ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಗೆ ಕಂಡ್ರೆ 'ಕಂಡಲ್ಲಿ ಗುಂಡು'..!


ಹಳ್ಳಿಯಲ್ಲಿ ಯಾರು ಹೇಳಿ ಅಲಾರ್ಮ್ ಸೆಟ್ ಮಾಡಿ ಮಲಗ್ತಾರೆ. ಕೋಳಿ ಕೂಗು, ಕಾಗೆ ಕೂಗು, ಹಕ್ಕಿಗಳ ಚಿಲಿಪಿಲಿಗಳೇ ಸಾಕು. ರಾತ್ರಿ ಬೇಗ ಮಲಗಿ, ಮುಂಜಾನೆ ಬೇಗ ಏಳೋದು ಹಳ್ಳಿ ಜೀವನ. ದಿನದ ಹೊತ್ತಿನಲ್ಲಿ ಗಡಿಯಾರಗಳ ಅಗತ್ಯಾನೂ ಇರೋದಿಲ್ಲ. ಅದು ಏನು ಇದ್ರೂ ಪೇಟೆ ಜನರಿಗೆ.
ಕೋಳಿಗಳು ಬಿಡಿ, ಹಕ್ಕಿಗಳಿಗೂ ಮರಗಳನ್ನ ಉಳಿಸುವ ಪ್ರಯತ್ನನೂ ಮಾಡ್ತಿಲ್ಲ ನಮ್ಮ ಜನ. ಇದು ಪ್ರಸ್ತುತ ಸ್ಥಿತಿ. ಆದರೆ ನಾನು ಹಳ್ಳಿಯ ವಾತಾವರಣದಲ್ಲೇ ಬೆಳೆದವಳು. ಚಾಪೆ ಹಾಸಿ ಮಲಗುತ್ತಿದ್ದ ನಮಗೆ, ಕಿಟಕಿಯ ಸಂದಿನಲ್ಲಿ ನುಸುಳಿಸುತ್ತಿದ್ದ ಬೆಳಕೇ ಗಡಿಯಾರ.
ಅಡುಗೆ ಮನೆಯಿಂದ ಅಮ್ಮನ ಗಡಿಬಿಡಿಯಲ್ಲಿ ಕೇಳೋ ಪಾತ್ರಗಳ ಸದ್ದು, ಅಪ್ಪ ಗುನುಗುತ್ತಿದ್ದ ಯಕ್ಷಗಾನ ಹಾಡುಗಳು.. ಇವುಗಳ ಮಧ್ಯೆ, ಅನ್ನಕಾಳುಗಳನ್ನು ತಿನ್ನಲು ಬರುವ ಕಾಗೆಗಳು. ಅವುಗಳ ಬಳಗವನ್ನು ಕರೆಯುವ ವೈಖರಿ.  ಇಷ್ಟೇ ಸಾಕಾಗ್ತಿದ್ದವು ಮುಂಜಾನೆಯ ಹೊತ್ತು ನಿರ್ಧರಿಸಲು. ಇವುಗಳಲ್ಲಿ ವಿಚಿತ್ರ ಅನಿಸೋದು ಕಾಗೆಗಳು.. ಸ್ವರ  ಕರ್ಕಶ. ಬಣ್ಣ ಕಪ್ಪು. ಶೈಲಿ ವಿಭಿನ್ನ.
