ಸಾವು ಬದುಕಿನ ನಡುವಿನ ಅನುಭವದ ಆ ದಿನ
ಡಾ. ರಾಜ್ ನಿಧನದ ಕವರೇಜ್ ನ ಆ ರೋಚಕ ಕ್ಷಣ
ವೃತ್ತಿ ಬದುಕಿನಲ್ಲಿ ಕವರೇಜ್ ಮಾಡಿದ ರೋಚಕ, ಭಾವುಕ ಮತ್ತು ಚಾಲೆಂಜಿಕ್ ಕ್ಷಣಗಳನ್ನು ನೆನಪಿಸುವ ಘಟನೆಗಳು ಯಾವುವು ಅಂದ್ರೆ ತಕ್ಷಣ ನೆನಪಿಗೆ ಬರೋದು ಆ ದಿನಗಳು. ನಿಜ ಡಾ. ರಾಜ್ ಕುಮಾರ್ ನರಂಹಂತಕ ವೀರಪ್ಪನ್ ಕಪಿಮುಷ್ಟಿಯಿಂದ ಹೊರಬಂದು ಮೊದಲ ಬಾರಿಗೆ ಬೆಂಗಳೂರಿಗೆ ಬಂದಿಳಿದಾಗ. ಮತ್ತು ಡಾ. ರಾಜ್ ಕುಮಾರ್ ನಿಧನದ ಆ ದಿನಗಳು..
ಡಾ. ರಾಜ್ ನೋಡೋ ಆ ಕ್ಷಣ
ಅಂದು ಐಐಎಸ್ ಸಿ ಯಲ್ಲಿ ಕಾರ್ಯಕ್ರಮವೊಂದಿತ್ತು. ನನಗಿಷ್ಟವಾದ ಕಾಟನ್ ಸೀರೆಯುಟ್ಟು ಕವರೇಜ್ ಗೆ ಹೋದ ದಿನವದು. ಕಾರ್ಯಕ್ರಮ ಕವರೇಜ್ ಮಾಡುತ್ತಿರುವಾಗ ಸಂಪಾದಕರು ಕಾಲ್ ಮಾಡಿದ್ರು. ಜ್ಯೋತಿ ನೀವು ಜಕ್ಕೂರಿಗೆ ಹೋಗಿ ಅಲ್ಲಿ ರಾಜ್ ಕುಮಾರ್ ಬರ್ತಾರೆ ಅಂದ್ರು. ಅಬ್ಬಾ ಎಂತಹ ಥ್ರಿಲ್ಲಿಂಗ್ ಕ್ಷಣವದು. ಎದ್ದೆವೋ ಬಿದ್ದೆವೋ ಅಂತ ಜಕ್ಕೂರಿಗೆ ಹೋದೆವು.
ರಾಜ್ ಕುಮಾರ್ ಕುಟುಂಬ, ಜನಜಂಗುಳಿ ಮಧ್ಯೆ ಡಾ. ರಾಜ್ ಕುಮಾರ್ ಆಗಮನಕ್ಕಾಗಿ ಕಾದೆವು.
ಅದೆಂತಾ ಕುತೂಹಲ. ಪದಗಳಲ್ಲಿ ಅದನ್ನು ಬಂಧಿಸಿಡೋದು ಕಷ್ಟ. ನೋಡು ನೋಡುತ್ತಿದ್ದಂತೆ ಜನರ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿತು. ತಳ್ಳಾಟ ನೂಕಾಟ..ಸೀರೆ ಬೇರೆ ಉಟ್ಟುಕೊಂಡು ಬಂದು ಇದೆಂತಾ ಕೆಲಸ ಮಾಡಿದೆ ಅಂತ ಮನಸ್ಸಲ್ಲೇ ಅಂದ್ಕೊಂಡೆ.
