ಹಶ್ಮಿ ಥಿಯೇಟರ್ ಫೋರಂ ಹಾಗೂ ನಾಡಿನ ಜನಪರ ಸಂಘಟನೆಗಳು
ಕಲಾಕ್ಷೇತ್ರದಿಂದ – ಕೆಆರ್ಎಸ್ವರೆಗೆ
ನೀರು ಮತ್ತು ನೆಲದ ಹಕ್ಕಿಗಾಗಿ ಬೀದಿ ರಂಗ ಚಳುವಳಿ
ದಿನಾಂಕ-09/09/2016 ರಂದು ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದ ಆವರಣದಿಂದ ಚಾಲನೆ
ನೀರು ಹಂಚಿಕೆ ವಿವಾದಗಳು ಮೇಲ್ನೋಟಕ್ಕೆ ಕಾಣುವಷ್ಟು ಸರಳವಲ್ಲ .ಈ ವಿವಾದಗಳು ಜನರ ನಡುವೆ ಭಾಷಿಕ ಮತ್ತು ಜನಾಂಗೀಯ ಬಿಕ್ಕಟ್ಟುಗಳಿಗೆ ಎಡೆ ಮಾಡಿಕೊಡುತ್ತವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವೇಚನೆ ಮತ್ತು ಬದ್ದತೆಯಿಂದ ರೈತರ ಸಹಭಾಗಿತ್ವದಲ್ಲಿ ಪರಿಹಾರ ಕಂಡುಕೊಳ್ಳದ ಹೊರತು ಈ ಬೆಂಕಿ ಆರುವುದಿಲ್ಲ ಎರಡೂ ರಾಜ್ಯಗಳ ನಡುವೆ ಇದನ್ನು ಭಾವೋದ್ವೇಗದ ಸಂಗತಿಯನ್ನಾಗಿ ಮಾಡಿದಷ್ಟೂ, ಸಮಸ್ಯೆ ಪರಿಹಾರವಾಗುವುದರ ಬದಲು ಜಟಿಲವಾಗುತ್ತದೆ. ಒಕ್ಕೂಟ ವ್ಯವಸ್ಥೆಗೆ ಮಾರಕವಾಗುತ್ತವೆ
ರಾಜಕೀಯ ಪಕ್ಷಗಳ ‘ಅವಕಾಶವಾದಿ ರಾಜಕಾರಣ’ ನಿಲ್ಲಬೇಕು
ನೀರು ಬಿಡುವುದು, ಬಿಡಲಾಗದ್ದರ ವಿಚಾರದಲ್ಲಿ ಆಡಳಿತದಲ್ಲಿದ್ದಾಗ ಒಂದು ರೀತಿ, ವಿರೋಧ ಪಕ್ಷದಲ್ಲಿದ್ದಾಗ ಒಂದು ರೀತಿ ಮಾತನಾಡುವ ಯಾವ ರಾಜಕೀಯ ಪಕ್ಷವನ್ನೂ ನಾವು ನಂಬಲಾಗದು. ವಾಸ್ತವಾಂಶಗಳಿಗೆ ತಕ್ಕಂತೆ ವರ್ತಿಸುವ ಜವಾಬ್ದಾರಿಯನ್ನು ಮನಗಂಡು ಎಲ್ಲರೂ ಸೇರಿ ಪರಿಹಾರ ಕಂಡುಕೊಳ್ಳಲು ಯತ್ನಿಸದೇ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಈ ರಾಜಕೀಯ ಪಕ್ಷಗಳು ಮಾಡದಂತೆ ನೋಡಿಕೊಳ್ಳಬೇಕು. ಮಹಾದಾಯಿ ಮತ್ತು ಕಾವೇರಿ ವಿವಾದಗಳು ಹೀಗೆ ಭುಗಿಲೆದ್ದರೂ ಸಹ ಕೇಂದ್ರ ಸರ್ಕಾರ ಈ ಕುರಿತು ಕನಿಷ್ಠ ಒಂದು ಸಭೆಯನ್ನು ಕರೆಯುವ ಕೆಲಸವನ್ನೂ ಮಾಡಿಲ್ಲ.