ಕಾಗೆಗಳು ಹೊರಡಿಸೋ ಒಂದೊಂದು ಧ್ವನಿಗೂ ನಮ್ಮಲ್ಲಿ ಅರ್ಥಗಳಿವೆ. ಎಷ್ಟು ನಿಜ, ಎಷ್ಟು ಸುಳ್ಳು ಆ ದೇವರಿಗೆ ಗೊತ್ತು. ಆದ್ರೂ ನಂಬಿಕೆ ಜೋರಾಗಿಯೇ ಇದೆ. “ನೆಂಟರು ಬರಲಿದ್ದಾರೆ ಅನ್ನುವ ಸಂದೇಶವನ್ನು ಕೂಡ ಇವುಗಳು ನೀಡಬಲ್ಲವು. ಹಾಗಂತ ಇದು ಹಳ್ಳಿ ಜನ್ರ ನಂಬಿಕೆ. ಅದಕ್ಕಾಗಿನೇ ಒಂದು ಸ್ವರವನ್ನು ಹೊರಡಿಸುತ್ತವೆ. ಅದನ್ನ ಕೇಳೋದೇ ಒಂದು ಮಜಾ. ಅದು ನಮ್ಮ ಮನೆಯ ಬಳಿ ಯಾವಾಗ ಕೂಗುತ್ತೆ ಅಂತ ಕಾದು ಕುಳಿತ ಪ್ರಸಂಗಗಳು ಇವೆ. ಅಚ್ಚರಿ ಆಗೋದು ಕಾಗೆಗಳ ಬಗ್ಗೆ ಇರುವ ಪುರಾಣ ಕಥೆಗಳು, ಮಕ್ಕಳ ಕಥೆಗಳು, ಪೂರ್ವಜರು ಅನ್ನುವ ಮಾತುಗಳು. ಇವು ನಮ್ಮ ಊರಿನ ಕಥೆಗಳಾದ್ರೆ, ನಾವು ನೆಲೆಸಿರುವ ಸಿಂಗಾಪುರದ ಕಥೆಯೇ ಬೇರೆ.
The Republic of Singapore ಕಾಗೆಗಳ ಪ್ರವೇಶಕ್ಕೆಎಂಟ್ರಿಬಿಡಿ, “ವೀಸಾನೇ ಕೊಡ್ತಾ ಇಲ್ಲ. ಎಮರ್ಜೆನ್ಸೀ ಲ್ಯಾಂಡಿಂಗ್ ಗೆ ಅಂತೂ ರೆಡ್ ಸಿಗ್ನಲ್.  ಅಚ್ಚರಿ ಆಗಿರಬೇಕಲ್ಲಾ..! ಅಕ್ರಮ ಪ್ರವೇಶ – ನೋ ಚಾನ್ಸ್. ಹಂಗೂ ಕಷ್ಟಪಟ್ಟು ನುಸುಳಿತೋ, ಮುಗೀತು ಕಥೆ. ಕಾಗೆಗಳ ಪಾಲಿಗೆ ಇಲ್ಲಿ,ಕಂಡಲ್ಲಿ ಗುಂಡು”  ಒಂದೇ ಮಂತ್ರ. ಕಾಗೆಗಳು ಎಷ್ಟೇ ಹಾರಾಡಲಿ, ಸಿಂಗಾಪುರದಲ್ಲಿ ಮಾತ್ರ ಅವುಗಳ ಬೇಳೆ ಬೇಯೋದಿಲ್ಲ.
 