ಎಲ್ಲರು ಕಾಯುತ್ತಲೇ ಇದ್ರು. ಈಗ ಬರ್ತಾರಂತೆ, ಇನ್ನು ಸ್ವಲ್ಪ ಹೊತ್ತಲ್ಲಿ ಅಲ್ಲೇ ಕೇಳಿಬರುತ್ತಿದ್ದ ಉದ್ಘಾರದ ಮಧ್ಯೆ ಕಣ್ಣೆಲ್ಲಾ ಆಗಸದತ್ತ ನೆಟ್ಟಿತ್ತು. ಈಗ ಬರ್ತಾರಾ ಮತ್ತೆ ಬರ್ತಾರ ಅನ್ನೋ ಕುತೂಹಲವಿತ್ತು.
ಕಾಯುತ್ತಿರುವಿಕೆ ಮಧ್ಯೆ ಹೆಲಿಕಾಪ್ಟರ್ ಸದ್ದು ಕೇಳಿತ್ತು. ಎಲ್ಲರ ಕಣ್ಣುಗಳು ಬಾನಂಗಳದತ್ತ ನೆಟ್ಟಿತ್ತು. ಸೇರಿದ್ದ ಜನರನ್ನು ನಿಯಂತ್ರಣ ಮಾಡೋದು ತುಂಬಾನೆ ಕಷ್ಟವಾಗಿತ್ತು.
ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದಂತೆ ಬಸವಳಿದಂತೆ ಕಪ್ಪಾದಂತೆ ಕಾಣುತ್ತಿದ್ದ ರಾಜ್ ಇಳಿದದ್ದು ಮಬ್ಬಾಗಿ ಕಂಡಿತು. ಜನ ಜಂಗುಳಿಯಲ್ಲಿ ಏನು ಕಾಣದಾಯಿತು. ಜನರ ತಳ್ಳಾಟದಲ್ಲಿ ಎಲ್ಲಿ ಹೋಗುತ್ತಿದ್ದೇನೋ ಗೊತ್ತಿರಲಿಲ್ಲ. ಕ್ಯಾಮರಾ ಮ್ಯಾನ್ ಎಲ್ಲಿ ಕಳೆದು ಹೋದರೋ ಗೊತ್ತಾಗಲಿಲ್ಲ. ಮೊದಲ ದೃಶ್ಯಗಳವು. ರಾಜ್ ಕುಮಾರ್ ಅಪಹರಣದ ನಂತರ ಮೊದಲ ಬಾರಿಗೆ ನೋಡಲು ಸಿಕ್ಕಿದ ಅವಕಾಶವದು.
ಹೀಗೆ ತಳ್ಳಾಟದ ಮಧ್ಯೆ ರಾಜ್ ಆಗಮನದ ಕವರೇಜ್ ಮಾಡಿದ ಆ ಕ್ಷಣಗಳನ್ನು ನೆನಪಿಸಿಕೊಂಡ್ರೆ ಈಗಲು ನಮ್ಮ ವೃತ್ತಿಯಲ್ಲಿ ಎದುರಾಗುವ ಸವಾಲುಗಳು ಏನೆಂಬುದು ಅರ್ಥೆವಾಗುತ್ತದೆ. ಜೊತೆಗೆ ಅದನ್ನು ಕವರೇಜ್ ಮಾಡೋದು ಎಷ್ಟೊಂದು ಥ್ರಿಲ್ಲಿಂಗ್ ಅನ್ನೋದು ಅರಿವಾಗುತ್ತದೆ. ಆಗೊಮ್ಮೆ ಈಗೊಮ್ಮೆ ಈ ಕ್ಷಣಗಳು ಕಣ್ಣ ಮುಂದೆ ಹಾದು ಹೋಗುತ್ತಲೇ ಇರುತ್ತದೆ.
