ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಏ- ಕಾಂತ ಗೀತೆಗಳು..

ಡಾ. ಅಜಿತ್ ಹರೀಶಿ

ಮರೆತು ಬಿಟ್ಟದ್ದು
ಕವನ ಸಂಕಲನ

ಲೇಖಕರು- ವಸುಂಧರಾ ಕೆ.ಎಂ
ಸಂಹಿತಾ ಪ್ರಕಾಶನ

ಕೆಎಎಸ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾದ ವಸುಂಧರಾ ಅವರು ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸರಳ, ಸಹೃದಯಿ, ಪ್ರಾಮಾಣಿಕ ಅಧಿಕಾರಿ. ಮಂಡ್ಯದ ಮದ್ದೂರಿನ ಡಾ.ಸಿ.ಬಿ ಮಲ್ಲಪ್ಪ ಅವರ ಮಗಳು.

ಇದು ವಸುಂಧರಾ ಅವರ ಮೊದಲ ಕವನ ಸಂಕಲನ.

ಇದಕ್ಕೆ ಮುನ್ನುಡಿ ಬರೆದಿರುವ ಡಾ.ಕೆ.ವೈ ನಾರಾಯಣ ಸ್ವಾಮಿ ಅವರು ಈ ಕವಿತೆಗಳನ್ನು ‘ ಏ- ಕಾಂತ ಗೀತೆಗಳು’ ಎಂದು ಕರೆದಿದ್ದಾರೆ.ಅದಕ್ಕೆ ಕಾರಣ ಕಾಂತ ಸಂಮಿತ ನಿರೂಪಣೆಯ ಕ್ರಮ. ವಸುಂಧರಾ ಅವರ ಈ ನಿರೂಪಣೆಗಳು ತಾನು ಸಂವಾದಿಸಬಯಸುವ ಪುರುಷ ಪಾತ್ರಗಳ ಜೊತೆ ವಾದಕ್ಕೆ ಇಳಿಯುವುದಿಲ್ಲ ಬದಲಾಗಿ ಜೊತೆಗ ಜೊತೆಗೆ ಸಾಗಬೇಕಾದ ಅನಿವಾರ್ಯತೆಯನ್ನು ಮನಗಾಣಿಸುತ್ತವೆ.ಇಲ್ಲಿ ಒಟ್ಟಾರೆ ನಲವತ್ತೊಂಬತ್ತು ಕವನಗಳಿವೆ.

‘ಧೀಮಂತ ನಗ್ನತೆ’ ಕವಿತೆಯಲ್ಲಿ..

ಎಷ್ಟು ಕಠಿಣನೋ ನೀನು
ಮಹಾ ಮೌ(ಮು)ನಿ 
ಕಾಡಲಿಲ್ಲವೇನಾಗ ಒಲುವಿನೊಂದು ಮುಖ?
ಕಡೆಯಾಯ್ತೆ ನಿನಗೆ ಸಿರಿಯೊಳಗಣ ಸುಖ?

ಬಾಹುಬಲಿಗೆ ಕೇಳುವ ಪ್ರಶ್ನೆಯಿದು. ಆದರೆ ಇದರ ಅರ್ಥವ್ಯಾಪ್ತಿ ದೊಡ್ಡದು.

‘ಯಶೋಧರೆಯ ಶುಭಾಶಯಗಳು’ ಕವಿತೆಯಲ್ಲಿ

ನಾನು ನಿಮ್ಮಂತೆ ಬುದ್ಧಳಾಗಲಿಲ್ಲ ಭಗವಾನ್
ಮಿಗಿಲು ಬದ್ಧತೆಯ ತಾಯಾದೆ.

ಸೀತೆಯ ಪ್ರಶ್ನೆಗಳು ಕವಿತೆಯಲ್ಲಿ..

ಅದು ಅಗ್ನಿ ಕಣಾ ! ನನ್ನನ್ನು ಸುಡಲಿಲ್ಲ,
ಸುಟ್ಟದ್ದು ಮಾತ್ರ ನನ್ನ ಆತ್ಮ

‘ಮೌನ ಮುತ್ತು’ ಪದ್ಯದ ಕೊನೆಯ ಸಾಲುಗಳಲ್ಲಿ..

ತಿಳಿ,
ನೀ ಕಡಲ ಮೊರೆವ ಅಲೆಯಾದರೆ,
ನಾ ಜಲಗರ್ಭದ ಮುತ್ತು…

‘ಉರಿ ಮಿಂಚು’ ಸಾಲುಗಳನ್ನು ನೋಡಿ..

ಹೊಸಕಬಲ್ಲೆ ಹೂವುಗಳ
ಪರಿಮಳವ ತಡೆಯಲಾರೆ

ಮಳೆ ಮತ್ತು ನಾನು ಇಳೆ ಕವನದಲ್ಲಿ…
ಗೊತ್ತಿರಲಿ ನಿನಗೆ
ನಾನು ಮತ್ತೆ ಮತ್ತೆ ಗಟ್ಟಿ ನಿಂತ ಇಳೆ.
ಮರೆತಿಲ್ಲ, ನೀ ಇಲ್ಲಿಂದಲೇ ಆವಿಯಾದದ್ದು.

ಹೆಣ್ಣೆಂದರೆ ಬರಿಯ ಮಣ್ಣಾಗುವುದಲ್ಲ 
ಬೆಳಕು ಕಂಡಿರಿಯದ ಭ್ರೂಣವಲ್ಲ.

ಉತ್ತರಿಸಿದನಾ ರಾಮ – ಬೆಂಕಿಗೊಡ್ಡಿದೆ ಎಂದೆಯಾ !
ಹಾ ನಾನೇ ಸುಟ್ಟು ಹೋದೆ ಸೀತೆ.

ಖೈದುಗೊಳ್ಳದ ಕನಸು ಎಷ್ಟು ಚೆಂದವಿದೆ ನೋಡಿ.

ರೆಪ್ಪೆಯನೇ ಬಡಿಯುತ್ತಿರಲಿಲ್ಲ 
ನೀ ಜಾರಿ ಹೋಗಬಹುದೆಂಬ ಭಯವಿತ್ತು.

ಹೀಗೆ ಬಹುತೇಕ ಕವಿತೆಗಳು ಮಾರ್ದವತೆಯಿಂದ ಕೂಡಿ ನವಿರಾಗಿ ಮೂಡಿಬಂದಿವೆ. ವಸುಂಧರಾ ಇನ್ನಷ್ಟು ಬರೆಯಲಿ.

‍ಲೇಖಕರು avadhi

9 June, 2019

2 Comments

  1. Vasundhara k m

    ಧನ್ಯವಾದಗಳು ಡಾಕ್ಟರ್ ಹಾಗೂ ಅವಧಿ..

  2. suma kalasapura

    ಉತ್ತಮ ಮಾಹಿತಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading