ವಿನಯ್ ಭಾರದ್ವಾಜ್
ಕಡ್ಡಿಪುಡಿ’ ನೋಡಲು ತಂ’ಬಾಕು’ ಪ್ರಿಯರು ಆಗಲೇ ಬೇಕೆಂದೇನೂ ಇಲ್ಲ. ಏಕೆಂದರೆ ಥಿಯೇಟರ್ ಒಳಗೆ ಧೂಮಪಾನ ನಿಷೇಧವಿದೆ! ಹಾಗಾಗಿ ಮೂಗು ಮುಚ್ಚಿಕೊಂಡು ನೋಡಬೇಕಾದ ಅವಶ್ಯಕತೆಯೇನೂ ಇಲ್ಲ, ಚಿತ್ರ ನೋಡಲು ಮೂಗು ಮುರಿಯಬೇಕಾಗೂ ಇಲ್ಲ. ಸೊ, ಇದು ಶುಧ್ಹಾನು ಶುದ್ಧ ಹೊಗೆ ರಹಿತ ಚಿತ್ರ. ಆದರೆ ರೌಡಿಸಂ ಚಿತ್ರದ ಬ್ಯಾಕ್ ಡ್ರಾಪ್ ಆದ್ದರಿಂದ ‘ಹಗೆ’ರಹಿತ ಅನ್ನಲಿಕ್ಕಾಗುವುದಿಲ್ಲ! ರೌಡಿಸಂ ನ ಕಥಾ ಹಂದರದಲ್ಲಿ, ಒಂದು ಸೊಗಸಾದ ಸಂಸಾರ ಕಥನವನ್ನು, ಪ್ರೇಮದ ಎಳೆಯನ್ನೂ ನವಿರಾಗಿ ಹೇಳಿದ್ದಾರೆ ಅನ್ನೋದೇ ಕಥೆಯ ಪ್ರಾಮಿನೆನ್ಸು ಹಾಗು ಅದರ ಎಸೆನ್ಸು.

ಈ ಚಿತ್ರ ಬಲು ಸುಲಭಕ್ಕೆ ನಮ್ಮ ಅವಗಹನೆಗೆ ಸಿಲುಕದ ಒಂದು ರೀತಿಯ ಮೆಚೂರ್ಡ್ ಫಿಲಂ. ಅಂದರೆ ಇದಕ್ಕೆ ನಿರ್ದೇಶಕರ ಜಾಣ್ಮೆಯೂ ಬೇಕು, ಪ್ರೇಕ್ಷಕರ ಒಲುಮೆಯೂ ಬೇಕು! ಇದು ಯಥಾ ಪ್ರಕಾರ ಸೂರಿಯವರ ಶೈಲಿಯ ಹೊಸ ನಿರೂಪಣಾ ತಂತ್ರದ ಚಿತ್ರ. ರೌಡಿಯೊಬ್ಬ ತನ್ನ ರೌಡಿಸಮ್ ನೂ ಮೀರಿ ಸಾಮಾನ್ಯನಂತೆ ಬದುಕಲೆತ್ನಿಸುತ್ತಾನೆ. ಹೊಸತೊಂದು ಬದುಕಿಗೆ ತುಡಿಯುತ್ತಾನೆ. ಇಂತಹ ರೌಡಿಯೊಬ್ಬನ ಬದುಕಿನಲ್ಲಿ ಕಟ್ಟಿಕೊಳಲು ಎರಡು ಕೈಗಳಿದ್ದರೆ , ಕೆಡವಲು ಸಾವಿರ ಕೈಗಳಿರುತ್ತವೆ. ವೈರತ್ವ ಚಕ್ರವೂ ಹೌದು ಚಕ್ರವ್ಯೂಹವೂ ಹೌದು. ಚಿತ್ರದ ಅಂತ್ಯ ಕೇವಲ ಪ್ರೇಕ್ಷಕರ ತರ್ಕಕ್ಕೆ ಬಿಟ್ಟಿದ್ದು. ಇದು ನಿರ್ದೇಶಕರ ಜಾಣ್ಮೆಯೂ ಹೌದು, ಅಸಹಾಯಕಥೆಯೂ ಹೌದು!
