ಪರಮೇಶ್ವರ ಗುರುಸ್ವಾಮಿ
ಚಲನಚಿತ್ರದ ಬಗ್ಗೆ ತೀವ್ರ ಆಸಕ್ತಿಯಿಂದ ಮಾತನಾಡಬಲ್ಲ ವ್ಯಾಮೋಹಿ. ಡಿಜಿಟಲ್ ಅಲ್ಲದ ಕಾಲದಲ್ಲಿಯೇ ಸಿನೆಮಾ ಹುಚ್ಚು ಹತ್ತಿಸಿಕೊಂಡು ಅನೇಕ ಕಿರು ಹಾಗೂ ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದವರು. ಈಗಿನ ಚಿತ್ರರಂಗದ ಒಂದು ಯುವ ತಲೆಮಾರು ಇವರ ಗರಡಿಯಲ್ಲಿ ಪಳಗಿದ್ದು ಎನ್ನುವ ಹೆಗ್ಗಳಿಕೆ ಇದೆ. ಸಿನೆಮಾ ರಸಗ್ರಹಣ, ನಿಯತಕಾಲಿಕದ ಮುಂದಾಳತ್ವ ಇವರು ಈಗಲೂ ಹಚ್ಚಿಕೊಂಡಿರುವ ಆಸಕ್ತಿ.
ಸುಮಾರು ವರ್ಷಗಳಿಂದ ಈ ಬೋರ್ಡ್ ಗಳನ್ನು ಮೆಜೆಸ್ಟಿಕ್ ನಲ್ಲಿ ಮೈಸೂರು ಬ್ಯಾಂಕಿನ ಎದುರು ಇರುವ ಖಾದಿ ಮಳಿಗೆಗಳ ಮುಂದೆ ನೋಡುತ್ತಿದ್ದೇನೆ. ಮೊದಮೊದಲು ರಷ್ಯಾದ ಲೆನಿನ್ ಗೂ ಖಾದಿಗೂ ಏನೋ ಸಂಬಂಧವಿರಬಹುದು ಅನಿಸುತ್ತಿತ್ತು. ಒಮ್ಮೆ ಇಂಗ್ಲೀಷ್ ಗಮನಿಸಿದಾಗ ಅದು ‘ಲೆನಿನ್’ ಅಲ್ಲ, ಲಿನನ್ ಎಂಬುದು ಅರಿವಾಯಿತು. ಆ ನಂತರ ಈ ಫಲಕಗಳನ್ನು ನೋಡಿದಾಗಲೆಲ್ಲ ಸರ್ದಾರ್ ಎಂಬ ಫಲಕ ಬರಹಗಾರ ಕಲಾವಿದ ನೆನಪಾಗುತ್ತಾನೆ.
ಆಗ ನನಗೆ ಹತ್ತು ವರ್ಷ. ಏಳನೇ ತರಗತಿಯಲ್ಲಿದ್ದೆ. ನಾನು ಶಾಲೆಗೆ ಹೋಗಿ ಬರುವ ದಾರಿಯಲ್ಲಿ ಹೊಸದಾಗಿ ‘ಸರ್ದಾರ್ ಅರ್ಟ್ಸ್’ ಎಂಬ ಮಳಿಗೆ ಮತ್ತಿತರ sign boardಗಳನ್ನು ಬರೆಯುವ ಅಂಗಡಿ ಶುರುವಾಗಿತ್ತು. ಇದಕ್ಕೆ ಮೊದಲು ನಾವು ಕಣ್ಣು ಬಿಡುವ ಮೊದಲಿನಿಂದಲು ಇದ್ದ ‘ರತ್ನಂ ಆರ್ಟ್ಸ್’ ಮತ್ತು ‘ಮಣಿ ಆರ್ಟ್ಸ್’ ಮಾತ್ರ ನಮಗೆ ಗೊತ್ತಿತ್ತು. ಅವರ ಮಕ್ಕಳು ನಮ್ಮ ಓರಗೆಯವರಾದ್ದರಿಂದ ನಾವು ಅವರ ಮನೆಗಳಿಗೆ ಒಕ್ಕಾಡುತ್ತಿದ್ದೆವು.