ರಾಜ್ ಕುಮಾರ್ ನಾನು ಕಂಡಿದ್ದು ಕೆಲವು ಬಾರಿ. ಒಮ್ಮೆ ಲಾಲ್ ಭಾಗ್ ಹತ್ರ ಗಿಡ ನೆಡುವ ಕಾರ್ಯಕ್ರಮವೊಂದರಲ್ಲಿ. ವಿಧಾನಸೌಧದಲ್ಲಿ ಸಿಗುತ್ತಿದ್ದ ನಗುಮುಖದ ಮೀಸೆ ರಂಗಣ್ಣ ಅವರ ಮೀಸೆ ತಿರುವಿ ರಾಜ್ ಕುಮಾರ್ ನಕ್ಕಿದ್ರು. ಇನ್ನು ಕೆಲವು ಬಾರಿ ಚಿತ್ರರಂಗದ ಗಣ್ಯರ ನಿಧನದ ಸಂದರ್ಭದಲ್ಲಿ ಬಂದು ಕಂಬನಿ ತುಂಬಿ ಎರಡು ಮಾತಾಡಿ ನಿರ್ಗಮಿಸುತ್ತಿದ್ರು. ಡಾ. ರಾಜ್ ಕುಮಾರ್ ಒಳಗಿದ್ದ ಭಾವಜೀವಿಯನ್ನು ನನಗೆ ಕಾಣಲು ಸಾಧ್ಯವಾಗಿದ್ದು ಹೀಗೆ.
ಮತ್ತೊಮ್ಮೆ ಮೋಹನ್ ಲಾಲ್ ಡಾ. ರಾಜ್ ನಿವಾಸಕ್ಕೆ ಆಗಮಿಸಿದ ದಿನ ನೆನಪಿದೆ. ಮಾತನಾಡಿದ ನಂತ್ರ ಅವರನ್ನು ಗೇಟ್ ವರೆಗು ಬೀಳ್ಕೊಟ್ಟು ಎಂತಾ ನಟ ಅವರಂತೆ ಅಭಿನಯಿಸಬೇಕೆಂದು ಉಸುರಿದ ನೆನಪಿದೆ.
ರಾಜ್ ನಿಧನ ತಂದ ಆಘಾತ, ಕವರೇಜ್ ನ ನೆನಪು
ಡಾ. ರಾಜ್ ಕುಮಾರ್ ನಿಧನದ ವಾರ್ತೆ ಕರ್ನಾಟಕವನ್ನು ಶೋಕ ಸಾಗರದಲ್ಲಿ ಮುಳುಗಿಸಿದ ದಿನವದು. ಇದ್ದಕ್ಕಿದ್ದ ಹಾಗೆ ಫೋನ್ ಕಾಲ್ ಬಂತು. ಡಾ. ರಾಜ್ ನಿಧನರಾಗಿದ್ದಾರೆ. ಆಗಲೇ ಕವರೇಜ್ ಗೆ ಕಚೇರಿ ಬಿಟ್ಟಿದ್ದೆ. ಫೋನ್ ಇನ್ ನಲ್ಲಿ ನಾನು ಹೋಗುತ್ತಿದ್ದ ಹಾದಿಯಲ್ಲಿ ಕಂಡದ್ದನ್ನೆಲ್ಲಾ ಆಂಕರ್ ಗೆ ವಿವರಿಸುತ್ತಲೇ ಸಾಗುತ್ತಿದ್ದೆ.
ಬೆಂಗಳೂರನ್ನು ಕವಿದ ನೀರವ ಮೌನ, ಹಾಗಂತೆ ಹೀಗಂತೆ ಅನ್ನೋ ಮಾತುಗಳು ..ಆಗಲೇ ಡಾ. ರಾಜ್ ಮನೆಯೆದುರು ಬಂದು ನಿಂತಿದ್ದೆವು. ಜನಜಂಗಳಿ, ಗೋಡೆ ಮೇಲೆ ಹತ್ತಿ ನಿಂತು ರಾಜ್ ನೋಡಲು ಹಪಹಪಿಸುತ್ತಿದ್ದ ಅಭಿಮಾನಿಗಳು…
ಇದ್ದಕ್ಕಿದ್ದ ಹಾಗೆ ಮೋಹನ್ ಲಾಲ್ ಬೀಳ್ಕೊಡಲು ಗೇಟ್ ವರೆಗೆ ಬಂದು ನಗೆ ಬೀರಿದ ರಾಜ್ ಮುಖ ಎದುರು ಬಂದ ಹಾಗಾಯಿತು…..ಈ ದೃಶ್ಯ ನೆನಪಾಗಿ ಆಗಲೋ ಸರಿದು ಹೋದಂತೆ ವಾಸ್ತವದ ಅರಿವಾಯಿತು. ನಿಜ ಇಂದು ರಾಜ್ ಬೀಳ್ಕೊಡೋ ದಿನವಾಗಿತ್ತು ಅಂದ್ಕೊಂಡೆ.
