-ಸುಶ್ರುತ ದೊಡ್ಡೇರಿ
ಮೌನ ಗಾಳ
ತಳ್ಳುಗಾಡಿಯ ಮೇಲೊಂದು ಸಿಲಾವರದ ಪಾತ್ರೆ-
ಬೇಯಿಸುತ್ತಿದ್ದಾನೆ ಲುಂಗಿಯುಟ್ಟವ ಬಿಸಿನೀರಲ್ಲಿ
ರಾಶಿ ರಾಶಿ ಕಡಲೇಕಾಯಿ ಹಬೆ ಹಬೆ
ಉದ್ದ ಹಿಡಿದರೆ ಎಂಟು; ಜೋತಾಡಿಸಿದರೆ ಗಂಟು
ಒಡೆದರೆ ಎರಡು ಪುಟ್ಟ ಶಿಶುಗಳು ಗರ್ಭದಲ್ಲಿ
ಕೆಲವೊಮ್ಮೆ, ಅದೃಷ್ಟ ಜೋರಿದ್ದರೆ, ಮೂರು.ಒಂದು ದಿನ, ಯಾರೋ ಹತ್ತಿರ ಬಂದು
ಕೂತುಬಿಡುತ್ತಾರೆ. ಕೈ ಹಿಡಿದು ಕತೆ ಹೇಳುತ್ತಾರೆ.
ಅಪ್ಪ-ಅಮ್ಮ ತುಂಬಾ ಒಳ್ಳೆಯವರು.
ದೊಡ್ಡಪ್ಪ ಚಿಕ್ಕವನಿದ್ದಾಗಲೇ ಮನೆಯಿಂದ ಓಡಿಹೋಗಿದ್ದಂತೆ.
ಅತ್ತೆ ಇದ್ದಾಳಲ್ಲ -ಅದೇ, ಅಪ್ಪನ ತಂಗಿ-
ಅವಳಿಗೆ ಕಿವಿ ಸ್ವಲ್ಪ ಮಂದ
ಆದರೆ ಸನ್ನೆಯಲ್ಲೇ ಎಲ್ಲಾ ಅರ್ಥ ಮಾಡಿಕೊಳ್ಳುತಾಳೆ
ಮಾವನಿಗೆ ಅವಳ ಮೇಲೆ ಯಾವಾಗಲೂ ಸಿಡುಕು
ಗೊತ್ತಾ? ನನ್ನ ತಂಗಿಗೆ ಗಾಜಿನ ಹೂಜಿಯಲ್ಲಿ
ಮೀನು ಸಾಕಬೇಕು ಅಂತ ಆಸೆಯಿತ್ತು
ಇಳಿದು ನೋಡಿದರೆ ಕಣ್ಣಾಳ, ಅದೆಷ್ಟೊಂದು ಕತೆಗಳು
ನಿನ್ನಲ್ಲಿ.. ಇಡಲಾಗದೇ ಈ ಪುರಾಣ, ಇತಿಹಾಸ, ಭೂತ-
ವನ್ನೆಲ್ಲ ಕಟ್ಟಿ ಆಚೆ? ಅಳಿಸಿ ಉಳಿದೆಲ್ಲ ಚಿತ್ರ,
ಬಿಡಲಾಗದೆ ಬರೀ ನಾವಿಬ್ಬರ ಮೌನಭಿತ್ತಿಯಲ್ಲಿ?
ಕಾಯುತ್ತಿದ್ದಾನೆ ತಳ್ಳುಗಾಡಿಯಲ್ಲಿ ಕಡಲೆಕಾಯಿಯವ..
ಒಂದಷ್ಟು ಬೇಯಿಸದ ಕಾಯಿಗಳೂ ಇವೆಯಂತೆ ಅವನ ಬಳಿ
ಕೇಳಿದರೆ, ಪುಟ್ಟ ಪೊಟ್ಟಣದಲ್ಲಿ ಕಟ್ಟಿಕೊಟ್ಟಾನು
ಬಿಡಾರದಲ್ಲಿ ಒಲೆಯಿದೆ; ಸೂರಂಚಿಂದ ಸುರಿವ ಮಳೆಯಿದೆ
ಹೊಸನೀರಿನಲ್ಲಿ ಬೇಯಿಸೋಣ ಕನಸುಗಳನ್ನು.
ಹಾರೈಸೋಣ ಸಾಕು- ಒಡಲ ಹೂರಣ ಕಹಿಯಿರದಿರಲೆಂದು.
]]>






Nice poem Sir.