ಕುವೆಂಪು ಭಾಷಾಭಾರತಿ ಪ್ರಾಧಿಕಾರ ಇತ್ತೀಚೆಗೆ ಹೊರತಂದ ಮಹತ್ವದ ಕೃತಿ ಆಯ್ದ ತಮಿಳಿನ ಸಂಗಂ ಕವಿತೆಗಳ ಅನುವಾದ.
ಪುಸ್ತಕದ ಹೆಸರೇ ಮನಮೋಹಕವಾಗಿದೆ. ’ನಿಚ್ಚಂ ಪೊಸತು’ ಎನ್ನುವಲ್ಲಿ ಪುಸ್ತಕದ ಹೂರಣ ಮತ್ತು ಅನುವಾದದ ಉದ್ದೇಶ ಎರಡೂ ಸೂಚಿತವಾಗಿದೆ.
ಸಂಗಂ ಸಾಹಿತ್ಯ ತಮಿಳಿನ ಅತ್ಯಂತ ಪ್ರಾಚೀನ ಸಾಹಿತ್ಯ. ಸಂಗಂ ಎನ್ನುವುದು ತಮಿಳು ವಿದ್ವಾಂಸರು ಪಾಂಡ್ಯ ಅರಸರ ರಾಜಾಶ್ರಯದಲ್ಲಿ ನಿರ್ಮಿಸಿಕೊಂಡ ಒಂದು ಸಂಸ್ಥೆ. ಅಲ್ಲಿ ವಿದ್ವಾಂಸರು ಸೇರಿ ತಮಿಳು ವ್ಯಾಕರಣ, ಕಾವ್ಯ, ಸಾಹಿತ್ಯ, ವ್ಯಾಕರಣ ಇತ್ಯಾದಿಗಳನ್ನು ಚರ್ಚಿಸುತ್ತಿದ್ದರಂತೆ.ಡಾ ಕಲಬುರ್ಗಿಯವರ ಸಲಹೆಯ ಮೇರೆಗೆ ಡಾ ಕೆ ವಿ ನಾರಾಯಣ್ ಅವರು ಪ್ರಾರಂಭಿಸಿದ ಈ ಕಾರ್ಯ ಪುಸ್ತಕವಾಗಿ ಹೊರಬಂದಿದೆ.
ತಮಿಳಿನ ವಿದ್ವಾಂಸರು ಮತ್ತು ಕನ್ನಡದ ಕವಿಗಳು ಸೇರಿ, ಕಾವ್ಯವನ್ನು ತಮ್ಮದಾಗಿಸಿಕೊಂಡು, ಅದಕ್ಕೆ ಈ ನೆಲದ ಸೊಗಡನ್ನು ಬೆರೆಸಿ ಅದನ್ನು ಇಲ್ಲಿನ ಮಣ್ಣಿಗೆ ಒಗ್ಗುವಂತೆ ಅನುವಾದಿಸಿದ್ದಾರೆ.
ಲಲಿತಾ ಸಿದ್ಧಬಸವಯ್ಯ, ಕೆ ನಲ್ಲತಂಬಿ, ವಿಮಲಾ ನಟರಾಜನ್, ಮುರಳಿ ಮೋಹನ್, ಸ ರಘುನಾಥ್, ಸೀತಾ, ಎಚ್ ಎಸ್ ವೆಂಕಟೇಶ ಮೂರ್ತಿ, ಅನ್ಬನ್, ಕೃ, ವಿಜಯ ರಾಘವನ್ ಆರ್, ಜಯಲಲಿತಾ, ಎಂ ಆರ್ ಕಮಲ, ಸಂಧ್ಯಾ, ಸೆಲ್ವ ಕುಮಾರಿ, ಆರೋಗ್ಯಮೇರಿ, ಕೆ ವೈ ನಾರಾಯಣ ಸ್ವಾಮಿ, ಎಚ್ ಎಸ್ ರಾಘವೇಂದ್ರ ರಾವ್ ಈ ಕವನಗಳನ್ನು ಕನ್ನಡವಾಗಿಸಿದ್ದಾರೆ. ಡಾ ಎಸ್ ಕಾರ್ಲೋಸ್ (ತಮಿಳವನ್) ಇದನ್ನು ಸಂಪಾದಿಸಿದ್ದಾರೆ.
’ಕನ್ನಡ-ತಮಿಳು ವಿದ್ವಾಂಸರ ಕಮ್ಮಟ, ಅನುವಾದಕರ ನಡುವೆ ಸಮನ್ವಯತೆ, ಅನುವಾದವನ್ನು ಕನ್ನಡ ಕಾವ್ಯ ಪರಂಪರೆಯ ಓದಿನ ಲಯಗಳಿಗೆ ಹೊಂದಿಸುವುದೇ ಮೊದಲಾದ ಪ್ರಕ್ರಿಯೆಗಳ ಮೂಲಕ ಈ ಸಂಕಲನವನ್ನು ಸಿದ್ದಪಡಿಸಲಾಗಿದೆ.
ಸುಮಾರು ೨೫ ಜನ ವಿದ್ವಾಂಸರು, ಅನುವಾದಕರು ಒಟ್ಟಾಗಿ ಸೇರಿ ತಮ್ಮ ವೈಯಕ್ತಿಕತೆಯನ್ನು ಸಮೂಹದ ಜೊತೆಗೆ ಸಂವಾದಕ್ಕೆ ಗುರಿಪಡಿಸಿಕೊಂಡು ನಡೆಸಿರುವ ಈ ಪ್ರಯತ್ನವನ್ನು ಕನ್ನಡ ಓದುಗರು ಪ್ರೀತಿಯಿಂದ ಸ್ವೀಕರಿಸುತ್ತಾರೆಂದು ನಂಬಿದ್ದೇನೆ.’ ಎಂದು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಡಾ ಕೆ ವಿ ನಾರಾಯಣ್ ಅವರು ಪುಸ್ತಕದ ಬೆನ್ನುಡಿಯಲ್ಲಿ ಬರೆಯುತ್ತಾರೆ.
ಕನ್ನಡಕ್ಕೆ ಬಂದ ಈ ತಮಿಳು ಸೇವಂತಿಗೆ ಕಾವ್ಯಾಸಕ್ತರು ಓದಲೇಬೇಕಾದ ಪುಸ್ತಕಗಳಲ್ಲಿ ಒಂದು.




0 Comments