ಕೆಲವರು ಧೊಪ್ಪನೆ ಬಿದ್ರು. ಪೋಲೀಸರು ನಿಯಂತ್ರಿಸಲು ಹರಸಾಹಸ ಪಡುತ್ತಿದ್ರು. ಲಾಟಿ ಚಾರ್ಜ್ ಮಾಡಲು ಆರಂಭಿಸಿದ್ರು, ರಾಜ್ ಮನೆಯಂಗಳದತ್ತ ಕಣ್ಣು ಹರಿಸಿದೆ. ಡಾ. ರಾಜ್ ಅವರ ಇಚ್ಛೆಯಂತೆ ಅವರ ಕಣ್ಣುಗಳನ್ನು ತೆಗೆಯಲಾಗುತ್ತಿತ್ತು.
ಹೊರಗೆ ಅಭಿಮಾನಿಗಳು ಹೆಚ್ಚುತ್ತಲೇ ಹೋದ್ರು. ಇದ್ದಕ್ಕಿದ್ದ ಹಾಗೆ ಮತ್ತೆ ಗೋಡೆ ಹತ್ತಿದವರೆಲ್ಲಾ ದೊಪ್ಪನೆ ಬಿದ್ರು. ನಮ್ಮ ಮೇಲೆ ಬೀಳೋ ಸಾಧ್ಯತೆ ಇತ್ತು. ಹಾಗೆ ಹಿಂದೆ ಸರಿದೆ. ಕ್ಯಾಮರಾಮ್ಯಾನ್ ಎಲ್ಲೋ, ನಾನೆಲ್ಲೋ ಗೊತ್ತಿಲ್ಲ. ಆ ಕ್ಷಣಗಳು ನಿಯಂತ್ರಣಕ್ಕೆ ಸಿಗದವು. ಪೋಲೀಸರ ಪರದಾಟ ನೋಡಿ ನಿಜವಾಗಿಯು ಎಷ್ಟೊಂದು ಕಷ್ಟಗಳನ್ನು ನಿಭಾಯಿಸಬೇಕಲ್ಲ ಇವರು ಅನ್ನಿಸಿತು.
ಡಾ. ರಾಜ್ ಪಾರ್ಥೀವ ಶರೀರ ಮನೆಯಿಂದ ಹೊರಗೆ ತರುತ್ತಾರೆ ಅಂತ ಯಾರೋ ಹೇಳಿದ್ರು. ತಳ್ಳಾಟ ಹೆಚ್ಚುತ್ತಲೇ ಹೋಯಿತು. ಎಲ್ಲಿ ಹೋಗಬೇಕೆಂಬುದೇ ತಿಳಿಯಲಿಲ್ಲ. ಎದುರುಗಡೆ ನೋಡಿದ್ರೆ ಟೈರ್ ಹತ್ತಿ ಉರೀತಿತ್ತು. ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಸಿಡಿಸಿದ್ರು. ಕಣ್ಣು ಬಿಡೋಕೆ ಆಗದ ಪರಿಸ್ಥಿತಿ. ಕೆಲವರು ದೊಡ್ಡ ದೊಡ್ಡ ಕಲ್ಲು ಬಿಸಾಡುತ್ತಿದ್ರು. ಅದ್ರಿಂದ ತಪ್ಪಿಸಿಕೊಂಡು ಹೋಗೋದು ದೊಡ್ಡ ಸವಾಲಾಗಿತ್ತು.