ಸೂರಿಯವರ ಪ್ರತಿ ಚಿತ್ರದಂತೆ ಈ ಚಿತ್ರದ ಪ್ರತಿ ಘಟನಾವಳಿಗಳೂ ದೃಶ್ಯಕಾವ್ಯದಂತೆ ಸಚಿತ್ರವಾಗಿ ರೂಪತಾಳುತ್ತದೆ. ಒಂದೊಂದು ಚಿತ್ರ ಕಥೆಯ ಎಸಳುಗಳೂ ಸುಂದರವಾಗಿ ಒಂದಕ್ಕೊಂದು ಥಳಕು ಹಾಕಿಕೊಂಡು ಬೆಸೆದ ಹಾಗೆ ಕಾಣುತ್ತದೆ. ಸುಲಭಕ್ಕೆ ಊಹೆಗೆ ಸಿಗದ, ಇನ್ನೇನು ಕಥೆ ಮುಗಿಯಿತು ಅನ್ನುವಷ್ಟರಲ್ಲಿ ಕಥೆ ಮುಗಿಯದೆ ಹಾಗೆ ಉಳಿದು ಬಿಡುತ್ತದೆ! ಹರಿಕೃಷ್ಣ ಪುನಃ ಹೊಸತು ರೀತಿಯ ಹಾಡುಗಳಿಗೆ ರಾಗ ಪೋಣಿಸಿದ್ದಾರೆ. ಐನ್ದ್ರಿತ ರೈ ಅತ್ಯಂತ ಸುಕೊಮಲರಾಗಿ, ನಾಜೂಕಾಗಿ ಕಾಣಸಿಗುತ್ತಾರೆ. ರಾಧಿಕಾ ಪಂಡಿತ್ ರ ಅಭಿನಯದಲ್ಲಿ ಅವರ ಪಾಂಡಿತ್ಯದ ಬಗ್ಗೆ ನೋ ಸೆಕೆಂಡ್ ಥಾಟ್ಸ್. ಸ್ಟಾಂಡ್ ಔಟ್ ಪೆರ್ಫಾರ್ಮೆನ್ಸ್ ಅಂತ ಏನಾದರೂ ಇದ್ದರೆ ರಾಧಿಕಾ ಪಂಡಿತ್ ಹಾಗು ಶಿವ್ರಾಜ್ಕುಮಾರು ಇಬ್ಬರಿಗೂ ಸಮಾನವಾಗಿ ಕೊಡಬಹುದೇನೋ.
ಯೋಗರಾಜ್ ಭಟ್ಟರ ಸಾಹಿತ್ಯ ಜಯಂತ್ ಕಾಯ್ಕಿಣಿಯವರ ಸಾಹಿತ್ಯದ ಮೇಲೆ ‘ಸಮರ’ ಸಾರುತ್ತದೆ. ‘ಅರೆ ಇದೇನಿದು ಕಥೆಗೆ ಅಂತ್ಯವೇ ಸಿಗುತ್ತಿಲ್ಲ…. ‘ ಅಂತ ಒಂದೆರಡು ಬಾರಿ ವಾಚ್ ನೋಡಿಕೊಳ್ಳಬಹುದೇ ವಿನಃ ಸೀಟಂತೂ ಬಿಗಿದಪ್ಪಿ ಕುಳ್ಳಿರಿಸಿಕೊಳ್ಳುತ್ತದೆ. ಯಾವುದೇ ಕ್ಯಾಟೆಗರಿಗೆ ಸುಲಭಕ್ಕೆ ಸೇರಿಸಿಕೊಳ್ಳಲಾಗದಿದ್ದಲ್ಲಿ, ಅಟ್ ಲೀಸ್ಟ್ ಇದನ್ನು ಸರಿಯಾಗಿ ದಕ್ಕಿಸಿಕೊಳ್ಳುವ ಪ್ರಯತ್ನಗಳಾದರೂ ಮಾಡಬೇಕು. ಆ ಅರ್ಥದಲ್ಲಿ ಚಿತ್ರಕ್ಕೂ-ಪ್ರೇಕ್ಷಕರಿಗೂ “ಎಣ್ಣೆ-ಸೀಗೇಪುಡಿ” ಯಾಗದೆ, ಹೊಗೆಯಾಡದ ” ಕಡ್ಡಿಪುಡಿ”ಯಾಗಲಿ ಎಂಬುದಷ್ಟೇ ಹಾರೈಕೆ!!





0 Comments