ಒಂದು ದಿನ ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಸರ್ದಾರ್ ನನ್ನನ್ನು “ಸ್ವಲ್ಪ ಬನ್ನಿ” ಎಂದು ಕರೆದ. ಅವನು ಸುಮಾರು ಇಪ್ಪತ್ತರ ಆಸುಪಾಸಿನವ. ನನಗಿಂತ ದೊಡ್ಡವ ಮತ್ತು ಒಂದು ಅಂಗಡಿಯ ಮಾಲೀಕ. ಅದುವರೆಗೂ ನಮ್ಮಂಥ ಹುಡುಗರನ್ನು ಯಾರೂ ಬಹುವಚನದಲ್ಲಿ ಮಾತನಾಡಿಸಿರಲಿಲ್ಲ. ಒಳಕ್ಕೆ ಹೋದೆ. ಒಂದು ಚೀಟಿಯಲ್ಲಿ ಬರೆದಿದ್ದ ಅಂಗಡಿಯೊಂದರ ತಪ್ಪು ಕಾಗುಣಿತದಲ್ಲಿರುವ ಹೆಸರನ್ನು ತೋರಿಸಿ ಸರಿಯಾಗಿ ಬರೆದು ಕೊಡುವಿರ ಎಂದು ಕೇಳಿದ. ನಮ್ಮ ಗ್ಯಾಂಗಿನಲ್ಲೆಲ್ಲ ಸ್ಪಷ್ಟ ಉಚ್ಚಾರಣೆ ಮತ್ತು ಕಾಗುಣಿತ ಇದ್ದವ ನಾನೊಬ್ಬನೆ. ಸರಿಯಾಗಿ ಬರೆದು ಕೊಟ್ಟೆ. ಚಾ ತರಿಸಿ ಕೊಟ್ಟ. ಅಂದಿನಿಂದ ನಾವಿಬ್ಬರೂ ಗೆಳೆಯರಾದೆವು.
ಸದಾ ನಗು ಮೊಗದ ಸರ್ದಾರ್ ನನ್ನು ನಮ್ಮ ಮೊಹಲ್ಲಾದವರೆಲ್ಲ ಹೊಗಳುತ್ತಿದ್ದರು. ಬಾಂಬೆಯಲ್ಲಿ ಕೆಲಸ ಕಲಿತು ಬಂದಿದ್ದಾನೆ. ಚೆನ್ನಾಗಿ ಬೋರ್ಡ್ ಬರೆಯುತ್ತಾನೆ. ಸ್ಟೈಲ್ ಚೆನ್ನಾಗಿದೆ. ಒಂದು ಚಟವಿಲ್ಲ. ಹುಡುಗ ಒಳ್ಳೆಯವನು. ಹೇಳಿದ ಸಮಯಕ್ಕೆ ಕೊಡುತ್ತಾನೆ ಇತ್ಯಾದಿ. ಅವನು ಬರೆಯುವ ಎಲ್ಲ ಬೋರ್ಡ್ ಗಳ ಕನ್ನಡ ಲಿಪಿಯನ್ನು ಕಾಗದದ ಮೇಲೆ ನಾನು ಬರೆದ ಮೇಲೇ ಅವನ ಕೆಲಸ ಶುರುವಾಗುತ್ತಿದ್ದುದು.
ಈ ಪ್ರಕ್ರಿಯೆಯಲ್ಲಿ ನನಗೆ ಗೊತ್ತಾಗಿದ್ದು, ಅವನು ಚಿಕ್ಕವನಾಗಿದ್ದಾಗಲೆ ಬಾಂಬೆಗೆ ಹೋಗಿದ್ದ. ಶಾಲೆ ಕಲಿತಿರಲಿಲ್ಲ. ನಿರಕ್ಷರಿ. ಆದರೆ ಅಕ್ಷರಗಳನ್ನು ವಿನ್ಯಾಸಗಳಾಗಿ ಗ್ರಹಿಸುತ್ತಿದ್ದ. ಆದರೆ ತಪ್ಪಾಗಬಾರದು ಎಂದು ನನ್ನಂಥ ಚಿಕ್ಕ ಹುಡುಗನ್ನ ಸ್ನೇಹಿತ ಮಾಡಿಕೊಂಡು ಬೋರ್ಡ್ ಬರೆಯುತ್ತಿದ್ದ. ಅಂಗಡಿ ಮುಂಗಟ್ಟುಗಳ ಬೋರ್ಡ್ ಗಳು ಬರೇ ನಾಮ ಫಲಕಗಳಲ್ಲ. ಜಾಹಿರಾತು ಸಹ. ಎಂಬ ಪರಿಕಲ್ಪನೆಯನ್ನು ನನಗೆ ಪರಿಚಯಿಸಿದವನು ಅವನೇ.
ಕೊನೆ ಹನಿ:
ಮುಗಿಸುವ ಮುನ್ನ ಎಲ್ಲೋ ಓದಿದ್ದ ಜೋಕ್ ಹೇಳಿಬಿಡುತ್ತೇನೆ. ಒಂದೂರಲ್ಲಿ ಯುವಕರು ಸೇರಿಕೊಂಡು ‘ಕನ್ನಡ ಕಡುಗಲಿ ಸಂಘ’ ಮಾಡಿಕೊಂಡರಂತೆ. ಊರಲ್ಲಿದ್ದ ಒಬ್ಬನೇ ನಾಮ ಫಲಕ ಕಲಾವಿದ ಸಾಬಣ್ಣನ ಕೈಲಿ ಸಂಘದ ಬೋರ್ಡ್ ಬರೆಸಿದರಂತೆ. ಸಂಘದ ಉದ್ಘಾಟನೆಯ ದಿನ ಅವನು ‘ಕನ್ನಡ್ ಕೆ ಡುಗ್ಲಿ ಸಂಗ’ ಎಂಬ ಬೋರ್ಡನ್ನು ತಂದು ಕೊಟ್ಟನಂತೆ.
0 ಪ್ರತಿಕ್ರಿಯೆಗಳು