ಮಂಜುನಾಥ ಕಾಮತ್
ಸಿನೆಮಾಗಳಿಗೆ ಥಿಯೇಟರ್ ಸಿಗೋದು ಇಷ್ಟು ಕಷ್ಟವಿದೆ ಎಂದು ಗೊತ್ತಿರಲಿಲ್ಲ. ಪ್ರತಿಭೆ, ಪ್ರಶಸ್ತಿಗಳೆಲ್ಲವೂ ” ಇದು ಓಡಲ್ಲ ಕಣ್ರೀ” ಎಂದು ಸಿನಿಮಾವನ್ನೇ ನೋಡದ ಚಿತ್ರಮಂದಿರದ ಮಾಲಿಕ, ವಿತರಕ, ಮತ್ತಿತರರ ಒಂದು ಮಾತಿಗೇ ಮೂಲೆಗುಂಪಾಗಿ ಬಿಡುತ್ತದೆ.
ಎರಡು ರಾಷ್ಟ್ರ ಪ್ರಶಸ್ತಿ ವಿಜೇತ ಸಿನೆಮಾ “ನಾನು ಅವನಲ್ಲ ಅವಳು” ಇದಕ್ಕೂ ಅದೇ ಪರಿಸ್ಥಿತಿ ಬಂದಿರಬೇಕು. ರಾಜ್ಯದಾದ್ಯಂತ ಬಿಡುಗಡೆ ಎಂಬ ಜಾಹಿತಿನಿಂದ ತುಂಬಾ ಖುಷಿಯಾಗಿತ್ತು. ಆದ್ರೆ ರಾಜಧಾನಿಯಲ್ಲಿ ಆ ಸಿನಿಮಾ ಒಂದೇ ವಾರಕ್ಕೆ ಕೊನೆಯಾಗಿ ಹೋಯ್ತು. ಉಡುಪಿ, ಮಂಗಳೂರಿಗೆ ಬರುತ್ತೆ ಅಂತ ಕಾದು ಕೂತದ್ದೇ ಬಂತು. ರಿಲೀಸ್ ಆಗಿ ತಿಂಗಳು ಸಮೀಪಿಸುತ್ತಿದ್ದರೂ ಕರಾವಳಿಗೆ ಅವನೂ ಇಲ್ಲ. ಅವಳೂ ಇಲ್ಲ. ಸಿನಿಮಾ ಬರಲೇ ಇಲ್ಲ.
ಅದಕ್ಕಾಗಿ ನಾವು ಏಳು ಜನ ಪುಸ್ತಕ ಓದುಗ ಯುವಕರು ಕಟ್ಟಿಕೊಂಡ “ಬಿಳಿಕಲ್ಲು ಪ್ರಕಾಶನ” ಮತ್ತು ನಲ್ವತ್ತು ಜನ ಸಮಾನಮನಸ್ಕ ಸ್ನೇಹಿತರ ವಾಟ್ಸ್ಯಾಪ್ “ಓದುಗರು” ಬಳಗ ಸೇರಿಕೊಂಡು, ಚಿತ್ರಮಂದಿರದ ಬಾಡಿಗೆ ಕಟ್ಟಿ ಒಂದು ದಿನ ಸಂಜೆಯ 4.30 ಮತ್ತು 7.30 ರ ಎರಡು ಶೋ ಉಡುಪಿಯಲ್ಲಿ ಆಯೋಜಿಸಲಿದ್ದೇವೆ. ನಟ, ನಿರ್ಮಾಪಕ, ನಿರ್ದೇಶಕರನ್ನೂ ಕರೆಸಿ ಸಂವಾದ ಏರ್ಪಡಿಸಲಿದ್ದೇವೆ.
ಟಿಕೆಟ್ ದರ ಉಳಿದ ಸಿನಿಮಾಗಳಂತೆ ರೂ. 50/ ರೂ. 40 ಮತ್ತು ರೂ. 30/. ಮುಂದಿನ ಎರಡು ವಾರಗಳಲ್ಲಿ ಯಾವುದಾದರೂ ಒಂದು ಬುಧವಾರ ಅಥವಾ ಗುರುವಾರ. ಬೇರೊಂದು ಸಿನಿಮಾವನ್ನು ಎರಡು ಶೋ ಗಳ ಮಟ್ಟಿಗೆ ನಿಲ್ಲಿಸಿ ಈ ಚಿತ್ರಹಾಕಬೇಕಾಗಿರೋದ್ರಿಂದ ವಾರಾಂತ್ಯ ಸಿಗುವ ಸಾಧ್ಯತೆ ಇಲ್ಲ.
ಚಿತ್ರಮಂದಿರದಲ್ಲಿರುವ ಮೂರೂ ದರ್ಜೆಗಳ ಒಟ್ಟು ಸೀಟುಗಳು 496. ಅಂದ್ರೆ ಎರಡು ಶೋಗಳಿಗೆ ಒಟ್ಟು 992 ಮಂದಿಯನ್ನು ನಾವು ತಲುಪಬೇಕು. ದಿನಾಂಕ ನಿರ್ಧಾರವಾದ ಕೂಡ್ಲೇ ಹೇಳ್ತೀವಿ. ನೀವು ಬರ್ತೀರಲ್ವಾ? ಬನ್ನಿ ಪ್ಲೀ……ಸ್….
****
ಇಷ್ಟು ವರುಷಗಳಲ್ಲಿ ಸಿನಿಮಾ ನೋಡೋದಕ್ಕೆ ಮಾತ್ರಾ ಚಿತ್ರಮಂದಿರದೊಳಗೆ ಕಾಲಿಟ್ಟಿದ್ದೆವು. ಇಂಟರ್ವಲ್ ಟೈಮ್ ಗೆ ತಿಂಡಿ ಕೂಲ್ ಡ್ರಿಂಕ್ಸ್ ತಗೋತಿದ್ದೆವು.
ಇದೀಗ ಬಾಲ್ಕನಿಯನ್ನೂ ದಾಟಿ ಚಿತ್ರ ಮಂದಿರದ ಮೇಲ್ಮಹಡಿಯನ್ನು ಹತ್ತುತ್ತಿದ್ದೇವೆ. ಅಲ್ಲಿನ ಕಚೇರಿಗಳಿಗೆ ಹೋಗಿ ಬರುತ್ತಿದ್ದೇವೆ. ನಮಗಾಗಿಯೇ ತರಿಸಿದ ಟೀ, ಕಾಫಿ ಕುಡಿದು ದೊಡ್ಡ ವ್ಯವಹಾರಿಗಳ ಹಾಗೆ ಮಂದಿರದ ಸಿಬ್ಬಂದಿಗಳಿಂದ ರಾಜಮರ್ಯಾದಿ ಪಡೆಯುತ್ತಿದ್ದೇವೆ.
ಹೊಸ ಅನುಭವಗಳು. ಅವನ್ನು ಇನ್ನೊಮ್ಮೆ ಹೇಳ್ಕೋತ್ತೇನೆ.
All the best 🙂