ಏಕಲವ್ಯನ ಅವ್ವ..
ವಸುಂಧರಾ ಕದಲೂರು
ಆದರೆ, ಆಗುವುದಾದರೆ ಏಕಲವ್ಯನ
ಅವ್ವನಂತಾಗಿಬಿಡಬೇಕು. ಮಗನ ಬೆರಳ್ಗೆ
ಕೊರಳ ಬೇಡಿದ ಛಲಗಾತಿಯಂತೆ
ಸಡ್ಡು ಹೊಡೆದು ಪರಮ ಸಾಮ್ರಾಜ್ಯದ
ಗುರುವರ್ಯನನ್ನೂ ಕಡೆಗಣಿಸಿದ
ಹಠಯೋಗಿನಿಯಾಗಿ.
ಕುಂತಿ ಹೆತ್ತ ಕೂಸು; ಕುಸುಮಬಾಲೆಯ
ಮಡಿಲಲ್ಲಿ ಮತ್ತೆ ಅನಾಥವಾಗುವುದು
ಬೇಡ. ಯಾವ ಕಾಲಕ್ಕೂ ಅಮೃತ
ಕಳಶದಲಿ ಮಮತೆ ತುಂಬಿ ಒಸರುತಿರಲಿ
ಜಗದ ಅವ್ವಂದಿರು ಸತ್ಯ ಶರಣೆಯರು;
ನಿಮಿತ್ತ ಮಾತ್ರರಾದ ಅಪ್ಪಂದಿರು ಮಾತ್ರ
ಪರಾರಿಯಾಗುವ ಪರಮಯೋಗಿಗಳಾಗಲಿ
ಅವ್ವನೆಂಬ ನೆರಳು ಸದಾ ನೆತ್ತಿ ಕಾಯುತಿರಲಿ.
ಅವ್ವಂದಿರು ಕರುಳು ಬಳ್ಳಿಯಲಿ ಹೂವರಳಿಸುವ
ಗುಲಾಬಿಗಿಡವೇ, ಕೊಯ್ದುಕೊಳ್ಳುವರಿಗೆ ನೆರವಾಗುವ
ಹಬ್ಬಿ ಹರಡುವ ಗಂಧದ ಮಲ್ಲಿಗೆ ಬಳ್ಳಿಯೇ..
ರೆಂಬೆಕೊಂಬೆಗಳಲೂ ಬೇರು ಇಳಿಬಿಟ್ಟು ನಿಂತ
ಆಶ್ರಯದ ಆಲದಮರ; ತುಸುಗಟ್ಟಿ ಬಹುವಿಸ್ತಾರ..
ಅವ್ವನಾಗುವುದು ಸುಖವೆಂದದ್ದು ದಿಟ;
ಒಳಗೊಳಗೇ ಗರ್ಭೀಕರಿಸಿದ ಮುಖಗಾಣದ ಮಗು
ಒದ್ದು ಹೊರಳಿದಾಗ, ಹಾಲೂಡಿ ಪಕ್ಕೆಗೆ
ಒತ್ತಿಕೊಂಡ ಪುಟ್ಟಮೈಯನು ಆವರಿಸಿಕೊಂಡ
ಒಲವು; ಅದೆಷ್ಟೋ ಅಮೃತಘಳಿಗೆಗಳ
ಸಂಗಾತಿಯಾಗುವುದೇ ಅವ್ವನೆಂದರೆ..
ಏನಾದರೂ ಆಗಲಿ ಜಗಕೆ. ನಾವು ಮಾತ್ರ
ಆಗಿಬಿಡಬೇಕು ಏಕಲವ್ಯನ ಅಬ್ಬೆಯಂತೊಮ್ಮೆ..
ಸರ್ವಕ್ಕೂ ಮಿಗಿಲು ನನ್ನ ಮಗುವೆಂದು
ಮೊರೆವ ಕಡಲಂತೆ; ಏಕಲವ್ಯನ ಅಬ್ಬೆಯಂತೆ…
ಬಹಳ ಇಷ್ಟವಾಯಿತು ಕವಿತೆ