನೀ ಚೆನ್ನಣ್ಣ,
ಮುಂಜಾನೆಯ ಬೆಳಕಾಗುವುದನ್ನೇ
ಕಾಯುತ್ತಿರುವೆ ಚೆನ್ನಣ್ಣ,
ನೋಡಬೇಕಿದೆ ನಾಳಿನ
ಸೂರ್ಯನಿಗೆ ಇರಬಹುದೆ
ನಿ ಬಿಟ್ಟು ಹೋದ ಕೆಂಪು ಬಣ್ಣ!!
ಕವನ ಅರ್ಥವತ್ತಾಗಿದೆ ಸಮಯೋಚಿತವಾಗಿದೆ ಸರ್.
ವಾಲೀಕಾರ ಸರ್ ಅವರ ವ್ಯೋಮಾವ್ಯೋಮ ಮಹಾಕಾವ್ಯದ ಪ್ರತ್ಯೇಕ ಕಿರುಭಾಗಗಳನ್ನು ಕಳುಹಿಸಿ ಅದರ ಬಗ್ಗೆ ಬರೆಯಲು ನಾಡಿನ ಅನೇಕರಿಗೆ ತಿಳಿಸಿದ್ದಂತೆ ನನಗೂ ತಿಳಿಸಿದ್ದರು. ನಾಲ್ಕೈದು ವರ್ಷ ಆಗಿರಬಹುದು. ಬರೆದ ಬರಹದ ಬಗ್ಗೆ ಬಾಯ್ತುಂಬ ತಂಗ್ಯವ್ವ ಅಂತ ಮಾತನಾಡಿಸಿ ತಮ್ಮ ಮೆಚ್ಚುಗೆ ತಿಳಿಸಿದ್ದರು. ಸಂಪಾದಿತ ಪುಸ್ತಕವೂ ಬಂದಿತು. ಅದೊಂದು ವಿನೂತನ ಸಾಹಸ, ಮಾದರಿ.
ನಾನು ವಾಲೀಕಾರ ಸರ್ ಅವರನ್ನು ನೋಡಿದ್ದು ನಾಲ್ಕು ಸಲ. ತುಮಕೂರಿನಲ್ಲೊಮ್ಮೆ, ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳಲ್ಲಿ ಮತ್ತೆ. ಅಷ್ಟೂ ಸಲವೂ ಡಿಟೋ ರಾಗರತಿಯ ರಂಗಿನಂಗಿ, ಮುಖದ ತುಂಬ ತುಂಬಿ ತುಳುಕುವ ನಗು. ಸರ್ ಅವರಿಗೆ ಅಂತಿಮ ನಮನಗಳು. ಎಲ್ಲಿದ್ದರೂ ನಗು ಹರಡುವ ಜೀವವದು.
ಒಳ್ಳೆಯ ನುಡಿ ನಮನ