ಆ್ಯಷ್-ಟ್ರೇ
ಕಾವ್ಯಾ ಕಡಮೆ ನಾಗರಕಟ್ಟೆ
ಬೊಗಸೆಯೊಡ್ಡಿ ಬಳಿ ಕರೆವ ಅರಳು ಪುಷ್ಪದಲಿ
ಖರೇ ಖರೇ ಹೂವೊಂದರಳಿ ನಿಂತರೂ ಸರಿ
ಈ ಎದೆಯ ತುಂಬಾ ಭರಪೂರ ಉಷ್ಣ ಗೂಡು
ಮೇಲೆ ಸಿಂಪಡಿಸೋ ಬೂದು ಬಣ್ಣದಿಬ್ಬನಿಮೋಡ
ಶ್ವಾಸದುರಿಯಲಿ ನರಳಿದ ನೆರಳು
ಎರಡೇ ಬೆರಳಂಚಲ್ಲಿ ಹಿಡಿವ ಜೀವ
ತೂಗುವ ಸುರುಳಿ ಸುತ್ತಿದ ಸರಳು
ಜ್ವಾಲೆಗಾನಿಸಿಕೊಂಡೇ ಇರಿವ ಕಾರಿರುಳಂತೆ
ಸುಖ ಜಾರಿದರೂ ತೀರಿ ಹೋಗದು
ದುಃಖದುರುಳು
ಹುಚ್ಚನ ಸೆಳೆತ ವ್ಯಾಮೋಹಿಯ ಸ್ಪೂರ್ತಿ
ಕವಿಯ ತಾಲೀಮು ಹವ್ಯಾಸಿಯ ಮರುಳು
ನೊಂದ ಪ್ರೇಮಿಯ ವಿರಹದುತ್ತರ ಗೆದ್ದವನ
ಕೇಕೆ ಪ್ರವಾಸಿಯ ಶೋಟೈಮ್ ತೋರುಭಂಗಿ
ಧೈರ್ಯ ಬೇಡಿದವಳ ರಿವಾಜು ಕವಿತೆಯ
ಬಿಸಿ ಮೊನಚು- ಎಲ್ಲ ನಿನ್ನಲಿ ಲೀನವಾದರೂ-
ಎದೆಯ ಧಗೆ ಸುರುಳಿ ಸುರುಳಿ ವರುಣನ
ಸೇರಿ ಉಳಿದ ಭುವಿಯನ್ನಷ್ಟೇ ಉಳಿಸಿಕೊಂಡ
ಸುಡುವೊಡಲ ಗಾಯಗೊಂಡ ಹೂದಾನಿಯೇ-
ತಳಿರು ಪುಷ್ಪದುರಿಯಿಂದಲೇ ಅರಳಿ ನಿಂತ
ನಿಜದ ಹೂವಿಗೆ ಅದೇಕೆ ಮುಖವ ಕೊಟ್ಟು
ಉತ್ತರಿಸದೇ ಕರಗಿ ಹೋದೆ?
ನಿಜದ ಹೂವಿಗೆ ಮುಖಕೊಟ್ಟು….
ಉತ್ತರಿಸದೆ ಹೋದವನು ಪರಾಗದ ಕರಗದ ಗಂಧದಲಿ ಗಂಧವಾಗಿ ಹೋಗಿರಬಹುದು…
ಹೊಸ ಭಾವನೆಗಳ ಜೋಕಾಲಿ ನಿನ್ನ ಕವಿತೆ ಕಾವ್ಯಾ…
super kavite madame, chennagide
ಕವಿತೆ ಚನ್ನಾಗಿದೆ. ಭಾವಪೂರ್ಣವಾಗಿ ಅರ್ಥಕ್ಕೆ ಸಂವೇದನಾತ್ಮಕ ಸೋಕ್ಷ್ಮತೆ ಒಳಗೊಂಡು ಓದುವಂತೆ ಮಾಡುತ್ತದೆ.
ಚನ್ನಾಗಿದೆ
nice poem..