ನಾವು ಕೂಡ ಬಂದ ಹೊಸತರಲ್ಲಿ ಕಾಗೆಗಳನ್ನ ಹುಡುಕದ ಜಾಗಗಳಿಲ್ಲಮನೆಗಳ ಸುತ್ತಮುತ್ತ, ತಿನಿಸುಗಳು ಅಂಗಡಿ ಮುಂಗಟ್ಟುಗಳ ಬಳಿ,  ಮರಗಳು ಹೆಚ್ಚಾಗಿ ಇರೋ ಕಡೆ.  ಎಲ್ಲೂ ಇಲ್ಲ.  ಇಡೀ ದೇಶಕ್ಕೆ ದೇಶವೇ ಕಾಗೆಗಳಿಂದ ಮುಕ್ತ.  ಭಯಂಕರ ಮಾರಾಯರೇ ಚೀನೀಯರು.

ಬಹುಶ: ಚೀನಿಯರ ಜೋತಿಷ್ಯ ಶಾಸ್ತ್ರಕ್ಕೂ ಕಾಗೆಗಳಿಗೂ ಆಗಿ ಬರೋದಿಲ್ವಾ ಏನೋ ಎಂಬುದಾಗಿ ತಿಳಿದಿದ್ದೆವು. ನಾವು ಯೋಚನೆ ಮಾಡಿದ್ದೇ ಬೇರೆ, ಸತ್ಯಾಂಶವೇ ಬೇರೆ. ಇಲ್ಲಿನ ಜನತೆಯ ಪ್ರಕಾರ, ಕಾಗೆಗಳದ್ದು ಒರಟು ಸ್ವರ, ಅಶಿಸ್ತು, ಗಲೀಜು ಮಾಡುವ ಹಕ್ಕಿಗಳು.
ಇಲ್ಲಿನ ಕಾಗೆಗಳು ಮನುಷ್ಯರ ಮೇಲೂ ದಾಳಿ ಮಾಡ್ತವೆ ಅಂತೆ. ಇಂತಹ ಹಲವಾರು ದೂರುಗಳು ಬಂದ ಹಿನ್ನಲೆಯಲ್ಲಿ ಕಾಗೆಗಳ ನಿರ್ನಾಮಕ್ಕೆ ತಂಡಗಳೇ ರಚನೆಯಾಗಿವೆ. ಇದಕ್ಕೆಂದೇ ಸಮವಸ್ತ್ರ ಧರಿಸಿ ಕಾಲಲ್ಲಿ ಬೂಟ್, ಹೆಗಲಲ್ಲಿ ಗನ್ ಏರಿಸಿಕೊಂಡು ಕಾಗೆಗಳನ್ನ ಕೊಲ್ಲೋದು ಅಂದ್ರೆ, ನಿಜಕ್ಕೂ “ಹೀಗೂ ಉಂಟೇ..”.
ನಮ್ಮ ಊರಿನಲ್ಲಿ ಮಂಗಗಳ ಹಾವಳಿ ತಪ್ಪಿಸಲು ಮಾಡುವ ಕಾರ್ಯಾಚರಣೆಯ ಹಾಗೆ..!  ’ಕ್ರೋ ಶೂಟಿಂಗ್ ಇನ್ ಪ್ರೋಗ್ರೆಸ್. ಪ್ಲೀಸ್ ಕೀಪ್ ಅವೇ’ ಅನ್ನೋ ಬೋರ್ಡ್ ಗಳು ಕೆಲವೊಮ್ಮೆ ಕಾಣಸಿಗುತ್ತವೆ. ವಿಶೇಷವೆಂದರೆ, ಈ ಕಾಗೆಗಳಿಗೆ ಗುಂಡಿನ ಶಬ್ದಗಳು ಚಿರಪರಿಚಿತ. ಹಾಗಾಗಿ, ತಮ್ಮಿಂದ ಸಾಧ್ಯವಾಗುವ ರೀತಿಯಲ್ಲಿ ತಪ್ಪಿಸಿಕೊಳ್ಳುವ ತನ್ನೆಲ್ಲಾ ಪ್ರಯತ್ನವನ್ನು ಮುಂದುವರಿಸುತ್ತವೆ.
ಕಾಗೆಗಳನ್ನು ನಾವು ಪೂಜಿಸಿಲ್ಲಾಂದ್ರೂ, ಬದುಕೋಕೆ ಆದ್ರೂ ಬಿಡ್ತೀವಿ. ಆದರೆ ಇವರದ್ದು ಲೆಕ್ಕಾಚಾರಗಳೇ ಬೇರೆ. ಪ್ರವಾಸಿ ಸ್ಥಳಗಳಲ್ಲಿ ಭಯೋತ್ಪಾದಕ ದಾಳಿಯೇ ನಡೆದ ಹಾಗೇ Z+ ಭದ್ರತೆಯಲ್ಲಿ ಕಾಗೆಗಳ ಮರ್ಡರ್ ನಡೆಸಲಾಗುತ್ತದೆ. ನಮ್ಮಲ್ಲಿ ಮನುಷ್ಯ – ಮನುಷ್ಯರ ದಾಳಿಗೆ ಕೇಳೋರು ಇಲ್ಲ. ಇನ್ನೂ ಕೈಗೇ ಸಿಗದ ರೀತಿಯಲ್ಲಿ ಹಾರಾಡುವ ಕಾಗೆಗಳಿಗೆ ಎಲ್ಲಿದೆ ಸಮಯ.  ನಾವು ಉದ್ಧಾರ ಆಗೋದೇ ಬೇಕಾದಿಷ್ಟಿ ವೆ, ಕಾಗೆಗಳನ್ನ ಓಡಿಸಿ ಏನು ಸಾಧಿಸೋದು ಇದೆ ಅಲ್ವಾ..!!!!
ಬಡಪಾಯಿ ಕಾಗೆ..!

‍ಲೇಖಕರು Avadhi

11 July, 2018

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. suma kalasapura

    ಒಹ್ ಇದು ಗೊತ್ತಿರಲಿಲ್ಲ… ನಿಜವಾಗಿಯೂ ಸಂಕಟವಾಗತ್ತೆ

    • Shree vidya

      ಇಲ್ಲಿ ಜನತೆಯ ಅಹವಾಲುಗಳಿಗೆ ಮೊದಲ ಪ್ರಾದಾನ್ಯತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading