ನಾ ದಿವಾಕರ್
ಕಗ್ಗತ್ತಲೆಯ ಜಗತ್ತಿನಲ್ಲೂ
ಪ್ರಣತಿಯೊಂದು ಪ್ರಜ್ವಲಿಸುತಿದೆ
ಅಮ್ಮನ ವಾತ್ಸಲ್ಯವೇ ಇರಬೇಕು ;
ಮಗೂ….. ಮಾರ್ದನಿಸುತಿದೆ
ಆರ್ತತೆಯಿಂದ ತಾಯ
ಹೃದಯಬಡಿತವೇ ಇರಬೇಕು
ಬೆಳಕು ಕಾಣುವುದೆಂದು
ಯಕ್ಷ ಪ್ರಶ್ನೆ !
ಕಾಣಲೇಬೇಕೇ ಮತ್ತೊಂದು
ಪ್ರಶ್ನೆ ;
ಚಿವುಟಿಬಿಡು !
ಅಟ್ಟಹಾಸದ ದನಿಯೊಂದು
ಝೇಂಕರಿಸುತಿದೆ
ಮಾತೃ ಹೃದಯವ ಭೇಧಿಸಿ ;
ನನ್ನೊಡಲಿನ ಕುಡಿ
ಕಳಚಲಾರೆ ಜೀವ ಕೊಡಿ
ಆರ್ತನಾದ ಆವರಿಸುತಿದೆ ;
ಕಣ್ಣಾವೆಗಳ ಹನಿಗಳು
ಅವ್ಯಕ್ತ ಹೃದಯಕೆ
ಹಾಲುಣಿಸುತಿವೆ !
ಭುವಿ ಸ್ಪರ್ಷವದೇಕೆ
ನಿಗೂಢ ?
ಮಾನದಂಡಗಳಿವೆಯೇ
ಹೊಂಗಿರಣಗಳ ಕಾಣಲು ;
ನನ್ನದಲ್ಲದ ಆಯ್ಕೆ
ವರವೋ ಶಾಪವೋ
ಎಲ್ಲವೂ ಸಂದಿಗ್ಧ ;
ಸವರಿದ ಕೈಗಳ ಚಿತ್ತಸ್ಪರ್ಷ
ಹೊರಜಿಗಿಯುವ
ಬಯಕೆ ; ನನಗೇಕೆ
ಮುಕ್ತಿ ಇಲ್ಲ !
ಬಂಧನವೇನಲ್ಲ
ಈ ಸುಂದರ ಪಂಜರದ ಬಾಳು
ವಾತ್ಸಲ್ಯದ ಕಡಲಲಿ
ಮಿಂದ ದಿವ್ಯಾನುಭವ ;
ಹಂಗಿಲ್ಲದ ಬದುಕು
ಪಂಜರವ ಭೇಧಿಸಿದಾಗ
ಅಳುವಿನ ಸ್ವೀಕೃತಿಯಂತೆ
ಸೃಷ್ಟಿ ನಿಯಮ ಎಂದಾರು ; ಅಲ್ಲ
ನಿಷ್ಕಲ್ಮಶ ಕಡಲೊಳಗಿನ
ಸ್ವರ್ಗದ ನೆನಪು !
ಕಾರ್ಗತ್ತಲಿನಲೂ
ಕಾಣುವ ಮಮತೆಯ ಕಿಂಡಿಗೆ
ನೂರೆಂಟು ಸರಳುಗಳು
ಮುಕ್ತ ಬಾನಿನ ಕೆಳಗೆ ;
ಮಾತೆಯ ಒಡಲೊಳಗಿನ
ಭಾರ ಭುವಿಗೆ
ಹೊರೆಯೆಂದಾರು ;
ನಿಗೂಢವಲ್ಲವೇ ಮನುಕುಲ !
ಹೆಜ್ಜೆಯೂರುವ ಮುನ್ನವೇ
ಸರಳುಗಳ ಸರಪಳಿ
ತೊದಲು ನುಡಿಯುವ
ಮೊದಲೇ ಸಂಸ್ಕೃತಿಯ ಹಳಹಳಿ ;
ಇಂತಿಪ್ಪ ಬಂಧನಕೆ
ಇಂತಿಷ್ಟು ಸಾಂತ್ವನ
ಪುರಾಣದ ಸಂಕಥನ
ಗೌರವಾದರಗಳ ಸಮ್ಮಾನ
ಎಲ್ಲವೂ ಮಿಥ್ಯೆ !
ನಿರ್ಭಯದಿಂದಿರಲಹುದೇ
ಸೌಜನ್ಯವಿಲ್ಲದೆಡೆ ;
ಒಡಲೊಳಗಿನ ಸುಖವೇ
ಲೇಸು ; ನನಗೆ ಮುಕ್ತಿ
ಬೇಡಮ್ಮ ನಿನ್ನೊಡಲು ಸಾಕು !
Ammana odalu.