ನಿನ್ನೆ ರಾತ್ರಿ ಕವಿತೆ ಪುಸ್ತಕದಿಂದ ಹೊಡೆದು ಜಿರಳೆ ಸಾಯಿಸಿದೆ!
ರಘು ಅಪಾರ
ಅದು ಏನಾಯಿತೆಂದರೆ, ಇನ್ನೂ ರಾತ್ರಿ ಎಂಟೂವರೆಯೂ ಆಗಿರದ ಹೊತ್ತಲ್ಲಿ, ಟ್ಯೂಬ್ ಲೈಟಿನ ಪ್ರಖರ ಬೆಳಕಿಗೂ ಕೇರು ಮಾಡದೆ ದೊಡ್ಡ ಜಿರಳೆಯೊಂದು ಮೀಸೆ ಅಲ್ಲಾಡಿಸುತ್ತಾ ಪ್ರತ್ಯಕ್ಷವಾದಾಗ ತುಂಬಾ ಕೋಪ ಬಂದಿದ್ದು ನಿಜ. ಮೊದಲು ಹೊರಗೆ ಓಡಿಸಲು ಪ್ರಯತ್ನಿಸಿದರೆ ಬಾಗಿಲ ಕಡೆ ಹೋಗದೆ ಅಲ್ಲೇ ನನ್ನ ಸಿಪಿಯು ಸಂದಿಯಲ್ಲಿ ತೂರಿಕೊಂಡಿದ್ದು ನನಗೆ ವಿಚಿತ್ರ ಟೆನ್ಶನ್ ಆಯ್ತು. ಇನ್ನು ಅದು ಅಲ್ಲೇ ಸೇರಿಕೊಂಡು ಫ್ಯಾಮಿಲಿ ದೊಡ್ಡದು ಮಾಡಿಕೊಂಡು ಒಂದು ದಿನ ನಾನು ಲೈಟ್ ಆಫ್ ಮಾಡಿ ಮಲ್ಕೊಂಡ ಮೇಲೆ ಮೆಲ್ಲಕ್ಕೆ ಸಕುಟುಂಬ ಸಮೇತವಾಗಿ ಮಂಚಾರೋಹಣ ಮಾಡಿ ಸದ್ದಾಗದಂತೆ ನನ್ನ ಎತ್ತಿ ಕೆಳಗೆ ಮಲಗಿಸಿ, ಬೆಳಗ್ಗೆ ನಾನೆದ್ದು ನೋಡಲು ಈ ನಾಲ್ಕು ಸದಸ್ಯರ ಜಿರಳೆ ಕುಟುಂಬ ನನ್ನ ಮಂಚದ ಮೇಲೆ ನನ್ನ ಬೆಡ್ ಶೀಟ್ ಹೊದ್ದುಕೊಂಡು ಗೊರಕೆ ಹೊಡೆಯುತ್ತ ಇರುವಂತೆ ಕನಸಾಯಿತು.
ಮರುದಿನ ಮತ್ತೆ ಅದೇ ಜಿರಳೆ ಕಂಡಾಗ ಕಾಲಿನಿಂದ ತುಳಿಯಲು ಧೈರ್ಯವಾಗದೆ ಬರೀ ಬಾಗಿಲ ಕಡೆಗೆ ದೂಡಿದೆ. ಅದು ಅಂಗಾತ ಬಿದ್ದು ಚಲಿಸಲಾಗದೆ ಕೈಕಾಲು ಬಡಿಯತೊಡಗಿತು. (ಮುಂದೆ ಹಿಂಸಾತ್ಮಕ ದ್ರುಶ್ಯಗಳಿದ್ದು ೧೮ ವರ್ಷ ಕೆಳಗಿನ ಮಕ್ಕಳು ಹಾಗು ಕನ್ನಡ ಕವಿಗಳು ಓದ ಬಾರದಾಗಿ ವಿನಂತಿ. ) ಯಾವುದೇ ಕ್ಷಣದಲ್ಲಿ ಸರಿಯಾದ ಪೊಸಿಶನ್ಗೆ ಮರಳಿ ಓಡಿ ತಪ್ಪಿಸಿಕೊಳ್ಳಬಹುದಾದ ಅದನ್ನು ಬಡಿಯಲು ಏನಾದರು ಸಿಗುತ್ತಾ ಅಂತ ಬೇಗ ಬೇಗ ತಡಕಾಡಿದೆ. ಮಂಚದ ಕೆಳಗೆ ಪುಸ್ತಕ ಬಿಟ್ಟರೆ ಬೇರೇನೂ ಇರಲಿಲ್ಲ. ಜಿರಳೆ ಯಾವುದೇ ಕ್ಷಣ ತಪ್ಪಿಸಿಕೊಳ್ಳುವ ಆತಂಕದಲ್ಲಿ ಯಾವ ಪುಸ್ತಕದಿಂದ ಅದನ್ನು ಹೊಡೆಯುವುದು ಎಂದು ಚಿಂತೆಯಾಯಿತು. ಯಾವುದೇ ಇಸಮು, ಸ್ನೇಹ, ನವೋದಯ, ನವ್ಯ ಬೇಧಭಾವವಿಲ್ಲದೆ ನಾನು ಅರೆ ಕ್ಷಣ ಅತ್ಯಂತ ಪ್ರಾಮಾಣಿಕವಾದ ವಿಮರ್ಶೆಯ ಪ್ರಜ್ಞೆಯಿಂದ ಯೋಚಿಸಿದೆ. ಇಷ್ಟು ನಿಷ್ಪಕ್ಸಪಾತ ನನಗೆ ಹಿಂದೆಂದೂ ಸಾಧ್ಯವಾಗಿರಲಿಲ್ಲ. ಬಹುಶ ಯಾವ ವಿಮರ್ಶಕನಿಗೂ ಆಗಿರಲಿಕ್ಕಿಲ್ಲ. ಆ ಅರೆ ಕ್ಷಣದಲ್ಲಿ ಕವಿ, ಕವಿತೆಯ ಗುಣಮಟ್ಟ , ಪುಸ್ತಕದ ಮುಖಪುಟದ ಚೆಂದ ಎಲ್ಲದರ ಯೋಗ್ಯತೆಯನ್ನು ಅಳೆದು ಸುರಿದು ಕೊನೆಗೊಂದನ್ನು ಎತ್ತಿಕೊಂಡು ಜಿರೆಲೆಯನ್ನು ಬಾರಿಸಿದೆ. ಯಾವ ಪುಸ್ತಕವೆಂದು ಕೇಳಿ ಮೊದಲೇ ಬೇಸರದಲ್ಲಿರುವ ನನ್ನನ್ನು ಇನ್ನಷ್ಟು ನೋಯಿಸಬೇಡಿ.
ಒಳ್ಳೆ ಕೆಲ್ಸ ಮಾಡಿದಿರಿ, ಸುಮ್ಮನೆ ಒಂದು ಪದ್ಯ ಓದಿದ್ದರೆ ಸಾಕಾಗಿತ್ತು, ಅದೇ ಸತ್ ಹೋಗ್ತಿತ್ತು ಇಲ್ಲ ನಿಮ್ಮನೆ ಕಡೆ ತಲೆ ಹಾಕದಂಗೆ ಮಕ್ಕಳು ಮರಿ ಸಮೇತ ದೇಶಾಂತರ ಹೋಗಿಬಿಡುತ್ತಿತ್ತು.
ಇಲ್ಲಿ ಜಿರಳೆ ಎಂದರೆ ಏನು ? ಯಾರು ?
ನಿಮ್ಮ ವಿಮರ್ಶಕ ಬುದ್ಧಿಯೋ ?