ಜನರ ಭಾವೋದ್ವೇಗದ ಹಿಂದಿನ ಕಾರಣ ಅರಿತು ವಾಸ್ತವಾಂಶಗಳನ್ನು ಅರಿತು ಸೂಕ್ತ ಪರಿಹಾರ ಒದಗಿಸಬೇಕು
ಇದೇ ಮಾತನ್ನು ಭಾವೋದ್ವೇಗಕ್ಕೆ ಒಳಗಾಗುವ ಜನರ ವಿಚಾರದಲ್ಲಿ ಹೇಳಲಾಗುವುದಿಲ್ಲ. ಸತತ 3ನೇ ವರ್ಷ ಬರ ಪರಿಸ್ಥಿತಿ ಎದುರಿಸುತ್ತಿರುವ, ಕಳೆದ ವರ್ಷ ಸಕ್ಕರೆ ಕಾರ್ಖಾನೆಗಳ ಚೆಲ್ಲಾಟದಿಂದಲೂ ನಷ್ಟ ಅನುಭವಿಸಿರುವ, ಇತಿಹಾಸದಲ್ಲೇ ಅತ್ಯಂತ ಹೆಚ್ಚು ರೈತರ ಆತ್ಮಹತ್ಯೆಗಳನ್ನು ಕಂಡಿರುವ ಈ ಭಾಗದ ರೈತ ಸಮುದಾಯದ ಆಕ್ರೋಶಕ್ಕೆ ಕಾರಣವಿದೆ. ಭತ್ತದ ನಾಟಿ ಮಾಡಿರಿ ನೋಡೋಣ, ಮಳೆ ಬಂದರೆ ನೀರು ಬಿಡುತ್ತೇವೆ ಎಂದು ಹೇಳಿದ ಸರ್ಕಾರವು ತಾನೇ ಬಿತ್ತನೆ ಬೀಜವನ್ನು ಕೊಟ್ಟಿತು. ನಾಟಿ ಮಾಡಿದವರಿಗೆ ಎಕರೆಗೆ ಕನಿಷ್ಠ 15,000 ರೂ.ಗಳು ಖರ್ಚಾಗಿದೆ. ಈಗ ಆ ಬೆಳೆ ಕೈ ಹತ್ತುವುದಿಲ್ಲ. ಇನ್ನು ನಾಟಿಯೇ ಮಾಡದವರ ಕಥೆ ಏನು? ಈ ವರ್ಷ ಅವರ ಹೊಟ್ಟೆ ಪಾಡೇನು? ಈಗಾಗಲೇ ಸತತವಾದ ಹೊಡೆತಗಳಿಂದ ತತ್ತರಿಸಿರುವ ರೈತ ಸಮುದಾಯದ ಕನಿಷ್ಠ ಸಾಲಮನ್ನಾ ಮಾಡಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿಲ್ಲ. ಉದ್ಯಮಿಗಳಿಗೆ ಲಕ್ಷ ಕೋಟಿ ರೂಗಳ ಸಾಲ ಪುನರ್ರಚನೆ, ತೆರಿಗೆ ವಿನಾಯಿತಿ, ದೇಶದ ನೈಸರ್ಗಿಕ ಸಂಪನ್ಮೂಲಗಳ ಲೂಟಿಗೆ ಮುಕ್ತ ಅವಕಾಶ ನೀಡಿರುವ ಸರ್ಕಾರಗಳು, ಬೆಳೆ ನಷ್ಟಕ್ಕೆ ಎಕರೆಗೆ 900 ರೂ., 1000 ರೂ ಪರಿಹಾರ ನೀಡುತ್ತವೆÉ. ಯಾವ ಕಾರಣಕ್ಕೂ ಎಕರೆಗೆ 5,000 ರೂ.ಗಳಿಗಿಂತ ಹೆಚ್ಚು ಪರಿಹಾರ ನೀಡಬಾರದು ಎಂದು ಕೇಂದ್ರ ಸರ್ಕಾರ ಒಂದಾದ ಮೇಲೆ ಒಂದು ಸುತ್ತೋಲೆ ಕಳಿಸುತ್ತದೆ. ಹೀಗಿರುವಾಗ ರೈತರು ಭಾವಾವೇಶಕ್ಕೆ ಒಳಗಾಗದೇ ಇರುತ್ತಾರೆಯೇ?
ನೆಲ ಜಲದ ಉಳಿವಿಗಾಗಿ ರೈತರ ನೆಮ್ಮದಿಯ ಬದುಕಿಗಾಗಿ ಈ ಬೀದಿ ರಂಗ ಚಳುವಳಿಯಲ್ಲಿ ಜತೆಯಾಗಿ
ರಂಗ ಮಾರ್ಗ- ರವೀಂದ್ರ ಕಲಾಕ್ಷೇತ್ರ( ಬೆಳಿಗ್ಗೆ 10)-ಕೆಂಗೇರಿ(11)-ಬಿಡದಿ(12-30)-ರಾ ಮನಗರ(1.30) –ಚನ್ನಪಟ್ಟಣ(2.30)-ಮದ್ದೂರು(3.30) -ಮಂಡ್ಯ(5)-ಮೈಸೂರು(ಸಂಜೆ 6.30)
ಮಾಹಿತಿಗೆ ಸಂಪರ್ಕಿಸಿ- ಟಿ.ಎಚ್.ಲವಕುಮಾರ್ ತಿಪ್ಪೂರು- 9902100881
ರವಿಕಿರಣ್ 9164454243.-
ವಿನಯ್ ಕಂಬೀಪುರ-9663311083
ವೆಂಕಟೇಶ್ ಕೊನಘಟ್ಟ- 7760715478
0 ಪ್ರತಿಕ್ರಿಯೆಗಳು