ನನ್ನ ಸಹೋದ್ಯೋಗಿಗಳಾದ ನವೀನ್, ಅರ್ಪಣ ಕೂಡ ಜೊತೆಗಿದ್ರು. ಎಲ್ಲಿ ಹೋಗುತ್ತಿದ್ದೇವೋ ಏನಾಗುತ್ತಿತ್ತೋ ಗೊತ್ತಿಲ್ಲ. ಕೆಲವು ಪೋಲೀಸ್ ವಾಹನಗಳಲ್ಲಿ ಕೆಲವರನ್ನು ತುಂಬಲಾಗುತ್ತಿತ್ತು. ಕಲ್ಲುಗಳು ಬೀಳುತ್ತಲೇ ಇದ್ದವು. ನಾವು ಓಡುತ್ತಲೇ ಇದ್ದೆವು. ಎಲ್ಲಿ ಎಂಬುದರ ಅರಿವಿಲ್ಲ. ಮುಂದೆ ಅಲ್ಲೆಲ್ಲೋ ಅಡಗಿದೆವು ಮತ್ತೆ ಓಡುತ್ತಿದ್ದೆವು. ಆ ಕ್ಷಣಗಳಲ್ಲಿ ಏನು ಬೇಕಾದ್ರು ಆಗಬಹುದಿತ್ತು. ಹೊತ್ತಿ ಉರಿಯೋದು ಅಂದ್ರೆ ಏನು ಎಂಬುದು ಆಗ ಅರಿವಾಗಿತ್ತು.
ಸಾವಿನ ಸವಾಲುಗಳನ್ನು ಕಣ್ಣಿಂದ ನೋಡಿದ ಕ್ಷಣಗಳವು. ಅತ್ಯಂತ ಚಾಲೆಂಜಿಂಗ್ ಆಗಿ ಆ ಕ್ಷಣಗಳನ್ನು ಕವರೇಜ್ ಮಾಡಿದ ದಿನವದು. ರಾತ್ರಿ ಹಾಗೋ ಹೀಗೋ ಕಚೇರಿಯನ್ನು ಕೊನೆಗು ತಲುಪಿದೆವು. ನಾನು ಮರುದಿನದ ಕವರೇಜ್ ಗೆ ರೆಡಿಯಾದೆ.
ಮಹಿಳೆಯರು ಇಂತಹ ಕವರೇಜ್ ಮಾಡಲು ಸಾಧ್ಯವೇ ಎಂದು ಹಿಂದೆ ಮುಂದೆ ನೋಡುತ್ತಿದ್ದ ದಿನಗಳಲ್ಲಿ ಜಿ. ಎನ್. ಮೋಹನ್ ಅಪರೂಪದ ಚಾಲೆಂಜಿಂಗ್ ಕವರೇಜ್ ಗೆ ಅವಕಾಶ ಮಾಡಿಕೊಟ್ಟಿದ್ರು. ಆ ಕ್ಷಣಗಳು ನನ್ನ ವೃತ್ತಿ ಜೀವನದಲ್ಲಿ ಎಂದಿಗೂ ಮರೆಯಲಾಗದ ಮತ್ತು ಪದಗಳಲ್ಲಿ ವಿವರಿಸಲಾಗದ ಅನುಭವವನ್ನು ಕೊಟ್ಟ ಕ್ಷಣಗಳು..
ಮತ್ತೆ ಡಾ. ರಾಜ್ ಅಂತ್ಯ ಸಂಸ್ಕಾರದ ಸಂದರ್ಭದ ಅನುಭವಗಳನ್ನು ನಿಮ್ಮ ಮುಂದೆ ಇಡ್ತೀನಿ..ಅಲ್ಲಿವರೆಗೂ ಟೇಕ್ ಕೇರ್..
‘ಅವಧಿ’ಗಾಗಿ
ಇರ್ವತ್ತೂರಿನಿಂದ
ಜ್ಯೋತಿ
nija jyothi RAJKUMAR nidhanada dina mattu antya samskarada dina navu anubhavisida yatane nenapisikondre mai jummennuttade
Jyothi,
ETV yalli sikka kelasa bittu enthaddella kalakonde annisthu idanna odidaga !!
Thanks for the write up